Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣುವರ್ಧನ್ ಸಾವಿನ ರಹಸ್ಯ ಬಿಚ್ಚಿಟ್ಟ ನಾರಾಯಣ್
ಈ ವಾರದ ಸೆಲೆಬ್ರಿಟಿ ಡೈರೆಕ್ಟರ್, ಕರ್ನಾಟಕ ಕಂಡಂತಹ ಸಿರಿವಂತ ನಿರ್ದೇಶಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, ಬಹಳ ಘನತೆಯಿಂದ ಕೂಡಿರುವಂತಹ ಕಾರ್ಯಕ್ರಮವಿದು ಎಂದರು.
ನಮ್ಮ ಮನೆಯಲ್ಲಿ ಎಲ್ಲರೂ ನಿರಂತರವಾಗಿ ಈ ಕಾರ್ಯಕ್ರಮ ನೋಡ್ತಾರೆ. ಈ ಕಾರ್ಯಕ್ರಮದ ಮೂಲಕ ಬಹಳ ಒಳ್ಳೆಯ ಸಂದೇಶ ಸಿಗುತ್ತಿದೆ ಎಂದರು ಎಸ್ ನಾರಾಯಣ್. ಚೈತ್ರದ ಪ್ರೇಮಾಂಜಲಿ ಹಾಡಿನ ಬಗ್ಗೆ ಮಾತನಾಡಿದ ನಾರಾಯಣ್, ಈ ಹೊತ್ತಿಗೂ ಜನಪ್ರಿಯವಾದ ಗೀತೆ ಎಂದರು. [ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್]
ವಿಶೇಷ ಎಂದರೆ ಆ ಹಾಡಿಗೆ ನಾವು ಕಂಪೋಸಿಂಗ್ ಗೆ ಕೂಡಲೇ ಇಲ್ಲ. ಏಕೆಂದರೆ ಹಂಸಲೇಖ ಅವರು ತುಂಬಾ ಬಿಜಿಯಾಗಿದ್ದ ದಿನಗಳವು. ಬೆಳಗ್ಗೆ ನಾಲ್ಕರಿಂದ ರಾತ್ರಿ ಹತ್ತರ ತನಕ ಅವರಿಗೆ ಕೆಲಸ ಇತ್ತು. ಆ ಸಂದರ್ಭದಲ್ಲಿ ನನ್ನದೊಂದು ಸಿನಿಮಾ ಅವರಿಗೆ. ನಾನು ಆಗ ಹೋಗಿ ಕೇಳಿಕೊಂಡಾಗ...
ಮರೀ ನನಗೆ ಪುರುಸೊತ್ತಿಲ್ಲ ಕಣೋ. ನೀನು ಸ್ಟುಡಿಯೋಗೆ ಬಂದುಬಿಡು. ಅಲ್ಲಿ ಕೆ ವಿ ರಾಜು, ರವಿಚಂದ್ರನ್, ರಾಜೇಂದ್ರ ಸಿಂಗ್ ಬಾಬು, ಡಿ ರಾಜೇಂದ್ರ ಬಾಬು ಬರ್ತಾರೆ. ಎಲ್ಲರೂ ಬರ್ತಾರೆ ನೀನು ಕೂತಿರು. ಅವರಿಗೆ ಟ್ಯೂನ್ ಗಳನ್ನು ಹಾಕ್ತಿರ್ತೀನಿ. ಅವರಿಗೆ ಬೇಡ ಎಂದು ಬಿಡ್ತಾರಲ್ಲಾ. ಅದು ನಿನಗೆ ಇಷ್ಟ ಆದರೆ ರೆಕಾರ್ಡ್ ಮಾಡಿಕೋ. ಅದೊಂದು ಚಾನ್ಸ್ ಕೊಡ್ತೀನಿ ಎಂದರು.
ಚೈತ್ರದ ಪ್ರೇಮಾಂಜಲಿ ಬೇಡ ಎಂದು ಬಿಸಾಕಿದ್ದ ಟ್ಯೂನ್
ನಾನು ಶಿಸ್ತಿನಿಂದ ಆ ಕೆಲಸ ಮಾಡಿಕೊಂಡು ಕುಳಿತೆ. ರವಿಚಂದ್ರನ್ ಬಂದು ಕಂಪೋಸಿಂಗ್ ಗೆ ಕುಳಿತುಕೊಳ್ಳೋರು. ಆಗ ಟ್ಯೂನ್ ಬಹಳ ಚೆನ್ನಾಗಿರೋದು ಆಗ ನಾನು ಬಿಟ್ಟು ಬಿಡ್ಲಿ, ಬಿಟ್ಟು ಬಿಡ್ಲಿ ಎಂದು ಮನಸ್ಸಿನಲ್ಲಿ ಕೇಳಿಕೊಳ್ಳುತ್ತಿದ್ದೆ. ಬಹಳ ಒಳ್ಳೊಳ್ಳೆಯ ಡೈರೆಕ್ಟರ್ಸ್ ಚೆನ್ನಾಗಿರುವಂತಹ ಟ್ಯೂನ್ ಗಳನ್ನು ಬೇಡ ಎಂದು ಬಿಸಾಕಿದ್ದಂತಹವು. ಅವನ್ನು ನಾನು ಆಯ್ಕೆ ಮಾಡಿಕೊಂಡೆ. ಹಾಡು ಕಾಂಪೋಸ್ ಮಾಡಿದಾಗ ಎಲ್ಲರೂ ಚಪ್ಪಾಳೆ ತಟ್ಟಿದರು. ಆದರೆ ಇನ್ನೂ ಏನೋ ಕೊರತೆ ಕಾಡುತ್ತಿತ್ತು.
ಪ್ರೇಕ್ಷಕರ ಮನಸ್ಸಿನಲ್ಲಿ ಚೆಲುವಿನ ಚಿತ್ತಾರ
ಬಳಿಕ ತಬಲಾ, ಗಿಟಾರ್, ಹಮ್ಮಿಂಗ್ ಸೇರಿಸಿ ಇನ್ನೊಂದಿಷ್ಟು ರಿಚ್ ಆಗಿ ತರಲಾಯಿತು. ಬಳಿಕ ಆ ಹಾಡು ಎಷ್ಟು ಹಿಟ್ ಆಯಿತು ಎಂಬುದು ನಿಮ್ಮೆಲ್ಲರಿಗೂ ಗೊತ್ತೇ ಇದೆ ಎಂದರು. ಇಪ್ಪತ್ತೆರಡು ವರ್ಷಗಳ ಅನುಭವ, ನೂರಾರು ಪಾತ್ರಗಳು ಹತ್ತಾರು ಕಥೆಗಳಲ್ಲಿ ಕೆಲವನ್ನು ಕಿರುತೆರೆ ವೀಕ್ಷಕರೊಂದಿಗೆ ಹಂಚಿಕೊಂಡರು. ಚೈತ್ರದ ಪ್ರೇಮಾಂಜಲಿ ಎಂಬ ಚಿತ್ರದ ಮೂಲಕ ಆರಂಭಿಸಿದ ಪ್ರೇಕ್ಷಕರ ಮನಸ್ಸಿನಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ ನಿರ್ದೇಶಕ.
ಹದಿನಾರನೇ ವಯಸ್ಸಿನಲ್ಲೇ ಬೆಂಗಳೂರಿಗೆ
ಹದಿನಾರನೇ ವಯಸ್ಸಿನಲ್ಲೇ ಭದ್ರಾವತಿಯಿಂದ ಬೆಂಗಳೂರಿಗೆ ಬಂದದ್ದು, ತಾನು ಬೆಂಗಳೂರಿಗೆ ಬರಬೇಕು ಎಂದು ಬಂದವನಲ್ಲ. ಆಗ ಚಂಚಲತೆ ಇತ್ತು. ಇಲ್ಲಿ ಇರಬಾರದು ಎನ್ನಿಸುತ್ತಿತ್ತು. ಆಗ ಲಾರಿ ಹತ್ತಿ ಎಲ್ಲಿ ಹೋಗುತ್ತೋ ಅಲ್ಲಿ ಇಳಿಸಿಬಿಡಪ್ಪಾ ಎಂದು ಹೇಳಿದ್ದೆ. ಅವನು ಬಂದು ಇಳಿಸಿದ ಮೇಲೆಯೇ ಗೊತ್ತಾಗಿದ್ದು ಇದು ಬೆಂಗಳೂರು ಎಂದು. ಇಲ್ಲಿಗೆ ಬಂದಮೇಲೆ ಪಡಬಾರದ ಕಷ್ಟಪಟ್ಟಿದ್ದೇನೆ.
ರಾಜ್ ಕಿಶೋರ್ ಬಳಿ ಕೆಲಸ ಕಲಿತ ನಾರಾಯಣ್
ಬಳಿಕ ಇಲ್ಲಿಂದ ಚೆನ್ನೈಗೆ ಹೋದೆ. ಅಲ್ಲಿ ರಾಜ್ ಕಿಶೋರ್ ಪರಿಚಯವಾಯಿತು. ಆಗ ಅವರು ಅಸೋಸಿಯೇಟ್ ಡೈರೆಕ್ಟರ್ ಆಗಿದ್ದರು. ಆಗ ಕನ್ನಡದ ಸ್ಕ್ರಿಪ್ಟ್ ಗಳನ್ನು ಕಾಪಿ ಮಾಡಲು ಯಾರೂ ಸಿಗ್ತಾ ಇರಲಿಲ್ಲ. ಆ ಕೆಲಸಕ್ಕೆ ನನ್ನನ್ನು ಸೇರಿಸಿಕೊಂಡರು. ನನ್ನ ಕೈಬರಹ ಬಹಳ ಚೆನ್ನಾಗಿತ್ತು. ಅಕ್ಷರಗಳು ಗುಂಡಗೆ, ಒತ್ತಕ್ಷರ, ಅಲ್ಪಪ್ರಾಣ, ಮಹಾಪ್ರಾಣ ಎಲ್ಲರೂ ಚೆನ್ನಾಗಿದ್ದ ಕಾರಣ ಅಲ್ಲಿಯೇ ಇರಲು ಹೇಳಿದರು.
ನನ್ನ ಮೊದಲ ಸಿನಿಮಾ ವಿಷ್ಣುವರ್ಧನ್ ಜೊತೆಗೆ
ಅಲ್ಲೇ ಶುರುವಾಗಿದ್ದು ಸಿನಿಮಾ ಗೀಳು. ಅದಾದ ಬಳಿಕ ತುಂಬಾ ಕಷ್ಟಪಟ್ಟೆ. ಆದರೆ ಅವಕಾಶಗಳು ಸಿಗಲೇ ಇಲ್ಲ. ಪುನಂ ಅವರು ರಾಜೇಂದ್ರಸಿಂಗ್ ಬಾಬು ಅವರ ಬಳಿ ಸೇರಿಸಿದರು. ನನ್ನ ಮೊದಲ ಸಿನಿಮಾ ವಿಷ್ಣುವರ್ಧನ್ ಅವರ ಜೊತೆಗೆ. ಚಿತ್ರರಂಗಕ್ಕೆ ಬಂದು ಇಂದಿಗೆ ಇಪ್ಪತ್ತೆಂಟು ವರ್ಷವಾಗಿದೆ. ಎಸ್ ಕೆ ಭಗವಾನ್ ಅವರು ನನ್ನ ಗುರುಗಳು ಎಂದು ಹೇಳಿದರು.
ನಿರ್ದೇಶಕನಾಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ
ನನ್ನ ವೃತ್ತಿಜೀವನ ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಏಕೆಂದರೆ ಈ ವೃತ್ತಿಗೆ ಅಡಿಯಿಡುತ್ತೇನೆ ಎಂದು ನನಗೆ ಅನ್ನಿಸಿಯೇ ಇರಲಿಲ್ಲ. ಈ ರೀತಿ ಸಿನಿಮಾ ನಟನಾಗುತ್ತೇನೆ, ನಿರ್ದೇಶಕನಾಗುತ್ತೇನೆ ಎಂದು ಅಂದುಕೊಂಡೇ ಇರಲಿಲ್ಲ ಎಂದರು. ಈಗ ಅಂದುಕೊಳ್ಳುತ್ತೇನೆ ಯಾವುದೋ ಒಂದು ಶಕ್ತಿ ನನ್ನನ್ನು ಇಲ್ಲಿಗೆ ಎಳೆದುಕೊಂಡು ಬಂದಿದೆಯಾ ಅಥವಾ ಅಲ್ಲಿಂದ ತಳ್ಳಿದೆಯಾ ಎಂದು. ಅಲ್ಲಿಂದ ದೇವರು ನಡೆಸಿದ್ದಾನೆ ಎಂದುಕೊಳ್ಳುತ್ತೇನೆ. ನನ್ನ ಬದುಕಿನಲ್ಲಿ ಎಲ್ಲವೂ ನಡೆದುಕೊಂಡಿ ಬಂದಿದೆ ಎಂದರು.
ವಿಷ್ಣು ಹೋಗುವ ಮುನ್ನ ನನಗೆ ಸೂಚನೆ ಕೊಟ್ಟಿದ್ದರು
ವಿಷ್ಣು ಬಗ್ಗೆ ಹೇಳಬೇಕಾದರೆ ನಾನು ಎಮೋಷನ್ ಆಗುತ್ತೇನೆ. ನಮ್ಮಿಬ್ಬರ ಸಂಬಂಧ ಹೇಳಿಕೊಳ್ಳಕ್ಕೆ ಆಗದೇ ಇರುವಂತಹದ್ದು. ನಮ್ಮಿಬ್ಬರಲ್ಲಿ ಇದ್ದಂತಹ ಸಂಬಂಧದ ಬಗ್ಗೆ ಅವರಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ. ನನ್ನನ್ನು ಯಾ ಹೊತ್ತೂ ಅವರು ನಿರ್ದೇಶಕನಾಗಿ ನೋಡಿಯೇ ಇಲ್ಲ. ಅವರು ಹೋಗುವ ಮುನ್ನ ನನಗೆ ಸೂಚನೆ ಕೊಟ್ಟಿದ್ದರು.
ವಿಷ್ಣುವರ್ಧನ್ ಕೊನೆಯ ಆಸೆ ಬಾಬಾ ಪಾತ್ರ
ಅವರು ಬಾಬಾ ಪಾತ್ರ ಮಾಡಬೇಕು ಎಂದು ಬಯಸಿದ್ದರು. ಅದನ್ನು ನೀವು ಡೈರೆಕ್ಟ್ ಮಾಡಬೇಕು. ಅದು ನನ್ನ ಕೊನೆ ಸಿನಿಮಾ ಆಗಬೇಕು ಎಂದು ಹೇಳಿದರು. ಅದಕ್ಕೆ ನಾನು ಕೊನೆ ಸಿನಿಮಾ ಎಂದರೆ ನಾನು ಮಾಡಲ್ಲ ಎಂದೆ. ಯಾಕೆ ಅಂದರು, ಅಣ್ಣಾವ್ರ ಸಿನಿಮಾ ನನಗೆ ಕೊನೆ ಸಿನಿಮಾ ಆಗೋಯ್ತು. ನನ್ನ ಜೀವನದಲ್ಲಿ ಅದು ಬಲು ದೊಡ್ಡ ದುಃಖ. ನಾನು ಡೈರೆಕ್ಟ್ ಮಾಡಿ ಅದು ಕೊನೆ ಸಿನಿಮಾ ಆಗೋಯ್ತಲ್ಲಾ ಎಂದು ತುಂಬಾ ನೊಂದುಕೊಂಡಿದ್ದೇನೆ.
ಶಿರಡಿ ಹೋಗಿ ಎಂದು ಆಜ್ಞೆ ಮಾಡಿದ್ದರು
ವಿಷ್ಣುವರ್ಧನ್ ಅವರಿಗೆ ನಾನು ಮಾಡುವುದು ಕೊನೆ ಸಿನಿಮಾ ಆಗಬೇಕಾದರೆ ನಾನೇಕೆ ಮಾಡಬೇಕು ಎಂದೆ. ಅಯ್ಯೋ ಆ ರೀತಿ ಅಂದುಕೋ ಬೇಡಿ. ಅದು ಆದ ಮೇಲೆ ಇನ್ನೂ ಒಂದು ಸಿನಿಮಾ ಮಾಡ್ತೀನಿ ಎಂದರು. ಬಳಿಕ ಅವರು ಒಂದು ಮಾತು ಹೇಳಿದರು. ನೀವು ಶಿರಡಿಗೆ ಹೋಗಿ ಅಲ್ಲಿ ಬಾಬ ನಿಮಗೆ ಏನು ಹೇಳ್ತಾನೋ ಹಾಗೆ ಮಾಡಿ ಎಂದರು. ನಾನು ಶಿರಡಿಗೆ ಹೋಗಿಯೇ ಇರಲಿಲ್ಲ. ಅದನ್ನು ನಾನು ಸೀರಿಯಸ್ ಆಗಿ ಪರಿಗಣಿಸಲೇ ಇಲ್ಲ.
ಶಿರಡಿಗೆ ಹೋಗಲೇಬೇಕು ಎಂದರು
ಒಂದು ವಾರದ ಬಳಿಕ ವಿಷ್ಣು ಫೋನ್ ಮಾಡಿದರು, ನಾನು ವಿಷ್ಣುವರ್ಧನ್ ಮಾತಾಡ್ತಾ ಇದ್ದೀನಿ. ನೀವು ಶಿರಡಿಗೆ ಹೋಗಲಿಲ್ಲಾ ಅಲ್ವಾ, ನಮ್ಮ ಮಾತಿಗೆ ಏನೂ ಬೆಲೆ ಇಲ್ಲ ಅಲ್ವಾ, ವಿಷ್ಣುವರ್ಧನ್ ರನ್ನು ನೀವು ಪ್ರೀತಿ ಮಾಡಲ್ಲಾ ಅಲ್ವಾ ಎಂದರು. ನನ್ನನ್ನು ಗೌರವಿಸುವಂತಿದ್ದರೆ ನೀವು ಶಿರಡಿಗೆ ಹೋಗಲೇಬೇಕು ಎಂದರು. ತಕ್ಷಣ ಮಾರನೆಯ ದಿನ ಹೆಂಡತಿ ಮಕ್ಕಳೊಂದಿಗೆ ಶಿರಡಿಗೆ ಹೋದೆ.
ನೀವು ಹೋಗಿ ಅಲ್ಲಿ ಬಾಬಾ ಹೇಳ್ತಾನೆ
"ನೀವು ಹೋಗಿ ಅಲ್ಲಿ ಬಾಬಾ ಹೇಳ್ತಾನೆ" ಎಂಬ ಮಾತು ಇನ್ನೂ ತಲೆಯಲ್ಲಿ ಹಾಗೆಯೇ ಇದೆ. ಒಂದು ಗಂಟೆ ಕಾಲ ದೇವರ ಎದುರುಗಡೆ ನಿಂತಿದ್ದೇನೆ ಏನೂ ಅನ್ನಿಸಲೇ ಇಲ್ಲ. ಬಳಿಕ ರೂಮಿಗೆ ಬಂದೆವು. ಅಲ್ಲಿ ಎಲ್ಲರೂ ನಿದ್ರೆಗೆ ಜಾರಿದರು.
ಕನಸಿನಲ್ಲಿ ಬಂದಂತಹ ವ್ಯಕ್ತಿ ಅವರೇನಾ
ಆಗ ನಾನೂ ನಿದ್ದೆಗೆ ಹೊರಳಿದೆ. ಆಗ ನನನ್ನು ಕಾಡಿದಂತಹ ಒಂದು ಕನಸು ಇದು. ಆ ಕನಸಿನಲ್ಲಿ ನನ್ನ ಮನೆಯ ಒಳಗಡೆ ಒಂದು ಸಾವಾಗಿದೆ. ಆ ವ್ಯಕ್ತಿ ಯಾರು ಎಂಬುದು ನನಗೆ ಗೊತ್ತಿಲ್ಲ. ಒಂದು ಕೆಟ್ಟ ವಾತಾವರಣ, ಏನೂ ಎಂದು ಅರ್ಥವಾಗಲಿಲ್ಲ.
ವಿಷ್ಣು ಸಾವಿನ ಸುದ್ದಿ ಕೇಳಿ ಕೈಕಾಲು ಆಡಲಿಲ್ಲ
ಬಳಿಕ ಮನೆಗೆ ಹೋದೆವು. ಬೆಳಗ್ಗೆ ಮೂರೂವರೆಗೆ ಫೋನ್ ರಿಂಗ್ ಆಗುತ್ತಿದೆ. ಇಷ್ಟೊತ್ತಿಗೆ ಯಾರಪ್ಪಾ ಫೋನ್ ಮಾಡುತ್ತಿರುವುದು ಎಂದು ನೋಡಿದರೆ ಸಿನಿಮಾ ಪತ್ರಕರ್ತರಾಗಿದ್ದ ವಿಜಯ ಸಾರಥಿ. ಅವರು ಇಂದು ನಮ್ಮೊಂದಿಗಿಲ್ಲ. ಅವರು ಫೋನ್ ಮಾಡಿ ಸುಮ್ಮನೇ ಅಳುತ್ತಿದ್ದಾರೆ. ಏನಾಯಿತು ಎಂದರೆ ವಿಷ್ಣು ಹೋಗ್ಬಿಟ್ರು ಸಾರ್ ಎಂದರು. ನನಗಂತೂ ಕೈಕಾಲೇ ಆಡಲಿಲ್ಲ. ಕೈಕಾಲೆಲ್ಲಾ ನಡುಗಿತು ಕುಸಿದು ಬಿದ್ದೆ. ನನಗೆ ನಂಬಲಿಕ್ಕೇ ಆಗಲಿಲ್ಲ. ಒಂದತ್ತು ನಿಮಿಷ ಏನೂ ತೋಚಲೂ ಇಲ್ಲ.
ಕನಸಿನಲ್ಲಿ ಬಂದ ಆ ತಲೆ ಬಟ್ಟೆ ಒಂದೇ ಆಗಿತ್ತು
ಬೆಳಗ್ಗೆ ಏಳು ಗಂಟೆಗೆ ಅವರ ಮನೆಗೆ ಹೋದೆ. ಅವರ ದೇಹವನ್ನು ಮಲಗಿಸಿದ್ದಾರೆ. ಅವರ ದೇಹ ನೋಡಿದಾಗ ತಲೆಯಲ್ಲಿ ಹಳದಿ ಬಣ್ಣದ ಬಟ್ಟೆ ಕಟ್ಟಿದ್ದರು. ಈ ಬಟ್ಟೆ ನನ್ನ ಕನಸಿನಲ್ಲಿ ಬಂದಂತಹ ಶವಕ್ಕೂ ಇತ್ತು. ಕನಸಿನಲ್ಲಿ ಮುಖ ಗೊತ್ತಾಗಲಿಲ್ಲ. ಆದರೆ ಆ ತಲೆ ಬಟ್ಟೆ ಒಂದೇ ಆಗಿತ್ತು. ಅವರ ಸಾವು ನನಗೆ ತುಂಬಾ ಆಘಾತಕಾರಿಯಾಗಿತ್ತು. ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು.
ಬಾಬಾ ಹೇಳಿದ್ದು ಇದಾ ಎಂಬ ಅಚ್ಚರಿ
ಬಾಬಾ ಹೇಳ್ತಾನೆ, ಬಾಬಾ ಹೇಳ್ತಾನೆ ಎಂದರೆ ಇದನ್ನಾ ಬಾಬಾ ಹೇಳಿದ್ದು. ಅವರ ಸಾವಿನ ಸೂಚನೆ ಅವರೇ ಕೊಟ್ಟರಾ ಎಂದು ವಿಷ್ಣು ತಮಮ್ ಮನಸ್ಸಿನಲ್ಲಿ ತುಂಬಾ ಉಳಿದುಕೊಂಡಿದ್ದಾರೆ ಎಂದರು. ಈಗಲೂ ಮನಸ್ಸಿನ ನೋವಾಗುತ್ತದೆ.
ಕಾಮಿಡಿ ಪರ್ವ ಹೇಗೆ ಶುರುವಾಯಿತು
ಕಾಲೇಜು ಹೀರೋ ಚಿತ್ರದ ಮೂಲಕ ಅಚಾನಕ್ ಆಗಿ ತಾವು ಆಕ್ಟಿಂಗ್ ಗೆ ಅಡಿಯಿಟ್ಟಿದ್ದು. ಅಲ್ಲಿಂದ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಬಂದೆ. 1992 ರಿಂದ 96ರವರೆಗೆ ನನಗೆ ಸಿನಿಮಾಗಳು ಹಿಟ್ ಆಗಲಿಲ್ಲ. ಎಲ್ಲಾ ಫ್ಲಾಪ್. ಆರು ಸಿನಿಮಾ ಮಕಾಡೆ ಮಲಗಿದವು. ಆಗ ಶ್ರುತಿ ಅವರ ಡೇಟ್ ಪಡೆದು ಭಾಮಾ ಸತ್ಯಭಾಮಾ ಚಿತ್ರ ಮಾಡಿದೆ. ಅದು ಸೂಪರ್ ಹಿಟ್ ಆಯಿತು. ಅಲ್ಲಿಂದ ಮತ್ತೆ ಟ್ರ್ಯಾಕ್ ಗೆ ಬಂದಿದ್ದನ್ನು ಹೇಳಿಕೊಂಡರು.