ಪುತ್ರ ಶೋಕ ನಿರಂತರ ಎನ್ನುವ ಮಾತಿದೆ. ಹೆತ್ತು ಹೊತ್ತು ಸಾಕಿದ ಮಕ್ಕಳು ಕಣ್ಮುಂದೆ ಅಗಲಿದರೆ ಆ ನೋವು ಹೆತ್ತವರಿಗೆ ಬಹಳ ಕಾಡುತ್ತದೆ. ಖ್ಯಾತ ಗಾಯಕಿ ಎಸ್. ಜಾನಕಿ ಕೆಲ ದಿನಗಳ ಹಿಂದೆ ಮಗ ಮುರಳಿಕೃಷ್ಣ ಅವರನ್ನು ಕಳೆದುಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಎಸ್. ಜಾನಕಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಗನ ಅಗಲಿಕೆ ನೋವು ಅವರನ್ನು ಬಹಳ ಕಾಡುತ್ತಿತ್ತು. ಇದೇ ವರ್ಷ ಜನವರಿ 22ರಂದು ಜಾನಕಮ್ಮನ ಮಗ ಕಿಟ್ಟು ಕೊನೆಯುಸಿರೆಳೆದಿದ್ದರು.
ಎಸ್. ಜಾನಕಿ ಮಗ ಮುರಳಿಕೃಷ್ಣ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕಿಟ್ಟು ಎಂದು ಮನೆಯಲ್ಲಿ ಅವರನ್ನು ಕರೆಯುತ್ತಿದ್ದರು. 1959ರಲ್ಲಿ ರಾಮ್ಪ್ರಸಾದ್ ಎಂಬುವವರನ್ನು ಜಾನಕಿ ಕೈ ಹಿಡಿದಿದ್ದರು. ಪತ್ನಿ ಜೊತೆ ಸದಾ ಅವರು ಇರುತ್ತಿದ್ದರು. ಸಾಂಗ್ ರೆಕಾರ್ಡಿಂಗ್ ಅಥವಾ ಯಾವುದೇ ಸಭೆ, ಸಮಾರಂಭಗಳಿಗೆ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು. 1997ರಲ್ಲಿ ರಾಮ್ ಪ್ರಸಾದ್ ತೀರಿಕೊಂಡಿದ್ದರು. ಆ ಬಳಿಕ ಮಗ ಮುರಳಿಕೃಷ್ಣ ಅಮ್ಮನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು.
ಎಸ್. ಜಾನಕಿ ಮುರಳಿ ಕೃಷ್ಣ ಬಗ್ಗೆ ತೆಲುಗು ಸಂಗೀತ ನಿರ್ದೇಶಕ ಸಾಲೂರಿ ವಾಸು ಮಾತನಾಡಿದ್ದಾರೆ. ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಎಸ್. ಜಾನಕಿ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ಜಾನಕಮ್ಮ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮಾಧ್ಯಮಗಳ ಮುಂದೆ ಬರಲು ಬಯಸುತ್ತಿರಲಿಲ್ಲ. ಹಾಗಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕಿಟ್ಟು ಅಗಲಿಕೆ ಆಕೆಗೆ ಬಹಳ ನೋವು ತಂದಿದ್ದು ನಿಜ. ಮೊದಲಿಗೆ ಚೆನ್ನೈನಲ್ಲಿ ದೊಡ್ಡ ಬಂಗಲೆ ಇತ್ತು. ಅಷ್ಟು ದೊಡ್ಡ ಮನೆ ಭಾರತದಲ್ಲಿ ಮತ್ಯಾವ ಗಾಯಕರ ಬಳಿಕ ಕೂಡ ಇರಲಿಲ್ಲ. ಇದ್ದಕ್ಕಿದಂತೆ ಆ ಮನೆ ಮಾರಿ ಹೈದರಾಬಾದ್ಗೆ ತೆರಳಿದರು ಎಂದು ಸಾಲೂರಿ ವಾಸು ಹೇಳಿದ್ದಾರೆ. ಕಿಟ್ಟು ಆಡಿಟರ್ ಆಗಿದ್ದ, ಸಿಎ ಮಾಡಿದ್ದ. ಸಿಎ ಮುಗಿಸಿ ಆಡಿಟಿಂಗ್ ಮಾಡುತ್ತಿದ್ದ. ಅಪ್ಪ ಅಗಲಿಕೆವರೆಗೆ ತಾನಾಯ್ತು ತನ್ನ ಕೆಲಸ ಆಯ್ತು ಎನ್ನುವಂತೆ ಇರುತ್ತಿದ್ದ. ಆ ಬಳಿಕ ಅಮ್ಮನ ಜವಾಬ್ದಾರಿ ವಹಿಸಿಕೊಂಡಿದ್ದ ಎಂದು ವಾಸು ತಿಳಿಸಿದ್ದಾರೆ. ಕಿಟ್ಟು ಮದುವೆ ಬಳಿಕ ರಾಮಪ್ರಸಾದ್ ನಿಧನರಾಗಿದ್ದರು. ಉಮಾ ಎಂಬ ಹುಡುಗಿ ಜೊತೆ ಕಿಟ್ಟು ಮದುವೆ ಆಯ್ತು. ಮೊದಲಿಗೆ ಡ್ಯಾನ್ಸರ್ ಆಗಿದ್ದ ಆ ಹುಡುಗಿ ಬೇಡ ಎಂದುಕೊಂಡಿದ್ರು. ಆದ್ರೆ ಆಕೆ ನಾನು ಜಾನಕಮ್ಮನ ಸೊಸೆಯಾಗಬೇಕು ಎಂದು ಹಠ ಹಿಡಿದಳು. ಹಾಗಾಗಿ ಕಿಟ್ಟು ಕೂಡ ಒಪ್ಪಿಕೊಂಡ. ಅದ್ಧೂರಿಯಾಗಿ ಮದುವೆ ನಡೀತು. ಮಗು ಹುಟ್ಟುವ ಮುನ್ನ ಜಾನಕಮ್ಮ ಹೆಸರು ಕೂಡ ಗೊತ್ತು ಮಾಡಿದ್ರು ಎಂದು ವಿವರಿಸಿದ್ದಾರೆ. ಕೊರೋನಾಗೂ ಮುನ್ನ ಮುರಳಿಕೃಷ್ಣಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಬಳಿಕ ಚೇತರಿಸಿಕೊಂಡಿದ್ರು. ಒಬ್ಬ ಮೊಮ್ಮಗಳು ಅಪಘಾತದಲ್ಲಿ ತೀರಿಕೊಂಡರು. ಮತ್ತೊಬ್ಬ ಮೊಮ್ಮಗಳು ಇದ್ದಾಳೆ. ಮರಳಿಕೃಷ್ಣ ಗಾಯನದ ಕಡೆ ಮುಖ ಮಾಡಲಿಲ್ಲ. ಮನೆಯಲ್ಲೇ ಸ್ಟುಡಿಯೋ ರೀತಿ ಮಾಡ್ಕೊಂಡು ಗಿಟಾರ್ ನುಡಿಸುತ್ತಿದ್ದ. ರಾಕ್ ಸ್ಟೈಲ್, ವೆಸ್ಟರ್ನ್ ಸ್ಟೈಲ್ ಮ್ಯೂಸಿಕ್ ಇಷ್ಟಪಡುತ್ತಿದ್ದ. ಕೊನೆ ಕೊನೆಗೆ ಮೈಸೂರಿನಲ್ಲಿ ಜಾಗ ಖರೀದಿಸಿ ತಾಯಿ, ಮಗ ಇರುತ್ತಿದ್ದರು. ಯಾಕೋ ಹೀಗೆ ಅಜ್ಞಾತವಾಸ ಎಂದು ಕೇಳಿದ್ರೆ, ವಾಸು ನಾವು ಇಲ್ಲಿ ಹಾಯಾಗಿ ಇದ್ದೀವಿ. ನೆಮ್ಮದಿಯಾಗಿ ಇದ್ದೀವಿ ಎನ್ನುತ್ತಿದ್ದ ಎಂದು ವಾಸು ಹೇಳಿದ್ದಾರೆ. ತಂದೆ ರಾಮು ರೀತಿಯಲ್ಲೇ ಮುರಳಿಕೃಷ್ಣ ಮ್ಯಾನರಿಸಂ ಇರುತ್ತಿತ್ತು. ಮಗನ ಅಗಲಿಕೆ ಬಳಿಕ ಜಾನಕಿ ಅವರನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. 'ಓ ಬೇಬಿ' ಚಿತ್ರದಲ್ಲಿ ಸುನೈನಾ ನಟನೆಯನ್ನು ಜಾನಕಮ್ಮ ಬಹಳ ಇಷ್ಟಪಟ್ಟಿದ್ದರು. ಆಕೆಯನ್ನು ನೋಡಬೇಕು, ಮಾತನಾಡಬೇಕು ಎಂದು ನನಗೆ ಹೇಳಿದ್ದರು ಎಂದು ವಾಸು ನೆನಪಿಸಿಕೊಂಡಿದ್ದರು.More Articles