ಕಾಶೀನಾಥ್
ಕಾಶೀನಾಥ್ ಜೀವನಚರಿತ್ರೆ
ಕಾಶೀನಾಥ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ. ಇವರು ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಚಿತ್ರರಂಗದಲ್ಲಿನ ಮಡಿವಂತಿಕೆಗೆ ಮೊದಲ ಪೆಟ್ಟು ಕೊಟ್ಟ ನಿರ್ದೇಶಕ ಕಾಶಿನಾಥ್ ಎಂದರೆ ತಪ್ಪಾಗಲಾರದು.
ಇವರು ಉಪೇಂದ್ರ, ಮನೋಹರ್, ಸುನೀಲ್ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇವರ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಪ್ರತಿಭೆ ತೋರಿ ಕನ್ನಡದ ವಿಶಿಷ್ಟ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಇವರ ವಿಭಿನ್ನ ಶೈಲಿಯ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ.
"ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಮುಂತಾದ ಇವರ ಚಿತ್ರಗಳು ಪ್ರಸಿದ್ಧಿ ಪಡೆದಿವೆ. ಅಜಗಜಾಂತರ(೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (೧೯೯೭) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಅಭಿನಯಿಸಿದ್ದಾರೆ.
ಹೀಗೆ ಹಾಸ್ಯ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಕಾಶಿನಾಥ್ 2018 ಜನೇವರಿ 18 ರಂದು ಹೃದಯಾಘಾತದಿಂದ ನಿಧನರಾದರು.