Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿಗೆ ಹರಿದು ಬಂತು ತಾರೆಗಳ ದಂಡು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರೂಪಣೆಯ ಕನ್ನಡದ ಕೋಟ್ಯಾಧಿಪತಿಯಲ್ಲಿ ಬರುವ ವಾರವಿಡೀ ಸೆಲೆಬ್ರಿಟಿಗಳದ್ದೇ ಧಮಾಕಾ! ನವರಸನಾಯಕ ಜಗ್ಗೇಶ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ಬಹುಭಾಷಾ ತಾರೆ ಪ್ರಿಯಾಮಣಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ.
ಈ ಮೂವರೂ ತಾರೆಯರು ಭಾಗವಹಿಸುವ ಕಾರ್ಯಕ್ರಮ ಜೂನ್ 24ರಿಂದ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿದೆ. ಜೂನ್ 24 ಸೋಮವಾರದಂದು ಪ್ರಸಾರವಾಗಲಿರುವ ಶೋನಲ್ಲಿ ಮೊದಲನೆಯದಾಗಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ. ಪ್ರತೀ ಮಾತಿಗೂ ಹಾಸ್ಯದ ಅಲೆ ಎಬ್ಬಿಸುವ ಜಗ್ಗೇಶ್ ಹಾಟ್ ಸೀಟ್ನಲ್ಲಿ ಕೂತು ಎಲ್ಲರನ್ನೂ ನಕ್ಕು ನಗಿಸಲಿದ್ದಾರೆ.
ಜಗ್ಗೇಶ್ ನಡೆದುಬಂದ ಹಾದಿಯೇ ವಿಶೇಷವಾಗಿದೆ. ಕಷ್ಟ ನಷ್ಟಗಳ ನಡುವೆಯೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಹಾಗೂ ಛಾಪು ಮೂಡಿಸಿಕೊಂಡವರು. ಸಹಕಲಾವಿದನಾಗಿ, ಖಳ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಗ್ಗೇಶ್ ಇಂದು ಕಾಮಿಡಿ ಚಿತ್ರಗಳಿಂದ ಜನಮನದಲ್ಲಿ ಮನೆಮಾಡಿದ್ದಾರೆ.
ಕೋಟ್ಯಾಧಿಪತಿಯಲ್ಲಿ ಜಗ್ಗೇಶ್
ತಾಯಿ ಎಂದರೆ ಎಲ್ಲೆ ಮೀರಿದ ಪ್ರೀತಿ. ತಮ್ಮನೆಂದರೆ ಎಲ್ಲಿಲ್ಲದ ವಿಶ್ವಾಸ, ಮಡದಿಯೆಂದರೆ ಸ್ನೇಹಸಮಾನ ಪ್ರೇಮ. ಮಕ್ಕಳೆಂದರೆ ಎಲ್ಲಿಲ್ಲದ ಒಲವು. ಮಂತ್ರಾಲಯ ಮಹಾತ್ಮ ರಾಘವೇಂದ್ರ ಸ್ವಾಮಿಗಳೆಂದರೆ ಭಾವಮಿಶ್ರಿತ ಭಕ್ತಿ. ದಿನದ ಮೂರು ತಾಸು ರಾಯರ ಪೂಜೆ-ಪುನಸ್ಕಾರ..ಹೀಗೆ ಜಗ್ಗೇಶ್ ಸದಾ ನಗೆಮಂಟಪದ ನಟಪ್ರವೀಣ. ಅದೇ ಜಗ್ಗೇಶ್ ಸುವರ್ಣ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದಿದ್ದರು.
ರಮ್ಯಾಗೆ ಕಾಗೆ ಹಾರಿಸಿದ ಜಗ್ಗೇಶ್!
ಕೋಟ್ಯಾಧಿಪತಿ ಆಟ ಆಡುವ ಸಂದರ್ಭದಲ್ಲಿ ಜಗ್ಗೇಶ್ ಅವರು ನಟಿ ರಮ್ಯಾಗೆ ದೂರವಾಣಿ ಕರೆ ಮಾಡಿ, ಹೆಣ್ಣಿನ ಧ್ವನಿಯಲ್ಲಿ ಮಾತನಾಡಿ, ಅವರಿಗೆ ಪ್ರೊಪೋಸ್ ಮಾಡುವ ಸನ್ನಿವೇಶ ಅತ್ಯಂತ ರೋಮಾಂಚಕತೆಯಿಂದ ಕೂಡಿದ್ದು, ಸ್ವತಃ ರಮ್ಯಾ ಅವರೇ ಬೆಚ್ಚಿಬಿದ್ದದ್ದು ಅಷ್ಟೇ ಸತ್ಯ. ಜಗ್ಗೇಶ್ ತಾನೊಬ್ಬ ಬಹುಮುಖ ಪ್ರತಿಭೆ ಎನ್ನುವುದನ್ನು ಕೋಟ್ಯಾಧಿಪತಿಯಲ್ಲಿ ಮತ್ತೆ ಪ್ರೂವ್ ಮಾಡಿದ್ದಾರೆ. ಬಂದು ಹೋಗುವ ಎರಡೂ ತಾಸು ನಗೆಬುಗ್ಗೆ ಸಾಗುತ್ತಾರೆ ಜಗ್ಗೇಶ್. ಪುನೀತ್ ರಾಜಕುಮಾರ್ ಅವರಂತೂ ಪ್ರತೀ ಹಂತದಲ್ಲೂ ನಕ್ಕು ನಕ್ಕು ಸುಸ್ತಾದರು.ಜಗ್ಗೇಶ್ ಗೆದ್ದ ಮೊತ್ತವನ್ನು ಶಿಕ್ಷಣ ಸಂಸ್ಥೆಗೆ ಕೊಡಲಿದ್ದಾರೆ.
ಕೋಟ್ಯಾಧಿಪತಿ ಬಗ್ಗೆ ಶಹಬ್ಬಾಸ್ ಎಂದ ಜಗ್ಗೇಶ್
ಕೋಟ್ಯಾಧಿಪತಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ನವರಸ ನಾಯಕ ಜಗ್ಗೇಶ್, ಇದೊಂದು ಅಪರೂಪದ ಹಾಗೂ ಅದ್ಭುತವಾದ ಕಾರ್ಯಕ್ರಮವಾಗಿದ್ದು, ಪುನೀತ್ ರಾಜಕುಮಾರ್ ಅವರು ನಡೆಸಿಕೊಡುವ ರೀತಿ, ಸುವರ್ಣ ವಾಹಿನಿ ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿಸುತ್ತಿರುವ ರೀತಿ ತುಂಬಾ ಇಷ್ಟವಾಗಿದೆ ಎಂದು ಮನದಾಳದ ಮಾತುಗಳನ್ನಾಡಿದರು.
ಹಾಟ್ ಸೀಟ್ ನಲ್ಲಿ ರಮ್ಯಾ!
ರಮ್ಯಾ ಮತ್ತೆ ಕೋಟ್ಯಾಧಿಪತಿ ಸೀಸನ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ನಂತರದ ಎಪಿಸೋಡ್ ನಲ್ಲಿ ರಮ್ಯಾ ಕೋಟಿ ಗೆಲ್ಲುವ ಆಟ ಆಡಲಿದ್ದಾರೆ. ರಮ್ಯಾ ಕೋಟ್ಯಾಧಿಪತಿಯ ಮೊದಲನೇ ಸಂಚಿಕೆಯಲ್ಲೂ ಭಾಗವಹಿಸಿದ್ದರು. ರಮ್ಯಾ ಈ ಸಾರಿಯೂ ಒಂದಷ್ಟು ತಮ್ಮ ವೃತ್ತಿಬದುಕಿನ ಕೌತುಕ ವಿಷಯಗಳನ್ನು ಹಾಟ್ ಸೀಟ್ನಲ್ಲಿ ಕೂತು ಹಂಚಿಕೊಂಡಿದ್ದಾರೆ.
ರಾಘಣ್ಣ ಜೊತೆ ರಮ್ಯಾ ಸ್ಟೆಪ್ಸ್!
ಕಾರ್ಯಕ್ರಮದಲ್ಲಿ ನಟಿ ರಮ್ಯಾ ಹಾಗೂ ರಾಘವೇಂದ್ರ ರಾಜಕುಮಾರ್ ನಂಜುಂಡಿ ಕಲ್ಯಾಣ ಚಿತ್ರದ ನಿಜವ ನುಡಿಯಲೇ ನನ್ನಾಣೆನಲ್ಲೇ ಪ್ರೀತಿಯ ರಂಗೂ ಚೆಲ್ಲಿದೆ.. ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಮ್ಯಾ ಬಾಲ್ಯದ ದಿನಗಳಲ್ಲಿ ತುಂಬಾ ಇಷ್ಟಪಟ್ಟಿದ್ದ ಈ ಹಾಡಿಗೆ ತಾನು ರಾಘಣ್ಣನ ಜೊತೆ ಹೆಜ್ಜೆ ಹಾಕಲೇಬೇಕು ಎಂದು ಹಠ ಮಾಡಿ, ಕೋಟ್ಯಾಧಿಪತಿ ವೇದಿಕೆಗೆ ರಾಘಣ್ಣನನ್ನು ಕರೆದುಕೊಂಡು ಪುನೀತ್ ಸಮ್ಮುಖದಲ್ಲಿ ಸ್ಟೆಪ್ ಹಾಕಿದ್ದಾರೆ ರಮ್ಯಾ.
ಅಪ್ಪು ಪ್ರಶ್ನೆಗೆ ಶಾಕ್ ಆದ ರಮ್ಯಾ!
ರಮ್ಯಾಗೆ ಸೀಸನ್ 2ನಲ್ಲಿ ಒಂದು ಪ್ರಶ್ನೆ ಕೇಳುತ್ತಿದ್ದಂತೇ ಶಾಕ್ ಆದರು. ಅದಕ್ಕೆ ಕಾರಣ, ಮೊದಲನೇ ಸೀಸನ್ ನಲ್ಲಿ ಕೇಳಿದ 11ನೇ ಪ್ರಶ್ನೆಯನ್ನೇ ಕೇಳಿ ಬೆಚ್ಚಿ ಬೀಳಿಸಿದರು. ರವೆ ಇಡ್ಲಿ ಪ್ರಶ್ನೆಗೆ ಹಿಂದಿನ ಸೀಸನ್ ನಲ್ಲಿ ಸೋತಿದ್ದನ್ನು ನೆನಪಿಟ್ಟುಕೊಂಡು ರಮ್ಯಾ, ಆ ಪ್ರಶ್ನೆಯನ್ನು ಕೇಳಲೇಬೇಡಿ ಎಂದು ಹೇಳಿ ಬೇರೆ ಪ್ರಶ್ನೆ ಹಾಕಿಸಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಮ್ಯಾ ಈ ಸರಣಿಯಲ್ಲಿ ಗೆದ್ದ ಹಣವನ್ನು ವಿಷ್ಣುಪ್ರಿಯೆ ಎಂಬ ವೃದ್ಧಾಶ್ರಮಕ್ಕೆ ಚಾರಿಟಿ ನೀಡಲಿದ್ದಾರೆ. ರಮ್ಯಾ ವಿಶೇಷ ಸಂಚಿಕೆ ಇದೇ 26 ರಂದು ಪ್ರಸಾರವಾಗಲಿದೆ.
ಪ್ರಿಯಾಮಣಿ ಜೊತೆ ಹೊಸ ಗಾನ ಬಜಾನಾ!
ಪಂಚಭಾಷಾ ತಾರೆ ಪ್ರಿಯಾಮಣಿ ಈ ವೇದಿಕೆಯಲ್ಲಿ ಕೋಟಿ ಗೆಲ್ಲುವ ಆಟವಾಡಲಿದ್ದಾರೆ. ಪುನೀತ್ ಕೇಳುವ ಪ್ರಶ್ನೆಗೆ ಪ್ರಿಯಾಮಣಿ ಒಮ್ಮೆ ಕನ್ನಡದಲ್ಲಿ, ಇನ್ನೊಮ್ಮೆ ತೆಲುಗಿನಲ್ಲಿ, ಮಗದೊಮ್ಮೆ ಮಲಯಾಳಂನಲ್ಲಿ, ಹಿಂದಿಯಲ್ಲಿ, ತಮಿಳಿನಲ್ಲಿ ಉತ್ತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಿಯಾಮಣಿ ಇನ್ ಕೆಬಿಸಿ ಕನ್ನಡ
ಪ್ರಿಯಾಮಣಿ ಆಟ ಆಡುತ್ತಾ ಆಡುತ್ತಾ ನಟಿ ಜಾಕಿ ಭಾವನಾ, ಬಾಲಿವುಡ್ ನಟ ಆಶಿಷ್ ವಿದ್ಯಾರ್ಥಿ ಮೊದಲಾದವರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ತಂದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಜೊತೆ ಹೊಸಾ ಗಾನ ಬಜಾನಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪರಿಕ್ರಮ ಫೌಂಢೇಷನ್ ಎಂಬ ಅನಾಥಾಶ್ರಮಕ್ಕೆ ಚಾರಿಟಿಯಾಗಿ ಗೆದ್ದ ಮೊತ್ತವನ್ನು ನೀಡಲಿದ್ದಾರೆ.