Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊರ್ವಶಿಯಲ್ಲಿ ಚಿತ್ರ ಬಿಡುಗಡೆ ಮಾಡಿ ತೋರಿಸ್ರೀ.
ಅಲ್ಲಾ.. ನಮ್ಮ ಕನ್ನಡ ಚಿತ್ರೋದ್ಯಮದವರಿಗೆ ಏನಾಗಿದೆ? ತಮ್ಮ ತಮ್ಮಲ್ಲೇ ಕಿತ್ತಾಡುವುದನ್ನು ನಿಲ್ಲಿಸುವುದು ಯಾವಾಗ? ಮಾತೆತ್ತಿದ್ದರೆ ಪರಭಾಷಾ ಚಿತ್ರಗಳ ಹಾವಳಿ ಅದರಿಂದಾಗಿ ಥಿಯೇಟರ್ ಸಮಸ್ಯೆ ಅನ್ನುತ್ತಾರಲ್ಲಾ, ಇವರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಪರಭಾಷೆಯ ಚಿತ್ರಗಳು ಹಾವಳಿ ನಡೆಸದೇ ಇರುತ್ತಾ?
ನಮ್ಮ ಚಿತ್ರೋದ್ಯಮದವರಿಗೆ ತಮ್ಮ ಚಿತ್ರಗಳು ಮಾತ್ರ ಸೇಫ್ ಆದರೆ ಸಾಕು ಅನ್ನುವ ಮನೋಭಾವ ಇರೋದ್ರಿಂದನೇ ಕನ್ನಡ ಚಿತ್ರರಂಗ ಮೂರಕ್ಕೆ ಇಳಿಯುತ್ತಿಲ್ಲ ಆರಕ್ಕೆ ಏರುತ್ತಿಲ್ಲ. ಇರೋ ಸಣ್ಣ ಸ್ಯಾಂಡಲ್ ವುಡ್ ಮಾರುಕಟ್ಟೆಯಲ್ಲಿ ಅದೆಷ್ಟು ಗುಂಪುಗಾರಿಕೆ ಇದೆಯೋ ತಾಯಿ ಭುವನೇಶ್ವರಿಯೇ ಬಲ್ಲಳು.
ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುವ ಬದಲು ಇವರೊಳಗಿನ ಒಣ ಪ್ರತಿಷ್ಠೆ, ಗೊಂದಲ, ಜಗಳದಿಂದ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳು ಕಮ್ಮಿಯಾಗುತ್ತಿರುವುದು, ರಾಜ್ಯೋತ್ಸವದ ದಿನದಂದೂ ಕನ್ನಡ ಚಿತ್ರ ಪ್ರದರ್ಶಿಸದೇ ಉದ್ದಟತನದ ಸಡ್ಡು ಹೊಡೆಯುತ್ತಿರುವುದು.
ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರಗಳ ಗುಣಮಟ್ಟತೆಯಲ್ಲಿ ಸುಧಾರಣೆ ಕಂಡಿದೆ. ಆದರೆ, ದೊಡ್ಡ ಬಜೆಟಿನ/ನಟರ ಚಿತ್ರ ಬಿಡುಗಡೆಯಾದರೆ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಗಳಿಗೆ ಎತ್ತಂಗಡಿ. ಇದ್ಯಾವ ನ್ಯಾಯ? ಒಬ್ಬ ನಿರ್ಮಾಪಕ ಸುರಿಸಿದ್ದು ದುಡ್ಡು, ಮತ್ತೊಬ್ಬ ನಿರ್ಮಾಪಕ ಹಾಕಿದ್ದು ಪೇಪರಾ?
ಇನ್ನು ನಮ್ಮ ಚಿತ್ರೋದ್ಯಮದ ಮೈನ್ ಥಿಯೇಟರ್ ಕಾನ್ಸೆಪ್ಟ್ ಅರ್ಥಾನೇ ಆಗೋಲ್ಲ. ದಶಕಗಳ ಕೆಳಗಾದರೆ ಒಂದು ಲೆಕ್ಕ ಅದಕ್ಕೊಂದು ವಿಚಾರ ಇರೋದು. ಕೆ ಜಿ ರಸ್ತೆಯಲ್ಲಿ ಹೆಜ್ಜೆಗೊಂದು ಚಿತ್ರಮಂದಿರಗಳಿದ್ದವು, ಹಾಗಾಗಿ ಕನ್ನಡ ಚಿತ್ರಗಳ ಉಚ್ಚ್ರಾಯ ಸ್ಥಿತಿಯಲ್ಲಿದ್ದಾಗ ಕೆ ಜಿ ರಸ್ತೆಯ ಚಿತ್ರಮಂದಿರವೊಂದರಲ್ಲಿ ಚಿತ್ರ ಬಿಡುಗಡೆ ಮಾಡುವುದನ್ನು ಕಡ್ಡಾಯ ಮಾಡಿರಬಹುದು.
ಆದರೆ, ಈಗ ಹಾಗಾ? ಉಳಿದಿರುವ ಕೆ ಜಿ ರಸ್ತೆಯ ಹನ್ನೆರಡು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳೆಷ್ಟು? ಒಂದು, ಎರಡು..ಬಾಳೆಲೆ ಹರಡು... ಏಳು ಎಂಟು ಪಲ್ಯಕ್ಕೆ ದಂಟು ಅಷ್ಟೇ..
ಲೇಖನದ ಮುಂದಿನ ಭಾಗವನ್ನು ಸ್ಲೈಡಿನಲ್ಲಿ ಓದಿ.. ನಿಮ್ಮ ಅಭಿಪ್ರಾಯ ತಿಳಿಸಿ..
ಗಾಂಧಿನಗರದಲ್ಲೇ ಹೀಗೆ? ಇನ್ನು ಬೇರೆ ಕಡೆ?
ಇದು ನಮ್ಮ ಸ್ಯಾಂಡಲ್ ವುಡ್ದಿನ ಪ್ರಮುಖ ಕಾರ್ಯಾಲಯ ಗಾಂಧಿನಗರದ ಕಥೆ. ಹೋಗಲಿ atleast ಗಾಂಧಿನಗರದ ಪ್ರದೇಶದಲ್ಲಾದ್ರೂ ಹನ್ನೆರಡಕ್ಕೆ ಹನ್ನೆರಡು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನವಾಗುತ್ತಾ? ಅಭಿನಯ್, ಕೈಲಾಶ್ ಹಿಂದಿಗೆ, ಭೂಮಿಕಾ, ಮೂವಿಲ್ಯಾಂಡ್ ತೆಲುಗಿಗೆ ಹೆಚ್ಚುಕಮ್ಮಿ ಖಾಯಂ. ಯಾಮಾರಿದ್ರೆ ತ್ರಿಭುವನ್ ಕೂಡಾ ಪರಭಾಷೆಗೆ.
ರಾಜ್ಯದಲ್ಲಿರುವ ಅಂದಾಜು ಚಿತ್ರಮಂದಿರಗಳು
ರಾಜ್ಯದಲ್ಲಿರುವ ಸುಮಾರು 450 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಯೆ 250 ರಿಂದ 275. ಇನ್ನುಳಿದ ಥಿಯೇಟರ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಗುದ್ದಾಡುವ ದುರ್ವಿಧಿ. ಉಳಿದಿರುವ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಾಣುವುದು ಯಾವಾಗ? ಅದಾದ ನಂತರ ನಮ್ಮ ಚಿತ್ರಗಳನ್ನು ಸೀಮೆ ದಾಟಿ ಪ್ರದರ್ಶನ ಕಾಣಿಸುವ ಪ್ರಯತ್ನಕ್ಕೆ ಕೈಹಾಕುವುದು ಬುದ್ದಿವಂತರ ನಡೆಯಲ್ಲವೇ?
ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಗಳಿಗೆ ಎತ್ತಂಗಡಿ
ಉತ್ತಮ ಪ್ರದರ್ಶನ ಕಾಣುತ್ತಿದ್ದ, ಜನಮನ್ನಣೆ ಪಡೆದ ಎಷ್ಟೋ ಕನ್ನಡ ಚಿತ್ರಗಳು ನಮ್ಮದೇ ಚಿತ್ರಗಳಿಂದ ಮುಖಭಂಗ, ನಷ್ಟ ಅನುಭವಿಸಲಿಲ್ಲವೇ? ಅವರು ಚಿತ್ರಕ್ಕೆ ಬಂಡವಾಳ ಸುರಿದಿಲ್ಲವೇ? ಚಿತ್ರ ಎತ್ತಂಗಡಿಯಾದಾಗ ಅವರ ಕಣ್ಣೀರು, ನೋವಿಗೆ ಬೆಲೆಯಿಲ್ಲವೇ?
ಊರ್ವಶಿಯಲ್ಲಿ ಚಿತ್ರ ಬಿಡುಗಡೆ ಮಾಡಿ ತೋರಿಸ್ರೀ
ಎಷ್ಟೇ ಕ್ರೇಜ್ ಹುಟ್ಟಿಸುವ ಕನ್ನಡ ಚಿತ್ರಗಳಿರಲಿ ಬೇರೆ ಭಾಷೆಯ ಚಿತ್ರಗಳಿಗೇ ಮನ್ನಣೆ ಹಾಕುವ ನಗರದ ಊರ್ವಶಿ, ಮೂವಿಲ್ಯಾಂಡ್, ಚಂದ್ರೋದಯ, ಶ್ರೀನಿವಾಸ, ವೆಂಕಟೇಶ, ಸಂಪಿಗೆ, ಅರುಣ, ನಟರಾಜ್, etc..etc..ಮುಂತಾದ ಚಿತ್ರಮಂದಿರಗಳ ಜೊತೆ ಕೂತು ಮಾತುಕತೆ ನಡೆಸಿ ಕನ್ನಡ ಚಿತ್ರ ಪ್ರದರ್ಶನ ಮಾಡುವಂತೆ ಮನವೊಲಿಸುವ ತಾಕತ್ ಯಾರಲ್ಲೂ ಇಲ್ಲವೇ? ಅಥವಾ ಮಾಡಿದ ಪ್ರಯತ್ನ ವಿಫಲವಾಗಿದೆಯೇ?
ನಾಲ್ಕು ವಾರದ ಗಡುವು ಏನಾಯಿತೋ?
ನಾಲ್ಕು ವಾರದ ನಂತರ ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಬಿಡುಗಡೆ ಮಾಡಬೇಕೆನ್ನುವ ನಿಯಮಗಳಿಗೆ ಚಿತ್ರಮಂಡಳಿಯಲ್ಲೇ ಸಹಮತವಿಲ್ಲ, ಉದ್ಯಮಕ್ಕೆ ಸಂಬಂಧಪಟ್ಟ ಕೆಲ ಸಂಘಗಳಲ್ಲೇ ಭಿನ್ನಮತ. ಅಲ್ಲಿರುವ ಕೆಲವರಲ್ಲಿ ಪರಭಾಷಾ ಚಿತ್ರಗಳ ವಿತರಕರು ಬೇರೆ. ಒಟ್ಟಿನಲ್ಲಿ..ಬೇಲಿಯೇ ಎದ್ದು ಮೇಯ್ದಂಗೆ.. ಇನ್ನೆಲ್ಲಿ ಉದ್ದಾರ ಆಗೋಕೆ ಸಾಧ್ಯ.
ಕೊನೆಗೆ ನೀವೇನು ಹೇಳ್ತೀರಾ ಓದುಗರೇ?
ಪ್ರತೀ ಬಾರಿ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಚಿತ್ರಮಂದಿರದ ಸಮಸ್ಯೆ ಬಂದಾಗ ಲೇಖನ ಬರೆದು ಎಚ್ಚರಿಸುವುದೇ ಆಗೋಯ್ತು ನಮ್ಮ ಕೆಲಸ. ನಮ್ಮ ನಮ್ಮಲ್ಲೇ ಸಮಸ್ಯೆಗಳಿದ್ದಾಗ ನಮ್ಮ ಯಾವುದೇ ಹೋರಾಟಕ್ಕೆ ಮೂರು ಕಾಸಿನ ಬೆಲೆ ಇರುತ್ತಾ? ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಿಗೆ ಪರದಾಡುವ ಸ್ಥಿತಿಗೆ ಒಂದು ರೀತಿಯಲ್ಲಿ ನಮ್ಮ ಚಿತ್ರೋದ್ಯಮವೂ ಕಾರಣ ಎನ್ನುವುದು ನನ್ನ ವಾದ. ಓದುಗರೇ ನಿವೇನಂತೀರಿ?