Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಥ್ರಿಲ್ಲರ್: ಲಾಂಗು-ಸಾಂಗು-ಗ್ಲಾಮರ್ ಇಲ್ಲದ 'ದಿ ಪ್ಲ್ಯಾನ್'
ಅಬ್ಬರದ ಹೊಡೆದಾಟವಿಲ್ಲ, ಮಚ್ಚು-ಲಾಂಗುಗಳ ಸುಳಿವೇ ಇಲ್ಲ, ಡೈಲಾಗ್ ಗಳಿಗೆ ಜಾಗನೇ ಇಲ್ಲ. ಫೀಲಿಂಗ್ ಸಾಂಗು, ಡ್ಯುಯೆಟ್ ಸಾಂಗು ಅಂತ ಹಲವಾರು ಸಾಂಗುಗಳನ್ನು ಅನಾವಶ್ಯಕವಾಗಿ ತುರುಕಿಲ್ಲ. ಒಟ್ನಲ್ಲಿ ಒಂದು ಹಾಡು ಬಿಟ್ಟರೆ ಮತ್ತೆ ಸಾಂಗುಗಳ ಪತ್ತೇನೇ ಇಲ್ಲ.
ಊಟಕ್ಕೆ ನೆಂಚಿಕೊಳ್ಳಲು ಉಪ್ಪಿನಕಾಯಿ ಇರುವಂತೆ, ಸಿನಿಮಾದಲ್ಲಿ ಸ್ಪಲ್ಪ ಗ್ಲಾಮರ್ ಬಿಟ್ಟರೆ ಇನ್ನುಳಿದಂತೆ ಸೀದಾ ಸಾದ ಸಿನಿಮಾ. ಹೊಸಬರ ಮುಖವಾದರೂ ಪ್ರೇಕ್ಷಕರಿಗೆ ಕಿರಿಕಿರಿ ಅಂತ ಖಂಡಿತ ಅನಿಸುವುದಿಲ್ಲ.
ಕಾಮಿಡಿ ಸೀನ್ ಹೀಗೆ ಬಂದು ಹಾಗೆ ಹೋಗುತ್ತದೆ ಬಿಟ್ಟರೆ, ಸುಮ್ಮ ಸುಮ್ಮನೆ ತುರುಕಿದಂತಿಲ್ಲ. ಇಡೀ ಒಂದು ಜೈಲಿನಲ್ಲಿ ಕೇವಲ 5 ದಿನಗಳಲ್ಲಿ ನಡೆಯುವ ಕಥಾಹಂದರವೇ 'ದಿ ಪ್ಲ್ಯಾನ್'.
ಒಟ್ನಲ್ಲಿ ಇಷ್ಟೆಲ್ಲಾ ವಿಶೇಷತೆಗಳಿರುವ ಹೊಸಬರ ಸಸ್ಪೆನ್ಸ್- ಥ್ರಿಲ್ಲರ್ 'ದಿ ಪ್ಲ್ಯಾನ್' ಸಿನಿಮಾ ಪ್ರೇಕ್ಷಕರಿಗೆ ಒಂದು ಬಾರಿ ಖಂಡಿತಾ ಹಿಡಿಸುತ್ತದೆ. ಇಂದು ಇಡೀ ರಾಜ್ಯಾದ್ಯಂತ ತೆರೆ ಕಂಡ ಹೊಸಬರ 'ದಿ ಪ್ಲ್ಯಾನ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..
ಚಿತ್ರ : 'ದಿ ಪ್ಲ್ಯಾನ್'
ನಿರ್ಮಾಣ : 'ಮಾಲ್ಗುಡಿ ಟಾಕೀಸ್', ಅಶೋಕ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿ
ಕಥೆ-ಚಿತ್ರಕಥೆ : ಕೀರ್ತಿ
ಛಾಯಾಗ್ರಹಣ : ದೀಪಂಕರ್
ಸಂಗೀತ : ರಿಚರ್ಡ್, ತೇಜಸ್ ಮತ್ತು ಸುರೇಂದ್ರ ಸೋದಿ
ತಾರಾಗಣ : ಅನಂತ್ ನಾಗ್, ಪ್ರಮೋದ್ ಶೆಟ್ಟಿ, ರಮೇಶ್ ಭಟ್, ಹೇಮಂತ್, ಜಯಕುಮಾರ್, ಶ್ರೀರಾಮ್, ಜಗದೀಶ್, ಸನತ್, ಗೌತಮಿ ಮತ್ತು ಇತರರು.
ಬಿಡುಗಡೆ : ನವೆಂಬರ್ 27
'ದಿ ಪ್ಲ್ಯಾನ್' ಕಥಾಹಂದರ
ಸಿನಿಮಾ ಆರಂಭವಾದ ಕೂಡಲೇ ನಿಮಗೆ ಕಾಣ ಸಿಗುವುದು, ಕೋರ್ಟ್ ನ ಕಟಕಟೆಯಲ್ಲಿ ಮೂವರು ಯುವಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವ ದೃಶ್ಯ. ತದನಂತರ ಆ ಮೂವರು ಯುವಕರನ್ನು 15 ದಿನಗಳ ಕಾಲ ಸೆರೆವಾಸಕ್ಕೆ ಮಡಿಕೇರಿಯ ಜಿಲ್ಲಾ ಕಾರಾಗೃಹಕ್ಕೆ ಕರೆತರುತ್ತಾರೆ. ಶ್ರೀಮಂತ ಮನೆತನದಲ್ಲಿ ಬೆಳೆದಿರುವ ಮೂವರು ಯುವಕರು ಇಂಜಿನಿಯರಿಂಗ್ ವಿಧ್ಯಾರ್ಥಿಗಳಾಗಿರುತ್ತಾರೆ.
ಮಡಿಕೇರಿ ಜೈಲ್
ದುಡ್ಡಿನ ಮದ ಏರಿ ಮೋಜು ಮಸ್ತಿಯಲ್ಲಿ ಕಳೆದಿರುವ ಭಾಸ್ಕರ, ಅಜಯ್ ಹಾಗೂ ಚೇತನ್ ಎಂಬ ಮೂವರು ಯುವಕರಿಗೆ ಜೈಲಿನ ವಾತಾವರಣ ಉಸಿರುಗಟ್ಟಿಸುತ್ತದೆ. ಆದರೆ ಜೈಲ್ ಗೆ ಎಂಟ್ರಿ ಪಡೆದುಕೊಳ್ಳುವ ಮುನ್ನವೇ ಅವರಲ್ಲಿ ಮುಂದಾಳತ್ವ ವಹಿಸಿಕೊಂಡ ಅಜಯ್ ಜೈಲಿನಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ಯೋಚನೆ ಮಾಡಲು ಶುರು ಮಾಡತೊಡಗುತ್ತಾನೆ.
ತಪ್ಪಿಸಿಕೊಳ್ಳಲು ಸಹಾಯ ಮಾಡುವ ರಮೇಶ್ ಭಟ್
ಈ ಮೂವರು ಯುವಕರಿಗೆ ತಪ್ಪಿಸಿಕೊಳ್ಳಲು ರಮೇಶ್ ಭಟ್ ಸಹಾಯ ಮಾಡುತ್ತಾರೆ. ಈ ಮೂವರ ಪ್ಲ್ಯಾನ್ ನಲ್ಲಿ ರಮೇಶ್ ಭಟ್ ಕೂಡ ತಮ್ಮ ಮಾಸ್ಟರ್ ಮೈಂಡ್ ಉಪಯೋಗಿಸುತ್ತಾರೆ. ಇನ್ನು ಹೇಗೆ ಅಲ್ಲಿಂದ ಪರಾರಿಯಾಗಬಹುದು ಎಂಬುದನ್ನು ಹಗಲು ರಾತ್ರಿ ನಿದ್ದೆ ಬಿಟ್ಟು ಆ ಮೂವರು ಯೋಚನೆ ಮಾಡತೊಡಗುತ್ತಾರೆ.
ಹೊಸ ಜೈಲರ್ ಎಂಟ್ರಿ
ಇವರ ಈ ಪ್ಲ್ಯಾನ್ ನಡೆಯುತ್ತಿರುವಾಗ ಆ ಜಿಲ್ಲಾ ಕಾರಾಗೃಹಕ್ಕೆ ಹೊಸ ಜೈಲರ್ ಆಗಿ ಅನಂತ್ ನಾಗ್ ಎಂಟ್ರಿ ಪಡೆದುಕೊಳ್ಳುತ್ತಾರೆ. ತುಂಬಾ ಸ್ಟ್ರಿಕ್ಟ್ ಜೈಲರ್ ಆಗಿರುವ ಅನಂತ್ ಬಳಿ ಕಿಶೋರ್ ಎಂಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು, ಅವರ ಸಹಾಯ ಪಡೆಯಲು ಈ ಮೂವರು ಯೋಜನೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿಕೊಳ್ಳುವ ಅನಂತ್ ಆ ಮೂವರಿಗೆ ಸಹಾಯ ಮಾಡಲು ನಿರ್ಧರಿಸುತ್ತಾರೆ.
ಪ್ಲ್ಯಾನ್ ನಡುವೆ ಫ್ಲ್ಯಾಶ್ ಬ್ಯಾಕ್
ಅಂದಹಾಗೆ ಈ ಮೂವರು ಪ್ಲಾನ್ ಮಾಡುತ್ತಿದ್ದಂತೆ, ಆಗಾಗ ಅವರ ಫ್ಲ್ಯಾಶ್ ಬ್ಯಾಕ್ ಗೆ ಜಾರಿ ಹೋಗುತ್ತಾರೆ. ಅವರು ಎಂಜಾಯ್ ಮಾಡುತ್ತಿದ್ದ ಐಶಾರಾಮಿ ಜೀವನ, ಗೋವಾ ಬೀಚ್, ಫಾರೀನ್ ಹುಡುಗಿಯರ ಜೊತೆಗಿನ ಡೇಟಿಂಗ್, ಸುತ್ತಾಟ, ಕುಡಿತ, ಸಿಗರೇಟು ಎಲ್ಲವನ್ನು ಮೈಗೂಡಿಸಿಕೊಂಡಿರುವ ಈ ಯುವಕರು ಒಟ್ಟಿನಲ್ಲಿ ದುಡ್ಡಿನ ಮದದಿಂದ ಮಾಡಬಾರದ್ದನ್ನೆಲ್ಲಾ ಮಾಡುವ ಮೂಲಕ ಕೆಟ್ಟ ಹುಡುಗರು ಎಂದು ಅನಿಸಿಕೊಳ್ಳುತ್ತಾರೆ.
ಫ್ಲ್ಯಾನ್ ಯಶಸ್ವಿ: ಪರಾರಿಯಾಗುವ ಯುವಕರು
ಅಂತೂ ಇಂತೂ ಜೈಲರ್ ಅನಂತ್ ಹಾಗೂ ಜೈಲಿನಲ್ಲಿರುವ ಕೈದಿಯೊಬ್ಬರ ಸಹಾಯ ಪಡೆದು ಜೈಲಿನ ಗೋಡೆ ಹತ್ತಿ ಪರಾರಿಯಾಗುವ ಮೂವರು ಯುವಕರು ತಮ್ಮ ಗಮ್ಯ ಸೇರುವ ಆತುರದಲ್ಲಿ ಇರುತ್ತಾರೆ. ಆದರೆ ಅಲ್ಲಿ ಆ ಮೂವರಿಗೂ ಒಂದು ಟ್ವಿಸ್ಟ್ ಸಿಗುತ್ತದೆ.
ಏನು ಆ ಟ್ವಿಸ್ಟ್.!
ಏನು ಆ ಟ್ವಿಸ್ಟ್, ಸಿನಿಮಾದಲ್ಲಿ ನಿಜವಾದ ವಿಲನ್ ಯಾರು, ಆ ಕಿಶೋರ್ ಅನ್ನೋ ವ್ಯಕ್ತಿ ಯಾರು? ಅನಂತ್ ನಾಗ್ ಗೂ ಕಿಶೋರ್ ಗೂ ಏನು ಸಂಬಂಧ. ಅಷ್ಟಕ್ಕೂ ಆ ಮೂವರು ಯುವಕರು ಜೈಲಿಗೆ ಹೋಗಿದ್ದಾದರೂ ಯಾಕೆ?, ಯಾವ ಅಪರಾಧದ ಮೇಲೆ ಹೋಗಿದ್ದು, ಮುಂತಾದ ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಗಬೇಕಾದರೆ ನೀವು ಖಂಡಿತ ಒಮ್ಮೆ ಚಿತ್ರಮಂದಿರಕ್ಕೆ ಭೇಟಿ ಕೊಡಲೇಬೇಕು.
ಸಿನಿಮಾ ಪೂರ್ತಿ ಥ್ರಿಲ್ಲಿಂಗ್ ಅನುಭವ
6-5=2 ಸಿನಿಮಾದಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಚೊಚ್ಚಲ ನಿರ್ದೇಶಕ ಕೀರ್ತಿ ಅವರು ಆಕ್ಷನ್-ಕಟ್ ಹೇಳಿರುವ 'ದಿ ಪ್ಲ್ಯಾನ್' ಸಿನಿಮಾ ಪ್ರೇಕ್ಷಕರಿಗೆ ಫುಲ್ ಥ್ರಿಲ್ಲಿಂಗ್ ಅನುಭವದ ಜೊತೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಟ್ನಲ್ಲಿ ಪ್ರೇಕ್ಷಕರು ಕಣ್ಣು ಅತ್ತಿತ್ತ ಮಿಟುಕಿಸದಂತೆ ಸಿನಿಮಾ ನೋಡೋದು ಗ್ಯಾರಂಟಿ.
ಉತ್ತಮ ಸಂದೇಶ
ಇತ್ತೀಚೆಗೆ ಅತ್ಯಾಚಾರ ಕೇಸ್ ಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ 'ದಿ ಪ್ಲ್ಯಾನ್' ನಂತಹ ಸಿನಿಮಾಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ಹೊತ್ತು ತಂದಿದ್ದು, ಪ್ರೇಕ್ಷಕರ ಮನಮುಟ್ಟಿದೆ. ಜೊತೆಗೆ ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲಿ ಅಲ್ಲದೇ ಬೇರೆ ರೀತಿಯಲ್ಲೂ ಶಿಕ್ಷೆ ಕೊಡಬಹುದು ಎಂಬುದನ್ನು ಈ ಸಿನಿಮಾ ವಿಭಿನ್ನ ಕಥೆಯ ಮೂಲಕ ತಿಳಿಸಿದೆ.
ನಟನೆ
ಎಲ್ಲಾ ಹೊಸಮುಖಗಳು, ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿರುವ ಯುವ ಪ್ರತಿಭೆಗಳು ತಮ್ಮ ನಟನಾ ಸಾಮರ್ಥ್ಯವನ್ನು ಅದ್ಭುತವಾಗಿ ತೋರಿದ್ದಾರೆ. ಅದರಲ್ಲೂ ಜೈಲಿನಿಂದ ಪರಾರಿಯಾಗಲು ಶತಾಯಗತಾಯ ಪ್ರಯತ್ನಿಸುವ ಭಾಸ್ಕರ್, ಅಜಯ್ ಹಾಗು ಚೇತನ್ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ಅನಂತ್ ನಾಗ್ ನಟನೆ ಉತ್ತಮವಾಗಿದೆ. ನಟ ಪ್ರಮೋದ್ ಶೆಟ್ಟಿ ಕೂಡ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ರಮೇಶ್ ಭಟ್ ಹೀಗೆ ಬಂದು ಹಾಗೆ ಮಾಯವಾಗುತ್ತಾರೆ. ಕಿರುತೆರೆ ನಟಿ ಗೌತಮಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ತಾಂತ್ರಿಕತೆ
ಹೊಸ ಪ್ರತಿಭೆಯ ಸಿನಿಮಾಟೋಗ್ರಫಿ ಉತ್ತಮವಾಗಿದೆ. ಹೆಚ್ಚಾಗಿ ಕತ್ತಲಿನಲ್ಲಿ ಶೂಟಿಂಗ್ ನಡೆದಿತ್ತು, ಎಲ್ಲವನ್ನೂ ನೀಟಾಗಿ ತೋರಿಸಿದ್ದಾರೆ. ಆದರೂ ಇನ್ನು ಸ್ವಲ್ಪ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಬಹುದಿತ್ತು. ಇಡೀ ಸಿನಿಮಾದಲ್ಲಿ ಒಂದೇ ಹಾಡಿದ್ದು, ಹಿನ್ನಲೆ ಸಂಗೀತ ಸೇರಿದಂತೆ ಇದ್ದ ಒಂದು ಹಾಡು ಚೆನ್ನಾಗಿದೆ.
ಒಟ್ಟಾರೆ 'ದಿ ಪ್ಲ್ಯಾನ್'
ಇತ್ತೀಚೆಗೆ ಹೊಸಬರ ಹವಾ ಹೆಚ್ಚಾಗಿರುವ ಈ ಕಾಲದಲ್ಲಿ 'ದಿ ಪ್ಲ್ಯಾನ್' ಕೂಡ ಹಿಟ್ ಸಿನಿಮಾಗಳ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳು ಕಾಣ ಸಿಗುತ್ತವೆ. ಚೊಚ್ಚಲ ನಿರ್ದೇಶಕರ ಹಾಗೂ ಹೊಸ ಪ್ರತಿಭೆಗಳ ಜೈಲ್ ಬ್ರೇಕರ್ ಸಿನಿಮಾ 'ದಿ ಪ್ಲ್ಯಾನ್' ಪ್ರೇಕ್ಷಕರನ್ನು ಥ್ರಿಲ್ಲಾಗಿಸುವುದರ ಜೊತೆಗೆ ಯಾವುದೇ ಬೋರ್ ಹೊಡೆಸುವುದಿಲ್ಲ. ಫ್ರೀಯಾದರೆ ಈ ವೀಕೆಂಡ್ ನಲ್ಲಿ ಒಮ್ಮೆ ನೋಡಿ ಬನ್ನಿ.