Don't Miss!
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- News Bengaluru Suburban Rail Project: ಹಳ್ಳ ಹಿಡಿದ ₹15,767 ಕೋಟಿ ವೆಚ್ಚದ ಕಾಮಗಾರಿ, ಜನಸಾಮಾನ್ಯರು ಹೇಳೋದೇನು ಗೊತ್ತಾ?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ಬಿಂದಾಸ್ ಐತ್ರಿ ಪುನೀತ್ 'ಮೈತ್ರಿ'
ಕನ್ನಡದಲ್ಲಿ 'ನವಿಲಾದವರು', 'ಅದ್ವೈತ' ಹಾಗೂ 'ಜಟ್ಟ'ದಂತಹ ವಿಭಿನ್ನ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕರು ಬಿ.ಎಂ ಗಿರಿರಾಜ್. ಈ ಬಾರಿಯೂ ಅವರು ಪ್ರೇಕ್ಷಕರ ಮುಂದೆ ವಿನೂತನ ಕಥೆಯನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಎಲ್ಲಾ ಕಮರ್ಷಿಯಲ್ ಚಿತ್ರಗಳಲ್ಲಿರುವಂತೆ ಭರ್ಜರಿ ಫೈಟ್ಸ್ ಆಗಲಿ, ಮರ ಸುತ್ತುವ ಆಟಪಾಠಗಳಾಗಲಿ, ಮಾಸ್ ಡೈಲಾಗ್ ಗಳಾಗಲಿ ಇಲ್ಲ. ['ಜಟ್ಟ' ಚಿತ್ರ ವಿಮರ್ಶೆ]
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪುನೀತ್ ರಾಜ್ ಕುಮಾರ್ ತಮ್ಮ ಸಹಜಾಭಿನಯದಿಂದ ಎಲ್ಲರ ಮನಗೆಲ್ಲುತ್ತಾರೆ. ಕಥೆಯೂ ಅಷ್ಟೇ ಹಂತಹಂತಕ್ಕೂ ಕುತೂಹಲ ಕೆರಳಿಸುತ್ತಾ ಸಾಗಿಹೋಗುತ್ತದೆ. ಚಿತ್ರ ನೋಡುತ್ತಿರುವಷ್ಟೂ ಡ್ಯಾನಿ ಬಾಯ್ಲ್ ನಿರ್ದೇಶನದ ಆಸ್ಕರ್ ಪ್ರಶಸ್ತಿ ಪುರಸ್ಕೃತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ನೆನಪಾಗುತ್ತದೆ.
'ಸ್ಲಂ ಡಾಗ್ ಮಿಲಿಯನೇರ್' ಚಿತ್ರದಲ್ಲಿ ಕೊಳಗೇರಿ ಹುಡುಗ ಕೋಟಿ ಗೆದ್ದರೆ ಇಲ್ಲಿ ಬಾಲಾಪರಾಧಿ ಕೋಟಿ ಗೆಲ್ಲುತ್ತಾನೆ. 'ಮೈತ್ರಿ' ಚಿತ್ರ ಬಾಲಾಪರಾಧಿಗಳ ಬಗ್ಗೆ, ಅವರ ಮನಸ್ಥಿತಿ, ರಿಮ್ಯಾಂಡ್ ಹೋಮ್ ನಲ್ಲಿ (ಬಾಲಾಪರಾಧಿ ಗೃಹ) ನಡೆಯುವ ಘಟನೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. [ಕೊಳಚೆ ನಾಯಿ-ಕೋಟೀಶ್ವರ]
ಪ್ರೇಕ್ಷಕರ ಮನಸ್ಸಿಗೆ ಅವರು ಇನ್ನಷ್ಟು ಹತ್ತಿರವಾಗುವ ಪುನೀತ್
ಚಿತ್ರದಲ್ಲಿ ಪುನೀತ್ ಅವರು ಪುನೀತ್ ರಾಜ್ ಕುಮಾರ್ ಆಗಿಯೇ ಕಾಣಿಸುತ್ತಾರೆ. 'ಕರುನಾಡ ಕೋಟ್ಯಾಧಿಪತಿ' ಕಾರ್ಯಕ್ರಮದ ನಿರೂಪಕರಾಗಿ, ನಟರಾಗಿ ಅವರದು ಸಹಜಾಭಿನಯ. ಚಿತ್ರದಾದ್ಯಂತ ಅವರ ಪಾತ್ರ ನೈಜವಾಗಿ ಮೂಡಿಬಂದಿದೆ. ಆಗಾಗಿ ಪ್ರೇಕ್ಷಕರ ಮನಸ್ಸಿಗೆ ಅವರು ಇನ್ನಷ್ಟು ಹತ್ತಿರವಾಗುತ್ತಾ ಹೋಗುತ್ತಾರೆ.
ತೆರೆಯ ಮೇಲೆ ನೋಡಿಯೇ ಆನಂದಿಸಿ
ಬಾಲಾಪರಾಧಿಗಳಾಗಿ ಆದಿತ್ಯ, ಸಮರ್ಥ, ಕುಶಾಲ್, ದೇವು ಅವರದು ಗಮನಾರ್ಹವಾಗಿ ಮೂಡಿಬಂದಿವೆ. 'ಕರುನಾಡ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ರಿಮ್ಯಾಂಡ್ ಹೋಮ್ ನಲ್ಲಿರುವ ಬಾಲಾಪರಾಧಿ ಸಿದ್ಧರಾಮ ಏನೆಲ್ಲಾ ತಂತ್ರಗಳನ್ನು ಮಾಡುತ್ತಾನೆ, ಕಡೆಗೆ ಹೇಗೆ ಕೋಟ್ಯಾಧಿಪತಿಯಾಗುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಿ.
ಕಣ್ಣಂಚಲಿ ನೀರು ತರಿಸುವ ಮೋಹನ್ ಲಾಲ್
ಚಿತ್ರದಲ್ಲಿ ಮೋಹನ್ ಲಾಲ್ ಅವರ ಪಾತ್ರ ಮೂಡಿಬಂದಿರುವುದು ಕೆಲವೇ ಕ್ಷಣಗಳಾದರೂ ಕಣ್ಣಂಚಲಿ ನೀರು ತರಿಸುತ್ತಾರೆ. ರಕ್ಷಣಾ ಇಲಾಖೆಯ ವಿಜ್ಞಾನಿಯಾಗಿ, ನೊಂದ ಅಪ್ಪನಾಗಿ ಅವರ ಪಾತ್ರ ಅಚ್ಚಳಿಯದ ನೆನಪಿನಂತೆ ಉಳಿಯುತ್ತದೆ.
ಪ್ರೇಕ್ಷಕರನ್ನು ಹಿಡಿದಿಡುವ ಕಥೆ
ಅವರ ಪತ್ನಿಯಾಗಿ ಅರ್ಚನಾ ವೇದವ್ಯಾಸ್ ಅವರ ಪಾತ್ರವೂ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಪಾತ್ರಗಳು ಎಷ್ಟು ಗಮನಾರ್ಹವಾಗಿ ಮೂಡಿಬಂದಿವೆಯೋ ಕಥೆ ಕೂಡ ಅಷ್ಟೇ ಸೊಗಸಾಗಿ ಪ್ರೇಕ್ಷಕರನ್ನು ಕೊನೆಯ ತನಕ ಹಿಡಿದಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಡೈಲಾಗ್ ಗಳು ಪ್ರಮುಖ ಆಕರ್ಷಣೆ
ಚಿತ್ರದ ಕೊನೆಗೆ ಒಂದು ಡೈಲಾಗ್ ಹೀಗಿದೆ, ಮೋಹನ್ ಲಾಲ್ ಜೊತೆಗೆ ಪುನೀತ್ ಮಾತನಾಡುತ್ತಾ, ಇಂದು ನಿಮ್ಮ ಮಗ ಬದುಕಿದ್ದರೆ ನಿಮ್ಮ ಬಗ್ಗೆ ತುಂಬ ಹೆಮ್ಮೆ ಪಡುತ್ತಿದ್ದರು ಎಂದು. ಅದಕ್ಕೆ ಮೋಹನ್ ಲಾಲ್ ಅವರು, ಇಂದು ನಿಮ್ಮ ತಂದೆ ಬದುಕಿದ್ದರೆ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದರು ಎನ್ನುತ್ತಾರೆ.
ಅತುಲ್ ಕುಲಕರ್ಣಿ ಮನೋಜ್ಞ ಅಭಿನಯ
ಈ ರೀತಿಯ ಸಂಭಾಷಣೆಗಳು ಪ್ರೇಕ್ಷಕರಿಗೆ ಬೋನಸ್ ನಂತಿವೆ ಚಿತ್ರದಲ್ಲಿವೆ. ರಿಮ್ಯಾಂಡ್ ಹೋಮ್ ವಾರ್ಡನ್ ಆಗಿ ಅತುಲ್ ಕುಲಕರ್ಣಿ ಅವರದು ಭಿನ್ನವಾದ ಪಾತ್ರ. ಬಾಲಾಪರಾಧಿಗಳ ಬಗೆಗಿನ ಅವರ ಭಿನ್ನ ನಿಲುವು, ಧೋರಣೆಗಳನ್ನು ತೋರಿಸುವ ವಾರ್ಡನ್ ಆಗಿ ಅವರದು ಮನೋಜ್ಞ ಅಭಿನಯ.
ಮನಮುಟ್ಟುವ ಇಳಯರಾಜ ಸಂಗೀತ
ಇಳಯರಾಜ ಅವರ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಚಿತ್ರದ ಹಾಡುಗಳು ಅಷ್ಟೇ ಸಾಂದರ್ಭಿಕವಾಗಿ ಮೂಡಿಬಂದಿದ್ದು ಕಥೆಯ ಭಾಗವಾಗಿ ಅವು ನಿಲ್ಲುತ್ತವೆ. ಎಂ.ವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಅವರ ಸಂಕಲನವೂ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿವೆ. ಖಳನಟನಾಗಿ ರವಿಕಾಳೆ ಅವರು ಗಮನಸೆಳೆಯುತ್ತಾರೆ.
ಅಭಿಮಾನಿಗಳಿಗೆ ನಿರಾಸೆಪಡಿಸಲ್ಲ ಪುನೀತ್
ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಅವರು ಒಂದು ವಿಭಿನ್ನ ಕಥೆ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ಎಂದಿನ ಚಿತ್ರಗಳಿಗೆ ಹೋಲಿಸಿದರೆ ಇದೊಂದು ಕಂಪ್ಲೀಟ್ ಡಿಫರೆಂಟ್ ಚಿತ್ರ ಎನ್ನಬಹುದು. ಈ ರೀತಿಯ ಭಿನ್ನ ಕಥೆಗಾಗಿ ಹಂಬಲಿಸುವ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಅವರು ಭೂರಿ ಮನರಂಜನೆ ನೀಡಿದ್ದಾರೆ.