ತಮಿಳುನಾಡಿನ ಕರೂರು ಕಾಲ್ತುಳಿತ ದುರಂತ ಇನ್ನು ಮಾಸಿಲ್ಲ. ಸೆಪ್ಟೆಂಬರ್ 27, 2025 ರಂದು ನಡೆದ ಕಾಲ್ತುಳಿತದಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದರು. ಟಿವಿಕೆ ಪಕ್ಷದ ನಾಯಕ ವಿಜಯ್ ರ್ಯಾಲಿಯಲ್ಲಿ ಭಾಗವಹಿಸಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ದುರಂತ ಸಂಭವಿಸಿತ್ತು. ತಮಿಳುನಾಡು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಜಯ್ ಇಂದು(ಜುಲೈ 10) ಕರೂರಿಗೆ ಭೇಟಿ ನೀಡಿದ್ದರು. ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

Advertisement

ಶೋಕ ಮತ್ತು ಒಗ್ಗಟ್ಟಿನ ಸಂಕೇತವಾಗಿ ಕಪ್ಪು ಬಟ್ಟೆ ಧರಿಸಿ ವಿಜಯ್ ಕರೂರಿಗೆ ಭೇಟಿ ನೀಡಿದ್ದರು. ಬಹಿರಂಗ ವೇದಿಕೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ವಿಜಯ್ ಮಾತನಾಡಿದ್ದರು. ಅವತ್ತು ರ್ಯಾಲಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂದು ಪೊಲೀಸರು ಮೊದಲೇ ಸೂಚಿಸಿದ್ದರೆ ನಾನು ಬರುತ್ತಿರಲಿಲ್ಲ. ಈ ಘಟನೆ ನಡೆಯುತ್ತಿರಲಿಲ್ಲ. ಬದಲಾಗಿ ಪೊಲೀಸರು ನಾಟಕ ಮಾಡಿ ನನಗೆ ದಾರಿ ಮಾಡಿಕೊಟ್ಟು ಪ್ರಚಾರದ ಬಸ್ ಏರುವಂತೆ ಮಾಡಿದ್ದರು ಎಂದು ಸಿಎಂ ವಿಜಯ್ ಆರೋಪಿಸಿದ್ದಾರೆ.

Advertisement

ನಾನು ಕರೂರಿನ ಜನರಿಗಾಗಿ ಅವತ್ತು ಇಲ್ಲಿಗೆ ಬಂದೆ, ನನಗಾಗಿ ಅಲ್ಲ. ಆದರೆ ದುರಂತಕ್ಕೆ ನನ್ನನ್ನೇ ದೂರಿದರು. ಘಟನೆ ಬಳಿಕ ಪ್ರತಿಕ್ರಿಯಿಸದೇ ಮನೆಯಲ್ಲಿ ಅವಿತು ಕುಳಿತ್ತಿದ್ದೇನೆ ಎಂದು ಆರೋಪಿಸಿದರು. ಡಿಎಂಕೆ ಈ ವಿಚಾರವನ್ನು ರಾಜಕೀಯ ಮಾಡಿಬಿಟ್ರು. ನನಗೆ ಹಣಕ್ಕಿಂತ ಜನರು ಮುಖ್ಯ.. ನಾನು ನನ್ನ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದೀನಿ. ಸಾಕಷ್ಟು ನೋವು ಅನುಭವಿಸಿದ್ದೀನಿ. ಅದೆಲ್ಲಕ್ಕಿಂತ ಕರೂರು ಕಾಲ್ತುಳಿತ ಪ್ರಕರಣ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಕರೂರು ನನ್ನ ಹೃದಯದಲ್ಲಿ ಸದಾ ಇರುತ್ತೆ ಎಂದರು. ಘಟನೆಯಲ್ಲಿ ಜೀವ ಕಳೆದುಕೊಂಡ 41 ಜನರಿಗಾಗಿ ಸ್ಮಾರಕವನ್ನು ನಿರ್ಮಿಸುವುದಾಗಿ ಘೋಷಿಸಿದರು.

Advertisement

ಜನರನ್ನು ಕಾಯಿಸುವ ಉದ್ದೇಶ ನನಗೆ ಇರಲಿಲ್ಲ. ಜನರಿಗಾಗಿ ರಾಜಕೀಯಕ್ಕೆ ಬಂದವನು ಈ ವಿಜಯ್.. ನನಗೆ ಎಲ್ಲವನ್ನು ಕೊಟ್ಟ ಜನರಿಗಾಗಿ ಎಲ್ಲಾ ಬಿಟ್ಟು ಜನರಿಗಾಗಿ ಜನರ ಸೇವೆ ಮಾಡಲು ಬಂದವನು ವಿಜಯ್.. ನಮಗೆ ಇಷ್ಟೆಲ್ಲಾ ನೋವು ಕೊಟ್ಟವರಿಗೆ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದೀರಾ. ಆದ್ರೆ ಇಷ್ಟು ಸಾಲದು. ನಿರಂತರವಾಗಿ ಮತ್ತೆ ಎದ್ದು ಬರಲು ಸಾಧ್ಯವಾಗದಂತೆ ತಿರುಗೇಟು ಕೊಡಬೇಕು. ಇಷ್ಟೆಲ್ಲಾ ಆಗಿಬಿಟ್ರೆ ನಾನು ಓಡಿ ಹೋಗ್ತೀನಿ ಅಂದುಕೊಂಡಿದ್ದಾರೆ. ಅವತ್ತು ಇವತ್ತು ಯಾವತ್ತು ನಾನು ಜನರನ್ನು ಬಿಟ್ಟು ಹೋಗಲ್ಲ. ಹಣ ಮುಖ್ಯವೋ, ಜನ ಮುಖ್ಯವೋ ಎಂದು ಕೇಳಿದ್ರೆ ಜನರೇ ನನಗೆ ಮುಖ್ಯ. ನನ್ನ ರೀತಿ ಮಾತನಾಡಲು ಅವರಿಗೆ ಧೈರ್ಯ ಇದ್ಯಾ? ಎಂದು ವಿಜಯ್ ಪ್ರಶ್ನಿಸಿದ್ದಾರೆ.