ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ವಿವಾದದ ಕೇಂದ್ರಬಿಂದುವಾಗಿದೆ. ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಅವರಿಂದಲೇ ಡಬ್ಬಿಂಗ್ ಮಾಡಿಸದೆ, ಮತ್ತೊಬ್ಬ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ ಕೂಡ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಇದೀಗ ಈ ಬೆಳವಣಿಗೆಗೆ ನಿರ್ದೇಶಕ ಹಾಗೂ ಪ್ರಜ್ವಲ್ ದೇವರಾಜ್ ಅವರ ಆಪ್ತ ಸ್ನೇಹಿತ ಪನ್ನಗಾಭರಣ ಪ್ರತಿಕ್ರಿಯೆ ನೀಡಿದ್ದು, ಗುರುದತ್ ಗಾಣಿಗ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಪನ್ನಗಾಭರಣ, "ನಾನು 'ಕರಾವಳಿ' ವಿವಾದದ ಬಗ್ಗೆ ಬಂದಿರುವ ಹಲವು ವಿಡಿಯೋಗಳನ್ನು ನೋಡಿದ್ದೇನೆ. ಗುರುದತ್ ಗಾಣಿಗ ಅವರು ತಾವು ಈ ಹಿಂದೆ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅವರೊಂದಿಗೆ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಆ ಸಿನಿಮಾಗಳಲ್ಲಿ ಆ ನಟರಿಗೆ ತಿಳಿಸದೆ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿತ್ತೇ? ಅಂತಹ ನಿರ್ಧಾರವನ್ನು ಆ ನಟರು ಒಪ್ಪಿಕೊಳ್ಳುತ್ತಿದ್ರಾ?" ಎಂದು ಪ್ರಶ್ನಿಸಿದರು.
More Articles