Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣಿಗೆ ಹಬ್ಬ : ಕಠಾರಿವೀರ...ತ್ರಿಡಿ ಚಿತ್ರ ವಿಮರ್ಶೆ
ಸಾಕಷ್ಟು ವಾದ ವಿವಾದ, ಗಲಾಟೆ ಗದ್ದಲದ ನಡುವೆ ತೆರೆಕಂಡಿರುವ ಉಪೇಂದ್ರ, ರಮ್ಯಾ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಕನ್ನಡದ ಮಟ್ಟಿಗೆ ಹೊಸ ಪ್ರಯೋಗ ಎನ್ನಬಹುದು. ಪ್ರೇಕ್ಷಕರಿಗಂತೂ 'ತ್ರಿಡಿ' ಚಿತ್ರ ಹೊಸ ಅನುಭವ ನೀಡುತ್ತದೆ. ಕಣ್ಮುಂದೆ ನರಕ-ಸ್ವರ್ಗಗಳೆರಡರ ದರ್ಶನ ಮಾಡಿಸಿದ್ದಾರೆ ನಿರ್ದೇಶಕ ಸುರೇಶ್ ಕೃಷ್ಣ.
ಕತೆ, ಚಿತ್ರಕತೆ ವಿಚಾರಕ್ಕೆ ಬರುವುದಾದರೆ ಚಿತ್ರವನ್ನು ಎಲ್ಲೋ ನೋಡಿದ ಅನುಭವ ಆಗುತ್ತದೆ. ತೆಲುಗಿನಲ್ಲಿ ಸೂಪರ್ ಹಿಟ್ ದಾಖಲಿಸಿದ ರಾಜಮೌಳಿ ನಿರ್ದೇಶನ, ಜೂ.ಎನ್ಟಿಆರ್ ಅಭಿನಯದ 'ಯಮದೊಂಗ' ಚಿತ್ರ ನೆನಪಾಗಲೂಬಹುದು. ಆದರೆ ತ್ರಿಡಿಯಲ್ಲಿ, ತಮ್ಮದೇ ಆದಂತಹ ವಿಶಿಷ್ಟ ಮ್ಯಾನರಿಸಂ, ಸಂಭಾಷಣೆಯ ಮೂಲಕ ಉಪೇಂದ್ರರ 'ಕಠಾರಿವೀರ' ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ.
ಅಮರಾವತಿಯ ದೇವೇಂದ್ರನ (ಶ್ರೀಧರ್) ಮಗಳು ಇಂದ್ರಜಳನ್ನೇ (ರಮ್ಯಾ) ಮೋಹಿಸಿ, ಯಮಧರ್ಮನನ್ನೇ (ಅಂಬರೀಷ್) ಎದುರು ಹಾಕಿಕೊಂಡು, ಚಿತ್ರಗುಪ್ತರಿಗೆ (ದೊಡ್ಡಣ್ಣ) ಚಳ್ಳೆಹಣ್ಣು ತಿನ್ನಿಸಿ, ದೇವಾನುದೇವತೆಗಳ ಮನಗೆದ್ದ ನರೇಂದ್ರನಾಗಿ ಉಪೇಂದ್ರರ ನಿರರ್ಗಳ ಅಭಿನಯ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ದೇವಕನ್ಯೆಯ ಪಾತ್ರದಲ್ಲಿ ರಮ್ಯಾರ ಅಭಿನಯ ರಸಾನುಭೂತಿ ನೀಡುತ್ತದೆ.
ಚಿತ್ರಕತೆಯಲ್ಲಿ ಹೊಸತನವಿಲ್ಲದಿದ್ದರೂ ಉಪೇಂದ್ರ ಅವರ ಎಂದಿನ ಶೈಲಿಯ ಡೈಲಾಗ್ಸ್ ಸಾಕಷ್ಟಿವೆ. ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಇದೂ ಒಂದು. ಸ್ವರ್ಗ ಮತ್ತು ನರಕಗಳ ದರ್ಶನ ತ್ರಿಡಿಯಲ್ಲಿ ಕಣ್ಣಿಗೆ ರಸದೌತಣ ನೀಡುತ್ತದೆ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ವಸ್ತ್ರವೈವಿಧ್ಯ, ಸ್ವರ್ಗ ನರಕದ ಸೆಟ್ಟಿಂಗ್. ಚಿತ್ರದ ನಿರ್ಮಾಪಕ ಮುನಿರತ್ನ ಮಾಡಿರುವ ರು.15 ಕೋಟಿಯಷ್ಟು ಖರ್ಚು ಕಣ್ಣಿಗೆ ರಾಚುತ್ತದೆ.
'ರಕ್ತಕಣ್ಣೀರು' (2003) ಚಿತ್ರದ ಮುಂದುವರಿದ ಭಾಗವಾಗಿ 'ಕಠಾರಿವೀರ'ನನ್ನು ತೋರಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಇಲ್ಲೂ 'ರಕ್ತಕಣ್ಣೀರು' ಚಿತ್ರದ ಮೋಹನನ ಸಾಕಷ್ಟು ಡೈಲಾಗ್ಸ್ ಪ್ರೇಕ್ಷಕರಿಂದ ಮತ್ತೊಮ್ಮೆ ಶಿಳ್ಳೆಗಿಟ್ಟಿಸುವಲ್ಲಿ ಯಶಸ್ವಿಯಾಗಿವೆ. ಹೆಚ್.ಸಿ.ವೇಣು ಅವರ ತ್ರಿಡಿ ಛಾಯಾಗ್ರಹಣಕ್ಕೆ ಫುಲ್ಮಾರ್ಕ್ಸ್ ನೀಡಬಹುದು.
ಯಮಧರ್ಮನಾಗಿ ಅಂಬರೀಷ್ ಅವರ ಅಭಿನಯ ನೈಜವಾಗಿ ಮೂಡಿಬಂದಿದೆ. ಚಿತ್ರಗುಪ್ತರ ಪಾತ್ರದಲ್ಲಿ ದೊಡ್ಡಣ್ಣ ಮಿಂಚಿದ್ದಾರೆ. ಉಳಿದಂತೆ ಶ್ರೀಧರ್, ಟೆನ್ನಿಸ್ ಕೃಷ್ಣ ಪಾತ್ರಗಳು ಸಂದರ್ಭೋಚಿತವಾಗಿ ಮೂಡಿಬಂದಿವೆ. ಚಿತ್ರದಲ್ಲಿನ ಎರಡು ಹಾಡುಗಳು 'ಅಂಬಿಕಾ' ಹಾಗೂ 'ಪಾರಿಜಾತ' (ಮುತ್ತಿನಂಥ ಮುತ್ತೊಂದು ಕೊಡಲೇನಮ್ಮಾ) ಹಾಡುಗಳು ಕಣ್ಣಿಗೆ ರಸದೌತಣ ನೀಡಿವೆ. ಮಾಜಿ ಡಾನ್ ಮುತ್ತಪ್ಪ ರೈ ಅವರ ಅತಿಥಿ ಪಾತ್ರ ಗಮನಾರ್ಹ.
ಹೆಸರಿಗೆ ಸುರೇಶ್ ಕೃಷ್ಣ ನಿರ್ದೇಶನವಿದ್ದರೂ ಉಪೇಂದ್ರ ಅವರ ಕೈವಾಡ ಎದ್ದುಕಾಣುತ್ತದೆ. ಕತೆ, ಚಿತ್ರಕತೆ ಸಂಭಾಷಣೆ ಹೀಗೆ ಎಲ್ಲ ವಿಭಾಗಗಳಲ್ಲೂ ಉಪ್ಪಿ 'ಹಸ್ತಕ್ಷೇಪ' ಮಾಡಿರುವ ಅಂಶ ಗಮನಕ್ಕೆ ಬಂದೇ ಬರುತ್ತದೆ. ಚಿತ್ರದ ಡೈಲಾಗ್ಸ್, ತ್ರಿಡಿ ಛಾಯಾಗ್ರಹಣ, ಹಾಡುಗಳೇ ಚಿತ್ರದ ಜೀವಾಳ. ಔಟ್ ಅಂಡ್ ಔಟ್ ಮನರಂಜನೆಯ ಚಿತ್ರ.