Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಪ್ಪು ಯಾರದ್ದು ಗೊತ್ತಾ? 'ಫಸ್ಟ್ ರ್ಯಾಂಕ್' ಗುರುನಂದನ್ ಬಾಯ್ಬಿಟ್ಟ ಸತ್ಯ!
'ಕುಂಬಾರನಿಗೆ ವರ್ಷ.! ದೊಣ್ಣೆಗೆ ನಿಮಿಷ' ಎನ್ನುವ ಹಾಗಾಗಿದೆ ಸೂಪರ್ ಹಿಟ್ ಸಿನಿಮಾ 'ಫಸ್ಟ್ ರ್ಯಾಂಕ್ ರಾಜು' ಚಿತ್ರದ ನಾಯಕ ಗುರುನಂದನ್ ರವರ ಸದ್ಯದ ಪರಿಸ್ಥಿತಿ.
'ಫಸ್ಟ್ ರ್ಯಾಂಕ್ ರಾಜು' ಚಿತ್ರದಂತಹ ಒಂದು ಹಿಟ್ ಕೊಡುವುದಕ್ಕೆ ಕನ್ನಡ ಚಿತ್ರರಂಗದಲ್ಲಿ ಕಳೆದ 12 ವರ್ಷಗಳಿಂದ ಬೆವರು ಹರಿಸಿದವರು ನಟ ಗುರುನಂದನ್. ಈಗ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ.
''ಟ್ಯೂಬ್ ಲೈಟ್' ಚಿತ್ರಕ್ಕೆ ಡಬ್ಬಿಂಗ್ ಮಾಡುವುದಕ್ಕೆ ನಟ ಗುರುನಂದನ್ ಬರೋಬ್ಬರಿ 50 ಲಕ್ಷ ರೂಪಾಯಿ ಕೇಳಿದ್ದಾರೆ. ಸಾಲದಕ್ಕೆ ಟೈಮ್ ಇಲ್ಲ ಅಂತ ಸತಾಯಿಸುತ್ತಿದ್ದಾರೆ'' ಅಂತ 'ಟ್ಯೂಬ್ ಲೈಟ್' ಚಿತ್ರದ ನಿರ್ದೇಶಕರು ಬಾಯ್ಬಿಟ್ಟ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ['ಫಸ್ಟ್ ರ ರಾಜು' ಗುರುನಂದನ್ ಗೆ ಯಶಸ್ಸಿನ ಅಮಲು ನೆತ್ತಿಗೇರ್ತಾ?]
ಇದೇ ವಿಚಾರವಾಗಿ ನಟ ಗುರುನಂದನ್ ಹೇಳುವ ಸತ್ಯವೇ ಬೇರೆ. 'ಟ್ಯೂಬ್ ಲೈಟ್' ಚಿತ್ರದ ಬಗ್ಗೆ ಗುರುನಂದನ್ ಬಿಚ್ಚಿಟ್ಟ ಸತ್ಯ ಇಲ್ಲಿದೆ. ಮುಂದೆ ಓದಿ.....
ಮೂರು ವರ್ಷದ ಹಿಂದಿನ ಸಿನಿಮಾ ಅದು!
ಈಗ ಏಕಾಏಕಿ ಸುದ್ದಿಯಲ್ಲಿರುವ 'ಟ್ಯೂಬ್ ಲೈಟ್' ಚಿತ್ರ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಅದನ್ನ ಕಂಪ್ಲೀಟ್ ಮಾಡುವುದಕ್ಕೆ ಆಗದೆ, ನಿರ್ಮಾಪಕರು ಮತ್ತು ನಿರ್ದೇಶಕರೇ ಚಿತ್ರವನ್ನ ಅರ್ಧಕ್ಕೆ ಸ್ಟಾಪ್ ಮಾಡಿದ್ರಂತೆ. [ಫಸ್ಟ್ Rank ರಾಜು ಚಿತ್ರವಿಮರ್ಶೆ: ಡಿಸ್ಟಿಂಕ್ಷನ್ ಗೆ ಕೊಂಚ ಕಮ್ಮಿ]
ಗುರುನಂದನ್ ಚಿತ್ರವನ್ನ ಒಪ್ಪಿಕೊಂಡಿದ್ದು ಹೇಗೆ?
'ಟ್ಯೂಬ್ ಲೈಟ್' ಚಿತ್ರಕ್ಕೆ ಮನೋಹರ್ ಜೋಷಿ ಛಾಯಗ್ರಾಹಕ. ಮನೋಹರ್ ಜೋಷಿ, ಗುರುನಂದನ್ ಗೆ ಆಪ್ತ. ಅವರ ಸಲಹೆ ಮೇರೆಗೆ 'ಟ್ಯೂಬ್ ಲೈಟ್' ಚಿತ್ರದಲ್ಲಿ ನಟಿಸಲು ಗುರುನಂದನ್ ಒಪ್ಪಿಕೊಂಡಿದ್ದು.
ಶುರುವಾಗಿನಿಂದಲೂ ಸಮಸ್ಯೆಗಳೇ!
'ಟ್ಯೂಬ್ ಲೈಟ್' ಚಿತ್ರ ಶುರುವಾದಾಗಿನಿಂದಲೂ ಒಂದಲ್ಲಾ ಒಂದು ಸಮಸ್ಯೆ ಇತ್ತಂತೆ. ಎಲ್ಲಾ ಸಮಸ್ಯೆಗಳ ನಡುವೆ ಕ್ವಾಲಿಟಿ ಕಡಿಮೆ ಆಗಬಾರದು ಎಂಬ ಕಾರಣಕ್ಕೆ ತಾವೇ ಕಾಸ್ಟ್ಯೂಮ್ ಗಳನ್ನ ಖರೀದಿಸಿ, ನಟಿಸಿದ್ರಂತೆ ಗುರುನಂದನ್.
ಶೂಟಿಂಗ್ ವೇಳೆಯಲ್ಲೇ ಆಗಿತ್ತು ಅವಮಾನ!
ಇಂದು ಗುರುನಂದನ್ ಮೇಲೆ ಕಂಪ್ಲೇಂಟ್ ಮಾಡುತ್ತಿರುವ ಚಿತ್ರತಂಡ, ಅದೇ ಗುರುನಂದನ್ ಗೆ ಶೂಟಿಂಗ್ ವೇಳೆಯಲ್ಲಿ ಅವಮಾನ ಮಾಡಿದ್ದನ್ನ ಮರೆತಿದೆ. Conveyance ಗಾಗಿ ಕೇವಲ ಮುನ್ನೂರು ರೂಪಾಯಿ ಕೊಡಿ ಅಂತ ಗುರುನಂದನ್ ಕೇಳಿದಾಗ ನಿರ್ಮಾಪಕ ಕಿರಣ್ 'ಚಾನ್ಸ್ ಕೊಟ್ಟಿರುವುದೇ ಹೆಚ್ಚು' ಅಂತ ಹೀಯಾಳಿಸಿದ್ದೂ ಉಂಟು.
ಫೈನಾನ್ಸ್ ಮಾಡಿಸಿದ್ದು ಗುರುನಂದನ್!
ದುಡ್ಡು ಇಲ್ಲದೆ 'ಟ್ಯೂಬ್ ಲೈಟ್' ಸಿನಿಮಾ ನಿಂತು ಹೋಗುವ ಪರಿಸ್ಥಿತಿ ಬಂದಾಗ ನಿರ್ಮಾಪಕರಿಗೆ 10 ಲಕ್ಷ ರೂಪಾಯಿ ಫೈನಾನ್ಸ್ ಮಾಡಿಸಿದವ್ರು ಇದೇ ಗುರುನಂದನ್.
ಯಾರಿಗೂ ವೃತ್ತಿಪರತೆ ಇಲ್ಲ!
'ಟ್ಯೂಬ್ ಲೈಟ್' ಚಿತ್ರದ ನಿರ್ಮಾಪಕ ಕಿರಣ್ ಆಗಲಿ, ನಿರ್ದೇಶಕ ವೇಣುಗೋಪಾಲ್ ಆಗಲಿ professionalist ಅಲ್ಲವೇ ಅಲ್ಲ ಎನ್ನುತ್ತಾರೆ ಗುರುನಂದನ್.
ಇದ್ದಕ್ಕಿದ್ದಂತೆ ಡೈರೆಕ್ಟರ್ ಚೇಂಜ್!
'ಟ್ಯೂಬ್ ಲೈಟ್' ಚಿತ್ರಕ್ಕೆ ಮೊದಲು ಆಕ್ಷನ್ ಕಟ್ ಹೇಳಿದವರು ನಿರ್ದೇಶಕ ವೇಣುಗೋಪಾಲ್. ಆದ್ರೆ, ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಮಾಪಕ ಕಿರಣ್, ವಿಷ್ಣು.ವಿ.ಪ್ರಸನ್ನ ಎಂಬುವವರನ್ನ ಡೈರೆಕ್ಟರ್ ಕುರ್ಚಿ ಮೇಲೆ ಕೂರಿಸಿದ್ರಂತೆ.
'ಟ್ಯೂಬ್ ಲೈಟ್' ಆಫ್ ಆಯ್ತು, ಬೇರೆ ಚಿತ್ರ ಶುರುವಾಯ್ತು!
ಇದ್ದಕ್ಕಿದ್ದ ಹಾಗೆ 'ಟ್ಯೂಬ್ ಲೈಟ್' ಚಿತ್ರದ ಚಿತ್ರೀಕರಣ ನಿಲ್ಲಿಸಿದ ಕಿರಣ್, 'ವೀಕೆಂಡ್ ವಿತ್ ಗೋಸ್ಟ್' ಚಿತ್ರವನ್ನ ಕೈಗೆತ್ತಿಕೊಂಡರು. ಇತ್ತ ನಿರ್ದೇಶಕ ವೇಣುಗೋಪಾಲ್ ಕೂಡ 'ಟಕೀಲಾ' ಎನ್ನುವ ಚಿತ್ರಕ್ಕೆ ಚಾಲನೆ ನೀಡಿದರು. ಈ ಎರಡೂ ಚಿತ್ರಗಳೂ ನಿಂತ ನೀರು ಅನ್ನೋದು ಬೇರೆ ವಿಚಾರ.
ಪರಿಪರಿಯಾಗಿ ಕೇಳಿದ್ರೂ ಕಂಪ್ಲೀಟ್ ಮಾಡಿಲ್ಲ
ಬಣ್ಣದ ಬದುಕ್ಕನ್ನೇ ನಂಬಿರುವ ಗುರುನಂದನ್, 'ಟ್ಯೂಬ್ ಲೈಟ್' ಚಿತ್ರವನ್ನ ಕಂಪ್ಲೀಟ್ ಮಾಡಿ ಅಂತ ಎಷ್ಟೋ ಬಾರಿ ನಿರ್ಮಾಪಕ ಮತ್ತು ನಿರ್ದೇಶಕರನ್ನ ಕೇಳಿಕೊಂಡರೂ, ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.
'ಫಸ್ಟ್ ರ್ಯಾಂಕ್ ರಾಜು' ಶುರುವಾಯ್ತು
'ಟ್ಯೂಬ್ ಲೈಟ್' ಚಿತ್ರದಿಂದ ಪೇಮೆಂಟ್ ಸ್ವೀಕರಿಸದ ಗುರುನಂದನ್ 'ಫಸ್ಟ್ ರ್ಯಾಂಕ್ ರಾಜು' ಚಿತ್ರದ ಬಗ್ಗೆ ಗಮನ ಹರಿಸಿದರು. ಅದೃಷ್ಟವಶಾತ್ 'ಫಸ್ಟ್ ರ್ಯಾಂಕ್ ರಾಜು' ಹಿಟ್ ಆಯ್ತು. ಗುರುನಂದನ್ ಸೇಫ್ ಆದರು.
ಗೆದ್ದ ನಂತರ ನೆನಪಾಗಿದೆ!
'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ಶುರುವಾಗುವುದಕ್ಕೂ ಮುನ್ನ 'ಡಬ್ಬಿಂಗ್ ಮುಗಿಸಿಕೊಡ್ತೀನಿ' ಅಂತ ಖುದ್ದು ಗುರುನಂದನ್ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಫೋನ್ ಮಾಡಿ ಹೇಳಿದ್ದಾರೆ. ಅಂದು ಕ್ಯಾರೇ ಎನ್ನದ 'ಟ್ಯೂಬ್ ಲೈಟ್' ಚಿತ್ರತಂಡ ಇಂದು ಗುರುನಂದನ್ ಮೇಲೆ ಅಪವಾದ ಹೊರಿಸುತ್ತಿದ್ದಾರೆ.
''50 ಲಕ್ಷ ಕೇಳಿದ್ದು ಸುಳ್ಳು''
''ಎಷ್ಟು ಆಗುತ್ತೆ ಅಷ್ಟು ಕೊಡಿ ಅಂತ ಕೇಳಿದ್ನೇ ಹೊರತು ಐವತ್ತು ಲಕ್ಷ ಕೇಳಿಲ್ಲ. ಇದೆಲ್ಲಾ ಸುಳ್ಳು. ಟೈಮ್ ಇಲ್ಲ ಅಂತಾನೂ ಹೇಳಿಲ್ಲ. 'ಆಯ್ತು' ಅಂತ ಹೋದವರು, ಮೂರು ದಿನದಿಂದ ಪತ್ತೆನೇ ಇಲ್ಲ. ಈಗ ಈ ತರಹ ನೆಗೆಟಿವ್ ಪಬ್ಲಿಸಿಟಿ ಮಾಡ್ತಿದ್ದಾರೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ತಮ್ಮ ಅಳಲು ತೋಡಿಕೊಂಡರು ಗುರುನಂದನ್.
'ಫ್ರೀ'ಯಾಗಿ ಮಾಡಿ!
'ಫಸ್ಟ್ ರ್ಯಾಂಕ್ ರಾಜು' ಚಿತ್ರದ ಯಶಸ್ಸನ್ನ ಎನ್ ಕ್ಯಾಶ್ ಮಾಡಿಕೊಳ್ಳುವುದಕ್ಕೆ ನೋಡುತ್ತಿರುವ 'ಟ್ಯೂಬ್ ಲೈಟ್' ಚಿತ್ರತಂಡ ಗುರುನಂದನ್ ಗೆ ನಯಾ ಪೈಸೆ ಕೊಡುವುದಕ್ಕೆ ತಯಾರಿಲ್ಲ. ಮೂರು ವರ್ಷದ ಹಿಂದೆ ಹೇಳಿದ್ದ ಪ್ರಕಾರ, ಗುರುನಂದನ್ 'ಚಾನ್ಸ್ ಗಾಗಿ ಫ್ರೀ ಆಗಿ' ಚಿತ್ರವನ್ನ ಮುಗಿಸಿಕೊಡಬೇಕು. ಹಾಗಾದ್ರೆ, ಮೂರು ವರ್ಷದಿಂದ ಖಾಲಿ ಕೈಯಲ್ಲಿ ಬೆವರು ಹರಿಸಿರುವ ಗುರುನಂದನ್ ಶ್ರಮಕ್ಕೆ ಬೆಲೆನೇ ಇಲ್ವಾ?
ಯಾರಿಗೂ ಪೇಮೆಂಟ್ ಇಲ್ಲ!
ಬರೀ ಗುರುನಂದನ್ ಗೆ ಮಾತ್ರ ಅಲ್ಲ. 'ಟ್ಯೂಬ್ ಲೈಟ್' ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರಿಗೆ ಪೇಮೆಂಟ್ ಸಿಕ್ಕಿಲ್ಲ ಅಂದ್ರೆ ನೀವು ನಂಬಲೇಬೇಕು.
'ಡಬ್ಬಿಂಗ್ ಮಾಡುವುದಕ್ಕೆ ಸಿದ್ಧ'
'ಈಗಲೂ ಡಬ್ಬಿಂಗ್ ಮಾಡಿಕೊಡುವುದಕ್ಕೆ ಸಿದ್ಧ ಇದ್ದೀನಿ' ಅಂತಾರೆ ಗುರುನಂದನ್. ಹೀಗಿದ್ದರೂ, ತಮ್ಮ ಬಗ್ಗೆ ನೆಗೆಟಿವ್ ಪಬ್ಲಿಸಿಟಿ ಶುರುವಾಗಿರುವುದರ ಬಗ್ಗೆ ಗುರುನಂದನ್ ಬೇಸರ ವ್ಯಕ್ತಪಡಿಸುತ್ತಾರೆ.
ಕುಂಬಾರನಿಗೆ ವರುಷ.! ದೊಣ್ಣೆಗೆ ನಿಮಿಷ
12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಣ್ಣ-ಪುಟ್ಟ ಪಾತ್ರ ಪೋಷಿಸುತ್ತಾ, ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿರುವ ಗುರುನಂದನ್ ಕಷ್ಟ-ಸುಖ ಎರಡನ್ನೂ ಸಮನಾಗಿ ಕಂಡವರು. 'ಫಸ್ಟ್ ರ್ಯಾಂಕ್ ರಾಜು' ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ಗುರುನಂದನ್ ಯಶಸ್ಸಿಗೆ ನಿಮಿಷದಲ್ಲಿ ಮಸಿ ಬಳಿಯುವ ಪ್ರಯತ್ನವೇ ಇದು?