ಕನ್ನಡ ಚಿತ್ರನಟ ಕಿರಣ್ ಶ್ರೀನಿವಾಸ್ ತಮ್ಮ ಹೇಳಿಕೆಗಳಿಂದ ಈಗ ಭಾರೀ ಸುದ್ದಿಯಲ್ಲಿದ್ದಾರೆ. ಹಿಂದೂ ಧರ್ಮ, ಶ್ರೀರಾಮ, ಆರ್‌ಎಸ್‌ಎಸ್‌, ಸಂವಿಧಾನ, ಜಾತಿ ತಾರತಮ್ಯ, ಹಿಂದೂ- ಮುಸ್ಲಿಂ ಸಮುದಾಯಗಳ ನಡುವಿನ ಬಿರುಕಿನ ಬಗ್ಗೆ ಅವರ ಹೇಳಿಕೆಗಳು ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಪರ ವಿರೋಧ ಮಾತುಗಳು ಕೇಳಿಬರ್ತಿದೆ. ಸಾಕಷ್ಟು ಜನ ಕಿರಣ್ ಹೇಳಿಕೆ ಬೆಂಬಲಿಸಿದ್ದಾರೆ. ಮತ್ತೆ ಕೆಲವರು ಟೀಕಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

'ಹಾಗೆ ಸುಮ್ಮನೆ' ಸೇರಿ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಕಿರಣ್ ಶ್ರೀನಿವಾಸ್ ನಟಿಸಿದ್ದರು. ಈಗ ಚಿತ್ರರಂಗದಲ್ಲಿ ಅಷ್ಟೇನು ಸಕ್ರಿಯರಾಗಿಲ್ಲ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾಕ್ರೋಚ್ ಪಾರ್ಟಿ ನಡೆಸಿದ ಪ್ರತಿಭಟನೆಗೆ ನಟ ಕಿರಣ್ ಶ್ರೀನಿವಾಸ್ ಬೆಂಬಲ ಸೂಚಿಸಿದ್ದರು. Peepal TV ಸಂದರ್ಶನದಲ್ಲಿ ಕಿರಣ್ ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಈಗ ನಾಸ್ತಿಕನಾಗಿದ್ದೀನಿ ಎಂದಿದ್ದಾರೆ. ತಾವು ಬೆಳೆದು ಬಂದ ವಾತಾವರಣ ಹೇಗಿತ್ತು? ದೇಶದಲ್ಲಿ ಸಂವಿಧಾನವನ್ನು ಯಾರೂ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ದೇಶದಲ್ಲಿ ಮುಸ್ಲಿಂ ಸೆಗ್ರಿಗೇಟೆಡ್ ಏರಿಯಾಗಳು ಯಾಕಿವೆ ಎಂದು ನಟ ಕಿರಣ್ ಶ್ರೀನಿವಾಸ್ ಪ್ರಶ್ನಿಸಿದ್ದಾರೆ. ಮುಸ್ಲಿಂ ಸಮುದಾಯದವರಿಗೆ ಬಾಡಿಗೆಗೆ ಮನೆ ಯಾಕೆ ಕೊಡಲ್ಲ ಎಂದು ಕೇಳಿದ್ದಾರೆ. ಬಸವನಗುಡಿಯಲ್ಲಿ ನಾನು ಹುಟ್ಟಿ ಬೆಳೆದಿದ್ದು. ನಮ್ಮ ಮನೆ ಬಳಿ ಒಂದು ಮುಸ್ಲಿಂ ಸಮುದಾಯದವರ ನಡೆಸುತ್ತಿದ್ದ ಖಾಸಗಿ ಶಾಲೆ ಇತ್ತು. ಅಲ್ಲೇ ನಾನು 7ನೇ ತರಗತಿವರೆಗೆ ಓದಿದ್ದು. ಅದು ಮುಸ್ಲಿಂಮರು ಹೆಚ್ಚಾಗಿದ್ದ ಏರಿಯಾ. ಅಲ್ಲಿ 70-80ರಷ್ಟು ಮಕ್ಕಳು ಮುಸ್ಲಿಂ ಸಮುದಾಯದವರು ಓದಲು ಬರುತ್ತಿದ್ದರು. ಶಿಕ್ಷಕರು ಕೂಡ ಬಹುತೇಕ ಮುಸ್ಲಿಂ ಸಮುದಾಯದವರು. ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂದಮೇಲೆ ಮುಸ್ಲಿಂ ಸಮುದಾಯದವರನ್ನು ಪ್ರತ್ಯೇಕಿಸುವುದು ಯಾಕೆ ? ಎಂದು ಕಿರಣ್ ಕೇಳಿದ್ದಾರೆ.

Advertisement

ಆರ್‌ಎಸ್‌ಎಸ್‌ಗೆ ಸೇರಿದ್ದೆ

ಆರಂಭದಲ್ಲಿ ಹಿಂದೂ- ಮುಸ್ಲಿಂ ಸಂಪ್ರದಾಯ, ಆಚಾರ-ವಿಚಾರಗಳಲ್ಲಿ ಅಂತಹ ವ್ಯತ್ಯಾಸ ಎನಿಸುತ್ತಿರಲಿಲ್ಲ. ಶಾಲೆಯಲ್ಲಿ ಯಾವುದೇ ಮುಸ್ಲಿಂ ವಿಚಾರಧಾರೆಗಳನ್ನು ಹೇರುವ ಪ್ರಯತ್ನ ಮಾಡಲಿಲ್ಲ. ಆದರೆ 3ನೇ ತರಗತಿಯಲ್ಲಿ ಓದುವಾಗ ಆರ್‌ಎಸ್‌ಎಸ್‌ ಶಾಖೆಗೆ ಸೇರಿಕೊಂಡೆ. ಬಾಬ್ರಿ ಮಸೀದಿ ಘಟನೆ ಎಲ್ಲಾ ಮುಗಿದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ನಾನು ಭಾಗವಹಿಸಿದ್ದೆ. ಆರ್‌ಎಸ್‌ಎಸ್‌ ಸೇರಿದ ಮೇಲೆ ಅವ್ರು ಹೇಳುತ್ತಿದ್ದ ಕಥೆಗಳನ್ನು ಕೇಳಿ ನಾವು- ಮುಸ್ಲಿಂ ಒಂದೇ ಅಲ್ಲ ಎಂದು ನನಗೆ ಅರ್ಥವಾಗಲು ಪ್ರಾರಂಭವಾಯಿತು ಎಂದು ಕಿರಣ್ ನೆನಪಿಸಿಕೊಂಡಿದ್ದಾರೆ.

ನನ್ನ ಅಭಿಪ್ರಾಯ ಬದಲಾಗಿತ್ತು

ಮಾತು ಮುಂದುವರೆಸಿರುವ ಕಿರಣ್ "4 ಅಥವಾ 5ನೇ ತರಗತಿಯ ಮಕ್ಕಳಿಗೆ ಹೇಳುವ ಕಥೆಗಳು ಯಾವ ರೀತಿ ಪರಿಣಾಮ ಬೀರುತ್ತೆ ಅರ್ಥವಾಗಬಹುದು. ಆರ್‌ಎಸ್‌ಎಸ್‌ ಕ್ಯಾಂಪಿಂಗ್‌ನಲ್ಲಿ ನೇರವಾಗಿ ಅಲ್ಲದೇ ಇದ್ದರೂ ಮಹಮ್ಮದ್ ಘಜ್ನಿ, ಮಹಮದ್ ಘೋರಿ ದಾಳಿ, ವಿಜಯನಗರ ಸಾಮ್ರಾಜ್ಯ ಲೂಟಿ ರೀತಿಯ ಕಥೆಗಳನ್ನು ಹೇಳುತ್ತಿದ್ರು. ಅದೆಲ್ಲಾ ನಡೆಯದೇ ಇದ್ದಿದ್ರೆ, ನಾವು ಪ್ರಪಂಚದಲ್ಲಿ ನಾವು ಮುಂದೆ ಇರ್ತಿದ್ವಿ ಎನ್ನುವಂತೆ ಹೇಳಿದ್ರು. ಅದನ್ನೆಲ್ಲಾ ಕೇಳಿ ನಮ್ಮ ದುಃಸ್ಥಿತಿಗೆ ಮುಸ್ಲಿಂಮರೇ ಕಾರಣ ಎನ್ನುವಂತಹ ಭಾವನೆ ನನ್ನಲ್ಲಿ ಬಂತು. ನಾನು ಶಾಲೆಗೆ ಹೋಗಿ ನನ್ನ ಮುಸ್ಲಿಂ ಸಹಪಾಠಿಗಳ ಜೊತೆ ಜಗಳ ಮಾಡುತ್ತಿದ್ದೆ. ನನ್ನ ಮುಸ್ಲಿಂ ಸ್ನೇಹಿತನ ಜೊತೆ ಗಣೇಶನೇ ಹೆಚ್ಚು ಎಂದು ಹೇಳಿ ವಾದ ಮಾಡಿ ಹೊಡೆದಾಡಿದ್ದೆ. ಅದಕ್ಕೆ ಕಲ್ಲು ಹಾಕಿದ್ದೆ ನಾನು" ಎಂದಿದ್ದಾರೆ.

Advertisement

26 ವರ್ಷ ಬೇಕಾಯ್ತು

ಆರ್‌ಎಸ್‌ಎಸ್‌ ಸೇರುವ ಮುನ್ನ ಹಿಂದೂ-ಮುಸ್ಲಿಂ ಎಲ್ಲಾ ಒಂದೇ ಎಂದುಕೊಂಡಿದ್ದೆ. ಆ ಬಳಿಕ ನಮಗೂ ಅವರಿಗೂ ವೈಷಮ್ಯ ಇದೆ, ಅವರನ್ನು ದ್ವೇಷಿಸಬೇಕು ಅನ್ನಿಸಿತು. ಅದೇ ಸಮಯದಲ್ಲಿ ಸ್ವದೇಶಿ ಮೂಮೆಂಟ್ ಬಗ್ಗೆ ಪ್ರೇರೇಪಿಸುತ್ತಿದ್ದರು. ನಾನು ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೆ. ಯಾವ ಮಟ್ಟಕ್ಕೆ ಅಂದ್ರೆ ಜಗಳ ಮಾಡುವ ಮಟ್ಟಕ್ಕೆ ಹೋಗಿತ್ತು. ಹಾಗಾಗಿ ನಮ್ಮ ಪೋಷಕರು ನಿಧಾನವಾಗಿ ಆರ್‌ಎಸ್‌ಎಸ್‌ ಬಿಟ್ಟು ನನ್ನನ್ನು ಸ್ವಿಮ್ಮಿಂಗ್ ಸೇರಿಕೊಳ್ಳಲು ಹೇಳಿದ್ರು. ಹಾಗಾಗಿ ಆರ್‌ಎಸ್‌ಎಸ್ ಬಿಟ್ಟೆ. ಆದರೆ ಆ ಸಮಯದಲ್ಲಿ ಮುಸ್ಲಿಮರ ವಿರುದ್ಧ ಬಿತ್ತಿದ್ದ ದ್ವೇಷದಿಂದ ನಾನು ಸಂಪೂರ್ಣವಾಗಿ ಹೊರಬರಲು 26 ವರ್ಷ ಬೇಕಾಯ್ತು.. ನಾನು ಪ್ರಯತ್ನ ಪಟ್ಟಿದ್ದಕ್ಕೆ ಆ ಕೊಳಕು ತಲೆಯಿಂದ ಹೊರಹೋಗಲು ಅಷ್ಟು ವರ್ಷ ಹಿಡಿಸಿತು ಎಂದು ಕಿರಣ್ ಹೇಳಿದ್ದಾರೆ.