Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕಿಂಗ್ ಸ್ಟಾರ್ ಯಶ್ 'ಡ್ರಾಮಾ' ಸಂದರ್ಶನ
ಸ್ಯಾಂಡಲ್ ವುಡ್ ಯಶಸ್ವಿ ಯುವ ನಟರ ಸಾಲಿನಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ 'ಟಾಪ್' ಸ್ಥಾನದಲ್ಲಿದ್ದಾರೆ. ಶಾಲೆ-ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ, ನಟನೆಯಲ್ಲಿ ತೊಡಗಿಸಿಕೊಂಡಿದ್ದ ನಟ ಯಶ್, 'ಮನೆಯೊಂದು ಮೂರು ಬಾಗಿಲು' ಮುಂತಾದ ಧಾರಾವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟವರು. ನಂತರ ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ 'ಜರ್ನಿ' ಪ್ರಾರಂಭಿಸಿದರು.
'ಮೊಗ್ಗಿನ ಮನಸ್ಸು' ಚಿತ್ರ ಸೂಪರ್ ಹಿಟ್ ಆಗಿ ಯಶ್ ಕನ್ನಡ ಚಿತ್ರರಂಗದ ನಾಯಕನಟ ಎನಿಸಿಕೊಂಡರು. ಮುಂದೆ, 'ರಾಕಿ', 'ರಾಜಧಾನಿ', 'ಕಳ್ಳರ ಸಂತೆ', 'ಮೊದಲಾ ಸಲ', 'ಕಿರಾತಕ', 'ಲಕ್ಕಿ' ಹಾಗೂ 'ಜಾನೂ' ಚಿತ್ರಗಳ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಮೆಚ್ಚುಗೆಯಾಗಿ ಹಂತಹಂತವಾಗಿ ವೃತ್ತಿಜೀವನದಲ್ಲಿ ಯಶಸ್ಸು ಕಂಡವರು. ರಾಕಿಂಗ್ ಸ್ಟಾರ್ ಬಿರುದು ಹೊಂದಿರುವ ನಟ ಯಶ್, ಸದ್ಯದಲ್ಲೇ ಬರಲಿರುವ ಯೋಗರಾಜ್ ಭಟ್ ನಿರ್ದೇಶನದ ತಮ್ಮ 'ಡ್ರಾಮಾ' ಚಿತ್ರದ ಬಗ್ಗೆ 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಮಾತುಕತೆ ಇಲ್ಲಿದೆ, ಓದಿ...
*ಬರಲಿರುವ ನಿಮ್ಮ ಡ್ರಾಮಾ ಚಿತ್ರದಲ್ಲಿ ನಿಮ್ಮ ಪಾತ್ರ? ಅದಕ್ಕೊಂದಿಷ್ಟು ವಿವರಣೆ...
ಡ್ರಾಮಾದಲ್ಲಿ ನನ್ನ ಪಾತ್ರದ ಹೆಸರು ವೆಂಕಟೇಸ (ವೆಂಕಟೇಶ). ಇದೊಂದು ಪಕ್ಕಾ ಹಳ್ಳಿಯ ಮುಗ್ಧ ಯುವಕನ ಪಾತ್ರ. ಮುಗ್ಧತೆ ಹಾಗೂ ವಯಸ್ಸಿಗೆ ಸಹಜವಾಗಿ ಇರುವುದಕ್ಕಿಂತ ಹೆಚ್ಚು ತರಲೆ, ಕೀಟಲೆ ಮಾಡುವ ಯುವಕನ ಪಾತ್ರ. ಚಿತ್ರದಲ್ಲಿ ಈ ವೆಂಕಟೇಶ ಪಾತ್ರದ ಮೂಲಕ ನಾನು ನನ್ನ ಸ್ನೇಹಿತ ಸತೀಸ (ಸತೀಶ) ಜೊತೆಗೂಡಿ ಮಾಡುವ ತರ್ಲೆ, ತಾಪಾತ್ರಯಗಳ ಸುತ್ತ 'ಡ್ರಾಮಾ' ಕಥೆ ಸುತ್ತುತ್ತದೆ.
ನಾವಿಬ್ಬರೂ ಮಾಡಬಾರದ ಸಿಲ್ಲಿ ಸಿಲ್ಲಿ ಕೆಲಸಗಳನ್ನು ಮಾಡುತ್ತಾ ನಮ್ಮ ವನದಲ್ಲಿ ಜೊತೆಯಾಗುವ ಹುಡುಗಿಯರನ್ನು ಸೇರಿಕೊಂಡು ಆಡುವ ಆಟ, ಪಡುವ ಪರದಾಟವೇ ಚಿತ್ರದ ಕಥಾವಸ್ತು. ಆದರೆ ಇಷ್ಟು ಹೇಳಿದಾಕ್ಷಣ ಚಿತ್ರಕಥೆಯನ್ನು ಯಾರೂ ಊಹಿಸಲಾಗದಷ್ಟು ವಿಭಿನ್ನವಾಗಿ ವಿಶಿಷ್ಟವಾಗಿ 'ಡ್ರಾಮಾ' ಚಿತ್ರ ಮೂಡಿಬಂದಿದೆ. ಸಂಪೂರ್ಣವಾಗಿ ತಿಳಿದುಕೊಳ್ಳಲು 'ಡ್ರಾಮಾ' ಚಿತ್ರ ನೋಡಲೇಬೇಕು.
*ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ 'ಡ್ರಾಮಾ' ನಿರ್ದೇಶನದ ಅನುಭವ ಹೇಗಿತ್ತು?
ನಗು.. ಸೂಪರ್, ಅದನ್ನು ಒಂದೆರಡು ಶಬ್ಧಗಳಲ್ಲಿ ಹೇಳಲಾಗದು. ಯೋಗರಾಜ್ ಭಟ್ ಅವರ ನಿರ್ದೇಶನದ 'ಡ್ರಾಮಾ' ಚಿತ್ರದ ಶೂಟಿಂಗ್ ನಲ್ಲಿ ನಾನು ಕಳೆದ ಕ್ಷಣಗಳೆಲ್ಲವೂ ಖುಷಿಯ ಕ್ಷಣಗಳು ಹಾಗೂ ಚಿರಸ್ಮರಣೀಯ. ಪ್ರತಿಯೊಂದು ಚಿತ್ರದ ಮೂಲಕವೂ ನಾನು ನಿರ್ದೇಶಕರಿಂದ ಸಾಕಷ್ಟು ಕಲಿತಿದ್ದೇನೆ. ಯೋಗರಾಜ್ ಭಟ್ ಅವರಿಂದಲೂ ಅಷ್ಟೇ, ತುಂಬಾ ಹೊಸ ವಿಷಯಗಳನ್ನು ಕಲಿತುಕೊಂಡಿದ್ದೇನೆ, ಹೊಸ ನಿರೂಪಣೆಯ ಶೈಲಿಯಲ್ಲಿ ಅಭಿನಯಸುವ ಅನುಭವ ಹೊಂದಿದ್ದೇನೆ. ಅವೆಲ್ಲವೂ 'ಡ್ರಾಮಾ' ಚಿತ್ರ ನೋಡಿದಾಗ ನಿಮ್ಮ ಅನುಭವಕ್ಕೂ ಬರಲಿದೆ.
*ನಿಮ್ಮ ಜೊತೆ ನಾಯಕಿಯಾಗಿ ಅಭಿನಯಿಸಿರುವ ರಾಧಿಕಾ ಪಂಡಿತ್ ಬಗ್ಗೆ...
ರಾಧಿಕಾ ಪಂಡಿತ್ ನಟಿಸಿದ ಮೊದಲ 'ಮೊಗ್ಗಿನ ಮನಸ್ಸು' ಚಿತ್ರ ಸೇರಿ ಈಗಾಗಲೇ ಮೂರು ಹ್ಯಾಟ್ರಿಕ್ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡದ ಪ್ರತಿಭಾವಂತ ನಟಿಯೆಂಬುದು ಎಲ್ಲರಿಗೂ ಗೊತ್ತು. ನಾನು ಮತ್ತು ರಾಧಿಕಾ ಚಿತ್ರಗಳಲ್ಲಿ ನಟಿಸುವ ಮೊದಲು ಕೆಲವು ಧಾರಾವಾಹಿಗಳಲ್ಲಿ ಒಟ್ಟಾಗಿ ನಟಿಸಿದ್ದೇವೆ ಕೂಡ. ಪ್ರತಿಭಾವಂತ ನಟಿ, ರಾಧಿಕಾ ಪಂಡಿತ್ ಒಳ್ಳೆಯ ಮನಸ್ಸಿನ ಹುಡುಗಿ.
ಇನ್ನು 'ಡ್ರಾಮಾ'ದಲ್ಲಿ ನಾಯಕನಾಗಿರುವ ನನಗೆ ರಾಧಿಕಾ ಪಂಡಿತ್ ನಾಯಕಿ. ಅವರ ಪಾತ್ರ, ಅಭಿನಯದ ಬಗ್ಗೆ ಚಿತ್ರ ನೋಡಿ ತಿಳಿದುಕೊಳ್ಳುವ ಅವಕಾಶ ನಿಮಗೆ ಇದ್ದೇ ಇದೆ. ಜೊತೆಯಲ್ಲಿ ಅಭಿನಯಿಬೇಕಾದಾಗ ಇರುವ ಹೊಂದಾಣಿಕೆ ಹಾಗೂ ಚಿತ್ರದಲ್ಲಿ ನಮ್ಮಿಬ್ಬರ ಪಾತ್ರಗಳ ನಡುವಿನ ಕೆಮೆಸ್ಟ್ರಿ ಸಖತ್ತಾಗಿ ಚಿತ್ರದಲ್ಲಿ ಮೂಡಿ ಬಂದಿದೆ. ಅದನ್ನು 'ಡ್ರಾಮಾ' ಚಿತ್ರದಲ್ಲಿ ನೋಡಿ ಆನಂದಿಸಿ...
*ಡ್ರಾಮಾ ಚಿತ್ರದ ಸಹನಟ ಸತೀಶ್ ನೀನಾಸಂ ಹಾಗೂ ಸಿಂಧೂ ಲೋಕನಾಥ್ ಕುರಿತು ಏನು ಹೇಳುತ್ತೀರಿ?
ನೀನಾಸಂ ಸತೀಶ್ ಒಳ್ಳೆಯ ಕಲಾವಿದ. 'ಡ್ರಾಮಾ' ಚಿತ್ರ ಹಾಗೂ ಶೂಟಿಂಗ್ ವೇಳೆಯಲ್ಲಿ ನನಗೆ ಒಳ್ಳೆಯ ಫ್ರೆಂಡ್ ಕೂಡ ಆಗಿದ್ದವರು. ಇಬ್ಬರೂ ಒಟ್ಟಾಗಿ ಮಾಡುವ ಪಾತ್ರಗಳಿಗ್ಕಾಗಿ ನಮ್ಮಿಬ್ಬರಲ್ಲಿ ಇರಬೇಕಾಗಿದ್ದ ಹೊಂದಾಣಿಕೆ ಚೆನ್ನಾಗಿ ಇತ್ತು. ಅದರ ಫಲಿತಾಂಶ ನಿಮಗೆ ತೆರೆಯ ಮೇಲೆ ಕಾಣಿಸಲಿದೆ.
ಇನ್ನು ಬೆಳೆಯುತ್ತಿರುವ ನಟಿ ಸಿಂಧೂ ಲೋಕನಾಥ್ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಅವರು ಈ 'ಡ್ರಾಮಾ' ಚಿತ್ರದಲ್ಲಿ ನಟ ನೀನಾಸಂ ಸತೀಶ್ ಅವರ ಜೋಡಿಯಾಗಿ ಅಭಿನಯಿಸಿದ್ದಾರೆ. ನಾನು, ರಾಧಿಕಾ ಪಂಡಿತ್, ಸತೀಶ್ ಹಾಗೂ ಸಿಂಧು ಲೋಕನಾಥ್ ಒಟ್ಟಾಗಿ ನಟಿಸಿರುವ ಸಾಕಷ್ಟು ದಶ್ಯಗಳನ್ನು ನೀವು 'ಡ್ರಾಮಾ'ದಲ್ಲಿ ನೋಡಲಿದ್ದೀರಿ.
ಅಷ್ಟೇ ಅಲ್ಲ, ಕನ್ನಡದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ಈ ಚಿತ್ರದಲ್ಲಿ ವಿಶೇಷ ಹಾಗೂ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಂದಿಗೆ ತೆರೆ ಹಂಚಿಕೊಂಡ ಖುಷಿ ನನ್ನದು.
*'ಡ್ರಾಮಾ' ಚಿತ್ರದ ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಹಾಗೂ ಒಟ್ಟಾರೆ ಪ್ರೇಕ್ಷಕರಿಗೆ ಏನು ಹೇಳುತ್ತೀರಿ?
ಕನ್ನಡದ ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ನಿರ್ದೇಶನದ 'ಡ್ರಾಮಾ' ಚಿತ್ರ ತುಂಬಾ ವಿಭಿನ್ನವಾಗಿ, ವಿಶಿಷ್ಟವಾಗಿ ಮೂಡಿಬಂದಿದೆ. ನಾನು ಹುಟ್ಟಿ ಬೆಳೆದ ಮೈಸೂರು, ಮಂಡ್ಯದ ಆಡುಭಾಷೆ ಚಿತ್ರದಲ್ಲಿ ಬರಲಿರುವ ಈ ಡ್ರಾಮಾ ಚಿತ್ರದಲ್ಲಿ ಬಳಕೆಯಾಗಿದ್ದು ನನ್ನ ಅದೃಷ್ಟ.
ನನ್ನ ಬೇರೆ ಚಿತ್ರಗಳಿಗಿಂತ ಭಿನ್ನ ನಿರೂಪಣೆ ಹೊಂದಿರುವ 'ಡ್ರಾಮಾ' ಖಂಡಿತವಾಗಿ ನನ್ನ ಅಭಿಮಾನಿಗಳಿಗೆ ಹಾಗೂ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ನನಗಿದೆ. ಈಗಾಗಲೇ 'ಡ್ರಾಮಾ' ಚಿತ್ರದ ಹಾಡುಗಳನ್ನು ಕೇಳಿರುವ ಜನರು ಸಖತ್ ಇಷ್ಟಪಟ್ಟು ಅತ್ಯುತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಬರಲಿರುವ ನನ್ನ 'ಡ್ರಾಮಾ' ನೋಡಿ.., ಮಸ್ತ್ ಮಜಾ ಮಾಡಿ...