twitter
    Celebs»Yash»Biography

    ಯಶ್ ಜೀವನಚರಿತ್ರೆ

    ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.

    ಬಾಲ್ಯ
    1986 ಜನವರಿ 8ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬೆಂಗಳೂರು `ಬಿಎಂಟಿಸಿ'ಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

    ಎಲ್‌ಕೆಜಿಯಿಂದ ಕಾಲೇಜಿನವರೆಗೆ ಮೈಸೂರಿನ ಮಹಾವೀರ್ಸಂ ಸ್ಥೆಯಲ್ಲಿ ವಿಧ್ಯಾಭ್ಯಾಸವನ್ನು ಮುಗಿಸಿದ ಯಶ್ ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಸಹಾಯವಾಗಲು ಪಿಯುಸಿಗೆ ಗುಡ್‌ಬೈ ಹೇಳಿ ಕೆಲಸ ಮಾಡಲು ಪ್ರಾರಂಭಿಸಿದರು. `ನವೀನ್ ಪ್ರಾವಿಜನ್ ಸ್ಟೋರ್' ಎಂಬ ತಮ್ಮದೇ ಸ್ಟೋರ್ ತೆಗೆದು ಕುಟುಂಬದ ಜವಾಬ್ದಾರಿ ವಹಿಸಿಕೊಂಡರು.
     
    ಕಲಾಜೀವನ-ಕಿರುತೆರೆ
    ಹೈಸ್ಕೂಲ್-ಕಾಲೇಜು ದಿನಗಳಲ್ಲಿ ಹಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಯಶ್ ಒಂದು ಸಲ ಮೈಸೂರಿನಲ್ಲಿ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಬೇಕಾದರೆ ರಿಯಲ್ ಸ್ಟಾರ್ ಉಪೇಂದ್ರರವರು ನೋಡಿ ಯಶ್‌ರನ್ನು ತುಂಬಾ ಹೊಗಳಿದ್ದರು.`ವಿಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ಈ ಘಟನೆ ನೆನೆದ ಯಶ್, ಉಪೇಂದ್ರರವರು ತಮಗೆ ಸ್ಫೂರ್ತಿ ಎಂದರು. ನಂತರ ಅಭಿನಯದಲ್ಲಿ ಆಸಕ್ತಿ ತೋರಿ ಯಶ್ ಬಿ.ವಿ.ಕಾರಂತರ 'ಬೆನಕ' ನಾಟಕ ಕಂಪನಿಗೆ ಸೇರಿದರು. ಹಲವು ನಾಟಕಗಳಲ್ಲಿ ಭಾಗವಹಿಸಿದ ಯಶ್, ಮುಂದೆ 'ನಂದಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದರು. ಇದೇ ಸೀರಿಯಲ್‌ನಲ್ಲಿ ಇವರ ಪತ್ನಿ ನಟಿ ರಾಧಿಕಾ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ನಂತರ 'ಪ್ರೀತಿ ಇಲ್ಲದ ಮೇಲೆ'  ಸೀರಿಯಲ್‌ನಲ್ಲಿ ಅನಂತನಾಗ್‌ರ ಮಗನಾಗಿ, ಸಂಗೀತದ ಹಂಬಲವಿರುವ ಯುವಕನಾಗಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು.

     ಸಿನಿಪಯಣ
    2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಈ ಚಿತ್ರದಲ್ಲಿನ ಅಭಿನಯಕ್ಕೋಸ್ಕರ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ತಾವು ಮೊದಲ ಬಾರಿ ನಾಯಕನಾಗಿ ನಟಿಸಿದ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್.
     
    2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ನಂತರ ತೆರೆಗೆ ಬಂದ 'ಲಕ್ಕಿ', 'ಡ್ರಾಮಾ' ,'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು. 2014ರಲ್ಲಿ ತೆರೆಗೆ ಬಂದ  'Mr & Mrs ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು.

     ಕೆಜಿಎಫ್
    ಯಶ್ ಸಿನಿಜೀವನದ ಕಳಸಪ್ರಾಯ ಚಿತ್ರ ಕೆಜಿಎಫ್. 2018 ಡಿಸೆಂಬರ್‌ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ 100 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸಪರ್ವಕ್ಕೆ ನಾಂದಿ ಹಾಡಿತು. ಈ ಚಿತ್ರ ಸುಮಾರು 240 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಕೆಜಿಎಫ್ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. 

    ಕೆಜಿಎಫ್ ಚಾಪ್ಟರ್ 2: 2022 ಏಪ್ರಿಲ್ 14ರಂದು ಬಿಡುಗಡೆಯಾದ  ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕೆಜಿಎಫ್-2 ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡ್ ಮಾಡಿತ್ತು. 

     ರಾಮಾಚಾರಿ- ಮಾರ್ಗರೇಟ್
    ತನ್ನ ಸಿನಿಜೀವನದ ಹಲವು ಯಶಸ್ವಿ ಚಿತ್ರಗಳ ನಾಯಕಿಯಾಗಿದ್ದ ರಾಧಿಕಾ ಪಂಡಿತ್‌ರನ್ನು ಪ್ರೀತಿಸಿ ಸಪ್ತಪದಿ ತುಳಿದರು. ಗೋವಾದಲ್ಲಿ ಮದುವೆಯಾದ ಈ ಜೋಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಅದ್ಧೂರಿ ಔತಣಕೂಟ ಏರ್ಪಡಿಸಿದ್ದರು.

    ಯಶೋಮಾರ್ಗ
    ಯಶ್-ರಾಧಿಕಾ ದಂಪತಿ 'ಯಶೋಮಾರ್ಗ' ಎಂಬ ಸಂಸ್ಥೆ ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಯಶೋಮಾರ್ಗ ಸಂಸ್ಥೆಯ ಅಡಿಯಲ್ಲಿ ಯಶ್ ದಂಪತಿ 4 ಕೋಟಿ ವೆಚ್ಚ ಮಾಡಿ ಕೊಪ್ಪಳ ನಗರ ಕೆರೆಯ ಹೂಳೆತ್ತಿಸಿ, ಕೊಪ್ಪಳ ಜನತೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು. ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.

    ಅಂಬಿ ಪ್ರೀತಿಪಾತ್ರ
    ಯಶ್ ಮೇಲೆ ವಿಶೇಷ ಪ್ರೀತಿ ಹೊಂದಿದ್ದ ಅಂಬಿ ಕೊನೆಯ ಸಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮದಲ್ಲಿ. ಅಂಬಿ ನಿಧನರಾದಾಗ ಸತತ ಎರಡು ದಿನಗಳ ಕಾಲ ಮಂಡ್ಯ ಮತ್ತು ಬೆಂಗಳೂರಿನ ಅಂತಿಮ ಕಾರ್ಯಕ್ರಮಗಳಲ್ಲಿ ಯಶ್ ಭಾಗವಹಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸಿದ್ದರು. ಯಶ್-ರಾಧಿಕಾ ದಂಪತಿಗೆ ಅಂಬಿ ಮೊದಲೇ ಕಾಯ್ದಿರಿಸಿದ್ದ ತೊಟ್ಟಿಲು ಅಂಬಿ ನಿಧನದ ನಂತರ ದಂಪತಿಗೆ ತಲುಪಿದ್ದು ವಿಶೇಷ. ಅಂಬಿ ಮೇಲಿನ ಅಭಿಮಾನದಿಂದ 2019ನೇ ತಮ್ಮ ಜನ್ಮದಿನವನ್ನು ಯಶ್ ಸಾರ್ವಜನಿಕವಾಗಿ ಆಚರಿಸಲಿಲ್ಲ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X