ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಸುಸ್ಥಿರ ಅಭಿವೃದ್ದಿಯ ಸಾಧನ. ಅಸಮಾನತೆ - ತಾರತಮ್ಯ ನಿವಾರಣೆಗೆ ಪ್ರಬಲ ಅಸ್ತ್ರ. ಸಾಮಾಜಿಕ.. ಆರ್ಥಿಕ.. ತಾಂತ್ರಿಕ.. ಸಾಂಸ್ಕೃತಿಕ ಪ್ರಗತಿಯ ಚಾಲಕ ಶಕ್ತಿಯಾಗಿ ಶಿಕ್ಷಣ ಕಾರ್ಯ ನಿರ್ವಹಿಸುತ್ತೆ.

Advertisement

ಆದರೆ ಭಾರತದಲ್ಲಿ ಶಿಕ್ಷಣ ಅಂದರೆ ವ್ಯಾಪಾರ. ಶತಾಯು ಗತಾಯು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಪೋಷಕರು ತಮ್ಮ ರಕ್ತ ಬಸಿದು ಶಾಲಾ-ಕಾಲೇಜ್‌ಗೆ ಸೇರಿಸುತ್ತಾರೆ. ಆದರೆ ವ್ಯವಸ್ಥೆಯೇ ಸರಿ ಇಲ್ಲದಿದ್ದಾಗ. ಹಲವು ಬಾರಿ ಈ ಪ್ರಯತ್ನಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತವೆ. ಪರೀಕ್ಷಾ ಹಗರಣಗಳು ಹಲವರ ಕನಸು ಮತ್ತು ಭವಿಷ್ಯಕ್ಕೆ ಕೊಳ್ಳಿ ಇಡುತ್ತವೆ. ಇದಕ್ಕೆ ತೀರಾ ಇತ್ತೀಚಿನ ನೀಟ್ ಹಗರಣಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

Advertisement

ಹಲವರ ಪ್ರಾಣ ಬಲಿ ಪಡೆದ ಹಗರಣ ಇದು. ಆದರೆ, ಅದರ ಜವಾಬ್ಧಾರಿ ಹೊರುವವರು ನಮ್ಮ ದೇಶದಲ್ಲಿ ಯಾರು ಇಲ್ಲ. ಕೇಳುವವರು ಕೂಡ ಯಾರು ಇಲ್ಲ. ಸಮಾಜದ ಇದೇ ಮೌನದ ವಿರುದ್ಧ ಕಳೆದ 18 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಲಡಾಖ್‌ನ ಪ್ರಸಿದ್ಧ ಪರಿಸರ ಕಾರ್ಯಕರ್ತ, ವಿಜ್ಞಾನಿ ಸೋನಂ ವಾಂಗ್ಚುಕ್ ಹೋರಾಡುತ್ತಿದ್ದಾರೆ. ಕಳೆದ 18 ದಿನಗಳಿಂದ ಅನ್ನ ನೀರು ಬಿಟ್ಟು ಹಗಲು ರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನ ಹದಗೆಡುತ್ತಿದೆ. ದೇಹದ ತೂಕ ಕೂಡ ಸಂಪೂರ್ಣವಾಗಿ ಇಳಿದುಹೋಗಿದೆ.

Advertisement

ಇನ್ನು ಸೋನಂ ವಾಂಗ್ಚುಕ್ ಈ ಹೋರಾಟ ಮಾಡುತ್ತಿರುವುದು ತಮ್ಮ ಸ್ವಂತ ಲಾಭಕ್ಕಾಗಲಿ ಅಥವಾ ಪಬ್ಲಿಸಿಟಿಗಾಗಲಿ ಅಲ್ಲ. ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪರೀಕ್ಷಾ ಹಗರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೋನಂ ವಾಂಗ್ಚುಕ್ ಹೋರಾಡುತ್ತಿದ್ದಾರೆ.

ಆದರೆ ವ್ಯವಸ್ಥೆಯ ಜವಾಬ್ಧಾರಿ ಹೊತ್ತವರು ಪ್ರಶ್ನಾತೀತರೂ ಅಲ್ಲ, ಹಾಗೆ ಆಗಲೂಬಾರದು. ಅದರಿಂದ ಜನಹಿತ ಮತ್ತು ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಅಂಧ ಸರ್ವಾಧಿಕಾರ ಬೆಳೆಯುತ್ತದೆ. ಅದು ದೇಶಕ್ಕೆ ಹಾನಿ. ಇದಕ್ಕೆ ಕೈಗನ್ನಡಿ ಎಂಬಂತೆ 18 ದಿನವಾದರೂ ಸೋನಂ ವಾಂಗ್ಚುಕ್ ಬಳಿ ನಮ್ಮ ಸರ್ಕಾರ ತಿರುಗಿಯೂ ನೋಡಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ನೀಡಿಲ್ಲ. ನೀಡುವ ಲಕ್ಷಣಗಳು ಕೂಡ ಕಾಣ್ತಿಲ್ಲ.

Advertisement

ಹೀಗಿರುವಾಗ ಇದೀಗ ಸೋನಂ ವಾಂಗ್ಚುಕ್ ಪರವಾಗಿ ಸೋನಾಕ್ಷಿ ಸಿನ್ಹಾ ಧ್ವನಿ ಎತ್ತಿದ್ದಾರೆ. ವ್ಯವಸ್ಥೆಯ ವಿರುದ್ದ ಕಿಡಿ ಕಾರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನಾಕ್ಷಿ ಸಿನ್ಹಾ, ನಾನು ಯಾವತ್ತು ಈ ಹಿಂದೆ ಇಂತಹ ಹೇಳಿಕೆ ನೀಡಿಲ್ಲ. ಆದರೆ, ಇನ್ನೂ ನನ್ನ ಕೈಯಿಂದ ಸುಮ್ಮನೆ ಕೂರಲು ಸಾಧ್ಯ ಇಲ್ಲ ಎಂದಿದ್ದಾರೆ.

ಈ ಹೋರಾಟ ಯಾರಿಗಾಗಿ..?

ಸೋನಂ ವಾಂಗ್ಚುಕ್ ಯಾರು..? ಅವರ ಸಾಧನೆಗಳೇನು..? ನಮ್ಮ ದೇಶಕ್ಕಾಗಿ ಅವರು ಏನೆಲ್ಲಾ ಮಾಡಿದ್ದಾರೆ. ಎಷ್ಟೆಲ್ಲ ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಿಕ್ಕಿವೆ ಎನ್ನುವುದು ನಮಗೆಲ್ಲಾ ಗೊತ್ತು ಎಂದು ಹೇಳಿರುವ ಸೋನಾಕ್ಷಿ ಸಿನ್ಹಾ, ಕಳೆದ 18 ದಿನಗಳಿಂದ ಅವರು ಉಪವಾಸ ಕೂತಿದ್ದಾರೆ, ಒಂದು ಹನಿ ನೀರು ಕೂಡ ಮುಟ್ಟಿಲ್ಲ, ಅವರ ಈ ಹೋರಾಟ ಯಾರಿಗಾಗಿ..? ನಮ್ಮ ದೇಶದ ಮಕ್ಕಳ ಭವಿಷ್ಯಕ್ಕಾಗಿ ಎಂದು ಹೇಳಿದ್ದಾರೆ.

Advertisement

ಮುಂದುವರೆದು ಮಕ್ಕಳ ಭವಿಷ್ಯ ಕತ್ತಲ ಕೂಪದಲ್ಲಿರುವುದು ಅವರಿಗೆ ಕಾಣಿಸುತ್ತಿದೆ, ಪ್ರಾಣ ಕಳೆದುಕೊಂಡ ಮಕ್ಕಳಿಗಾಗಿ ಅವರು ಹೋರಾಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದ ನಮ್ಮ ವ್ಯವಸ್ಥೆಯ ವಿರುದ್ಧ ಅವರು ಸಾರಿರುವ ಸಮರ ಇದು ಎನ್ನುವುದು ನಿಮಗೂ ಗೊತ್ತು, ನನಗೂ ಗೊತ್ತು, ಇಡೀ ದೇಶಕ್ಕೆ ಗೊತ್ತು ಎಂದು ಹೇಳಿರುವ ಸೋನಾಕ್ಷಿ ಸಿನ್ಹಾ ನಾನು ಸುಮ್ಮನೆ ಕೂರುವವಳಲ್ಲ ಎಂದು ಗುಡುಗಿದ್ದಾರೆ.

ನಾನು ಸುಮ್ಮನೆ ಕೂರಲು ಸಾಧ್ಯವಿಲ್ಲ

ನಮಗೆಲ್ಲರಿಗೂ ಸೋನಂ ವಾಂಗ್ಚುಕ್ ಅವರ ಪರಿಚಯವಿದೆ, ಆದ್ರೆ ಅವರಿಗೆ ನಮ್ಮ ಪರಿಚಯವಿಲ್ಲ. ಆದ್ರೂ ದೇಶದ ಜನರಿಗಾಗಿ, ಈ ದೇಶದ ಮಕ್ಕಳ ಭವಿಷ್ಯಕ್ಕಾಗಿ ಅವರು ಕಳೆದ 18 ದಿನಗಳಿಂದ ಊಟ ಮಾಡಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿರುವ ಸೋನಾಕ್ಷಿ ಸಿನ್ಹಾ, ತುಂಬಾ ಜನ ಈ ವಿಚಾರಕ್ಕೆ ಸಂಬಂಧಿಸಿದಂತೆ ಏನೂ ಮಾತನಾಡಲಾಗದೇ ಸುಮ್ಮನೆ ಇದ್ದಾರೆ, ಆದರೆ ನನ್ನಿಂದ ಮಾತ್ರ ಇನ್ಮುಂದೆ ಸುಮ್ಮನೆ ಇರಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಮುಂದೆ ಆಗಿದ್ದಾಗಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಮೌನವಾಗಿ ಇರುವುದಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Advertisement


ಯಾರೂ ಯಾಕೆ ಏನೂ ಕೇಳ್ತಿಲ್ಲ..?

ಇನ್ನು ಇದೇ ಸಂದರ್ಭದಲ್ಲಿ ''ಕಾಕ್ರೋಚ್ ಜನತಾ ಪಾರ್ಟಿ''ಯ ಕುರಿತು ಕೂಡ ಮಾತನಾಡಿರುವ ಸೋನಾಕ್ಷಿ ಸಿನ್ಹಾ, ಧ್ವನಿ ಎತ್ತುತ್ತಿರುವ ದೇಶದ ಯುವಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಯುವಕರು ಸತ್ಯಕ್ಕಾಗಿ ಮತ್ತು ಒಳ್ಳೆಯದಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ, ಆದರೆ ಇವರ ಮಾತುಗಳನ್ನು ಯಾರು ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನೆ ಮಾಡಿರುವ ಸೋನಾಕ್ಷಿ ಸಿನ್ಹಾ, ನಿಜ ಹೇಳಬೇಕೆಂದರೆ ಯಾರಿಗೂ ಇದರ ಬಗ್ಗೆ ಚಿಂತೆಯೇ ಇಲ್ಲ. ಯಾರೂ ಇದರ ಬಗ್ಗೆ ಚರ್ಚೆ ಮಾಡುತ್ತಿಲ್ಲ, ಮಾತನಾಡುತ್ತಿಲ್ಲ. ಕನಿಷ್ಠಪಕ್ಷ ಅವರ ಕಡೆ ತಿರುಗಿ ಕೂಡ ನೋಡ್ತಿಲ್ಲ. ಇದನ್ನೆಲ್ಲಾ ನೋಡಿ ನಾನೇಕೆ ಸುಮ್ಮನಿರಬೇಕು ಅಂತ ನಿರ್ಧರಿಸಿದೆ ಎಂದಿದ್ದಾರೆ. ನಾನು ಕೂಡ ಈ ದೇಶದ ಪ್ರಜೆ. ನನಗೂ ನಮ್ಮ ದೇಶದ ಮೇಲೆ ಕಾಳಜಿ ಇದೆ. ನಾನೇನು ದೇಶದ್ರೋಹಿಯಲ್ಲ ಹಾಗಾದ್ರೆ ನಾನೇಕೆ ಸುಮ್ಮನಿರಬೇಕು..? ಎಂದು ಕಿಡಿ ಕಾರಿದ್ದಾರೆ.

ನಡೆಯುತ್ತಿರುವುದು ಸರಿಯಲ್ಲ

ನಾನು ನಿಮಗೆ ಉಪವಾಸ ಸತ್ಯಾಗ್ರಹ ಕೈಬಿಡಿ ಅಂತ ಹೇಳುತ್ತಿಲ್ಲ ಎಂದು ಸೋನಂ ವಾಂಗ್ಚುಕ್ ಅವರನ್ನು ಉದ್ದೇಶಿಸಿ ಹೇಳಿರುವ ಸೋನಾಕ್ಷಿ ಸಿನ್ಹಾ, ನಾವೆಲ್ಲಾ ಯಾವಾಗ ಎಚ್ಚೆತ್ತುಕೊಳ್ಳುತ್ತೇವೆ ಎಂದು ನಾನು ಈ ದೇಶದ ನಾಗರಿಕರಿಗೆ ಕೇಳಲು ಬಯಸುತ್ತೇನೆ ಎಂದಿದ್ದಾರೆ.

ಅವರು ಸತ್ತ ಮೇಲೆ ಬುದ್ದಿ ಬರುತ್ತಾ ?

ಸೋನಂ ವಾಂಗ್ಚುಕ್ ಅವರನ್ನು ಕಳೆದುಕೊಂಡ ಮೇಲೆ ನಮಗೆ ಬುದ್ದಿ ಬರುತ್ತಾ..? ಅದಕ್ಕೆ ಯಾರು ಜವಾಬ್ಧಾರರು ..? ಎಂದು ಕೂಡ ಪ್ರಶ್ನೆ ಮಾಡಿರುವ ಸೋನಾಕ್ಷಿ ಸಿನ್ಹಾ ನಮ್ಮ ಕಣ್ಣೆದುರು ಈಗ ನಡೆಯುತ್ತಿರುವುದು ಖಂಡಿತವಾಗಿಯೂ ಸರಿ ಅಲ್ಲ. ನಾವು ನಮ್ಮ ಧ್ವನಿಯನ್ನು ಇನ್ನಾದರೂ ಎತ್ತಬೇಕು, ಕಣ್ಣು ತೆರೆಯಲೇಬೇಕು. ಬೇರೆಯವರು ಕಣ್ಣು ತೆರೆಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದ್ರೆ ನಾವು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ''ಜೈ ಹಿಂದ್" ಎನ್ನುವ ಮೂಲಕ ತಮ್ಮ ಮಾತು ಮುಗಿಸಿದ್ದಾರೆ.