ಗಾನಕೋಗಿಲೆ ಎಸ್. ಜಾನಕಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ತಮ್ಮ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿದ್ದಾರೆ. ಹಲವು ಭಾಷೆಗಳಲ್ಲಿ ತರಹೇವಾರಿ ಗೀತೆಗಳಿಗೆ ದನಿಯಾಗಿದ್ದಾರೆ. ಬಾಲ ಕಲಾವಿದರಿಗೂ ಹಾಡಿದ್ದಾರೆ. ಆದರೆ ಕನ್ನಡದ ಅದೊಂದು ಹಾಡು ಹಾಡುವುದು ನನಗೆ ಬಹಳ ಕಷ್ಟವಾಗಿತ್ತು ಎಂದು ಸಾಕಷ್ಟು ಬಾರಿ ಹೇಳಿದ್ದರು.
ಮಲಯಾಳಂನ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಒಮ್ಮೆ ಎಸ್. ಜಾನಕಿ ಭಾಗಿ ಆಗಿದ್ದರು. ಆ ಸಮಯದಲ್ಲಿ ಕೂಡ ಇದೇ ಕನ್ನಡ ಹಾಡಿನ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ ವೇದಿಕೆಯಲ್ಲಿ ಆ ಹಾಡನ್ನು ಕೇಳಿಸಲಾಗಿತ್ತು. ಹೌದು ಮಲಯಾಳಂ ಕಾರ್ಯಕ್ರಮದಲ್ಲಿ ಕನ್ನಡ ಹಾಡನ್ನು ಸಂಪೂರ್ಣವಾಗಿ ಪ್ರಸಾರ ಮಾಡಿದ್ದರು. ಸ್ಪರ್ಧಿಗಳೆಲ್ಲಾ ವೇದಿಕೆ ಏರಿ ಹಾಡು ಕೇಳಿದ್ದರು.
ಕನ್ನಡದ 'ಹೇಮಾವತಿ' ಚಿತ್ರದ 'ಶಿವ ಶಿವ ಎನ್ನದ ನಾಲಿಗೆ ಏಕೆ' ಹಾಡು ನನ್ನ ವೃತ್ತಿ ಜೀವನದಲ್ಲೇ ಬಹಳ ಚಾಲೆಂಜಿಂಗ್ ಆಗಿದ್ದ ಹಾಡು ಎಂದು ಎಸ್. ಜಾನಕಿ ಹೇಳುತ್ತಿದ್ದರು. ಸಿದ್ದಲಿಂಗಯ್ಯ ನಿರ್ದೇಶನದ 'ಹೇಮಾವತಿ' ಸಿನಿಮಾ 1977ರಲ್ಲಿ ತೆರೆಗೆ ಬಂದಿತ್ತು. ಎಲ್. ವೈದ್ಯನಾಥನ್ ಸಂಗೀತದ ಈ ಹಾಡಿಗೆ ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು. ಮಲಯಾಳಂನ 'ಸ್ಟಾರ್ ಸಿಂಗರ್' ಶೋನಲ್ಲಿ ಭಾಗವಹಿಸಿದ್ದ ಎಸ್. ಜಾನಕಿ ಈ ಹಾಡನ್ನು ಮೆಲುಕು ಹಾಕಿದ್ದರು. "ಕನ್ನಡದಲ್ಲಿ ಒಂದು ಹಾಡು ಹಾಡಿದ್ದೆ. ಎಂ.ಎಸ್ ಗೋಪಾಲ ಕೃಷ್ಣನ್ ವೈಲಿನ್.. ಚಿನ್ನಾಕುಟ್ಟಿ ಮೃದಂಗ.. ಥೋಡಿ ಹಾಗೂ ಅಭೋಗಿ ರಾಗಗಳನ್ನು ಸೇರಿಸಿ ಹಾಡಬೇಕಿತ್ತು. ನನಗೆ ಕ್ಲಾಸಿಕಲ್ ಗೊತ್ತಿರಲಿಲ್ಲ. ಹಾಡಲು ಹೋಗುವವರೆಗೂ ಯಾವ ಹಾಡು ಎನ್ನುವುದು ಗೊತ್ತಿರಲಿಲ್ಲ. ಅಭ್ಯಾಸ ಮಾಡಿ ಹಾಡುವುದು ಬೇರೆ. ಆದ್ರೆ ಅಲ್ಲೇ ಓದಿ ಹಾಡಿ ರೆಕಾರ್ಡಿಂಗ್ ಮಾಡುವುದು ಸುಲಭದ ಮಾತಲ್ಲ. ಹೇಮಾವತಿ ಚಿತ್ರದ ಶಿವ ಶಿವ ಎನ್ನದ ನಾಲಿಗೆ ಏಕೆ' ಹಾಡು ಕೇಳಿದ್ರೆ ನಿಮಗೆ ಅರ್ಥವಾಗುತ್ತದೆ" ಎಂದು ಜಾನಕಿ ಹೇಳಿದ್ದರು. ರಾಘವೇಂದ್ರ ಸ್ವಾಮಿ ಹಾಗೂ ತ್ಯಾಗರಾಜ ಸ್ವಾಮಿ ಪ್ರಾರ್ಥನೆ ಮಾಡುವ ಹಾಡು ಅದು. ಎಂ.ಎಸ್ ಗೋಪಾಲ ಕೃಷ್ಣನ್ ಈ ಹಾಡಲು ಸಾಧ್ಯವಿಲ್ಲ. ವೈಲಿನ್ನಲ್ಲಿ ನುಡಿಸೋಣ ಅಂದ್ರು.. ಆದ್ರೆ ವೈದ್ಯನಾಥನ್ ಅವರಿಗೆ ನಾನು ಹಾಡುತ್ತೇನೆ ಎನ್ನುವ ನಂಬಿಕೆ ಇತ್ತು. ಬದಲಾಯಿಸಿದರೆ ನನಗೆ ಅವಮಾನ. ರಾಘವೇಂದ್ರ ಸ್ವಾಮಿಗೆ ಒಂದು ರಾಗ, ತ್ಯಾಗರಾಜ ಸ್ವಾಮಿಗೆ ಒಂದು ರಾಗದಲ್ಲಿ ಹಾಡಿದೆ ಎಂದು ಜಾನಕಿ ವಿವರಿಸಿದ್ದರು. ಕೂಡಲೇ ಗಾಯಕಿ ಚಿತ್ರಾ ಈ ಹಾಡನ್ನು ವೇದಿಕೆಯಲ್ಲಿ ಎಲ್ಲರಿಗೂ ಕೇಳಿಸೋಣ ಎಂದರು. ಹಾಡು ಕೇಳಿ ಶೋ ತೀರ್ಪುಗಾರ್ತಿಯಾಗಿದ್ದ ಕೆ. ಎಸ್. ಚಿತ್ರಾ ಸೇರಿದಂತೆ ಎಲ್ಲರೂ ಜಾನಕಿ ಅಮ್ಮನ ಗಾಯನಕ್ಕೆ ತಲೆಬಾಗಿದ್ದರು. ನಾವೆಲ್ಲಾ ನಿಮ್ಮ ಕಾಲು ತೊಳೆದು ಆ ನೀರು ಕುಡಿಬೇಕು ಎಂದು ಚಿತ್ರಾ ಹೇಳಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ. ಮತ್ತೊಂದು ಕಾರ್ಯಕ್ರಮದಲ್ಲಿ ಎಸ್. ಜಾನಕಿ ಈ ಹಾಡಿನ ಬಗ್ಗೆ ಮಾತನಾಡಿದ್ದರು. ನನಗೆ ಅದು ಬಹಳ ಕಷ್ಟವಾಗಿದ್ದ ಹಾಡು ಎಂದಿದ್ದರು. ಕೂಡಲೇ ಸಾಕಷ್ಟು ಜನ ಪರಭಾಷಿಕರು ಕೂಡ ಯೂಟ್ಯೂಬ್ನಲ್ಲಿ ಹಾಡು ಹುಡುಕಿ ಕೇಳಿದ್ದರು. ಗಾನ ಕೋಗಿಲೆಯ ಕಂಠಕ್ಕೆ ಬಹುಪರಾಕ್ ಎಂದಿದ್ದರು. ಮಾತೃಭಾಷೆ ತೆಲುಗು ಆಗಿದ್ದರೂ ಕನ್ನಡ, ತಮಿಳು, ಮಲಯಾಳಂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಕನ್ನಡ ಹಾಡುಗಳನ್ನು ಹಾಡಿ ಕನ್ನಡದವರೇ ಆಗಿಬಿಟ್ಟಿದ್ದರು.More Articles