Don't Miss!
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Lifestyle ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಸ್ತಿಗುಡಿ' ಚಿತ್ರದ ಅಸಲಿ ಕಥೆ ಮತ್ತು ಚಿತ್ರಕಥೆ ಏನು?
'ಮಾಸ್ತಿಗುಡಿ' ಆರಂಭವಾಗಿದ್ದು ಎಲ್ಲಿ? 'ಮಾಸ್ತಿಗುಡಿ' ಚಿತ್ರದ ಕಥೆ ಏನು? 'ಮಾಸ್ತಿಗುಡಿ' ಚಿತ್ರದ ವಿಶೇಷತೆಗಳೇನು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಚಿತ್ರ ಆರಂಭದಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಮಾಡುತ್ತಲೇ ಇದೆ. ಪ್ರತಿಯೊಂದು ಹಂತದಲ್ಲೂ ಕುತೂಹಲ, ನಿರೀಕ್ಷೆಗಳನ್ನ ಹುಟ್ಟುಹಾಕಿದ್ದ 'ಮಾಸ್ತಿಗುಡಿ', ಸದ್ಯ ಕ್ಲೈಮ್ಯಾಕ್ಸ್ ದುರಂತದಿಂದ ಕುಖ್ಯಾತಿ ಪಡೆದುಕೊಂಡಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ 'ಮಾಸ್ತಿಗುಡಿ' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ತಿಪ್ಪಗೊಂಡನಹಳ್ಳಿಯ ಕ್ಲೈಮ್ಯಾಕ್ಸ್ ಸೀನ್ ಯಶಸ್ವಿಯಾಗಿ ಮುಗಿದಿದ್ದರೆ, ಕುಂಬಳಕಾಯಿ ಹೊಡೆಯಲು ಇನ್ನೊಂದು ಸೀನ್ ಮಾತ್ರ ಪೆಂಡಿಂಗ್ ಇತ್ತು. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ. ಆದ್ರೆ, ಅಂದುಕೊಂಡಷ್ಟು ಸಲೀಸಾಗಿ 'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ನಡೆಯಲಿಲ್ಲ. ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಚಿತ್ರದ ಖಳ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವಿಗೀಡಾದರು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
ಅಷ್ಟಕ್ಕೂ, 'ಮಾಸ್ತಿಗುಡಿ' ಆರಂಭವಾಗಿದ್ದು ಎಲ್ಲಿ? 'ಮಾಸ್ತಿಗುಡಿ' ಚಿತ್ರದ ಕಥೆ ಏನು? 'ಮಾಸ್ತಿಗುಡಿ' ಚಿತ್ರದ ವಿಶೇಷತೆಗಳೇನು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
'ಮಾಸ್ತಿಗುಡಿ' ರಿಯಲ್ ಕಥೆ
'ಮಾಸ್ತಿ ಗುಡಿ' ನೈಜ ಘಟನೆ ಆಧಾರಿತ ಸಿನಿಮಾ. ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಹುಲಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದರ ಹಿಂದಿರಬಹುದಾದ ರಹಸ್ಯಗಳನ್ನೊಳಗೊಂಡಿರುವ ಸಿನಿಮಾ ಈ 'ಮಾಸ್ತಿ ಗುಡಿ'
'ಜಾ ಟ್ರ್ಯಾಪ್ ಹುಲಿಬೇಟೆ' ಪ್ರಕರಣ!
ಕೆಲವು ಮೂಲಗಳ ಪ್ರಕಾರ, 1999ರಲ್ಲಿ ಮಧ್ಯಪ್ರದೇಶದ ಹುಲಿ ಬೇಟೆಗಾರರು ನಾಗರಹೊಳೆಯಲ್ಲಿ ಹಾಕಿದ್ದ 'ಜಾ ಟ್ರ್ಯಾಪ್'ಗೆ ಸಿಕ್ಕಿ ಹಾಕಿಕೊಂಡಿದ್ದ ಹುಲಿಯನ್ನು ಸತತ 7 ದಿನಗಳ ಕಾರ್ಯಾಚರಣೆ ನಂತರ ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದರು. 'ಜಾ ಟ್ರ್ಯಾಪ್' ಗೆ ಸಿಕ್ಕಿಕೊಂಡಿದ್ದ ಹುಲಿಯ ಮುಂಗಾಲನ್ನು, ಮಂಡಿಯವರೆಗೂ ಶಸಚಿಕಿತ್ಸೆ ಮೂಲಕ ಕತ್ತರಿಸಲಾಗಿತ್ತು. ಇದು ದಕ್ಷಿಣ ಭಾರತದಲ್ಲಿಯೇ ಮೊದಲ 'ಜಾ ಟ್ರ್ಯಾಪ್ ಹುಲಿಬೇಟೆ' ಪ್ರಕರಣವಾಗಿತ್ತು. ಈ ಪ್ರಕರಣವನ್ನೇ ಆಧರಿಸಿ 'ಮಾಸ್ತಿಗುಡಿ' ಚಿತ್ರ ಮೂಡಿಬರುತ್ತಿದೆ ಎನ್ನಲಾಗಿದೆ.
ಮೂರು ಶೇಡ್ ಗಳಲ್ಲಿ ವಿಜಯ್
'ಮಾಸ್ತಿ ಗುಡಿ' ಚಿತ್ರದಲ್ಲಿ ದುನಿಯಾ ವಿಜಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಮಿಂಚಲಿದ್ದಾರೆ. 25ರ ಯುವಕ, 35ರ ಮಧ್ಯ ವಯಸ್ಕ ಹಾಗೂ 75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಯ್ ಬಣ್ಣ ಹಚ್ಚಿದ್ದಾರೆ. ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]
ಅದ್ದೂರಿ ಮೇಕಿಂಗ್
ನಾಗರಹೊಳೆ, ದಾಂಡೇಲಿ ಸೇರಿದಂತೆ ಬಹುತೇಕ ಕಾಡಿನಲ್ಲೇ ಚಿತ್ರೀಕರಣ ಮುಗಿಸಿರುವ 'ಮಾಸ್ತಿ ಗುಡಿ' ಮೇಕಿಂಗ್ ಅದ್ದೂರಿಯಾಗಿದೆ.
ಇಬ್ಬರು ನಾಯಕಿಯರು
'ಮಾಸ್ತಿ ಗುಡಿ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ ಮೊದಲ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡನೇ ನಾಯಕಿಯಾಗಿ ಕೃತಿ ಖರಬಂಧ ಅಭಿನಯಿಸಿದ್ದಾರೆ.
ಖಡಕ್ ವಿಲನ್ ಗಳು
'ಮಾಸ್ತಿ ಗುಡಿ' ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್. ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ಉದಯ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿದ್ದರು. ಇನ್ನೂ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಪ್ರಮುಖ ಖಳನಟನಾಗಿ ಕಾಣಿಸಿಕೊಂಡಿದ್ದು ಈ ಚಿತ್ರದಲ್ಲೇ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]
ವಿಜಿ ಜೊತೆ ರಂಗಾಯಣ ರಘು
ದುನಿಯಾ ವಿಜಯ್ ಅವರ ಬಹುತೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಂಗಾಯಣ ರಘು, 'ಮಾಸ್ತಿಗುಡಿ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಿಳಿ ಗಡ್ಡ, ಬಿಳಿ ಕೂದಲನ್ನ ಬಿಟ್ಟು ತಾತನ ಪಾತ್ರದಲ್ಲಿ ರಂಗಾಯಣ ರಘು ಬಣ್ಣ ಹಚ್ಚಿದ್ದಾರೆ.
ಪ್ರಮುಖ ತಾರಬಳಗ
ದುನಿಯಾ ವಿಜಯ್ ಜೊತೆಯಲ್ಲಿ ಹಿರಿಯ ನಟ ದೇವರಾಜ್ ಕಾಣಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸುಹಾಸಿನಿ ಕೂಡ 'ಮಾಸ್ತಿಗುಡಿ'ಗೆ ಸಾಥ್ ಕೊಟ್ಟಿದ್ದು, ರವಿಶಂಕರ್ ಗೌಡ, ಬುಲೆಟ್ ಪ್ರಕಾಶ್ ಕೂಡ ತಾರಬಳಗದಲ್ಲಿದ್ದಾರೆ.
ನಾಗಶೇಖರ್ ಆಕ್ಷನ್ ಕಟ್
'ಸಂಜು ವೆಡ್ಸ್ ಗೀತಾ', 'ಮೈನಾ' ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ನಾಗಶೇಖರ್, 'ಮಾಸ್ತಿಗುಡಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ['ಡೆಡ್ಲಿ' ಡೈರೆಕ್ಟರ್ ನಾಗಶೇಖರ್ ಬಗ್ಗೆ ಹಬ್ಬಿದ ಸುದ್ದಿ ಶುದ್ಧ ಸುಳ್ಳು.!]
ಸಾಧುಕೋಕಿಲಾ ಸಂಗೀತ
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, 'ಮಾಸ್ತಿ ಗುಡಿ' ಚಿತ್ರಕ್ಕೆ ಸಾಧುಕೋಕಿಲ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕವಿರಾಜ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. 'ಮಾಸ್ತಿ ಗುಡಿ' ಚಿತ್ರದ ಆಡಿಯೋ ಹಕ್ಕನ್ನು 'ಝೇಂಕಾರ್ ಮ್ಯೂಸಿಕ್' ಖರೀದಿ ಮಾಡಿದೆ. ಸುಮಾರು 45 ಲಕ್ಷ ರೂಪಾಯಿಗೆ 'ಮಾಸ್ತಿ ಗುಡಿ' ಚಿತ್ರದ ಆಡಿಯೋ ಹಕ್ಕು ಸೇಲ್ ಆಗಿದ್ದು, ಈ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ತಯಾರಿಯಲ್ಲಿದ್ದರು.
ಸಾಹಸ ದೃಶ್ಯಗಳ ಅಬ್ಬರ
ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದು, ಒಟ್ಟು 6 ಫೈಟ್ ಗಳಿವೆ. ಒಂದಕ್ಕಿಂತ ಒಂದು ಫೈಟ್ ಥ್ರಿಲ್ಲಿಂಗ್ ಆಗಿದ್ದು, ಕೇವಲ ಸ್ಟಂಟ್ಸ್ ಗಳಿಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. [ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!]
ಸುಂದರ್ ಪಿ ಗೌಡ್ರು ನಿರ್ಮಾಣ
'ಮಾಸ್ತಿ ಗುಡಿ' ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡಿದ್ದು, ಸುಮಾರು 15 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದೆಯಂತೆ. ಕೆಪಿಎಸ್ ಕಂಬೈನ್ಸ್ ಅಡಿಯಲ್ಲಿ ಸುಂದರ್ ಪಿ ಗೌಡ್ರು ಹಾಗೂ ಖಳ ನಟ ಅನಿಲ್ ಕುಮಾರ್ ನಿರ್ಮಾಣ ಮಾಡಿದ್ದು, ಸತ್ಯ ಹೆಗಡೆ ಅವರ ಛಾಯಗ್ರಹಣ ಚಿತ್ರಕ್ಕಿದೆ.
ಡಿಸೆಂಬರ್ ನಲ್ಲಿ ತೆರೆಕಾಣಬೇಕಿತ್ತು!
ಎಲ್ಲ ಅಂದುಕೊಂಡಂತೆ ಆಗಿದ್ರೆ, ಡಿಸೆಂಬರ್ ನಲ್ಲಿ 'ಮಾಸ್ತಿಗುಡಿ' ಸಿನಿಮಾ ಥಿಯೇಟರ್ ಗೆ ಬರಬೇಕಿತ್ತು. ಆದ್ರೆ, ಕ್ಲೈಮ್ಯಾಕ್ಸ್ ದುರಂತದಲ್ಲಿ ಖಳ ನಟರಿಬ್ಬರು ಸಾವಿಗೀಡಾದ ಹಿನ್ನೆಲ್ಲೆಯಲ್ಲಿ ಈಗ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯಿದೆ.
ಮಾಸ್ತಿಗುಡಿಯ ಮುಂದಿನ ಕಥೆ ಏನು?
ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿಯುವ ಮುಂಚೆ ಖಳ ನಟ ಅನಿಲ್ ಹಾಗೂ ಉದಯ್ ಸಾವಿಗೀಡಾಗಿದ್ದಾರೆ. ನಿರ್ಮಾಪಕ ಸುಂದರ್ ಪಿ ಗೌಡ್ರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ನಾಪತ್ತೆಯಾಗಿದ್ದಾರೆ. ದುನಿಯಾ ವಿಜಯ್ ಅವರಿಗೆ ವಾಣಿಜ್ಯ ಮಂಡಳಿ ತಾತ್ಕಾಲಿಕ ನಿರ್ಬಂಧವೇರಿದೆ. ಹೀಗಾಗಿ, ಸದ್ಯಕ್ಕೆ 'ಮಾಸ್ತಿಗುಡಿ'ಗೆ ಬ್ರೇಕ್ ಬಿದ್ದಿದೆ.