twitter
    For Quick Alerts
    ALLOW NOTIFICATIONS  
    For Daily Alerts

    ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕಿರುತೆರೆಗೆ ಎಂಟ್ರಿ

    By Rajendra
    |

    ಜೀ ಕನ್ನಡ ವಾಹಿನಿ ಮತ್ತೊಂದು ವಿನೂತನ ಹಾಗೂ ಪ್ರಯೋಗಾತ್ಮಕ ಕಾರ್ಯಕ್ರಮ ಪ್ರಸಾರ ಮಾಡಲು ಸಜ್ಜಾಗಿದೆ. ವಿಶೇಷವಾದ ಒಂದು ಪೊಲೀಸ್ ತಂಡ ನಡೆಸುವ ಕುತೂಹಲಕಾರಿ ತನಿಖೆ ಹಾಗೂ ರೋಚಕವೆನ್ನಿಸುವಂಥ ಕತೆಯುಳ್ಳ 'ಸಿಐಡಿ ಕರ್ನಾಟಕ' ಎನ್ನುವ ಪರಿಕಲ್ಪನೆಯನ್ನು ವೀಕ್ಷಕರ ಮುಂದೆ ತರುತ್ತಿದೆ.

    'ಸಿ.ಐ.ಡಿ ಕರ್ನಾಟಕ' ಕಥಾ ಸರಣಿಯು ಇದೇ ಡಿಸೆಂಬರ್ 21 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರದಂದು ರಾತ್ರಿ 10 ಗಂಟೆಗೆ ಪ್ರಸಾರವಾಗಲಿರುವ ಅಪರಾಧ, ಕುತೂಹಲಕಾರಿ ತನಿಖೆ ಹಾಗೂ ಮಾಹಿತಿಯನ್ನೊಳಗೊಂಡ ಕಾರ್ಯಕ್ರಮ. ಎಲ್ಲ ವರ್ಗದ ವೀಕ್ಷಕರಿಗೂ ಇಷ್ಟವಾಗುವಂತೆ ತಯಾರಿಸಲಾಗಿದೆ ಎಂದು ವಾಹಿನಿ ಹೇಳಿದೆ. [ಹೊಸ ತಂತ್ರಜ್ಞಾನದಲ್ಲಿ 'ಗುಡ್ಡದ ಭೂತ' ಧಾರಾವಾಹಿ]

    ತಂಡದ ಮುಖ್ಯಸ್ಥ ಎ.ಸಿ.ಪಿ ಅರ್ಜುನ್ ಪಾತ್ರದಲ್ಲಿ 'ಎನ್ ಕೌಂಟರ್ ದಯಾನಾಯಕ್' ಚಿತ್ರದ ನಾಯಕ ನಟ ಸಚಿನ್ ಸುವರ್ಣ ಇದ್ದಾರೆ. ಹಿಂದಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಸಚಿನ್ ಸುವರ್ಣ ಪಾತ್ರದ ಪರಿಕಲ್ಪನೆಯನ್ನು ಮೆಚ್ಚಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ರಂಗಭೂಮಿ ಹಿನ್ನೆಲೆ ಇರುವ ಲೋಕೇಶ್ ಹಾಗೂ ವಿಜಯ ಜಟ್ಟಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.

    ತಂಡದಲ್ಲಿ ಖಡಕ್ ಅಧಿಕಾರಿ ಇನ್ಸ್ ಪೆಕ್ಟರ್ ಪ್ರತಾಪ್ ಆಗಿ ಅಭಿನಯಿಸುತ್ತಿರುವ ಲೋಕೇಶ್ ಈಗಷ್ಟೇ ಬಿಡುಗಡೆಯಾಗಿರುವ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರದ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಯಶಸ್ಸು ಪಡೆದಿರುವ ವಿಜಯ್ ಜಟ್ಟಿ ಇನ್ಸ್ ಪೆಕ್ಟರ್ ಸಮರ್ ಎನ್ನುವ ಡೈನಾಮಿಕ್ ಪಾತ್ರದಲ್ಲಿದ್ದಾರೆ.

    ಇನ್ಸ್ ಪೆಕ್ಟರ್ ಚಾರ್ವಿಯಾಗಿ ನಟಿಸುತ್ತಿರುವ ವೀಣಾ ಪೊನ್ನಪ್ಪ ರಾಷ್ಟ್ರಮಟ್ಟದ ಕಾರ್ ರೇಸ್ ಸ್ಪರ್ಧೆಯ ಚಾಂಪಿಯನ್ ಕೂಡ ಹೌದು. ಇವರೊಂದಿಗೆ ತೇಜು ಪೊನ್ನಪ್ಪ, ಹೇಮಂತ್ ಹಾಗೂ ಅಂಜಲಿ ಮುಖ್ಯಪಾತ್ರಗಳಲ್ಲಿದ್ದಾರೆ.

    ಇವರೆಲ್ಲ ತನಿಖೆಯ ಸುತ್ತ ಗಂಭೀರವಾಗಿ ಸಂಶೋಧನೆ ನಡೆಸುತ್ತಿದ್ದರೆ ಫೋರೆನ್ಸಿಕ್ ಡಾಕ್ಟರ್ ಉಳ್ಳಾಗಡ್ಡಿ ಆಗಿ ಖ್ಯಾತ ನಟ ನಾಗೇಂದ್ರ ಶಾ ಹದವೆನಿಸುವ ಹಾಸ್ಯ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಇವರಪಾತ್ರ ಕೊಂಚ ತಮಾಷೆಯಾಗಿದ್ದು ಗಂಭೀರತೆಯ ನಡುವೆ ಹಿತವಾಗಿ ನಗು ಉಕ್ಕಿಸುವಂತಾದ್ದಾಗಿರುತ್ತದೆ.

    CID Karnataka
    ಇನ್ನೂ ಒಂದು ವಿಶೇಷವೆಂದರೆ ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ನಟಿಸಿರುವ ಮಾಜಿ ಮಂತ್ರಿ ಶೋಭಾ ಕರಂದ್ಲಾಜೆಯವರು ಇದರಲ್ಲಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿಯಾಗಿ ವಿಶೇಷ ಅಧಿಕಾರ ನೀಡಿ 'ಸಿಐಡಿ ಕರ್ನಾಟಕ' ಎನ್ನುವ ತನಿಖಾ ಸಂಸ್ಥೆಯನ್ನು ಹುಟ್ಟುಹಾಕುವುದರ ಮೂಲಕ ಶೋಭಾ ಕರಂದ್ಲಾಜೆಯವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ನಿರ್ದೇಶಕ ಕಲಾಗಂಗೋತ್ರಿ ಮಂಜು ಅವರು 'ಸಿಐಡಿ ಕರ್ನಾಟಕ' ಕಾರ್ಯಕ್ರಮದ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.

    ಒಂದೊಂದು ಸಂಚಿಕೆಯಲ್ಲಿ ಒಂದೊಂದು ವಿಭಿನ್ನ ಹಿನ್ನೆಲೆಯ ಕುತೂಹಲಕಾರಿ ಕತೆಯನ್ನು ಪ್ರಸ್ತುತಪಡಿಸಲಾಗುತ್ತದೆ. ಸಿಐಡಿ ತಂಡ ಸಾಹಸ ಹಾಗೂ ಬುದ್ಧಿವಂತಿಕೆಯಿಂದ ಹೇಗೆ ಹಂತಕರನ್ನು ಹಿಡಿಯುತ್ತದೆ ಎನ್ನುವುದು ಈ ಪರಿಕಲ್ಪನೆಯ ಜೀವಾಳ ಎನ್ನುತ್ತಾರೆ ಕಾರ್ಯಕ್ರಮ ಉಸ್ತುವಾರಿ ಹೊತ್ತಿರುವ ಸಿದ್ದು ಕಾಳೋಜಿ.

    ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂ ಫೈಲ್ ಕಾರ್ಯಕ್ರಮ, ಯಾವುದೇ ಅಬ್ಬರ ಹಾಗು ವೈಭವೀಕರಣ ಇಲ್ಲದೆಯೂ ಅದ್ಭುತ ಯಶಸ್ಸು ಗಳಿಸಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಸುಧಾರಿತ ಹಾಗು ವಿಸ್ತೃತ ರೂಪವಾಗಿ 'ಸಿಐಡಿ ಕರ್ನಾಟಕ' ಮೂಡಿ ಬರಲಿದೆ ಎಂದು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಡಾ. ಗೌತಮ್ ಮಾಚಯ್ಯ ವಿಶ್ವಾಸ ಹೊಂದಿದ್ದಾರೆ.

    ಎಲ್ಲ 26 ಸಂಚಿಕೆಗಳು ವಿಭಿನ್ನವಾಗಿ ಮೂಡಿ ಬರಲಿದ್ದು, ಕನ್ನಡ ಕಿರುತೆರೆ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಡೋಂಟ್ ಮಿಸ್ ಇದೇ ಡಿಸೆಂಬರ್ 21 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರದಂದು ರಾತ್ರಿ 10 ಗಂಟೆಗೆ. (ಒನ್ಇಂಡಿಯಾ ಕನ್ನಡ)

    English summary
    Zee Kannada entertainment channel launched new kind of serial 'CID Karnataka', which will be aired on Saturday and Sunday from December 21st at 10-11 pm. Which deals with different cases in each episodes, features Sachin Suvarna of Encounter Dayanayak fame in the lead role. 'CID Karnataka' in which Shobha Karandlaje acting as Chief Minister of Karnataka. 
    Tuesday, December 17, 2013, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X