ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದೆಯಿಂದಲೂ ಕೂಡ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ.

Advertisement

ಇನ್ನೊಂದೆಡೆ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ನಮ್ಮವರು ಚಾಚು ತಪ್ಪದೇ ಪಾಲಿಸುತ್ತಾರೆ. ನಮ್ಮವರಿಗೆ ಅವಕಾಶ ನೀಡದೆ, ಬೇರೆ ಭಾಷೆಯವರಿಗೆ ಬಲೆ ಬೀಸುತ್ತಾ ಕೂರುತ್ತಾರೆ. ಚಿತ್ರರಂಗದ ಈ ಧೋರಣೆಯಿಂದ ಕೂಡ ಬೇಸತ್ತು ಹಲವರು ಬೇರೆ ಬೇರೆ ಭಾಷೆಗಳಿಗೆ ವಲಸೆ ಹೋಗಿದ್ದಾರೆ. ತಮ್ಮ ಸಾಮರ್ಥ್ಯದ ಪ್ರದರ್ಶನ ಮಾಡಿದ್ದಾರೆ. ತಮ್ಮ ಅಭಿನಯದ ಮೂಲಕ ಅಲ್ಲಿನ ಜನರ ಹೃದಯವನ್ನು ಗೆದ್ದಿದ್ದಾರೆ.

Advertisement

ಇಷ್ಟೇ ಅಲ್ಲ ಅಲ್ಲಿಯೇ ಬದುಕು ಕೂಡ ರೂಪಿಸಿಕೊಂಡಿದ್ಧಾರೆ. ಉದಾಹರಣೆಗೆ ರಜನಿಕಾಂತ್.. ಪ್ರಕಾಶ್ ರಾಜ್.. ಅರ್ಜುನ್ ಸರ್ಜಾ.. ರಶ್ಮಿಕಾ ಮಂದಣ್ಣ.. ಹೀಗೆ ಈ ಲಿಸ್ಟ್ ಬೆಳೆಯುತ್ತಲೇ ಹೋಗುತ್ತೆ. ಈ ಸಾಲಿಗೆ ಈಗ ಪ್ರಮೋದ್ ಪಂಜು ಸೇರಿಕೊಳ್ಳುವ ಎಲ್ಲ ಲಕ್ಷಣಗಳು ಕೂಡ ದಟ್ಟವಾಗಿವೆ.

ಹೌದು, ಪ್ರಮೋದ್ ಪಂಜು.. ಕನ್ನಡದ ಪ್ರತಿಭಾವಂತ ಹುಡುಗ. ಸರಿಯಾಗಿ ಹನ್ನೊಂದು ವರ್ಷಗಳ ಹಿಂದೆ ''ಗೀತಾ ಬ್ಯಾಂಗಲ್ ಸ್ಟೋರ್'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಪ್ರಮೋದ್, ಆ ನಂತರ ''ಪ್ರೀಮಿಯರ್ ಪದ್ಮಿನಿ''.. ''ಮತ್ತೆ ಉದ್ಭವ''.. ಚಿತ್ರವನ್ನು ಮಾಡಿದರು. ಡಾಲಿ ಧನಂಜಯ್ ಜೊತೆ ''ರತ್ನನ್ ಪ್ರಪಂಚ'' ಚಿತ್ರದಲ್ಲಿ ಕೂಡ ಅಬ್ಬರಿಸಿದರು. ಇಷ್ಟೇ ಅಲ್ಲ ಈ ಚಿತ್ರದಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯನ್ನು ಕೂಡ ಪ್ರಮೋದ್ ಪಡೆದರು.

Advertisement

ಆದರೆ, ಆಗಲೇ ಹೇಳಿದಂತೆ ಹಿತ್ತಲ ಗಿಡ ಮದ್ದಲ್ಲ. ಕನ್ನಡ ಚಿತ್ರರಂಗದಲ್ಲಿ ಪ್ರಮೋದ್‌ಗೆ ಸಿಗಬೇಕಿದ್ದ ಸ್ಥಾನ-ಮಾನ ಸಿಗಲಿಲ್ಲ. ಅವಕಾಶಗಳ ಹೆಬ್ಬಾಗಿಲು ಕೂಡ ತೆರೆಯಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 2021ರಿಂದ ಅಂದರೆ ''ರತ್ನನ್ ಪ್ರಪಂಚ'' ಆದ ನಂತರ ಪ್ರಮೋದ್ ಕನ್ನಡದಲ್ಲಿ ಅಭಿನಯಿಸಿದ್ದು ಕೇವಲ ಎರಡೇ ಎರಡು ಕನ್ನಡ ಚಿತ್ರಗಳಲ್ಲಿ ಮಾತ್ರ.

ಇಂಥಾ ಪ್ರಮೋದ್ ಅವರಲ್ಲಿನ ಪ್ರತಿಭೆಗೆ ಪ್ರಶಾಂತ್ ನೀಲ್ ಇನ್ನಷ್ಟು ಸಾಣೆ ಹಿಡಿದರು. ತಮ್ಮ ಜೊತೆ ತೆಲುಗು ಚಿತ್ರರಂಗಕ್ಕೆ ಕರೆದೊಯ್ದರು. ''ಸಲಾರ್'' ಚಿತ್ರದಲ್ಲಿ ಅವಕಾಶ ನೀಡಿದರು. ಸಿಕ್ಕ ಈ ಅವಕಾಶವನ್ನು ಪ್ರಮೋದ್ ಸಮರ್ಥವಾಗಿ ಬಳಸಿಕೊಂಡರು. ವ್ಯತ್ಯಾಸ ಅಂದರೆ ಕನ್ನಡದಲ್ಲಿ ಇವರನ್ನು ಕಡೆಗಣಿಸಿದರು. ತೆಲುಗಿನವರು ಈ ತಪ್ಪು ಮಾಡಲಿಲ್ಲ. ಇದಕ್ಕೆ ಪುರಾವೆಯೆ ಕಣ್ಣೆದುರು ಇರುವ ''ಲೆನಿನ್'' ಚಿತ್ರ ಮತ್ತು ಬೆಳ್ಳಿತೆರೆಯಲ್ಲಿ ಧಗಧಗಿಸುತ್ತಿರುವ ''ವಸಂತ್'' ಪಾತ್ರ.

Advertisement

ಆಂಧ್ರದೆಲ್ಲೆಡೆ ಪ್ರಮೋದ್ ಹವಾ

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಪ್ರಮೋದ್ ಅಲಿಯಾಸ್ ವಸಂತ್ ಅವರದ್ದೇ ಸದ್ದು. ಸುದ್ದಿ. ತೆಲುಗು ಚಿತ್ರರಸಿಕರಂತೂ ಪ್ರಮೋದ್ ಅಭಿನಯ ಕಂಡು ಹುಚ್ಚೆದ್ದಿದ್ದಾರೆ. ಚಿತ್ರದ ನಾಯಕ ನಟ ಅಖಿಲ್ ಅವರ ಗುಣಗಾನವನ್ನೇ ಮಾಡುವುದನ್ನು ಮರೆತಿರುವ ಹಲವರು, ಪ್ರಮೋದ್ ಆಕ್ಟ್ ಮಾಡಿರುವ ಕ್ಲಿಪ್ಸ್ ಹಂಚಿಕೊಳ್ಳುತ್ತಿದ್ದಾರೆ. ಪ್ರಮೋದ್ ಅವರ ಅಭಿನಯವನ್ನು ಮನಸಾರೆ ಹೊಗಳುತ್ತಿದ್ದಾರೆ. ತೆಲುಗು ಚಿತ್ರರಂಗಕ್ಕೆ ಒಬ್ಬ ಖಡಕ್ ವಿಲನ್ ಸಿಕ್ಕಿದ್ದಾನೆ ಎಂದು ಸಂಭ್ರಮ ಪಡುತ್ತಿದ್ದಾರೆ.

ಕೇವಲ ಪ್ರೇಕ್ಷಕರು ಮಾತ್ರ ಅಲ್ಲ, ಆಂಧ್ರದ ವಿಮರ್ಶಕರು ಕೂಡ ಪ್ರಮೋದ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು
ಅಭಿನಯಕ್ಕೆ ಬಹುಪರಾಕ್ ಹಾಕಿದ್ದಾರೆ. ಸಹಜವಾಗಿ ಇದೆಲ್ಲದರಿಂದ ಕನ್ನಡದ ಕಲಾ ಪ್ರೇಕ್ಷಕರಿಗೆ ಬೇಸರವಾಗಿದೆ. ಇಂತಹ ಒಬ್ಬ ಅತ್ಯುತ್ತಮ ಕಲಾವಿದನನ್ನು ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳಲಿಲ್ಲವಲ್ಲ ಎನ್ನುವ ಕೊರಗು ಹಲವಾರು ಕನ್ನಡ ಪ್ರೇಕ್ಷಕರಿಗೆ ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರರಂಗದ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಚರ್ಚೆ ಕಾವೇರುತ್ತಿದೆ.

Advertisement

ಏನೇ ಇರಲಿ, ಪ್ರಮೋದ್ ಸದ್ಯ ತೆಲುಗು ನಾಡಿನೆಲ್ಲೆಡೆ ಮನೆ ಮಾತಾಗಿದ್ದಾರೆ. ಇವರ ಈ ಯಶೋಗಾಥೆ ಹೀಗೆ ಮುಂದುವರೆಯಲಿ, ಇನ್ನೂ ಹೆಚ್ಚೆಚ್ಚು ಸಿನಿಮಾಗಳನ್ನು ಪ್ರಮೋದ್ ಮಾಡುವಂತಾಗಲಿ ಅನ್ನೋದೇ ನಮ್ಮ ಆಶಯ.