ರಿಷಭ್ ಶೆಟ್ಟಿ
Born on 07 Jul 0 Kundapur Karnataka
ರಿಷಭ್ ಶೆಟ್ಟಿ ಜೀವನಚರಿತ್ರೆ
ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿರುವ ಇವರು, ೨೦೨೨ರಲ್ಲಿ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.
ಆರಂಭಿಕ ಜೀವನ
ರಿಷಬ್ ಶೆಟ್ಟಿ 1983 ಜುಲೈ 7ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟದ ಪಕ್ಕ ಕೆರಾಡಿ ಊರಿನಳ್ಳಿ ಜನಿಸಿದರು. ಇವರು ಮೊದಲ ಹೆಸರು ಪ್ರಶಾಂತ್. ಶಾಲಾ ಶಿಕ್ಷಣವನ್ನು ಕುಂದಾಪುರದಲ್ಲಿಯೇ ಮುಗಿದ ರಿಷಬ್, ಬಿಕಾಂ ಮಾಡಲು ಬೆಂಗಳೂರಿನ ವಿಜಯ ಕಾಲೇಜು ಸೇರಿದರು. ಇವರು ಚಿಕ್ಕ ವಯಸ್ಸಿನಲ್ಲೇ ಉಪೇಂದ್ರ ನಿರ್ದೇಶನ, ನಟನೆಯ ಕ್ರೇಜ್ ಬಗ್ಗೆ ಊರಿನವರನ್ನು ಕೇಳಿ ತಿಳಿದುಕೊಂಡಿದ್ದರು. ಅಲ್ಲಿಂದ ಉಪ್ಪಿ ಹೆಸರು ಕೇಳಿದ್ರೆ ನಿದ್ದೆಯಲ್ಲು ಎದ್ದು ಕುಳಿತುಕೊಳ್ಳುವ ಮಟ್ಟಕ್ಕೆ ಪ್ರಭಾವಿತನಾಗಿದ್ದರು. ಅವರಂತೆ ಆಗ್ಬೇಕು ಅನ್ನುವ ಹಠ ಮನಸ್ಸಿಲ್ಲಿ ಉಳಿದುಕೊಂಡಿತ್ತು. ಹೀಗಾಗಿ ಕುಂದಾಪುರದಲ್ಲಿರುವಾಗ ನಾಟಕ ಮತ್ತು ಯಕ್ಷಗಾನ ಮಾಡುವ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ಹೀಗೆ ಬೆಂಗಳೂರಿನಲ್ಲಿ ಓದುತ್ತಿರುವಾಗಲೂ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.
ಬಿಸಿನೆಸ್
ಬಿಕಾಂ ನಂತರ ರಿಷಬ್ ಶೆಟ್ಟಿ ಬೆಂಗಳೂರಿನ ಕೋರಮಂಗಲ, ವಿಲ್ಸನ್ ಗಾರ್ಡನ್ ಸುತ್ತ ಮುತ್ತ ಏರಿಯಾದಲ್ಲಿ ಮಿನರಲ್ ವಾಟರ್ ಬಿಸಿನೆಸ್ ಮಾಡುತ್ತಿದ್ದರು. ವಾಟರ್ ಬಿಸಿನೆಸ್ ಜೊತೆ ಜೊತೆಗೆ ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ಟಿವಿ ಸಂಸ್ಥೆಯಿಂದ ಡಿಪ್ಲೋಮಾ ಕೋರ್ಸ್ (ಫಿಲ್ಮ್ ಮೇಕಿಂಗ್) ಮಾಡಿದರು. ವಾಟರ್ ಬಿಸಿನೆಸ್ ನಿಂತ ಬಳಿಕ ದೊಡ್ಡ ಬಂಡವಾಳ ಹಾಕಿ ಹೋಟೆಲ್ ಬಿಸಿನೆಸ್ ಆರಂಭಿಸಿದರು. ಆದರೆ, ಅದು ಅಂದುಕೊಂಡಂತೆ ಆಗಲಿಲ್ಲ. ಪೂರ್ತಿ ನಷ್ಟ ಅನುಭವಿಸಬೇಕಾಯಿತು. ಇದಾದ ಬಳಿಕ ಬಹಳಷ್ಟು ಟೀಕೆಗಳು, ಮಾತುಗಳನ್ನು ಕೇಳಬೇಕಾಯಿತು. ಸಿನಿಮಾದಲ್ಲಿ ದುಡ್ಡು ಹಾಕಿ ಕಳೆದುಕೊಂಡು ಬಿಟ್ಟ ಅಂತ ಜನರು ಮಾತಾಡಿಕೊಳ್ಳುತ್ತಿದ್ದರಂತೆ. ರಿಷಬ್ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರೆ, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲಿಕ, ಸೇಲ್ಸ್ಮನ್ ಕೆಲಸನೂ ಮಾಡಿದ್ದಾರೆ.
ಸಹಾಯಕ ನಿರ್ದೇಶಕ
ಬಳಿಕ ಪರಿಚಯಸ್ಥರ ಮೂಲಕ ಎಎಂಆರ್ ರಮೇಶ್ ಅವರನ್ನು ಭೇಟಿ ಮಾಡಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ಆಗ ರಮೇಶ್ 'ಸೈನೈಡ್' ಸಿನಿಮಾ ನಿರ್ದೇಶಿಸುತ್ತಿದ್ದರು. ನಂತರ ಜಾಕ್ ಮಂಜು ಅವರ ಮೂಲಕ ರವಿ ಶ್ರೀವತ್ಸ ಜೊತೆ ಸೇರಿದರು. ರವಿ ಶ್ರೀವತ್ಸ 'ಗಂಡ ಹೆಂಡತಿ' ಸಿನಿಮಾ ಮಾಡ್ತಿದ್ದರು. ಈ ಸೆಟ್ನಲ್ಲಿ ಕ್ಲಾಪ್ ಬಾಯ್ ಆಗಿ ರಿಷಬ್ ಕೆಲಸ ಮಾಡಿದರು.
ಸಿನಿನಿಜೀವನ
ರಿಷಬ್ ಶೆಟ್ಟಿ 2010ರಲ್ಲಿ 'ನಮ್ ಏರಿಯಾದಲ್ಲಿ ಒಂದಿನ' ಎಂಬ ಸಿನಿಮಾದಲ್ಲಿ ಹೆಸರಿಲ್ಲದ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಎಂಟ್ರಿಕೊಟ್ಟರು. ಅನೀಶ್ ಹಾಗೂ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ವೇಳೆ ರಿಷಬ್ ಅವರಿಗೆ ರಕ್ಷಿತ್ ಪರಿಚಯವಾಗಿತ್ತು. ನಂತರ ರಕ್ಷಿತ್ ಶೆಟ್ಟಿ ಅಭಿನಯದ ತುಘಲಕ್ ಸಿನಿಮಾದಲ್ಲೂ ರಿಷಬ್ ಹೆಸರಿಲ್ಲದ ಪಾತ್ರ ಮಾಡಿದ್ದರು. ಸಿನಿಮಾ ಚಿತ್ರೀಕರಣ ವೇಳೆ ಇವರಿಬ್ಬರ ಸ್ನೇಹವಾಯಿತು. ಇದಾದ ಬಳಿಕ ಲೂಸಿಯಾ ಸಿನಿಮಾದಲ್ಲಿ ಸಣ್ಣ ಪೊಲೀಸ್ ಅಧಿಕಾರಿಯ ಪಾತ್ರನಿರ್ವಹಿಸಿದರು. 2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಶೆಟ್ಟಿ ರಘು ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ನಿರ್ದೇಶನ
2016ರಲ್ಲಿ `ರಿಕ್ಕಿ' ಚಿತ್ರದಿಂದ ಸಿನಿಮಾ ನಿರ್ದೇಶನಕ್ಕೆ ಇಳಿದ ರಿಷಬ್ ಶೆಟ್ಟಿ, ಅದೇ ವರ್ಷ 'ಕಿರಿಕ್ ಪಾರ್ಟಿ' ಎಂಬ ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು. ನಂತರದ ನ'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾವನ್ನಿ ನಿರ್ದೇಶಿಸಿ, ನಿರ್ಮಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಗುವುದಲ್ಲದೇ 66ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯಿತು. 2019ರಲ್ಲಿ 'ಬಾಲ್ ಬಾಟಮ್' ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ನಂತರ 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಅಭಿನಯಿಸಿದರು.
ಪ್ಯಾನ್ ಇಂಡಿಯಾ ಸ್ಟಾರ್
2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ 'ಕಾಂತಾರ' ಚಿತ್ರ ಬಾಕ್ಸ್ ಆಫೀಸ್ನಲ್ಲೂ ಸಖತ್ ಸದ್ದು ಮಾಡಿತ್ತು. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರವನ್ನು ಕನ್ನಡ ಭಾಷೆಯಲ್ಲಿಯೇ ವೀಕ್ಷಿಸಿದ ಬೇರೆ ರಾಜ್ಯಗಳ ಸಿನಿಪ್ರೇಮಿಗಳು ಚಿತ್ರವನ್ನು ತಮ್ಮ ಭಾಷೆಗೂ ಸಹ ಡಬ್ ಮಾಡಿ, ಇಲ್ಲಿಯ ಸಿನಿರಸಿಕರೂ ಒಂದೊಳ್ಳೆ ಚಿತ್ರವನ್ನು ವೀಕ್ಷಿಸಲಿ ಎಂದು ಬೇಡಿಕೆ ಇಟ್ಟಿದ್ದರು. ಹೀಗೆ ಕಾಂತಾರ ಚಿತ್ರದ ಡಬ್ಬಿಂಗ್ ಕುರಿತು ವ್ಯಾಪಕ ಮನವಿ ಬಂದ ಕಾರಣ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷ್ರಗಳಲ್ಲೂ ಬಿಡುಗಡೆ ಮಾಡಿತ್ತು. 'ಕಾಂತಾರ' ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲೂ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡ ಕಥೆ, ಅದನ್ನು ಪ್ರಸೆಂಟ್ ಮಾಡಿದ ರೀತಿ, ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ, ರಿಷಬ್ ಶೆಟ್ಟಿ ಅವರ ನಟನೆ ಎಲ್ಲವನ್ನೂ ಕೊಡಾಡಿದ್ದರು. ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು. 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 400 ಕೋಟಿಗೂ ಅಧಿಕ ಗಳಿಸುವ ಮೂಲಕ ದಾಖಲೆ ಬರೆದಿತ್ತು.
ಸಂಬಂಧಿತ ಸುದ್ದಿ