Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮುಕರ ವಿರುದ್ಧ ನಟ 'ಮೈನಾ' ಚೇತನ್ ಕಿಡಿ
ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಬೇಕಿದ್ದರೆ ನಟಿಯರು ಸೆರಗು ಹಾಸಬೇಕಾದಂಥ ಹೀನ ಸಂಸ್ಕೃತಿಯ ವಿರುದ್ಧ ಕನ್ನಡ ಚಿತ್ರರಂಗದ ಘಟಾನುಘಟಿಗಳೇ ಜಾಣಕಿವುಡ, ಜಾಣಕುರುಡರಂತೆ ಕುಳಿತಿರುವಾಗ, ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ದೃಢ ಅಭಿಪ್ರಾಯ ಮಂಡಿಸಲು ಹಿಂದೇಟು ಹಾಕದ 'ಆ ದಿನಗಳು' ಖ್ಯಾತಿಯ ಚೇತನ್ ಕುಮಾರ್ 'ಕಾಮುಕ'ರ ವಿರುದ್ಧ ಕೆಂಡ ಕಾರಿದ್ದಾರೆ.
ಫೇಸ್ ಬುಕ್ ಪುಟದಲ್ಲಿ ಬರೆದಿರುವ ಲೇಖನದಲ್ಲಿ, ಚಿತ್ರರಂಗದಲ್ಲಿನ ಮಹಿಳೆಯರಿಗೆ ರಕ್ಷಣೆ ಸಿಗಬೇಕಾದರೆ, ಕಾಮುಕ ನಿರ್ದೇಶಕರ ಹೀನಸುಳಿಯಿಂದ ಹೊಸ ನಟಿಯರನ್ನು ಪಾರುಮಾಡಬೇಕಾದರೆ, ಕನ್ನಡ ಚಿತ್ರರಂಗ ಉದ್ಧಾರವಾಗಬೇಕಾದರೆ ಏನು ಮಾಡಬೇಕೆಂದು ಅತ್ಯಂತ ಸ್ಪಷ್ಟ ನುಡಿಗಳಲ್ಲಿ ವಸ್ತುನಿಷ್ಠ ಅಭಿಪ್ರಾಯ ಮಂಡಿಸಿದ್ದಾರೆ. ಅದಕ್ಕಾಗಿ ಅವರಿಗೆ ಒಂದು ಧನ್ಯವಾದ ಹೇಳೋಣ.
ಈಗಾಗಲೆ ಬಹಿರಂಗವಾಗಿರುವ ಪ್ರಕಾರ, ಟಿವಿ9 ನಡೆಸಿದ ಸ್ಟಿಂಗ್ ಆಪರೇಷನ್(ಕುಟುಕು ಕಾರ್ಯಾಚರಣೆ)ನಲ್ಲಿ ಹಲವಾರು 'ಖ್ಯಾತ' ನಿರ್ದೇಶಕರ ಬಣ್ಣ ಬಯಲಾಗಿದೆ. "ಹಲವು ನಾಯಕಿಯರೊಡನೆ ಮಲಗಿದ್ದೇನೆ" ಎಂದು ಮದುವೆ ವಯಸ್ಸಿಗೆ ಬಂದ ಮಗಳ ಅಪ್ಪನಾಗಿರುವ, ನಾಲ್ಕು ಹೆಂಡತಿಯರ ಗಂಡನಾಗಿರುವ ನಿರ್ದೇಶಕ ನಾಚಿಕೆ ಇಲ್ಲದೆ ಹೇಳುವುದು ಚಿತ್ರರಂಗ ತಲೆತಗ್ಗಿಸುವಂತೆ ಮಾಡಿದೆ.
ಅಚ್ಚರಿಯ ಸಂಗತಿಯೆಂದರೆ, ಹಿರಿತೆರೆಯ ನಟರು ಕಿರುತೆರೆಗೆ ಹೋಗದಂತೆ ನಿಷೇಧ ಹೇರಬೇಕೆಂದು ಬೊಂಬಡಾ ಹೊಡೆಯುವ 'ಮಹಾನ್' ನಿರ್ದೇಶಕರು, ನಿರ್ಮಾಪಕರು, ಅಸಹ್ಯವನ್ನು ಬಯಲಿಗೆಳೆದ ರಹಸ್ಯ ಕಾರ್ಯಾಚರಣೆಯ ಬಗ್ಗೆ ಚಕಾರವೆತ್ತುತ್ತಿಲ್ಲ. ಇದು ಇನ್ಯಾವ ಸ್ವರೂಪ ಪಡೆಯುತ್ತೋ ಏನೋ, ಆದರೆ, 'ಮೈನಾ' ಖ್ಯಾತಿ ಚೇತನ್ ನಿರ್ಭಿಡೆಯಿಂದ ಏನು ಹೇಳಿದ್ದಾರೆ ಎಂಬುದರ ಸಾರಾಂಶ ಮುಂದಿದೆ. ['ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9]
ರಗ್ಗಿನ ಕೆಳಗೆ ಮುಚ್ಚಿಹೋಗುವ ಹೀನ ಕೃತ್ಯಗಳು
ಮುಖ್ಯವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ನಟಿಯರು ನೇರವಾಗಿ ವ್ಯವಹರಿಸದೆ ಪರೋಕ್ಷವಾಗಿ ವ್ಯವಹರಿಸುತ್ತಿರುವುದರಿಂದ ಇಂಥ ಅಸಹ್ಯಗಳು ಸಂಭವಿಸುತ್ತಿವೆ. ರಗ್ಗಿನ ಕೆಳಗೇ ಹುದುಗಿಹೋಗುವ ಇಂಥ ಹೀನ ಕೃತ್ಯಗಳ ಮೇಲೆ ಬೆಳಕು ಚೆಲ್ಲಿದಾಗ ಮಾತ್ರ ಕನ್ನಡ ಚಿತ್ರರಂಗಕ್ಕೆ ದೀರ್ಘಾವಧಿಯ ಲಾಭ ಸಿಗುತ್ತದೆ.
ಇಂಥ ಅಸಹ್ಯಗಳನ್ನು ಎಂದೂ ಮನ್ನಿಸಬಾರದು
ಎಲ್ಲರಿಗೆ ತಿಳಿದಿರುವಂತೆ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಕಾನೂನಿಗೆ ವಿರುದ್ಧವಾಗಿದೆ. ಇತರೆ ಕೆಲಸದ ಸ್ಥಳಗಳಂತೆ ಚಿತ್ರರಂಗದಲ್ಲಿ ಕೂಡ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಆಸೆ ತೋರಿಸಿ ದುರ್ಬಳಸಿಕೊಳ್ಳುತ್ತಿರುವುದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿರುವುದು ನಿಲ್ಲಬೇಕು. ಇಂಥ ಕೃತ್ಯಗಳನ್ನು ಎಂದೂ ಮನ್ನಿಸಬಾರದು.
ಎಷ್ಟೇ ಪ್ರಭಾವವಿದ್ದರೂ ತಪ್ಪಿತಸ್ಥರ ಮೇಲೆ ಕ್ರಮ
ಹಿರಿಯ ಕಲಾವಿದರು, ಸಂಘಟನೆಗಳ ನಾಯಕರು, ನಿರ್ದೇಶಕರು, ನಿರ್ಮಾಪಕರು, ನಾಯಕ ನಟರ ಮೇಲೆ ನೈತಿಕ ಜವಾಬ್ದಾರಿಯಿದೆ. ಕೆಲಸದ ವಾತಾವರಣ ಎಲ್ಲರಿಗೂ, ಅದರಲ್ಲೂ ಹೊಸ ಸಹನಟಿಯರಿಗೆ ಅತ್ಯಂತ ಸುರಕ್ಷಿತವಾಗಿರಬೇಕು. ದೌರ್ಬಲ್ಯದ ದುರ್ಲಾಭ ಪಡೆಯುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು.
ಕಾಮನೆಗೆ ಬಳಸುವವರನ್ನು ಬಹಿರಂಗವಾಗಿ ದೂಷಿಸಿ
ನಟಿಯರನ್ನು ಕಾಮನೆಗೆ ಬಳಸಿಕೊಳ್ಳುವವರನ್ನು ಬಹಿರಂಗವಾಗಿ ದೂಷಿಸುವ ಮುಖಾಂತರ ಮತ್ತು ಭಾಗಿಯಾದವರ ಹೆಸರನ್ನು ಬಹಿರಂಗಪಡಿಸುವ ಮೂಲಕ ಮುಂದೆ ನಡೆಯಬಹುದಾದ ಲೈಂಗಿಕ ದೌರ್ಜನ್ಯಗಳನ್ನು ಹತ್ತಿಕ್ಕಬಹುದು. ಮತ್ತು ಪ್ರತಿಭಾವಂತ, ಪ್ರಾಮಾಣಿಕ ಕಲಾವಿದರಲ್ಲಿ ವಿಶ್ವಾಸ ತುಂಬಿ, ಮಸಿ ಬಳಿದುಕೊಂಡ ಚಿತ್ರರಂಗದ ಇಮೇಜ್ ಬದಲಿಸಲು ಸಾಧ್ಯ.
ದೌರ್ಜನ್ಯದ ವಿರುದ್ಧ ದನಿಯೆತ್ತುವ ಯುವಕರು ಬೇಕು
ದೌರ್ಜನ್ಯದ ವಿರುದ್ಧ ನಿರ್ಭಿಡೆಯಿಂದ ದನಿಯೆತ್ತುವ, ಚಿತ್ರರಂಗದ ಏಳಿಗೆಗಾಗಿ ಯಾವುದೇ ಮುಲಾಜಿಲ್ಲದೆ ಸ್ಪಷ್ಟ ಅಭಿಪ್ರಾಯ ಮಂಡಿಸುವ ಯುವಕ, ಯುವತಿಯರು ಚಿತ್ರರಂಗಕ್ಕೆ ಬರಬೇಕಾಗಿದೆ. ಇಂದಿನ ಯುವಕರಲ್ಲಿ ಯಾರದೇ ಪ್ರಭಾವಕ್ಕೆ ಒಳಗಾಗದೆ ದೌರ್ಜನ್ಯದ ವಿರುದ್ಧ ಕಿಡಿಕಾರುವ ಛಾತಿಯಿರುತ್ತದೆ.
ಪ್ರತಿಭೆ ಮತ್ತು ಸೃಜನಶೀಲತೆ ಮಾತ್ರ ಸಾಲಲ್ಲ
ಚಿತ್ರರಂಗದ ಜೊತೆ ನಮ್ಮ ಭಾಷೆ, ಕಲೆ ಮತ್ತು ಸಂಸ್ಕೃತಿ ಬೆಳೆಯಬೇಕಾಗಿದ್ದರೆ ಪ್ರತಿಭೆ ಮತ್ತು ಸೃಜನಶೀಲತೆ ಮಾತ್ರ ಸಾಕಾಗುವುದಿಲ್ಲ, ಬದಲಿಗೆ ಹೊಸ ಪ್ರತಿಭೆಗಳಿಗೆ, ಹೊಸ ಯೋಚನೆಗಳಿಗೆ ಅವಕಾಶ ಮಾಡಿಕೊಡಬೇಕು. ಚಿತ್ರರಂಗದ ಕಾಮುಕ ಮುಖ ಬಯಲಿಗೆಳೆದ ವಾಹಿನಿಗೆ ಥ್ಯಾಂಕ್ಸ್.