ನೋಡಲು ಮುದ್ದು, ಮಾತಾಡೋದು ಮುದ್ದು ಈಕೆ ಮಾಡುವ ಪಾತ್ರಗಳು ಕೂಡ ಅಷ್ಟೇ ಮುದ್ದು. ಹೆಸರು ಮಾನ್ವಿತಾ ಹರೀಶ್. 'ಕೆಂಡಸಂಪಿಗೆ'ಯಂತೆ ಚಂದನವನಕ್ಕೆ ಬಂದು, 'ಟಗರಿ'ನಂತೆ ಮುನ್ನುಗ್ಗುತ್ತಿರುವ ಚೆಲುವೆ.
ಸ್ಟಾರ್ ನಟರ ಚಿತ್ರಗಳಿಗೆ ಲಕ್ಕಿ ನಾಯಕಿಯಾಗಿರುವ ಮಾನ್ವಿತಾಗೆ ಸೆಪ್ಟೆಂಬರ್ 11 ತುಂಬಾ ಸ್ಪೆಷಲ್. ಯಾಕಂದ್ರೆ, ಈ ದಿನ ಮಾನ್ವಿತಾ ಅವರು ಅಧಿಕೃತವಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ದಿನ.
ಹೌದು, ಮಾನ್ವಿತಾ ಹರೀಶ್ ಅಭಿನಯದ ಚೊಚ್ಚಲ ಸಿನಿಮಾ 'ಕೆಂಡಸಂಪಿಗೆ' ಬಿಡುಗಡೆಯಾಗಿ ಸೆಪ್ಟೆಂಬರ್ 11ಕ್ಕೆ ಮೂರು ವರ್ಷ ಆಗಿದೆ. ಅಲ್ಲಿಗೆ ಮಾನ್ವಿತಾ ಇಂಡಸ್ಟ್ರಿಗೆ ಬಂದು ಮೂರು ವರ್ಷ ಆಗಿದೆ.
ಈ ಮೂರು ವರ್ಷದಲ್ಲಿ ಮಾನ್ವಿತಾ ಮಾಡಿದ್ದು ಬರಿ ನಾಲ್ಕು ಸಿನಿಮಾಗಳಾದರೂ, ಪ್ರತಿಯೊಂದು ವಿಶೇಷವಾಗಿರಿಸಿಕೊಂಡಿದ್ದಾರೆ. ಮೊದಲ ಸಿನಿಮಾ ಶತದಿನ ಆಚರಿಸಿಕೊಂಡಿತ್ತು. ನಂತರ ದ್ವಾರಕೀಶ್ ಬ್ಯಾನರ್ ನಲ್ಲಿ ಮೂಡಿ ಬಂದ 50ನೇ ಸಿನಿಮಾ 'ಚೌಕ'ದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ 'ಅಪ್ಪ ಐ ಲವ್ ಯೂ' ಹಾಡು ಬಹುದೊಡ್ಡ ಹಿಟ್ ಆಯಿತು. ಇದು ಮಾನ್ವಿತಾ ವೃತ್ತಿಜೀವನದಲ್ಲಿ ಎಂದು ಮರೆಯಲಾಗದ ಹಾಡಾಗಿ ಉಳಿದಿದೆ. ಅದಾದ ಬಳಿಕ ದುನಿಯಾ ವಿಜಯ್ ಅಭಿನಯದ 'ಕನಕ' ಸಿನಿಮಾದಲ್ಲಿ ನಾಯಕಿಯಾದರು. ಅಲ್ಲಿಂದ ನೇರವಾಗಿ ಎಂಟ್ರಿ ಕೊಟ್ಟಿದ್ದು ಶಿವರಾಜ್ ಕುಮಾರ್ ಅವರ 'ಟಗರು' ಅಡ್ಡಕ್ಕೆ. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಪಡೆದ ಮಾನ್ವಿತಾ ಮತ್ತೊಮ್ಮೆ ಲಕ್ಕಿ ಎನಿಸಿಕೊಂಡರು. ಈ ಸಿನಿಮಾ ನೋಡಿ ರಾಮ್ ಗೋಪಾಲ್ ವರ್ಮಾ ಅವರು ಮಾನ್ವಿತಾ ಜೊತೆ ಸಿನಿಮಾ ಮಾಡುವುದಾಗಿ ಹೇಳಿದರು. ಹೀಗೆ, ಯಶಸ್ವಿಯಾಗಿ ಸಾಗುತ್ತಿರುವ ಮಾನ್ವಿತಾ ಪಯಣ ಮತ್ತಷ್ಟು ಯಶಸ್ವಿ ಸಿನಿಮಾಗಳ ನಿರೀಕ್ಷೆಯಲಿದೆ. ಸದ್ಯ, ರಿಲೇಕ್ಸ್ ಸತ್ಯ, ತಾರಕಾಸುರ, ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಒಂದು ಸಿನಿಮಾವನ್ನ ಮಾಡುತ್ತಿದ್ದಾರೆ. ಈ ಮೂರು ವರ್ಷದಲ್ಲಿ ಕನ್ನಡ ಕಲಾಬೀಮಾನಿಗಳಿಗೆ ಬಹಳ ಹತ್ತಿರವಾಗಿರುವ ಮಾನ್ವಿತಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಬ್ಯೂಟಿಫುಲ್ ಹಾಗೂ ಸ್ಪೆಷಲ್ ಸಿನಿಮಾಗಳನ್ನ ನೀಡಲಿ ಎಂದು ಹಾರೈಸೋಣ.