ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.
ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿದ್ದಾರೆ. ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕೇವಲ ಬಾಲಿವುಡ್ ಮಾತ್ರವಲ್ಲ. ಆ ವುಡ್.. ಈ ವುಡ್.. ಅಷ್ಟೇ ಅಲ್ಲ. ಕನ್ನಡದಲ್ಲಿಯೂ ಕೂಡ ಹಲವರ ಖಾಯಂ ಆದಾಯದ ಮೂಲ ಕೂಡ ಈಗ ಹೋಟೆಲ್ಲೇ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಈ ಸಾಲಿಗೀಗ ಉಗ್ರಂ ಮಂಜು ಕೂಡ ಸೇರಿಕೊಂಡಿದ್ದು, ಉಗ್ರಂ ಮಂಜು ಅವರಿಗಿಂತ ಮೊದಲು ಹೋಟೆಲ್ ಉದ್ಯಮದಲ್ಲಿರುವ ಕೆಲ ಸ್ಟಾರ್ ಗಳ ವಿವರ ಈ ಕೆಳಗಿನಂತೆ ಇದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂದೆ ಸಂಜೀವ್ ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರು ಹೋಟೆಲ್ ಸರೋವರ ಎಂಬ ಹೆಸರಿನಲ್ಲಿ 5ಸ್ಟಾರ್, 7ಸ್ಟಾರ್ ಹೋಟೆಲ್ಗಳನ್ನು ಹೊಂದಿದ್ದಾರೆ. ಇದಲ್ಲದೇ ಸುದೀಪ್ ತಮ್ಮ ಸ್ನೇಹಿತನ ಜೊತೆ ಸೇರಿ ''ಕಿಚ್ಚನ ಹಳ್ಳಿಮನೆ'' ಎಂಬ ಹೋಟೆಲ್ ಆರಂಭಿಸಿದ್ದಾರೆ. ಇದನ್ನು ಅವರ ಸ್ನೇಹಿತ ನಡೆಸಿಕೊಂಡು ಹೋಗ್ತಿದ್ದಾರೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬೆಂಗಳೂರಿನ ಬನಶಂಕರಿಯಲ್ಲಿ ''ಕೋಕು ಕಿಚನ್'' ಎಂಬ ತೆರೆದಿದ್ದಾರೆ. ಲೋಕೇಶ್ ಅವರನ್ನು ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕೋಕು ಅಂತ ಕರೆಯುತ್ತಿದ್ದರಂತೆ. ಅದೇ ಹೆಸರನ್ನೇ ಸೃಜನ್ ತಮ್ಮ ರೆಸ್ಟೋರೆಂಟ್ಗೆ ಇಟ್ಟಿದ್ದಾರೆ. ಇದಲ್ಲದೇ, ಬೆಳ್ಳಂದೂರಿನಲ್ಲಿ ಸೃಜನ್ ಒಡೆತನದ ''ಸೋಚಿ'' ಎಂಬ ರೆಸ್ಟೋರೆಂಟ್ ಇದೆ. ಕನ್ನಡದ ಖ್ಯಾತ ಕಿರುತೆರೆ ಜೋಡಿಗಳಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಕೂಡ ಒಂದು. ಕಿರುತೆರೆಯಲ್ಲಿ ಮೋಡಿ ಮಾಡುತ್ತಲೇ, ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಬೆಂಗಳೂರಿನ ಹಲವಡೆ ಹೋಟೆಲ್ ಹೊಂದಿದ್ದಾರೆ. ವಿಶೇಷ ಅಂದರೆ ಉಗ್ರಂ ಮಂಜು ಅವರಂತೆಯೇ ಇವರು ಕೂಡ ಮನ ಸೋತಿದ್ದು ''ಮಂಡಿಪೇಟೆ ಪಲಾವ್''ಗೆ. ಇನ್ನು ಶೈನ್ ಶೆಟ್ಟಿ ಮತ್ತು ಕಿರಣ್ ರಾಜ್ ಕೂಡ ಹೋಟೆಲ್ ಉದ್ಯಮದಲ್ಲಿ ಪರೀಕ್ಷೆಯನ್ನು ಈ ಹಿಂದೆ ಮಾಡಿಕೊಂಡಿದ್ದಾರೆ. ಆದರೆ, ಕಾರಣಾಂತರಗಳಿಂದ ಶೈನ್ ಶೆಟ್ಟಿ ತಮ್ಮ ''ಗಲ್ಲಿ ಕಿಚನ್''ಗೆ ಬಾಗಿಲು ಹಾಕಬೇಕಾಯ್ತು. ಕಳೆದ ವರ್ಷ ತಮ್ಮ ಕನಸಿನ ''ಗಲ್ಲಿ ಕಿಚನ್''ಗೆ ಗುಡ್ ಬೈ ಶೈನ್ ಶೆಟ್ಟಿ ಗುಡ್ ಬೈ ಹೇಳಿದ್ದರು. ಆರು ವರ್ಷಗಳ ಕಾಲ ನಡೆದ ಉದ್ಯಮ. ಇದನ್ನು ಕೊನೆ ಮಾಡಬೇಕು ಎಂದಾಗ ಕಷ್ಟ ಆಗುತ್ತದೆ. ನಮ್ಮ ಜೀವನ ಚೆನ್ನಾಗಿ ನಡೆದುಕೊಂಡು ಹೋಗುವಂತೆ ಮಾಡಿ ಸಾಥ್ ನೀಡಿದ ಉದ್ಯಮ ಇದು. ನಮ್ಮನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದೆ. ನಾವು ನೋಡಿಕೊಳ್ಳಲಾಗದೆ ಅದು ಇನ್ನೇನೋ ಆಗುವುದಕ್ಕಿಂತ, ನಮ್ಮ ರೀತಿ ಅನಿವಾರ್ಯತೆ ಇರುವವರಿಗೆ ಅದನ್ನು ಹಸ್ತಾಂತರಿಸೋದು ಉತ್ತಮ ಎಂದು ಹೇಳಿದ್ದರು. ಇನ್ನು ಕಿರಣ್ ರಾಜ್ ಒಂದು ಕಾಲದಲ್ಲಿ ''ಡಯಟ್ ಆನ್ ಟೇಬಲ್'' ಎಂಬ ರೆಸ್ಟೋರೆಂಟ್ ಶುರು ಮಾಡಿದ್ದರು. ಇದರ ಕಥೆ ಆ ನಂತರ ಏನಾಯ್ತು ..? ಎನ್ನುವುದರ ಕುರಿತು ''ಗೂಗಲ್''ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಗಾಂಧಿನಗರದಲ್ಲಿ ಕೂಡ ಇದರ ಕುರಿತು ಸುದ್ದಿ ಇಲ್ಲ. ಕೇವಲ ಇವರು ಮಾತ್ರ ಅಲ್ಲ ರಿಯಲ್ ಸ್ಟಾರ್ ಉಪೇಂದ್ರ, ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ, ಬಿಗ್ ಬಾಸ್ ನೀತು ವನಜಾಕ್ಷಿ, ಹೀಗೆ ಕನ್ನಡದ ಹಲವರು ರೆಸಾರ್ಟ್, ಹೋಟೆಲ್ಗಳನ್ನು ನಡೆಸುತ್ತಿದ್ದಾರೆ. ಇನ್ನು ಪಬ್ ನಡೆಸುವರ ಸಂಖ್ಯೆ ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಕಡಿಮೆ ಇಲ್ಲ. ರಕ್ಷಿತಾ ಅವರ ತಮ್ಮ ರಾಣಾ ಅವರಿಂದ ಹಿಡಿದು ಹಲವರು ಪಬ್ ನಡೆಸುತ್ತಿದ್ದಾರೆ. ಸದ್ಯ ಕನ್ನಡದ ಈ ಸೆಲೆಬ್ರಿಟಿ ಹೊಟೇಲ್ ಉದ್ಯಮಿಗಳ ಸಾಲಿಗೆ ಉಗ್ರಂ ಮಂಜು ಕೂಡ ಸೇರಿಕೊಂಡಿದ್ದಾರೆ. ಇವರ ಈ ಹೊಸ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿ, ಹೋಟೆಲ್ ಉದ್ಯಮದಲ್ಲಿಯೂ ಕೂಡ ಉಗ್ರಂ ಮಂಜು ಹೆಸರು ಮಾಡಲಿ ಎನ್ನುವುದೇ ನಮ್ಮ ಆಶಯ.ಕಿಚ್ಚ ಸುದೀಪ್
ಸೃಜನ್ ಲೋಕೇಶ್
ಚಂದನ್ ಕುಮಾರ್-ಕವಿತಾ ಗೌಡ
ಶೈನ್ ಶೆಟ್ಟಿ ಮತ್ತು ಕಿರಣ್ ರಾಜ್
More Articles