Don't Miss!
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ಲಂಚದ ಮುಂದೆ ಬೆತ್ತಲಾದ 'ಸರ್ಕಾರಿ' ಕೆಲಸ
''ಸರ್ಕಾರದ ಕೆಲಸ ದೇವರ ಕೆಲಸ'' ಇದು ವಿಧಾನಸೌಧದ ಎದುರು ಬರೆದಿರುವ ಘೋಷ ವಾಕ್ಯ.....ಆದ್ರೆ, ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಅಧಿಕಾರಿಗಳ ಬಳಿ ಕೆಲಸ ಆಗಬೇಕು ಅಂದ್ರೆ ಅದಕ್ಕೆ ಲಂಚದ ಕಾಣಿಕೆ ಕೊಡಲೇಬೇಕು. ಲಂಚದ ಕೊಡುಗೆ ಇಲ್ಲದೇ 'ಸರ್ಕಾರ' ಇಲ್ಲ ಎನ್ನುವುದನ್ನ ಬೆತ್ತಲಾಗಿ ತೋರಿಸಿರುವ ಚಿತ್ರವೇ 'ಸರ್ಕಾರಿ ಕೆಲಸ ದೇವರ ಕೆಲಸ'.
ಚಿತ್ರ: ಸರ್ಕಾರಿ ಕೆಲಸ ದೇವರ ಕೆಲಸ
ನಿರ್ಮಾಣ: ಪಿ.ರಾಮ್ ಪ್ರಸಾದ್
ನಿರ್ದೇಶನ: ಆರ್.ರವೀಂದ್ರ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಮಂಜುನಾಥ್ ನಾಯಕ್
ಸಂಕಲನ: ಕೆ.ಎಂ.ಪ್ರಕಾಶ್
ಸಂಭಾಷಣೆ: ಗುರು ಪ್ರಸಾದ್
ತಾರಾಗಣ: ರವಿಶಂಕರ್ ಗೌಡ, ಸಂಯುಕ್ತ ಹೊರನಾಡು, ರಾಜು ತಾಳಿಕೋಟೆ, ರಂಗಾಯಣ ರಘು, ಆಶಿಶ ವಿದ್ಯಾರ್ಥಿ ಮತ್ತು ಇತರರು
ಬಿಡುಗಡೆ ದಿನಾಂಕ: ಜೂನ್ 2, 2017
'ಲಂಚ' ಎಂಬ ಪೆಡಂಭೂತ
ಲಂಚ, ಮೋಸ, ಅನ್ಯಾಯವಿಲ್ಲದ ಅಧಿಕಾರಿಗಳಿಲ್ಲ, ಸರ್ಕಾರಿ ಕಚೇರಿಗಳಿಲ್ಲ ಎಂದು ಬಣ್ಣಿಸುವ ಹಾಡಿನೊಂದಿಗೆ 'ಸರ್ಕಾರಿ ಕೆಲಸ ದೇವರ ಕೆಲಸ' ಸಿನಿಮಾ ಶುರುವಾಗುತ್ತೆ. ಪಿಂಚಣೆ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಖಾತೆ, ಹೀಗೆ ಸಾಮಾನ್ಯ ಜನರ ಪ್ರತಿಯೊಂದು ಕೆಲಸನೂ ಲಂಚ ಇಲ್ಲದೆ ಆಗಲ್ಲ. ಇದು ಸರ್ಕಾರಿ ಅಧಿಕಾರಿ ಹಾಗೂ ಸರ್ಕಾರಿ ಕಚೇರಿಯಲ್ಲಿ ಲಂಚವಿದ್ದರೇ ಮಾತ್ರ ಮಾತು ಎಂಬುದು ಪರಿಸ್ಥಿತಿ.
ಲಂಚದ ವ್ಯವಸ್ಥೆಯ ವಿರೋಧಿ ನಾಯಕ
ಹೀಗಿರುವ ಸಮಾಜದಲ್ಲಿ ಒಂದೇ ಒಂದು ರೂಪಾಯಿ ಲಂಚವನ್ನ ಕೊಡಲು ಇಷ್ಟವಿಲ್ಲದ ದೇಶಪ್ರೇಮ ಯುವಕ ಶಿವ (ರವಿಶಂಕರ್ ಗೌಡ) ಈ ವ್ಯವಸ್ಥೆಯ ವಿರೋಧಿ. ಶಿವ ಲಂಚ ಕೊಡುವ ಜಾಯಮಾನವಲ್ಲ, ಬದಲಾಗಿ ಈ ಕೆಟ್ಟ ವ್ಯವಸ್ಥೆಯನ್ನ ಬದಲಾಯಿಸವೇಕು ಎಂಬ ಛಲ. ಅದಕ್ಕಾಗಿ, 'ಹೊಸ ನಾಟಕ'. ಆ ನಾಟಕವೇನು ಎಂಬುದು ತೆರೆಮೇಲೆ ನೋಡಿ.
ಸರ್ಕಾರಿ ಅಧಿಕಾರಿ ವರ್ಸಸ್ ದೇಶಪ್ರೇಮ ಯುವಕ
ಲಂಚವಿಲ್ಲದೇ ಕೆಲಸ ಮಾಡದ ಸರ್ಕಾರಿ ಅಧಿಕಾರಿಗಳು ಒಂದು ಕಡೆಯಾದರೇ, ಲಂಚ ಕೊಡಲು ಇಷ್ಟವಿಲ್ಲದ ದೇಶಪ್ರೇಮಿ ಶಿವ ಮತ್ತೊಂದೆಡೆ. ಈ ಲಂಚದ ವ್ಯವಸ್ಥೆಗೆ ಧಿಕ್ಕಾರ ಹಾಕಿ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ನಾಯಕ ಹೇಗೆ ಮಣ್ಣು ಮುಕ್ಕಿಸುತ್ತಾನೆ ಎಂಬುದೇ ಇಡೀ ಚಿತ್ರದ ಕಥಾ ಹಂದರ.
ರವಿಶಂಕರ್ ಗೌಡ ಅಭಿನಯ
ದೇಶಪ್ರೇಮಿ, ಸಾಮಾನ್ಯ ವ್ಯಕ್ತಿ, ರೈತ ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಳ್ಳುವ ರವಿಶಂಕರ್ ಗೌಡ ಚಿತ್ರದ ರಿಯಲ್ ಹೀರೋ. ಈ ಸಿನಿಮಾಗೆ ತಕ್ಕ ಅಭಿನಯ ನೀಡಿದ್ದಾರೆ.
ಜರ್ನಲಿಸ್ಟ್ ಸಂಯುಕ್ತ
ಸಂಯುಕ್ತ ಹೊರನಾಡು ಅವರದ್ದು ಜರ್ನಲಿಸ್ಟ್ ಪಾತ್ರ. ಸದಾ ತೆರೆ ಮೇಲೆ ಇದ್ದರೂ ಪ್ರಾಮುಖ್ಯತೆ ಕಡಿಮೆ. ಆದ್ರೆ, ತಮ್ಮ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.
ಗಮನ ಸೆಳೆಯುವ ಪಾತ್ರಗಳು
ಗ್ರಾಮೀಣ ಶಾಸಕರಾಗಿ ರಂಗಾಯಣ ರಘು, ಪೊಲೀಸ್ ಪಾತ್ರದಲ್ಲಿ ಉಮೇಶ್ ಬಣಕಾರ್, ಬ್ರೋಕರ್ ಪಾತ್ರದಲ್ಲಿ ರಾಜು ತಾಳಿಕೋಟೆ ಅವರ ಅಭಿನಯ ಅತ್ಯುತ್ತಮವಾಗಿದೆ. ಒಂದು ಹಾಡಿನಲ್ಲಿ ಬಂದು ಹೋಗುವ ಆಶಿಶ್ ವಿದ್ಯಾರ್ಥಿ, ಲಾಯರ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಗಮನ ಸೆಳೆಯುತ್ತಾರೆ. ಉಳಿದಂತೆ ಸಿಹಿಕಹಿ ಚಂದ್ರು, ನರ್ಸ್ ಜಯಲಕ್ಷ್ಮಿ, ಕುರಿ ಪ್ರತಾಪ್, ಕರಿಸುಬ್ಬು ಅವರು ಕೂಡ ತಮ್ಮ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿದ್ದಾರೆ.
ನಿರ್ದೇಶನ ಹೇಗಿದೆ?
ಪ್ರಸ್ತುತ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಲಂಚ ಸಂಪ್ರದಾಯವನ್ನ ಚೆನ್ನಾಗಿ ತೋರಿಸಿದ್ದಾರೆ. ಆದ್ರೆ, ಅದನ್ನ ಸಿನಿಮಾದಲ್ಲಿ ತೋರಿಸುವಾಗ ಅದರಲ್ಲಿರಬೇಕಾದ ರೋಚಕತೆ, ಕುತೂಹಲ ಇಲ್ಲಿ ಕಾಣಿಸುವುದಿಲ್ಲ. ಚಿತ್ರಕ್ಕೆ ಡ್ಯುಯೆಟ್ ಹಾಡುಗಳು ಅವಶ್ಯಕತೆಯೇ ಇರಲಿಲ್ಲ ಎನ್ನಿಸುತ್ತೆ. ನಿರ್ದೇಶಕರ ಪರಿಕಲ್ಪನೆ ಉತ್ತಮವಾಗಿದೆ, ಆದ್ರೆ, ಮೇಕಿಂಗ್ ನಲ್ಲಿ ಇನ್ನು ಸ್ವಲ್ಪ ಶ್ರಮ ವಹಿಸಬಹುದಿತ್ತು.
ತಾಂತ್ರಿಕವಾಗಿ ಸಿನಿಮಾ
ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಸಂಪೂರ್ಣ ಹೊಸತು. ಆದ್ರೆ, ಟೈಟಲ್ ಹಾಡೊಂದು ಬಿಟ್ಟರೇ, ಬೇರೆ ಯಾವ ಹಾಡುಗಳು ಕಿವಿಗೆ ಕೇಳಿಸಲ್ಲ. ಇನ್ನು ಮಂಜುನಾಥ್ ನಾಯಕ ಕ್ಯಾಮೆರಾ ವರ್ಕ್ ಹಾಗೂ ಕೆ.ಎಂ ಪ್ರಕಾಶ್ ಸಂಕಲನದ ಬಗ್ಗೆ ಸಮಾಧಾನವಷ್ಟೇ.
ಕೊನೆಯ ಮಾತು
ಈ ಚಿತ್ರದಲ್ಲಿ ಬರುವ ಪ್ರತಿ ಸನ್ನಿವೇಶಗಳನ್ನ ಎಲ್ಲರೂ ಎದುರಿಸಿರುತ್ತಾರೆ. ಕಥೆ ಮತ್ತು ಚಿತ್ರಕಥೆಯಲ್ಲಿ ಏನು ಹೊಸತನವಿಲ್ಲ. ಸ್ಟಾರ್ ಗಳ ಸಿನಿಮಾಗಳಂತೆ ಕಮರ್ಷಿಯಲ್ ಎಲಿಮೆಂಟ್ಸ್ ಗಳನ್ನ ನಿರೀಕ್ಷೆ ಮಾಡುವಾಗಿಲ್ಲ. ಫೈಟ್ಸ್ ಇಲ್ಲ, ಐಟಂ ಸಾಂಗ್ ಇದೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ನೈಜಚಿತ್ರಣವನ್ನ ತೆರೆಮೇಲೆ ನೋಡಬಹುದು ಎನ್ನುವ ಸಮಾಧಾನವಷ್ಟೇ.