twitter
    Celebs»Ambareesh»Biography

    ಅಂಬರೀಶ್ ಜೀವನಚರಿತ್ರೆ

    ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) ಅವರು ಭಾರತೀಯ ಚಿತ್ರರಂಗದ ನಟರು ಹಾಗೂ ರಾಜಕಾರಣಿಯು ಆಗಿದ್ದಾರೆ. ಇವರು ಜನಿಸಿದ್ದು 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ದರೆಸಿಕೆರೆ ಗ್ರಾಮದಲ್ಲಿ. ತಂದೆ ಹುಚ್ಚೇಗೌಡ ತಾಯಿ ಪದ್ಮಮ್ಮ. ಇವರ ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಮಂಡ್ಯದಲ್ಲಿ. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದಾರೆ. ಅಂಬರೀಶ್ ಅವರು 1991 ರಲ್ಲಿ ಕನ್ನಡದಖ್ಯಾತ ನಟಿ ಸುಮಲತಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು.

    'ಜಲೀಲ' ಸಿಗ್ನೇಚರ್ ಪಾತ್ರ

    ಅಂಬರೀಶ್ ಇದುವರೆಗೂ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಆದ್ರೆ, ಅವರ ಮೊದಲ ಚಿತ್ರ, ಮೊದಲ ಡೈಲಾಗ್ ಎಂದೆಂದಿಗೂ ಮೆರಯಲು ಸಾಧ್ಯವಿಲ್ಲ. 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯನ್ನ ಚುಡಾಯಿಸುವ 'ಜಲೀಲ' ಎಂಬ ಯುವಕನ ಪಾತ್ರದಲ್ಲಿ ಅಂಬರೀಶ್ ಮಿಂಚಿದ್ದರು. 'ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ....' ಎಂದು ಅಂಬಿ ಹೇಳಿದ ಡೈಲಾಗ್ ಈಗಲೂ ಎವರ್ ಗ್ರೀನ್ ಆಗಿಯೇ ಉಳಿದುಕೊಂಡಿದೆ.


    ಬಲವಂತವಾಗಿ ಪಾತ್ರ ಮಾಡಿಸಿದ್ದ ಗೆಳೆಯ

    ಪುಟ್ಟಣ್ಣ ಕಣಗಾಲ್ ಅವರು 'ಜಲೀಲ'ನ ಪಾತ್ರಕ್ಕಾಗಿ ಹಲವು ಯುವ ಪ್ರತಿಭೆಗಳನ್ನ ಪರೀಕ್ಷಿಸಿದ್ದರು. ಇದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಒಬ್ಬರು. ಆದ್ರೆ, ಯಾರೊಬ್ಬರು ಈ ಕ್ಯಾರೆಕ್ಟರ್ ಗೆ ಸೂಕ್ತವಾಗಿಲ್ಲ. ನಂತರ ಅಂಬರೀಶ್ ಸ್ನೇಹಿತ ಸಂಗ್ರಾಮ್ ಅವರ ಬಲವಂತದಿಂದ ಅಂಬರೀಶ್, ನಿರ್ದೇಶಕ ಪುಟ್ಟಣ್ಣ ಅವರ ಎದುರು ಬಂದರು. ಆಗ, ಮೊದಲ ನೋಟದಿಂದಲೇ ಅಂಬರೀಶ್ ಪುಟ್ಟಣ್ಣಗೆ ಇಷ್ಟವಾದರು. ಬಣ್ಣ ಹಚ್ಚಿಸಿ ನಟಿಸಲು ಹೇಳಿದರು. ಟೇಕ್ ಓಕೆ ಆಯ್ತು.


    ಚಿತ್ರರಂಗಕ್ಕೆ ಬಂದ ಎರಡು ಧ್ರುವತಾರೆ

    ಈ ಚಿತ್ರದಿಂದ ವಿಷ್ಣುವರ್ಧನ್ ಎಂಬ ರೋಮ್ಯಾಂಟಿಕ್ ಹೀರೋ ಜೊತೆಗೆ ಅಂಬರೀಶ್ ಎಂಬ ರೆಬೆಲ್ ವಿಲನ್ ಚಿತ್ರರಂಗಕ್ಕೆ ಸಿಕ್ಕರು. ಇಲ್ಲಿಂದ ಅಂಬರೀಶ್ ಮತ್ತು ವಿಷ್ಣು ಸ್ನೇಹಿತರಾದರು. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಅಂದ್ರೆ, ಅಂಬಿ ಇಲ್ಲದೇ ವಿಷ್ಣುವರ್ಧನ್ ಎಲ್ಲಿಯೂ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ ಎನ್ನುವಷ್ಟು ಆತ್ಮೀಯರಾದರು.


    ಅಂಬಿಗೆ ಇನ್ನೊಂದು 'ಸ್ಟಾರ್' ನೀಡಿದ್ದು 'ಅಂತ'

    'ನಾಗರಹಾವು' ಚಿತ್ರದಿಂದ 'ರಂಗನಾಯ'ಕಿ ಚಿತ್ರದವರೆಗೂ ಅಂಬರೀಶ್ ಎಲ್ಲ ರೀತಿಯ ಪಾತ್ರಗಳನ್ನ ಮಾಡಿದ್ದರು. 'ಪಡುವಾರಳ್ಳಿ ಪಾಂಡವರು', 'ಮಸಣದ ಹೂವು', 'ಶುಭಮಂಗಳ' ಅಂತಹ ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಾಯಕನಾಗಿ, ನಾಯಕ, ನಾಯಕಿಯರ ಸಹೋದರನಾಗಿ, ಸ್ನೇಹಿತನಾಗಿ ಅಭಿನಯಿಸಿದ್ದರು. ಆದ್ರೆ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು 'ಅಂತ' ಸಿನಿಮಾದಲ್ಲಿ ಅಂಬರೀಶ್ ಅವರನ್ನ ಪೂರ್ಣ ಪ್ರಮಾಣದ ನಾಯಕನನ್ನಾಗಿಸಿ ಚಿತ್ರರಂಗಕ್ಕೊಬ್ಬ 'ರೆಬೆಲ್ ಸ್ಟಾರ್' ನೀಡುವಲ್ಲಿ ನೆರವಾದರು.


    ಕ್ಲಾಸ್ ಅಂಡ್ ಮಾಸ್ ಸಿನಿಮಾಗಳು

    ಚಕ್ರವ್ಯೂಹ, ಗಂಡ ಬೇರುಂಡ, ಕಾಳಿಂಗ ಸರ್ಪ, ಗೂಂಡಾ ಗುರು, ಒಂಟಿ ಸಲಗ, ಇಂದ್ರಜಿತ್, ಗರುಡ ಧ್ವಜ, ರೌಡಿ ಎಂಎಲ್ಎ, ಎಂಟೆದೆ ಭಂಟ, ಮೈಸೂರು ಜಾಣ, ಮಂಡ್ಯದ ಗಂಡು, ಕಲಿಯುಗದ ಕರ್ಣ ಅಂತಹ ಮಾಸ್ ಸಿನಿಮಾ ಮಾಡಿದ ಅಂಬರೀಶ್, ಮೇಘಮಾಲೆ, ಮಣ್ಣಿನ ದೋಣಿ, ಮಲ್ಲಿಗೆ ಹೂವು, ಸೋಲಿಲ್ಲದ ಸರದಾರ, ಹೃದಯ ಹಾಡಿತು, ಒಲವಿನ ಉಡುಗೊರೆ, ಮಿಡಿದ ಹೃದಯ, ಪ್ರೇಮ ಸಂಗಮ ಸೇರದಂತೆ ಹಲವು ಕಾದಂಬರಿ ಆಧಾರಿತ ಹಾಗೂ ಕೌಟುಂಬಿಕ ಆಧರಿತ ಚಿತ್ರಗಳನ್ನ ನೀಡಿದ್ದರು.


    ಇಮೇಜ್ ಬದಲಿಸಿದ್ದ ಚಿತ್ರಗಳು

    ಅಂತ, ಚಕ್ರವ್ಯೂಹ ಚಿತ್ರದಿಂದ ಅಂಬರೀಶ್ ಗೆ ಹೊಸ ಇಮೇಜ್ ಸಿಕ್ಕವು. ಚಕ್ರವ್ಯೂಹ ಸಿನಿಮಾ ಹಿಂದಿಗೂ ರೀಮೇಕ್ ಆಗಿತ್ತು. ನ್ಯೂಡೆಲ್ಲಿ ಚಿತ್ರವೂ ಅಷ್ಟೇ ದೊಡ್ಡ ಸದ್ದು ಮಾಡಿತ್ತು. ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್, ಏಳು ಸುತ್ತಿನ ಕೋಟೆ ಅಂತಹ ಚಿತ್ರಗಳು ಅಂಬಿಯ ಹಿಟ್ ಲಿಸ್ಟ್ ನಲ್ಲಿವೆ.


    ಮಲ್ಟಿಸ್ಟಾರ್ ಸಿನಿಮಾಗಳು

    ಬಹುಶಃ ಅಂಬರೀಶ್ ಅವರು ಭಾರತದಲ್ಲೇ ಅತಿ ಹೆಚ್ಚು ಮಲ್ಟಿಸ್ಟಾರ್ ಸಿನಿಮಾದಲ್ಲಿ ಅಭಿನಯಿಸಿರುವ ಖ್ಯಾತಿ ಹೊಂದಿದ್ದಾರೆ. ರಾಜ್ ಕುಮಾರ್ ಜೊತೆ ಒಡಹುಟ್ಟಿದವರು, ವಿಷ್ಣು ಜೊತೆ ಸ್ನೇಹಿತರ ಸವಾಲ್, ಮಹಾ ಪ್ರಚಂಡರು, ಅವಳ ಹೆಜ್ಜೆ, ದಿಗ್ಗಜರು ಅಂತಹ ಹಿಟ್ ಸಿನಿಮಾ, ರಜನಿಕಾಂತ್, ರವಿಚಂದ್ರನ್, ಜಗ್ಗೇಶ್, ಉಪೇಂದ್ರ, ಶಂಕರ್ ನಾಗ್, ಅನಂತ್ ನಾಗ್, ದರ್ಶನ್, ಸುದೀಪ್, ಯಶ್, ಹೀಗೆ ಕನ್ನಡದ ಈಗಿನ ಬಹುತೇಕ ನಟರ ಜೊತೆಯಲ್ಲೂ ಬಣ್ಣಹಚ್ದಿದ್ದಾರೆ. ಇದು ಅಂಬಿಯ ವಿಶೇಷ ದಾಖಲೆ.


    2013ರಲ್ಲಿ ಗೌರವ ಡಾಕ್ಟರೇಟ್

    ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 1982ರಲ್ಲಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಮಸಣದ ಹೂವು ಚಿತ್ರಕ್ಕಾಗಿ ಅತ್ಯುತ್ತಮ ಸಹಾಯ ನಟ ರಾಜ್ಯ ಪ್ರಶಸ್ತಿ, ಒಲವಿನ ಉಡುಗೊರೆ ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ, 2005ರಲ್ಲಿ ಆಂಧ್ರ ಪ್ರದೇಶದ ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ, 2009ರಲ್ಲಿ ಆಂಧ್ರಸರ್ಕಾರದಿಂದ ನಂದಿ ಪ್ರಶಸ್ತಿ, 2011 ರಲ್ಲಿ ಕರ್ನಾಟಕ ಸರ್ಕಾರದಿಂದ ವಿಷ್ಣುವರ್ದನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.


    ಕೊನೆಯ ಚಿತ್ರವಾದ 'ಅಂಬಿ ನಿಂಗ್ ವಯಸ್ಸಾಯ್ತು'

    ಅಂಬರೀಶ್ ಅವರ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತು'. ಸುದೀಪ್ ಜೊತೆ ಅಭಿನಯಿಸಿದ್ದ ಈ ಸಿನಿಮಾವೇ ಕೊನೆಯ ಚಿತ್ರವಾಯಿತು. ಈ ಸಿನಿಮಾವನ್ನ ಮಾಡಲು ತುಂಬಾ ಕಷ್ಟವಾಗುತ್ತಿತ್ತು ಎಂದು ಸ್ವತಃ ಅಂಬರೀಶ್ ಅವರೇ ಹೇಳಿಕೊಂಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದಲ್ಲಿ 'ಭೀಷ್ಮ'ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.


    ಮಂಡ್ಯದ ಗಂಡು

    ಅಂಬರೀಶ್‌ ಅವರು 'ಮಂಡ್ಯದ ಗಂಡು' ಎಂದೇ ನಾಡಿಗೆ ಚಿರಪರಿತ. ಅಂಬರೀಶ್‌ ಹೆಸರು ಹೇಳುವಾಗ 'ಮಂಡ್ಯದ ಗಂಡು' ಅನ್ವರ್ಥ ನಾಮ ತಾನೇ ತಾನಾಗಿ ಬಂದು ಬಿಡುತ್ತದೆ. ಆದರೆ ಈ ಬಿರುದು ಕೊಟ್ಟವರು ಅಂಬರೀಶ್‌ಗೆ ಗುರು ಸಮಾನರಾಗಿದ್ದ ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಅವರು. ತಾವೇ ಅಂಬರೀಶ್‌ಗೆ 'ಮಂಡ್ಯದ ಗಂಡು' ಎಂದು ಬಿರುದು ಕೊಟ್ಟಿದ್ದು ಎಂದು ಮಾದೇಗೌಡ ಅವರೇ ಹೇಳಿಕೊಂಡಿದ್ದಾರೆ.


    ಭಾವಪೂರ್ಣ ವಿದಾಯ

    ಅಂಬರೀಷ್ ಗೆ ಶ್ಚಾಸಕೋಶ ಸೊಂಕು ಬಹುವಾಗಿ ಕಾಡಿತ್ತು. ಇದಕ್ಕೆ ಸಿಂಗಾಪೂರ್ ನಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ನವೆಂಬರ್ 24, 2018 ಮಧ್ಯಾಹ್ಯ ಮಂಡ್ಯದ ಹತ್ತಿರ ಬಸ್ ಕಾಲುವೆಗೆ ಬಿದ್ದು 30 ಜನ ಮೃತಪಟ್ಟ ವಾರ್ತೆ ಕೇಳಿ ತುಂಬಾ ದುಃಖತಪ್ತರಾಗಿದ್ದರು. ಅದೇ ದಿನ ರಾತ್ರಿ ಸುಮಾರು 10 ಘಂಟೆಗೆ ತೀವ್ರ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ಕೊಂಡೊಯ್ಯುವಾಗ ಕೊನೆಯುಸಿರೆಳೆದರು. ಇವರ ಸಮಾಧಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಿದ ಸರ್ಕಾರ ಸ್ಮಾರಕ ನಿರ್ಮಿಸಲು ತೀರ್ಮಾನಿಸಿದೆ.


    ಡಾ.ಶರಣು ಹುಲ್ಲೂರು ಅವರು ಬರೆದಿರುವ  `ಅಂಬರೀಶ್:ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು' ಪುಸ್ತಕದಲ್ಲಿ ಅಂಬಿಯ ನೆನಪನ್ನು ಹಾಳೆಗಳಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ.


    ಅಂಬರೀಶ್ ಅವರ ರಾಜಕೀಯ ಕ್ಷೇತ್ರ:
    ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ರಾಜಕೀಯ ರಂಗವನ್ನು ಪ್ರವೇಶ ಮಾಡಿದರು. ಇವರು ಸಿನಿಮಾ ಕ್ಷೇತ್ರದಲ್ಲಿ ಗಳಿಸಿದ್ದ ಅಭಿಮಾನಿಗಳನ್ನು ರಾಜಕೀಯ ಕ್ಷೇತ್ರದಲ್ಲೂ ಸಹ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂಬರೀಸ್ ಅವರು  ಸಂಸದರು, ರಾಜ್ಯ ಸಚಿವರು,  ಆಗಿ ಆಯ್ಕೆ ಆಗಿದ್ದಾರೆ.

    * 1998-99: 12ನೇ ಲೋಕಸಭಾ ಸದಸ್ಯರು.
    * 1999-04: 13ನೇ ಲೋಕಸಭಾ ಸದಸ್ಯರು.
    * 2004-09: 14ನೇ ಲೋಕಸಭಾ ಸದಸ್ಯರು.
    * 2006-08:  ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
    * 2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
    * 2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
    * 2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X