Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆದವಾನಿ ಲಕ್ಷ್ಮಿದೇವಿ, ಕೆ.ವಿ.ರಾಜು ಗೆ ಚಲನಚಿತ್ರ ಜೀವಿತಾವಧಿ ಸಾಧನೆ ಪ್ರಶಸ್ತಿ
ಕರ್ನಾಟಕ ಸರ್ಕಾರ ನೀಡುವ ಚಲನಚಿತ್ರ ಕ್ಷೇತ್ರದ ಜೀವಿತಾವಧಿ ಸಾಧನೆಯ ಪ್ರಶಸ್ತಿ ಪ್ರಕಟವಾಗಿದೆ. ಹಿರಿಯ ನಟಿ ಆದವಾನಿ ಲಕ್ಷ್ಮೀದೇವಿ ರವರು 'ಡಾ. ರಾಜ್ ಕುಮಾರ್ ಪ್ರಶಸ್ತಿ'ಗೆ, ನಿರ್ದೇಶಕ ಕೆ.ವಿ.ರಾಜು ಅವರು 'ಪುಟ್ಟಣ್ಣ ಕಣಗಾಲ್ ಪ್ರಶಸ್ತಿ' ಗೆ ಹಾಗೂ ಕೆ. ಚಿನ್ನಪ್ಪ 'ಡಾ. ವಿಷ್ಣುವರ್ಧನ್ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ರಾಜ್ಯ ಸರ್ಕಾರ ನೀಡುವ ಸಿನಿಮಾ ಕ್ಷೇತ್ರದ ಜೀವಿತಾವಧಿ ಸಾಧನೆಯ ಪ್ರಶಸ್ತಿ ಆಯ್ಕೆಗಾಗಿ ಹಿರಿಯ ನಟಿ ಜಯಂತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ಪ್ರಶಸ್ತಿಗಳು ತಲಾ ಎರಡು ಲಕ್ಷ ರೂ. ನಗದು ಬಹುಮಾನ ಹಾಗೂ ಚಿನ್ನದ ಪದಕವನ್ನು ಒಳಗೊಂಡಿವೆ.
ಜೊತೆಗೆ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ನೆನಪಿನ ಮುತ್ತಿನಹಾರ ಪುಸ್ತಕ (ಪ್ರಕಾಶಕರು: ಅಂಕಿತ ಪುಸ್ತಕ) ಆಯ್ಕೆಯಾಗಿದೆ. ಲೇಖಕ ಹಾಗೂ ಪ್ರಕಾಶಕರಿಗೆ ತಲಾ 20 ಸಾವಿರ ರೂ. ನಗದು ಹಾಗೂ ಬೆಳ್ಳಿ ಪದಕ ನೀಡಲಾಗುವುದು. ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಬೆಂಗಳೂರಿನ ಬಾನ್ ಬಯಲು ಚಿತ್ರ ಸಂಸ್ಥೆಯ ನಿರ್ಮಾಣದ 'ಅನಲ' ಕಿರುಚಿತ್ರವು ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿರ್ಮಾಪಕರಿಗೆ 50 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಶ್ರೀಮತಿ ಆದವಾನಿ ಲಕ್ಷ್ಮೀದೇವಿ: ಚಲನಚಿತ್ರ ಕಲಾವಿದೆ (ಡಾ.ರಾಜ್ ಕುಮಾರ್ ಪ್ರಶಸ್ತಿ)
ಕನ್ನಡ ಚಿತ್ರರಂಗದ ಹಿರಿಯ ಚಲನಚಿತ್ರ ಕಲಾವಿದೆಯಾದ ಅದವಾನಿ ಲಕ್ಷ್ಮಿದೇವಿಯವರು ಬಳ್ಳಾರಿ ಜಿಲ್ಲೆಯ ಅದವಾನಿಯವರು. ಏಳನೆಯ ವಯಸ್ಸಿಗೇ ಬಣ್ಣ ಹಚ್ಚಿಕೊಂಡು ರಂಗಭೂಮಿಗೆ ಕಾಲಿಟ್ಟವರು. 1956 ರಲ್ಲಿ ಡಾ.ರಾಜ್ ಕುಮಾರ್ ರವರ ಜೊತೆ "ಭಕ್ತ ವಿಜಯ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಡಾ.ರಾಜ್ ಅವರ ಜೊತೆಯಲ್ಲೇ ಒಟ್ಟು 31 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಯಿ, ಅತ್ತೆ, ಅತ್ತಿಗೆ ಮುಂತಾದ ವೈವಿದ್ಯಮಯ ಪೋಷಕ ಪಾತ್ರಗಳಲ್ಲಿ 60-70ರ ದಶಕದ ಜನಪ್ರಿಯ ಕಲಾವಿದೆ ಆಗಿ ಮಿಂಚಿದ್ದಾರೆ. 150ಕ್ಕೂ ಹೆಚ್ಚು ಕನ್ನಡ ಹಾಗೂ 15ಕ್ಕೂ ಹೆಚ್ಚು ತೆಲಗು, ಎರಡು ತಮಿಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 30 ಕ್ಕೂ ಹೆಚ್ಚು ವರ್ಷ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಕಲಾವಿದೆಯಾಗಿದ್ದ ಇವರು 80 ರ ಇಳಿ ವಯಸ್ಸಿನಲ್ಲಿದ್ದಾರೆ. ಪ್ರಸ್ತುತ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.
ಶ್ರೀ ಕೆ.ವಿ.ರಾಜು: ಚಲನಚಿತ್ರ ನಿರ್ದೇಶಕರು(ಪುಟ್ಟಣ್ಣ ಕಣಗಾಲ್ ಪ್ರಶಸ್ತಿ)
ಚಿತ್ರಸಾಹಿತಿ ಹಾಗೂ ನಿರ್ದೇಶಕ ಕೆ.ವಿ.ರಾಜು ಮೈಸೂರು ಪ್ರೀಮಿಯರ್ ಸ್ಟುಡಿಯೋದಲ್ಲಿ ಸಂಕಲನ ಕಲಿಯುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಹ ನಿರ್ದೇಶನ ಹಾಗೂ ಚಿತ್ರ ಸಾಹಿತ್ಯ ರಚನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದವರು. 1979 ರಲ್ಲಿ ತಮ್ಮ ಅಣ್ಣ ಕೆ.ವಿ.ಜಯರಾಂ ರವರ ನಿರ್ದೇಶನದ ಮೊದಲ ಚಿತ್ರ "ಮರಳು ಸರಪಳಿ" ಚಿತ್ರದಲ್ಲಿ ಸಹಾಯಕ ನಿರ್ದೇಶಕರಾದರು. ಈವರೆಗೆ 38 ಚಲನಚಿತ್ರಗಳನ್ನು ನಿರ್ದೇಶನ ಮಾಡಿರುವ ಇವರು ಚಲನಚಿತ್ರದಲ್ಲಿ ತಾಂತ್ರಿಕತೆ ಮತ್ತು ಪದವೈಭವಕ್ಕೆ ಒತ್ತು ನೀಡಿ ಗಮನ ಸೆಳೆದಿದ್ದಾರೆ. 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ರಚಿಸಿದ್ದಾರೆ. ಕೆ.ವಿ.ಜಯರಾಂ ನಿರ್ದೇಶನದ 'ಮರಳುಸರಪಳಿ', 'ಬಾಡದ ಹೂವು', 'ಇಬ್ಬನಿ ಕರಗಿತು','ಒಲವೇಬದುಕು', 'ಶ್ವೇತ ಗುಲಾಬಿ', 'ಹೊಸನೀರು' ಈ ಎಲ್ಲ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣ ಕಾರರಾಗಿ ಕೆಲಸ ನಿರ್ವಹಿಸಿದ್ದಾರೆ.
ಶ್ರೀ ಕೆ.ಚಿನ್ನಪ್ಪ: ಬ್ಯಾನರ್ ಕಲಾವಿದರು(ಡಾ.ವಿಷ್ಟುವರ್ಧನ್ ಪ್ರಶಸ್ತಿ)
ಕನ್ನಡ ಚಿತ್ರರಂಗದ ಕೇಂದ್ರ ಸ್ಥಳವಾದ ಗಾಂಧೀ ನಗರದಲ್ಲಿ ಕೆ. ಚಿನ್ನಪ್ಪನವರ ಹೆಸರು ಚಿರಪರಿಚಿತ. ಯಾವುದೇ ಸಿನಿಮಾಕ್ಕೆ ಕಟೌಟ್ ಬೇಕೆಂದರೆ ಎಲ್ಲರೂ ನೋಡುವುದು ಚಿನ್ನಪ್ಪನವರ ರಾಜ್ ಕಮಲ್ ಆರ್ಟ್ಸ್ ಕಡೆಗೆ. ಇದರ ಮಾಲೀಕರಾದ ಕೆ.ಚಿನ್ನಪ್ಪನವರಿಗೆ ಈಗ 81 ರ ಇಳಿ ವಯಸ್ಸು. ಈಗಲೂ ಸಹ ಸಿನಿಮಾಗಳ ಕಟೌಟ್ ನಿರ್ಮಾಣದಲ್ಲಿ ಇವರು ಕಾರ್ಯ ನಿರತರಾಗಿದ್ದಾರೆ. ಸ್ವಂತ ಉದ್ಯಮಿಯಾಗಬೇಕು ಎನ್ನುವ ಹಂಬಲದಿಂದ 1972 ರಲ್ಲಿ ಸ್ವತಂತ್ರವಾಗಿ "ರಾಜ್ ಕಮಲ್ ಆರ್ಟ್ಸ್" ಹೆಸರಿನ ಸಂಸ್ಥೆ ಆರಂಭಿಸಿದರು. ಈವರೆಗೆ ಕನ್ನಡ , ತೆಲಗು, ತಮಿಳು, ಮಲಯಾಳಿ, ಹಿಂದಿ, ಇಂಗ್ಲಿಷ್ ಹೀಗೆ ಬಹುಭಾಷೆಯ ಸುಮಾರು 4500 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಇವರು ಬ್ಯಾನರ್, ಕಟೌಟ್ ನಿರ್ಮಿಸಿ ಕೊಟ್ಟಿದ್ದಾರೆ. ಇವರ ವೃತ್ತಿ ಜೀವನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿನಿಮಾ ಪ್ರಚಾರ ಸಂಬಂಧಿ ಚಿತ್ರಕೃತಿಗಳನ್ನು ರಚಿಸಿದ್ದಾರೆ.