ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ತಿದೆ. ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್ ಎಂಬುವವರಿಗೆ ಜೀವ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಸಾಕ್ಷಿ ಹೇಳದಂತೆ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ದರ್ಶನ್ ಅಭಿಮಾನಿಗಳಾದ ಸುಹಾಸ್, ಪುನೀತ್ ಹಾಗೂ ವೇಣು ಎಂಬುವವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಸಂದೀಪ್ ಅವರಿಗೆ ವಾಟ್ಸಪ್ ಕಾಲ್ ಮಾಡಿ ಬಂಧಿತ ಆರೋಪಿಗಳ ಬೆದರಿಕೆ ಒಡ್ಡಿದಾಗಿ ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ. ಆದರೆ ಇದರ ಹಿಂದಿರುವ ಪ್ರಭಾವಿಗಳು ಯಾರು ಎನ್ನುವ ಬಗ್ಗೆ ಈ ತನಿಖೆ ನಡೆಯುತ್ತಿದೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಸಂಬಂಧಪಟ್ಟವರನ್ನು ಬಂಧಿಸಲು ಮುಂದಾಗಿದ್ದಾರೆ. ಕಿರಣ್ ರೆಡ್ಡಿ ಹಾಗೂ ಗೌರವ್ ಶೆಟ್ಟಿ ಎಂಬುವವರ ಜೊತೆ ಪ್ರಮುಖ ಆರೋಪಿ ಪುನೀತ್ ಸಂಪರ್ಕದಲ್ಲಿ ಇದ್ದ ವಿಚಾರ ಬಹಿರಂಗವಾಗಿದೆ. ಸಂಜಯ್ ನಗರದ ಬಾರ್ವೊಂದರ ಮಾಲೀಕನಿಗೆ ಆಪ್ತ ಸ್ನೇಹಿತ ಗೌರವ್ ಶೆಟ್ಟಿ ಎನ್ನುವುದು ಗೊತ್ತಾಗಿದೆ. ಈ ಬ್ಲ್ಯಾಕ್ಮೇಲ್ ಸಂಚಿನಲ್ಲಿ ಆ ಬಾರ್ ಮಾಲೀಕ ಕೂಡ ಭಾಗಿ ಆಗಿರುವ ಅನುಮಾನ ಪೊಲೀಸರಿಗೆ ಶುರುವಾಗಿದೆ. ಮೂವರು ದರ್ಶನ್ ಫ್ಯಾನ್ಸ್ ಬಂಧನವಾಗುತ್ತಿದ್ದಂತೆ ಗೌರವ್ ಶೆಟ್ಟಿ, ಕಿರಣ್ ರೆಡ್ಡಿ ಹಾಗೂ ಬಾರ್ ಮಾಲೀಕ ತಲೆಮರೆಸಿಕೊಂಡಿದ್ದಾರೆ.
ವಾಟ್ಸಪ್ ಕಾಲ್ ಮಾಡಿ ಸಂದೀಪ್ ಅವರಿಗೆ ಬೆದರಿಕೆ ಹಾಕಿರುವುದು ಮಾತ್ರವಲ್ಲ. ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಸಾಕಷ್ಟು ಕಡೆಗಳಲ್ಲಿ ಸುತ್ತಾಡಿಸಿದ್ದಾರೆ. ಈ ವೇಳೆ ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಸಿದ್ದಾರೆ ಎನ್ನಲಾಗಿದೆ. ಧೈರ್ಯ ಮಾಡಿ ಸಂದೀಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನ ಮಾಹಿತಿ ಆಧರಿಸಿ ಪೊಲೀಸರು ನಟ ದರ್ಶನ್ ಅಭಿಮಾನಿಗಳಾದ ಸುಹಾಸ್, ಪುನೀತ್ ಹಾಗೂ ವೇಣು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಆರಂಭವಾಗಿದೆ. ಒಂದು ವರ್ಷದ ಒಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ ಹಲವು ವರ್ಷಗಳಿಂದ ನಟ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ. ಡಿ ಕಂಪನಿ ಸೋಶಿಯಲ್ ಮೀಡಿಯಾ ಪೇಜ್ಗಳನ್ನು ನೋಡಿಕೊಳ್ಳುತ್ತಿದ್ದ. ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಕಾರಣಕ್ಕೆ ವಾಟ್ಸಪ್ ಕಾಲ್ನಲ್ಲಿ ಆರೋಪಿಗಳು ಮಾತನಾಡುತ್ತಿದ್ದರು ಎನ್ನುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ತುಮಕೂರಿನ ದುರ್ಗಾ ಬಾರ್ ಕ್ಯಾಶಿಯರ್ ಆಗಿದ್ದ ಸಂದೀಪ್ ಪ್ರಕರಣದ ಸಾಕ್ಷಿ ಆಗಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬರುವಾಗ ಇದೇ ಬಾರ್ನಲ್ಲಿ ಆರೋಪಿಗಳು ಮದ್ಯ ಖರೀದಿಸಿದ್ದರು. ಇವರನ್ನೆಲ್ಲಾ ನಾನು ನೋಡಿದ್ದೇನೆ ಎಂದು ಸಂದೀಪ್ ಹೇಳಿದ್ದಾರೆ. ಹಾಗಾಗಿ ಈತನಿಗೆ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎಂದು ಟಿವಿ9 ವಾಹಿನಿಯಲ್ಲಿ ವರದಿಯಾಗಿದೆ. ಆರೋಪಿಗಳು ವಾಟ್ಸಪ್ ಕಾಲ್ ದಾಖಲೆ ಅಳಿಸುವ ಪ್ರಯತ್ನ ಮಾಡಿದ್ದಾರೆ. ಅವರ ಫೋನ್ಗಳನ್ನು FSLಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ದಾಖಲೆ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ. FSL ವರಿಯಲ್ಲಿ ದರ್ಶನ್ಗೆ ಬಹಳ ಆಪ್ತರಾಗಿದ್ದ ಪ್ರಭಾವಿಗಳ ಯಾರಾದರೂ ಈ ಬೆದರಿಕೆ ಪ್ರಕರಣದಲ್ಲಿ ಭಾಗಿ ಆಗಿದ್ದಾರಾ ಎನ್ನುವ ಮಾಹಿತಿ ಬಹಿರಂಗ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಪೊಲೀಸರು ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ತಿಳಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ರದ್ದು ಮಾಡಲಾಗಿತ್ತು.More Articles