ಕನ್ನಡ ನಟ ಶಿವರಾಜ್ಕುಮಾರ್ ಬಹುಬೇಡಿಕೆಯ ನಟ. ತಂದೆ ಡಾ. ರಾಜ್ಕುಮಾರ್ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದು ನೂರಾರು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಹ್ಯಾಟ್ರಿಕ್ ಹೀರೊ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಎನ್ನುವ ಬಿರುದುಗಳನ್ನು ನೀಡಿ ಅಭಿಮಾನಿಗಳು ಮೆರೆಸುತ್ತಿದ್ದಾರೆ. ಆದರೆ ಪದೇ ಪದೆ ಶಿವಣ್ಣ ತಮಿಳರನ್ನು ಮೆಚ್ಚಿಸುವ ಸಾಹಸ ಮಾಡುತ್ತಲೇ ಇದ್ದಾರೆ.
70-80ರ ದಶಕದಲ್ಲಿ ಕನ್ನಡ ಚಿತ್ರರಂಗ ಮದ್ರಾಸ್ನಲ್ಲಿ ನೆಲೆಗೊಂಡಿತ್ತು. ಕನ್ನಡ ಸಿನಿಮಾ ಕಲಾವಿದರು, ತಂತ್ರಜ್ಞರು ಅಲ್ಲೇ ನೆಲೆಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಅಣ್ಣಾವ್ರು ಅಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಿದ್ದರು. ಹಾಗಾಗಿ ಶಿವಣ್ಣ, ರಾಘಣ್ಣ, ಪುನೀತ್ ಎಲ್ಲರೂ ಮದ್ರಾಸ್ನಲ್ಲೇ ಹುಟ್ಟಿ ಬೆಳೆದರು. ಇದರಲ್ಲಿ ಎರಡು ಮಾತಿಲ್ಲ. ಈ ವಿಚಾರ ಎಲ್ಲರಿಗೂ ಗೊತ್ತೇಯಿದೆ. ಇತ್ತೀಚೆಗೆ ಪದೇ ಪದೆ ಸಂದರ್ಶನಗಳಲ್ಲಿ ಈ ಮಾತನ್ನು ಶಿವಣ್ಣ ಹೇಳುತ್ತಲೇ ಇದ್ದಾರೆ. 'ಜೈಲರ್' ಸಿನಿಮಾದಲ್ಲಿ ನಟಿಸಿದ ಬಳಿಕ ಅವರ ತಮಿಳು ಪ್ರೀತಿ ಹೆಚ್ಚಾಗಿದೆ. ಪದೇ ಪದೆ ತಮಿಳಿಗರನ್ನು ಮೆಚ್ಚಿಸುವಂತೆ ಅವರು ಮಾತನಾಡುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಅಗತ್ಯ ಇಲ್ಲದೇ ಇದ್ರು ನಾನು ಚೆನ್ನೈ ಹುಡುಗ, ಚೆನ್ನೈ ಹುಡುಗ ಎಂದು ಹಳೇ ಟೇಪ್ರೆಕಾರ್ಡರ್ ಹಾಕಿ ಕೇಳಿಸುತ್ತಲೇ ಇದ್ದಾರೆ.
ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ ಮಾತನಾಡಿರುವ ಮಾತುಗಳು ವೈರಲ್ ಆಗ್ತಿದೆ. 'ಜೈಲರ್' ಚಿತ್ರದ ನಟನೆಗಾಗಿ ಶಿವಣ್ಣ ಪ್ರಶಸ್ತಿ ಸ್ವೀಕರಿಸಿ ವೇದಿಕೆಯಲ್ಲಿ ಮಾತನಾಡಿದ್ದಾರೆ. "ನೆಲ್ಸನ್ ಸರ್, ರಜನಿ ಸರ್ಗೆ ಧನ್ಯವಾದ. ರಜನಿ ಸರ್ ನಮ್ಮ ಕುಟುಂಬದಲ್ಲಿ ಒಬ್ರು ಇದ್ದಂತೆ. ತಂದೆ ರೀತಿ ಅವರನ್ನು ಗೌರವದಿಂದ ನೋಡ್ತೀನಿ. ಈ ಚಿತ್ರದಲ್ಲಿ ನಟಿಸುವಂತೆ ಕೇಳಿದಾಕ್ಷಣ ಹಿಂದು ಮುಂದು ನೋಡದೇ ಒಪ್ಪಿಕೊಂಡೆ. ಅವರೊಟ್ಟಿಗೆ ತೆರೆಹಂಚಿಕೊಳ್ಳುವುದು ಅದ್ಭುತ ಅನುಭವ" ಎಂದಿದ್ದರು. 38 ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ಈಗ ನನ್ನನ್ನು ಹೀಗೆ ಗುರ್ತಿಸುತ್ತಿರುವುದು ಖುಷಿಯಾಗ್ತಿದೆ. ಸಣ್ಣ ಪಾತ್ರ ಇಂತಹ ಜಾದೂ ಮಾಡುತ್ತೆ ಎಂದು ಗೊತ್ತಿರಲಿಲ್ಲ. ಥ್ಯಾಂಕ್ಸ್ ನೆಲ್ಸನ್ ಸರ್.. ಹಾಗ್ ನೋಡಿದ್ರೆ, ನಾನು ಚೆನ್ನೈ ಹುಡುಗ.. ನಾನು ಚೆನ್ನೈನಲ್ಲೇ ಓದಿದ್ದು. ಚೆನ್ನೈ ನನಗೆ ವಿದ್ಯಾಭ್ಯಾಸ, ಊಟ, ಇರಲು ಸೂರು ಕೊಟ್ಟಿತ್ತು.. ಈಗ ಇಲ್ಲಿ ಮತ್ತೊಂದು ಇನ್ನಿಂಗ್ಸ್ ಶುರುವಾಗಿದೆ. ತಮಿಳಿನಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸ್ತೀನಿ ಎನ್ನುವ ನಂಬಿಕೆಯಿದೆ ಎಂದಿದ್ದರು. ಇದೇ ಹೇಳಿಕೆ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚೆನ್ನೈ ನನಗೆ ವಿದ್ಯಾಭ್ಯಾಸ, ಊಟ, ಇರಲು ಸೂರು ಕೊಡ್ತು ಎಂದು ಶಿವರಾಜ್ಕುಮಾರ್ ಪದೇ ಪದೆ ಹೇಳುತ್ತಿರುವುದು ಅಭಿಮಾನಿಗಳಿಗೂ ಬೇಸರ ತಂದಿದೆ. ಶಿವಣ್ಣ ಹೇಳಿದ್ದು ಸರಿನೇ. ಆದರೆ 37 ವರ್ಷಗಳಿಂದ ಅವರ ಸಿನಿಮಾಗಳನ್ನು ನೋಡಿ ಗೆಲ್ಲಿಸಿದವರು ಕನ್ನಡಿಗರು. ಅವಕಾಶಕ್ಕಾಗಿ ಶಿವಣ್ಣ ಹೀಗೆ ಬಕೆಟ್ ಹಿಡಿಯುವುದು ಬೇಕಿರಲಿಲ್ಲ, ಸ್ವಾಭಿಮಾನ, ಆತ್ಮಗೌರವ ಮುಖ್ಯ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಶಿವಣ್ಣನಿಗೆ ಕನ್ನಡದಲ್ಲಿ ಅವಕಾಶಗಳಿಗೆ ಬರವಿಲ್ಲ. ಚೆನ್ನೈ ಹುಡುಗ ಅಂದಾಕ್ಷಣ ಅವ್ರು ಕರೆದು ಅವಕಾಶ ಕೊಡಲ್ಲ. ತಮ್ಮ ಮಾರ್ಕೆಟ್ ವಿಸ್ತರಿಸಿಕೊಳ್ಳಲು, ಬಾಕ್ಸಾಫೀಸ್ನಲ್ಲಿ ಹಣ ಮಾಡಲು ನಮ್ಮವರನ್ನು ಕರೆದು ಅವಕಾಶ ಕೊಡ್ತಾರೆ ಅಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕದಲ್ಲೇ ಹುಟ್ಟಿ ಬೆಳೆದ ರಜನಿಕಾಂತ್ ಯಾಕೆ ಕನ್ನಡದಲ್ಲಿ ಸಿನಿಮಾ ಮಾಡಲ್ಲ ಎಂದು ಇತ್ತೀಚೆಗೆ ರಾಜೇಂದ್ರ ಸಿಂಗ್ ಬಾಬು ಬೇಸರ ವ್ಯಕ್ತಪಡಿಸಿದ್ದರು. ಸ್ವತಃ ಕಿಚ್ಚ ಸುದೀಪ್ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ನಾನು, ಶಿವಣ್ಣ ಪ್ರೀತಿಯಿಂದ ಹೋಗಿ ಬೇರೆ ಭಾಷೆಗಳಲ್ಲಿ ನಟಿಸ್ತೀವಿ. ಅದೇ ನಾವು ಕರೆದ್ರು ಯಾರು ಬರಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.More Articles