Don't Miss!
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮೈನಾ' ಚಿತ್ರಕ್ಕೆ ನಿಜಕ್ಕೂ ಡೈಲಾಗ್ ಬರೆದದ್ದು ಯಾರು?
2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ರೋಷನ್ ಬೇಗ್ ಅವರು ಭಾನುವಾರ (ಜ.4) ಸಂಜೆ ಪ್ರಶಸ್ತಿಗಳನ್ನು ಪ್ರಕಟಿಸಿದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಎಂದರೆ ಒಂದಲ್ಲ ಒಂದು ವಿವಾದ, ತಕರಾರು, ಕೋಪತಾಪ, ಹಿಡಿಶಾಪ ತಪ್ಪಿದ್ದಲ್ಲ.
ಈ ಸಾಲಿನ ಪ್ರಶಸ್ತಿ ಪಟ್ಟಿಯೂ ವಿವಾದದಿಂದ ಮುಕ್ತವಾಗಿಲ್ಲ. ಈ ಸಾಲಿನಲ್ಲಿ ನಾಗಶೇಖರ್ ನಿರ್ದೇಶನದ 'ಮೈನಾ' ಚಿತ್ರ ಅತ್ಯುತ್ತಮ ಸಂಭಾಷಣೆ ವಿಭಾಗದಲ್ಲಿ ಪ್ರಶಸ್ತಿ ಬಾಜಿಕೊಂಡಿದೆ. ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಈ ಚಿತ್ರದ ಅಸಲಿ ಸಂಭಾಷಣೆಕಾರ ತಾವು ಎನ್ನುತ್ತಿದ್ದಾರೆ ಮಂಜುನಾಥ್ ಸಂಜೀವ್. [2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ]
ಆದರೆ ನಾಗಶೇಖರ್ ಮಾತ್ರ ಈ ಮಾತನ್ನು ಒಪ್ಪುತ್ತಿಲ್ಲ. 'ಮೈನಾ' ಚಿತ್ರಕ್ಕೆ ಸಂಭಾಷಣೆ ಬರೆದದ್ದು ತಾನೇ ಎನ್ನುತ್ತಿದ್ದಾರೆ. ಹಾಗಾಗಿ 'ಮೈನಾ' ಚಿತ್ರ ಈಗ ವಿವಾದ ಕೇಂದ್ರಬಿಂದುವಾಗಿದೆ. ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ನಾಗಶೇಖರ್, "ಮಂಜುನಾಥ್ ಸಂಜೀವ್ ಅವರು ಇಷ್ಟು ದಿನ ಸುಮ್ಮನಿದ್ದು ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಸಂಭಾಷಣೆಕಾರ ತಾವೇ ಎನ್ನುತ್ತಿರುವ ಹಿಂದಿನ ಮರ್ಮ ಏನು" ಎಂದು ಪ್ರಶ್ನಿಸಿದ್ದಾರೆ.
"ಮಂಜುನಾಥ್ ಅವರು ನನ್ನ ಆತ್ಮೀಯ ಗೆಳೆಯ. ಚಿತ್ರದ ಟೈಟಲ್ ಕಾರ್ಡ್ ನಲ್ಲಿ (ಸಂಭಾಷಣೆ) ಮಂಜುನಾಥ್ ಅವರ ಹೆಸರನ್ನು ಹಾಕಲಾಗಿತ್ತು. ಅವರ ವೃತ್ತಿಬದುಕಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಹಾಗೆ ಮಾಡಿದ್ದೆ. ಆದರೆ ನಿಜಕ್ಕೂ ಅವರು ಒಂದೇ ಒಂದು ಸಾಲು ಡೈಲಾಗ್ ಸಹ ಬರೆದಿರಲಿಲ್ಲ..."
"ಚಿತ್ರದ ಸಂಪೂರ್ಣ ಸಂಭಾಷಣೆ ಬರೆದದ್ದು ನಾನೇ. ಈ ಸಂಗತಿ ಇಡೀ ನನ್ನ ಚಿತ್ರತಂಡ ಹಾಗೂ ನಿರ್ಮಾಪಕ ವಜ್ರೇಶ್ವರಿ ರಾಜ್ ಕುಮಾರ್ ಅವರಿಗೂ ಗೊತ್ತು. ವಿಷಯ ಹೀಗಿದ್ದೂ ಅವರು ಪ್ರಶಸ್ತಿ ತನಗೇ ಸೇರಬೇಕು ಎಂಬುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಅವರು ಸಂಭಾಷಣೆ ಪತ್ರಗಳನ್ನು ತೋರಿಸಿದರೆ ಧಾರಾಳವಾಗಿ ಅವರಿಗೆ ಸಮರ್ಪಿಸುತ್ತೇನೆ" ಎಂದಿದ್ದಾರೆ ನಾಗಶೇಖರ್.
'ಮೈನಾ' ಚಿತ್ರದಲ್ಲಿ ಒಟ್ಟು 77 ಸನ್ನಿವೇಶಗಳಿವೆ. ಮಂಜುನಾಥ್ ಅವರು ಪ್ರಶಸ್ತಿ ತಮಗೇ ಸಲ್ಲಬೇಕು ಎಂದು ಬೇಡಿಕೆ ಇಟ್ಟರೆ ತುಂಬು ಮನಸ್ಸಿನಿಂದ ಖಂಡಿತ ಅವರಿಗೇ ಕೊಟ್ಟುಬಿಡುತ್ತೇನೆ. ಮೈನಾ ಚಿತ್ರಕ್ಕೆ ಇದುವರೆಗೂ 22 ಪ್ರಶಸ್ತಿಗಳು ಬಂದಿವೆ. ಅವುಗಳಲ್ಲಿ ಬಹುತೇಕ ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ ಪ್ರಶಸ್ತಿಗಳು. ತಮಾಷೆ ಎಂದರೆ ಇದೇ ಮೊದಲ ಬಾರಿಗೆ ಅತ್ಯುತ್ತಮ ಸಂಭಾಷಣೆ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಇದೇ ಈಗ ತೊಡಕಾಗಿ ಪರಿಣಮಿಸಿದೆ.
"ಮೈನಾ ಚಿತ್ರ ಆರಂಭವಾದಾಗ ಮಂಜುನಾಥ್ ಅವರು ಇರಲಿಲ್ಲ. ನಾಗಶೇಖರ್ ಅವರೇ ಚಿತ್ರದ ಸಂಭಾಷಣೆಯನ್ನು ಹೆಣೆದದ್ದು. ಮೊದಲು ಮಂಜುನಾಥ್ ಅವರಿಗೆ ಮುಂಗಡ ಹಣ ಕೊಟ್ಟಿದ್ದೆ. ಆದರೆ ಕಥೆಯನ್ನು ಬದಲಾಯಿಸಿದೆವು. ಹಾಗಾಗಿ ನಾಗಶೇಖರ್ ಅವರೇ ಸಂಭಾಷಣೆ ಬರೆದದ್ದು" ಎಂದಿದ್ದಾರೆ ಮೈನಾ ಚಿತ್ರದ ನಿರ್ಮಾಪಕ ರಾಜ್ ಕುಮಾರ್.
ಮಂಜುನಾಥ್ ಅವರಿಗೆ ಕೊಟ್ಟ ಮುಂಗಡಹಣ ರು.1 ಲಕ್ಷ ಹಿಂತಿರುಗಿಸುವಂತೆ ಸಾಕಷ್ಟು ಸಲ ವಿನಂತಿಸಿಕೊಂಡಿದ್ದೇನೆ ಸಹ. ಅವರು ಚಿತ್ರತಂಡದಲ್ಲಿ ಇರಲೇ ಇಲ್ಲ ಎನ್ನುತ್ತಾರೆ ರಾಜ್ ಕುಮಾರ್. ಅದೆಲ್ಲಾ ಸರಿ ಟೈಟಲ್ ಕಾರ್ಡ್ ನಲ್ಲಿ ಮಂಜುನಾಥ್ ಹೆಸರು ಯಾಕೆ ಹಾಕಬೇಕಿತ್ತು ಎಂಬ ಪ್ರಶ್ನೆಗೆ ಮಾತ್ರ ಸೂಕ್ತ ಉತ್ತರ ಸಿಗುತ್ತಿಲ್ಲ.
ಈ ಪ್ರಶಸ್ತಿಯೂ ರು.20 ಸಾವಿರ ನಗದು ಪುರಸ್ಕಾರ ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಅದೆಲ್ಲಾ ಸರಿ ಈಗ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಯಾರಿಗೆ ಸಲ್ಲಬೇಕು ಎಂಬುದೇ ಅತಿದೊಡ್ಡ ಸಮಸ್ಯೆಯಾಗಿದೆ ಪರಿಣಮಿಸಿದೆ. ಮುಂದೇನು ಎಂಬುದನ್ನು ಕಾದುನೋಡೋಣ. (ಏಜೆನ್ಸೀಸ್)