twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸಿಗೇ ಧಮ್ಕಿ ಹಾಕಿದ 'ಬ್ರಹ್ಮಾಂಡ' ಗುರೂಜಿ!

    By Prasad
    |

    ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆಕಾಶವಾಣಿಯಂತೆ ಮಾತನಾಡುತ್ತ ಆದೇಶ ನೀಡುವ 'ಬಿಗ್ ಬಾಸ್'ದೇ ಅಂತಿಮ ಘೋಷವಾಕ್ಯ. ಈ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಶಿರಸಾವಹಿಸಿ ಬಿಗ್ ಬಾಸ್ ಆದೇಶವನ್ನು ಚಾಚೂತಪ್ಪದೆ ಪಾಲಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ಗ್ಯಾರಂಟಿ.

    ಬಿಗ್ ಬಾಸ್ ಆದೇಶವನ್ನು ಎಲ್ಲ ಸ್ಪರ್ಧಿಗಳು ಭಗವಂತನ ಆಜ್ಞೆಯಂತೆ ಪಾಲಿಸುತ್ತಿದ್ದಾರೆ. ಉಲ್ಟಾ ಮಾತಾಡಿದರೆ, ಏನಾದರೂ ಎಡವಟ್ಟು ಮಾತಾಡಿದರೆ ಏನಾಗುತ್ತೋ, ಎಂಥ ಶಿಕ್ಷೆಯಾಗುತ್ತೋ, ಎಲ್ಲಿ ಹೊರಹಾಕಿಸಿಕೊಳ್ಳುತ್ತೇನೋ ಎಂಬ ಭಯ ಎಲ್ಲರಲ್ಲಿ ಮನೆಮಾಡಿದೆ. ನಾನಿನ್ನು ಜಾಸ್ತಿ ದಿನ ಇಲ್ಲಿ ಇರಲ್ಲ ಎಂದು ಹೇಳುತ್ತಿರುವ ಕೆಲ ನಖರಾಮಣಿಗಳು ಕೂಡ ಬಿಗ್ ಬಾಸ್‌ಗೆ ಯಸ್ ಬಾಸ್ ಎನ್ನುತ್ತಿದ್ದಾರೆ.

    ಅಂಥದರಲ್ಲಿ ಒಬ್ಬರು ಬಿಗ್ ಬಾಸಿಗೇ ಸೆಡ್ಡು ಹೊಡೆದಿದ್ದಾರೆ. ನಾನೆಂಥೋನು ಅಂತ ನಿಮಗೆ ಗೊತ್ತಿಲ್ಲ, ಸುಮ್ನೆ ನನ್ ಮಾತು ಕೇಳಿ. ಇಲ್ಲದಿದ್ದರೆ ನಿಮಗಾರಿಗೂ ಒಳ್ಳೆಯದಾಗುವುದಿಲ್ಲ, ನಾನು ಕೆರಳಿದರೆ ಉಳಿಯುವುದೂ ಇಲ್ಲ ಎಂದು ಬಿಗ್ ಬಾಸ್‌ಗೆ ಜಬರ್ದಸ್ತ್ ಧಮ್ಕಿ ಹಾಕಿದ್ದಾರೆ. ಅವರು ಮತ್ತಾರೂ ಅಲ್ಲ, 'ಬ್ರಹ್ಮಾಂಡ' ಟಿವಿ ಕಾರ್ಯಕ್ರಮದ ಖ್ಯಾತಿಯ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ.

    ಬಿಗ್ ಬಾಸ್ ರಿಯಾಲಿಟಿ ಶೋ ಅಂದ್ರೆ ಏನೋ ಅಂದ್ಕೊಂಡು ಬಂದು, ಏನೇನೋ ಮಾಡಬಾರದ್ದನ್ನೆಲ್ಲ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು, ಬಿಗ್ ಬಾಸ್‌ನಿಂದ ಅವಮಾನಕರ ಶಿಕ್ಷೆಯನ್ನೂ ಪಡೆದಿರುವ ದೈತ್ಯ ದೇಹಿ ನರೇಂದ್ರ ಬಾಬು ಶರ್ಮಾ 11ನೇ ದಿನ ನೇರಾನೇರ ಎಚ್ಚರಿಕೆ ಕೊಟ್ಟಿದ್ದಾರೆ. ಬಿಗ್ ಬಾಸಿಗೆ ಸೆಡ್ಡು ಹೊಡೆದಿರುವ ಪರಿ ಯಾವ ರೀತಿ ಇದೆ ಅವರ ಮಾತಲ್ಲೇ ಓದಿರಿ.

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    "ನನ್ನಲ್ಲಿ ಬೇರೆಯದೇ ಆದಂಥ ಶಕ್ತಿಗಳಿವೆ. ಈ ವಾತಾವರಣಕ್ಕೆ ಅಡ್ಜಸ್ಟ್ ಆಗಕ್ಕೆ ಆಗಲ್ಲ. ಕೆಲವೊಂದು ಅಡ್ಜಸ್ಟ್ ಮಾಡ್ಕೊಂಡೆ. ಜ್ಞಾಪಕ ಇರಲಿ, ಎಷ್ಟೋ ಮಟ್ಟಿದೆ ತ್ಯಾಗ ಮಾಡಿದ್ದೇನೆ, ವಿರೋಧ ಕಟ್ಟಿಕೊಳ್ಳುವಂತೆ ನಡ್ಕೊಂಡಿದ್ದೇನೆ. ನನ್ನ ಮನಸ್ಸಾಕ್ಷಿಗೆ ಇದೆಲ್ಲ ಸರಿ ಬರಲ್ಲ. ಮಾಂಸದ ಅಡುಗೆ ಮಾಡ್ಕೊಂಡು ತಿನ್ನೋದು ನನ್ನ ಪದ್ಧತಿಯೇ ಅಲ್ಲ. ದಯವಿಟ್ಟು ನನ್ನ ಹೊರಗೆ ಕಳಿಸಲು ವ್ಯವಸ್ಥೆ ಮಾಡಿ" ಎಂದು ದೇವಿ ಮತ್ತು ಶಿವಸ್ಮರಣೆ ಮಾಡುತ್ತ ಬಿಗ್ ಬಾಸ್‌ಗೆ ಆದೇಶ ನೀಡಿದ್ದಾರೆ ಶರ್ಮಾ.

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    "ದಮ್ಮಯ್ಯ ಅಂತೀನಿ, ಹೆಂಗಾದ್ರೂ ಸರಿ, ಭಾಳ ಕಷ್ಟ ಆಗತ್ತೆ. ನನ್ಕೈಲಿ ಆಗಲ್ಲ ಆಗಲ್ಲ ಆಗಲ್ಲ. ನಾನ್ ವೆಜ್ ಪದ್ಧತಿ ನಾನು ಪಾಲಿಸುವುದೂ ಇಲ್ಲ. ಕೇಳಿಸ್ಕೊಳ್ತ ಇದ್ದೀರಿ ತಾನೆ? ತಿಳ್ಕೊಳ್ಳಿ, ಶೋ ಸರಿಯಾಗಿ ಆಗಬೇಕು ಅನ್ನುವುದು ನನ್ನ ಅಪೇಕ್ಷೆ. ಕೋಪ ರಾದ್ಧಾಂತ ಮಾಡಿಕೊಳ್ಳಬೇಡಿ. ಮನೆ ಅಂತ ಬಂದೆ, ವಿನಾಯಕ್ ಜೋಶಿ, ಅಪರ್ಣಾ ಹ್ಯಾಗೋ ಅಡ್ಡಸ್ಟ್ ಮಾಡ್ಕೊಂಡ್ರು. ಅರುಣ್ ಸಾಗರ್ ಮೊದಲಿಂದಲೂ ಮಾಡ್ಕೊಂಡು ಬಂದೋನು. ನನ್ ಕೈಲಿ ಆಗಲ್ಲ. ಈ ಮಾಂಸದಿಂದಾಗಿ ಅಡುಗೆ ಮನೆಗೆ ಕಾಲಿಡುವುದು ಕಷ್ಟ ಆಗ್ತಿದೆ" ಎಂದು ಗೋಳು ತೋಡಿಕೊಂಡಿದ್ದಾರೆ.

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಇಷ್ಟಕ್ಕೇ ನಿಲ್ಲದೆ, "ನನ್ನ ದೈವ ಶಕ್ತಿಗಳು ನಿಮಗೆ ಗೊತ್ತಿಲ್ಲ. ನನ್ನಲ್ಲಿ ಬೇರೆಯದೇ ಆದ ಶಕ್ತಿಗಳಿವೆ. ನನಗೆ ವಿಮುಕ್ತಿ ದೊರಕಿಸಿಕೊಡೋಕೆ ಅವಕಾಶ ಮಾಡಿಕೊಡಿ. ಅಮ್ಮನವರು ಬಂದು ಹೆಚ್ಚೂಕಡಿಮೆ ಆದ್ರೆ ಜಪ್ಪಯ್ಯ ಅಂದ್ರೂ ಒಳ್ಳೇದಾಗಲ್ಲ, ಓಂನಮಃ ಶಿವಾಯ, ಅಖಂಡ ಕಾಳಭೈರವ, ಆದಿಪ್ರಾಣಶಕ್ತೇನಮಃ. ಸೀರಿಯಸ್ಸಾಗಿ ಹೇಳ್ತೀನಿ, ಎಲ್ಲರಿಗೂ ಹೇಳ್ತೀನಿ, ಮಿಸ್ ಮಾಡ್ಕೊಬೇಡಿ, ಚೂರುಪಾರು ಹೆಚ್ಚುಕಡಿಮೆ ಆದ್ರೆ ಬಾಯಿಬಾಯಿ ಬಡ್ಕೊಂಡು ಬಿಡತೀರಿ" ಎಂದು ಕ್ಯಾಮೆರಾ ಮುಂದೆ ನಿಂತ್ಕೊಂಡು ನರೇಂದ್ರ ಬಾಬು ಶರ್ಮಾ ಕಟ್ಟೆಚ್ಚರಿಕೆ ಕೊಟ್ಟಿದ್ದಾರೆ.

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಈ ರೀತಿ ರಿಯಾಲಿಟಿ ಶೋ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದು, ಬಿಗ್ ಬಾಸ್ ಆದೇಶ ಪಾಲಿಸದಿರುವುದು, ತನಗೆ ತಿಳಿದಂತೆ ನಡೆದುಕೊಳ್ಳುವುದು ನರೇಂದ್ರ ಬಾಬು ಶರ್ಮಾ ಅಂಥವರಿಗೆ ಮಾತ್ರ ಸಾಧ್ಯ. ಶಾಸ್ತ್ರ, ಭವಿಷ್ಯ ಹೇಳುತ್ತ ತನ್ನ ಬಳಿಗೆ ಬರುವ, ಟಿವಿ ಮುಖಾಂತರ ತನ್ನ ಮಾತು ಕೇಳುವ ಲಕ್ಷಾಂತರ ಜನರಿಗೇ 'ಬಿಗ್ ಬಾಸ್' ತರಹ ಆಗಿದ್ದವರು ನರೇಂದ್ರ ಬಾಬು ಶರ್ಮಾ. ಈ ಬಿಗ್ ಬಾಸ್ ಅವರಿಗ್ಯಾವ ಲೆಕ್ಕ?

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಅವರ ವ್ಯಕ್ತಿತ್ವ ಹೇಗೇ ಇರಲಿ, ಅವರು ಆಡುವ ಮಾತುಗಳು (ಬೈಗುಳಗಳು) ಎಂಥವೇ ಇರಲಿ, ಅವರನ್ನು ಯಾರು ಎಷ್ಟೇ ಬೈದುಕೊಳ್ಳಲಿ, ಅವರೊಬ್ಬ ಜನರ ದಾರಿ ತಪ್ಪಿಸುವ ಜ್ಯೋತಿಷಿ ಎಂದು ಯಾರು ಬೇಕಾದರೂ ಆಡಿಕೊಳ್ಳಲಿ, ತಮ್ಮ ಮಾತುಗಳ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದವರು ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ತಮ್ಮ ಮಾತುಗಾರಿಕೆಯ ಮುಖಾಂತರವೇ ಜನಪ್ರಿಯತೆ ಗಳಿಸಿದ್ದ ನರೇಂದ್ರ ಬಾಬು ಶರ್ಮಾ ಬಿಗ್ ಬಾಸ್ ಕಾರ್ಯಕ್ರಮದ ಮುಖಾಂತರ ಎಲ್ಲ ಮಾನ ಮರ್ಯಾದೆ ಕಳೆದುಕೊಂಡಿದ್ದಾರೆ.

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಬಿಗ್ ಬಾಸಿಗೇ ಧಮ್ಕಿ ಹಾಕಿದ ಗುರೂಜಿ

    ಸೀರೆ ಉಟ್ಟುಕೊಳ್ಳು ಎಂದು ಹೇಳಿರುವುದು, ಸೀರೆ ಉಟ್ಟುಕೊಂಡು ಹೆಂಗಸರ ಎಲ್ಲ ಚಾಕರಿ ಮಾಡು ಎಂದು ಹೇಳಿರುವುದು, ಕೈಗೆ ಸರಪಳಿ ಕಟ್ಟಿಕೊಳ್ಳು ಎಂದು ಆದೇಶಿರುವುದು, ಅಡುಗೆಮನೆಯಲ್ಲಿ ಮಾಂಸ ಪದಾರ್ಥ ತಂದಿರುವುದು ಆಚಾರವಿಚಾರಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಶರ್ಮಾ ಅವರಿಗೆ ಸರಿಬಂದಿಲ್ಲ. ಅಲ್ಲೇ ಎಡವಟ್ಟು ಆಗಿರುವುದು. ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಮುಂತಾದ ಟಾಸ್ಕ್‌ಗಳನ್ನು ಅಚ್ಚುಕಟ್ಟಾಗಿ ಮಾಡಿರುವ ಶರ್ಮಾ ಅವರಿಗೆ ಇದೆಂಥ ರಿಯಾಲಿಟಿ ಶೋ ಅಂತ ಕಡೆಗೆ ಅನ್ನಿಸಿದ್ದರೂ ಅಚ್ಚರಿಯಿಲ್ಲ. ಅವರನ್ನು ಸುಮ್ಮನೆ ಹೋಗಲು ಬಿಡುವುದೇ ಹಿತಕರ ಅಲ್ಲವೆ?

    English summary
    Kannada Bigg Boss reality show in ETV Kannada channel. Astrologer Narendra Babu Sharma, of Bruhat Brahmanda fame, has challenged and warned Bigg Boss and has asked Bigg Boss to let him go. Should he be eliminated?
    Friday, April 5, 2013, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X