Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣ, ಓಂ ಸಂಗಮದ 'ಶಿವ' ಮೇನಿಯಾ ಪ್ರಾರಂಭ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರವು ಬಿಡಗಡೆಗೆ ಸಜ್ಜಾಗಿ ನಿಂತಿದೆ. ಇದೇ ಬರುವ ಶುಕ್ರವಾರ, ಅಂದರೆ 24 ಆಗಸ್ಟ್ 2012 ರಂದು ಈ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬರೋಬ್ಬರಿ ವರ್ಷಗಳ ನಂತರ ಶಿವಣ್ಣರ ಚಿತ್ರವೊಂದು ತೆರೆಗೆ ಬರಲಿದೆ. ಅಷ್ಟೇ ಅಲ್ಲ, 'ಭೀಮಾ ತೀರದಲ್ಲಿ' (ಚಂದಪ್ಪ) ನಂತರ ಓಂ ಪ್ರಕಾಶ್ ರಾವ್ ಚಿತ್ರ ಕೂಡ ತೆರೆಗೆ ಬಂದಿರಲಿಲ್ಲ.
ನಿರ್ದೇಶಕ ಓಂ ಪ್ರಕಾಶ್ ರಾವ್ ಚಿತ್ರಗಳಿಗೆ ಸೆನ್ಸಾರ್ ಕತ್ತರಿ ಬೀಳದಿರುವುದು ತೀರಾ ಅಪರೂಪ. ಈ 'ಶಿವ' ಚಿತ್ರದಲ್ಲೂ ಎರಡು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಕೆಲವು ಆಕ್ಷೇಪಾರ್ಹ ಸನ್ನಿವೇಶಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿ, 'ಯು/ಎ' ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಹೀಗಾಗಿ ಶಿವ ಚಿತ್ರದ ಬಿಡಗಡೆಗೆ ಇರುವ ಎಲ್ಲಾ ತಡೆಗಳೂ ನಿವಾರಣೆ ಆದಂತಾಗಿದೆ.
ಕಳೆದ ಜುಲೈ 27ರಂದೇ ತೆರೆಗೆ ಬರಬೇಕಾಗಿದ್ದ ಚಿತ್ರ, ಗ್ರಾಫಿಕ್ಸ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನಂತರ ಆಗಸ್ಟ್ 10 ರಂದು ಬಿಡುಗಡೆ ಘೋಷಿಸಿ ಚಿತ್ರತಂಡಕ್ಕೆ ಆಗಲೂ ಚಿತ್ರವನ್ನು ತೆರೆಗೆ ತರಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿಕೊಂಡಿರುವ ಚಿತ್ರತಂಡ, ಇದೇ 24ಕ್ಕೆ ತೆರೆಮೇಲೆ ವಿಜೃಂಭಿಸಲಿದೆ. ಆದರೆ ಲೇಟಾದರೂ ಲೇಟೆಸ್ಟ್ ಆಗಿದೆ ಎಂಬುದು ಚಿತ್ರತಂಡದ ಹೇಳಿಕೆ.
'ಶಿವ' ಚಿತ್ರದ ಸ್ವಾಗತಕ್ಕೆ ಎಲ್ಲಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 24ರಂದು ರಾಜ್ಯದಾದ್ಯಂತ ಶಿವಣ್ಣ ಅಭಿಮಾನಿ ಸಂಘಗಳು 'ಶಿವ' ಚಿತ್ರಕ್ಕೆ ವಿಶೇಷ ಸ್ವಾಗತ ಕೋರಲು ಸಜ್ಜಾಗುತ್ತಿವೆ. ಪ್ರತಿ ಜಿಲ್ಲೆಯ ಪ್ರಮುಖ ಚಿತ್ರಮಂದಿರಗಳ ಎದುರು ಶಿವಣ್ಣನ ದೊಡ್ಡ ಕಟೌಟುಗಳಿಗೆ ಹಾಲಿನ ಅಭಿಷೇಕ ನಡೆಯಲಿದೆ ಎಂದು 'ಶಿವ' ಚಿತ್ರದ ನಿರ್ಮಾಪಕ ಹಾಗೂ ಶಿವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಕೆಪಿ ಶ್ರೀಕಾಂತ್ ತಿಳಿಸಿದ್ದಾರೆ.
'ಜೋಗಯ್ಯ' ನಂತರ ಶಿವಣ್ಣ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಂದಿದ್ದ 'ಜೋಗಯ್ಯ' ಕೂಡ 'ಫ್ಲಾಪ್'. ಹೀಗಾಗಿ' ಶಿವ' ಚಿತ್ರದ ಬಗ್ಗೆ ಶಿವಣ್ಣರ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಭಾರಿ ಭರವಸೆ ಮೂಡಿದೆ. ಸಿಕ್ಕ ಮಾಹಿತಿ ಪ್ರಕಾರ, ಬೆಂಗಳೂರಿನ ಕೆಜಿ ರಸ್ತೆಯ 'ಸಂತೋಷ್' ಚಿತ್ರಮಂದಿರ ಸೇರಿ ರಾಜ್ಯದಾದ್ಯಂತ ಒಟ್ಟೂ 140 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಶಿವ' ಬಿಡುಗಡೆಯಾಗಲಿದೆ.
ಕೆಪಿ ಶ್ರೀಕಾಂತ್ ಬಹುನಿರೀಕ್ಷೆ ನಿರ್ಮಾಣದ ಈ ಚಿತ್ರಕ್ಕೆ ನಾಯಕ ಶಿವರಾಜ್ ಕುಮಾರ್ ಎದುರು ಮೊದಲ ಬಾರಿಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಿದ್ದಾರೆ. ಶಿವಣ್ಣರ 'ಮೈಲಾರಿ' ನಂತರ ಮತ್ತೆ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಉಳಿದಂತೆ ಚಿತ್ರವು ತಾಂತ್ರಿಕವಾಗಿ ತುಂಬಾ ಅದ್ದೂರಿಯಾಗಿ ಮೂಡಿಬಂದಿದೆ ಎನ್ನಲಾಗಿದೆ. ಅದರಲ್ಲೂ 'ವಿಶೇಷ ಗ್ರಾಫಿಕ್ಸ್' ಬಳಕೆ ಈ ಚಿತ್ರದ 'ಹೈಲೈಟ್' ಎಂದಿದೆ ಚಿತ್ರತಂಡ. ಒಟ್ಟಿನಲ್ಲಿ, ಶಿವಣ್ಣರ ಶಿವ ಮೇನಿಯಾ ಶುರು...(ಒನ್ ಇಂಡಿಯಾ ಕನ್ನಡ)