Don't Miss!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Technology ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನಸುಗಾರ'ನ 'ಅಪೂರ್ವ'ಳ ಬಗ್ಗೆ ವಿಮರ್ಶಕರು ಹೇಳಿದ್ದೇನು?
'ಕಲಾವಿದ' ರವಿಚಂದ್ರನ್ ಅವರ ಹೊಸ ಕನಸು 'ಅಪೂರ್ವ' ಚಿತ್ರ ಲಿಫ್ಟ್ ನಲ್ಲಿ ನಡೆಯುವ ಕಥೆ ಎನ್ನುವ ಕಾರಣಕ್ಕೆ ಬಹಳಷ್ಟು ನಿರೀಕ್ಷೆ ಮೂಡಿಸಿತ್ತು. ಜೊತೆಗೆ ಪರದೆಯ ಮೇಲೆ ಬಣ್ಣಗಳ ಜಗತ್ತನ್ನೆ ತೆರೆದಿಡುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ಎಂದಾಗ ಅಭಿಮಾನಿಗಳು ಕೊಂಚ ಹೆಚ್ಚಾಗೇ ಭರವಸೆ ಇಟ್ಟುಕೊಂಡಿದ್ದರು.
ಸುಮಾರು 61 ವರ್ಷದ ಮುದುಕ ಮತ್ತು 19ರ ಹರೆಯದ ಹುಡುಗಿಯ ನಡುವೆ ಪ್ರೇಮಾಂಕುರ ಆಗುವ ಕಥೆಯನ್ನು ಹೊಂದಿರುವ 'ಅಪೂರ್ವ' ಸಿನಿಮಾ ನಿನ್ನೆ (ಮೇ 27) ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಂಡಿತ್ತು.[ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]
ಇನ್ನು ರವಿಚಂದ್ರನ್ ಅವರೇ ಬಂಡವಾಳ ಹೂಡಿ, ಸಂಗೀತ ನಿರ್ದೇಶನ ಮಾಡಿದ್ದ ಈ ಚಿತ್ರದ ಬಗ್ಗೆ ಖ್ಯಾತ ವಿಮರ್ಶಕರು ವಿಭಿನ್ನ ವಿಮರ್ಶೆಗಳನ್ನು ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಗಳನ್ನು ಎತ್ತಿ ಹಿಡಿದಿರುವ ವಿಮರ್ಶಕರು ಚಿತ್ರದ ಬಗ್ಗೆ ಯಾವ ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.....['ಪ್ರೀತಿಗೆ ಬಿದ್ದರೆ ಪ್ರಪಂಚ ಏನಾಗುತ್ತೇ'? ರವಿಮಾಮ ಕೊಟ್ಟ ಉತ್ತರ]
'ಅತಿ ಆಸೆ ದುಃಖಕ್ಕೆ ಮೂಲ'-ಪ್ರಜಾವಾಣಿ
ರವಿಚಂದ್ರನ್ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ಎಂದು ಹೇಳಿಕೊಂಡಿರುವ ‘ಅಪೂರ್ವ' ಚಿತ್ರದಲ್ಲಿ ಒಂದಷ್ಟು ವಿಶೇಷಗಳಿವೆ. ರವಿಚಂದ್ರನ್ ಚಿತ್ರಗಳಲ್ಲೇ ‘ಅಪೂರ್ವ' ಒಂದು ಬಗೆಯಲ್ಲಿ ಡೀಗ್ಲಾಮರೈಸ್ ಸಿನಿಮಾ. ಹೊಕ್ಕಳ ಮೇಲೆ ಉರುಳಾಡಬೇಕಾದ ಸೇಬನ್ನು ನಾಯಕ ತನ್ನ ಹುಡುಗಿಗೆ ತಿನ್ನಲು ಕೊಡುವ ದೃಶ್ಯವೊಂದೇ ಸಾಕು, ಈ ಸಿನಿಮಾದಲ್ಲಿ ರವಿಚಂದ್ರನ್ರ ‘ರಸಸಿದ್ಧಾಂತ' ಬದಲಾಗಿದೆ ಎನ್ನುವುದಕ್ಕೆ. ಸಾಮಾನ್ಯವಾಗಿ ಕನ್ನಡ ಚಿತ್ರಗಳು ವಿರಾಮಕ್ಕೆ ಮುನ್ನ ಚೆನ್ನಾಗಿದೆ ಅನ್ನಿಸುವುದು, ವಿರಾಮದ ನಂತರ ಇದ್ದಕ್ಕಿದ್ದಂತೆ ಕುಸಿಯುವುದು ಸಹಜವಷ್ಟೇ! ಈ ನಿಟ್ಟಿನಲ್ಲಿ ಅಪೂರ್ವ ಭಿನ್ನ. ಸಿನಿಮಾದ ಮೊದಲ ಅರ್ಧ ತಾಸು ಹಾಗೂ ಕೊನೆಯ ಅರ್ಧ ತಾಸುಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ನಿರ್ದೇಶಕರು, ಅದರ ‘ನಡು'ವಿನ ಭಾಗವನ್ನು ಚೆಂದವಾಗಿ ನಿರೂಪಿಸಿದ್ದಾರೆ. ತಡವಾಗಿ ಸಿನಿಮಾಕ್ಕೆ ಬಂದು, ಬೇಗ ಎದ್ದುಹೋಗುವ ಆತುರಗಾರರಿಗೆ ‘ಅಪೂರ್ವ' ಅತ್ಯುತ್ತಮ ಚಿತ್ರ. -ರಘುನಾಥ ಚ.ಹ.[ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಿಯತಮೆ 'ಅಪೂರ್ವ' ಯಾರೀಕೆ?]
'ಏಕಾಂಗಿಯ ಏನೆನಪಿನ ಅಪೂರ್ವ'-ವಿಜಯ ಕರ್ನಾಟಕ
ಆಯ್ಕೆ ಮಾಡಿಕೊಂಡ ಕತೆಯ ಬಗ್ಗೆ ಎರಡು ಮಾತಿಲ್ಲ. ಆದರೆ, ಅದನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ನಿರ್ದೇಶಕ ರವಿಚಂದ್ರನ್ ಎಡವಿದ್ದಾರೆ. ಅವನು ಬಾಲ್ಯದಿಂದಲೂ ಪ್ರೀತಿಯನ್ನೇ ಕಾಣದ ರಾಜಶೇಖರ್ (ರವಿಚಂದ್ರನ್). 61ರ ವಯಸ್ಸಿನ ಈ ಚಿತ್ರ ಕಲಾವಿದನಿಗೆ, 19ರ ವಯಸ್ಸಿನ ಅಪೂರ್ವ ಜತೆ ಪ್ರೇಮಾಂಕುರ ಆಗುತ್ತದೆ. ಅದೂ ಮಾಲ್ವೊಂದರ ಲಿಫ್ಟ್ನಲ್ಲಿ. ಸಾವಿನ ಭಯದಿಂದ ಪ್ರೇಮಿಗಳಾಗುವ ಇವರು, ಆ ಸಂಕಟ ದಾಟಿಕೊಂಡ ಮೇಲೆ ಒಂದಾಗಿರುತ್ತಾರಾ ಅಥವಾ ಬೇರ್ಪಡುತ್ತಾರಾ ಅನ್ನುವುದೇ ಸಿನಿಮಾ. - ಶರಣು ಹುಲ್ಲೂರು.['ಅಪೂರ್ವ' ಚಿತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್.!]
'ಕಲಾವಿದನ ಕುಂಚದಲ್ಲಿ ಅರಳಿದ ಅಪೂರ್ವ'- ವಿಜಯವಾಣಿ
ಟೈಟಲ್ ಕಾರ್ಡ್ನಿಂದಲೇ ಇದು ಪಕ್ಕಾ ರವಿಚಂದ್ರನ್ ಸಿನಿಮಾ ಎಂಬುದು ಸಾಬೀತಾಗುತ್ತಲೇ ಹೋಗುತ್ತದೆ, ‘ಕನಸುಗಾರ' ಬದಲಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ‘ಯಾರೋ ಬಂದು ನಿಮ್ಮ ಬದುಕಿನ ಬಿಳಿ ಹಾಳೆಗೆ ಮಸಿ ಬಳಿಯುವುದಕ್ಕೂ ಮೊದಲು ನೀವೇ ಕಲರ್ಫುಲ್ ಮಾಡಿಬಿಡಿ' ಎನ್ನುವ ‘ಕ್ರೇಜಿ ಸ್ಟಾರ್' ಹೇಳಿಕೆಯಂತೆ, ಅವರ ಸಿನಿಮಾ ಕೂಡ ಕಲರ್ಫುಲ್ ಆಗಿದೆ. ಆದರೆ ಅಲ್ಲಲ್ಲಿ ಮಸಿಯೂ ಬಿದ್ದಿದೆ! ಮೇಕಿಂಗ್ ಬಗ್ಗೆ ಸಾಕಷ್ಟು ಜಾಗ್ರತೆ ವಹಿಸಿರುವ ರವಿಚಂದ್ರನ್, ನಿರೂಪಣೆಯಲ್ಲಿ ಕೊಂಚ ನಿಧಾನಗತಿಯಾಗಿಬಿಡುತ್ತಾರೆ. ಚಿಕ್ಕ ಲಿಫ್ಟ್ನಲ್ಲೂ ಅದ್ಭುತವಾಗಿ ಕ್ಯಾಮರಾ ಕೈಚಳಕ ತೋರಬಹುದು ಎಂಬುದಕ್ಕೆ ಜಿಎಸ್ವಿ ಸೀತಾರಾಮ್ ಸಾಕ್ಷಿ.
'ಅಪರ ವಯಸ್ಸಿನ ಅಪೂರ್ವ ಪ್ರೇಮ ತಲ್ಲಣ' - ಉದಯವಾಣಿ
ಅಟ್ಟಿಸಿಕೊಂಡು ಬರುತ್ತಿರುವ ಸಾವು. ಹತ್ತಿರವಾಗುತ್ತಿರುವ ಪ್ರೀತಿ. ಅವೆರಡರ ನಡುವೆ ನಡುಗುತ್ತಾ ನಿಂತ 19ರ ಹುಡುಗಿ, 61ರ ಮುದುಕ. ಆಕೆ ಎಂದೂ ಸಾವನ್ನು ನೋಡದವಳು, ಅವನು ಯಾವತ್ತೂ ಪ್ರೇಮವನ್ನೇ ಕಾಣದವನು. ಅವರಿಬ್ಬರ ಮನಸ್ಸಿನ ನಡುವೆ ಸೇತುವೆ ಕಟ್ಟಲು ಹೊರಟರೆ ಏನಾಗುತ್ತದೆ? ಆ ಸೇತುವೆಯನ್ನು ಕಟ್ಟಬೇಕಾದ್ದು ಪ್ರೀತಿಯಿಂದಲೋ, ಸ್ವಾರ್ಥದಿಂದಲೋ, ಸಮಯ ಸಾಧಕತನದಿಂದಲೋ, ಕಾಮದಿಂದಲೋ, ಮೋಹದಿಂದಲೋ, ವ್ಯಾಮೋಹದಿಂದಲೋ? ಹೀಗೆ ಅನೇಕ ಪ್ರಶ್ನೆಗಳನ್ನು ಕೇಳುವ ಸಿನಿಮಾ ಅಪೂರ್ವ. ರವಿಚಂದ್ರನ್ ಇದನ್ನು ತಮ್ಮ ಸಿನಿಮಾ ಪ್ರೀತಿ ಮತ್ತು ಸಂಯಮ ಎರಡನ್ನೂ ಬೆರೆಸಿ ಕಟ್ಟಿದ್ದಾರೆ.- ಜೋಗಿ.
'ಲಿಫ್ಟ್ ನಲ್ಲಿ ಪ್ರೀತಿ ಮೇಲಕ್ಕೆ, ಪ್ರೇಕ್ಷಕ ಕೆಳಕ್ಕೆ!' ಕನ್ನಡ ಪ್ರಭ
ಅವಳು ಪ್ರೀತಿ ಮಾಡೋಣ ಅಂತಾಳೆ. ಆತ ವಯಸ್ಸಿನ ಬಗ್ಗೆ ಮಾತನಾಡುತ್ತಾನೆ. 19ರ ಪ್ರಾಯದ ಮನಸ್ಸು, 61ರ ಮಾಗಿದ ಮನಸ್ಸುಗಳ ನಡುವೆ ಪ್ರೀತಿ ಹುಟ್ಟಲು ಸಾಧ್ಯವಾ? ವಯಸ್ಸಿನ ಅಂತರ ಮೀರಿ ಪುಟ್ಟ ಲಿಫ್ಟ್ ನಲ್ಲಿ ನಾಯಕ, ನಾಯಕಿ ಪ್ರೀತಿಯ ಆಟ ನಡೆಯುತ್ತಿದ್ದರೆ ಹೊರಗೆ ಸಾವು ಕೇಕೆ ಹಾಕುತ್ತಿರುತ್ತದೆ. ಒಳಗೆ ಪ್ರೀತಿ, ಹೊರಗೆ ಸಾವು. ಪ್ರೀತಿಸುವುದನ್ನು ಸಾವು ಕಲಿಸುತ್ತದೆ. ಆದರೆ ಬದುಕು, ಪ್ರೀತಿಸುವ ಮನಸ್ಸುಗಳನ್ನು ಚಿವುಟುತ್ತದೆ. ಹಾಗಾದರೆ ಪ್ರೀತಿಸುವ ಹೃದಯಗಳು ಸಾವನ್ನು ಅಪ್ಪಿಕೊಳ್ಳಬೇಕಾ? ಬದುಕನ್ನು ಸ್ವೀಕರಿಸಬೇಕಾ? ಎಂದುಕೊಳ್ಳುತ್ತಿರುವಾಗಲೇ ರವಿಚಂದ್ರನ್ ಫಿಲಾಸಫರ್ ಆಗಿ ಕಾಣುತ್ತಾರೆ. ಚಿತ್ರದ ಪ್ರತಿ ದೃಶ್ಯವನ್ನು 'ಅಪೂರ್ವ' ದೃಶ್ಯಗಳಂತೆ ಡಿಸೈನ್ ಮಾಡಿದ್ದಾರೆ. ಹೀಗಾಗಿ ಇದು ನಿರ್ದೇಶಕನ ಚಿತ್ರವಲ್ಲ, ಡಿಸೈನರ್ ಸಿನಿಮಾ.-ಆರ್ ಕೇಶವಮೂರ್ತಿ.