ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು.
ಇವತ್ತು 'ಐ ಲವ್ ಯು'' ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಎಲ್ಲವನ್ನೂ ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಉದಾಹರಣೆಗೆ ಶಿವಾಂಗಿ ಜೋಶಿ ಮತ್ತು ಕುಶಾಲ್ ಟಂಡನ್.
ಹೌದು.. ''ಬರ್ಸಾತೇ ಮೌಸಮ್ ಪ್ಯಾರ್ ಕಾ'' ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದವರು ಕುಶಾಲ್ ಟಂಡನ್ ಮತ್ತು ಶಿವಾಂಗಿ ಜೋಶಿ. ಆ ನಂತರ ''ಬಿಗ್ಬಾಸ್'' ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಅನ್ನುವ ಅನುಮಾನ ಅನೇಕರಲ್ಲಿತ್ತು. ಆದರೆ. ಇಬ್ಬರು ನಮ್ಮ ನಡುವೆ ಚಿಗುರೊಡೆದಿದ್ದು ಕೇವಲ ಸ್ನೇಹದ ಚಿಲುಮೆ ಎಂದು ಮಾತ್ರ ಹೇಳ್ತಾ ಬಂದಿದ್ದರು. ಆದರೆ .. ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವೇ ? 2024ರಲ್ಲಿ ಥಾಯ್ಲೆಂಡ್ನಲ್ಲಿ ಮೈಮರೆತು ಇಬ್ಬರು ರೊಮ್ಯಾನ್ಸ್ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿದ್ದವರು ಇಬ್ಬರ ಫೋಟೊ ಕ್ಲಿಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕ್ಷಣಾರ್ಧದಲ್ಲೇ ಈ ಫೋಟೊಗಳು ವೈರಲ್ ಕೂಡ ಆಗಿದ್ದವು. ಇದಾದ ನಂತರ ಇಬ್ಬರು ಸತ್ಯವನ್ನು ಒಪ್ಪಿಕೊಂಡಿದ್ದರು. ನಾವು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದರು. ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ್ದ ಸಂದರ್ಶನದಲ್ಲಿ ಇಬ್ಬರು ಪ್ರೀತಿಸುತ್ತಿರುವುದು ನಿಜ ಆದರೆ ಮದುವೆಯಾಗುವ ಯಾವ ಆತುರ ಕೂಡ ನಮಗೆ ಇಲ್ಲ ಎಂದು ಹೇಳಿದ್ದರು. ಈ ಸುದ್ದಿ ಕೇಳಿ ಈ ಜೋಡಿಯನ್ನು ಇಷ್ಟ ಪಡುವ ಅಭಿಮಾನಿಗಳು ಕೂಡ ಖುಷಿಯಾಗಿದ್ದರು. ಇಬ್ಬರಿಗೂ ಶುಭಾಶಯಗಳನ್ನು ಕೂಡ ಹೇಳಿದ್ದರು. ಆದರೆ ಹೀಗೆ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಇಬ್ಬರು ಒಪ್ಪಿಕೊಂಡು ಇನ್ನೂ ಒಂದು ವರ್ಷ ಕೂಡ ಆಗಿರಲಿಲ್ಲ. ಆಗಲೇ ಈ ಜೋಡಿ ಬೇರೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಇವರ ಈ ಬ್ರೇಕಪ್ ವಿಚಾರ ಚರ್ಚೆಯಲ್ಲಿದೆ. ಇಬ್ಬರು ಮನಸ್ತಾಪ ಮರೆತು ಮತ್ತೆ ಒಂದಾಗಬೇಕೆಂಬ ಆಶಯವನ್ನು ಇವರ ಅಭಿಮಾನಿ ಬಳಗ ವ್ಯಕ್ತಪಡಿಸುತ್ತಲೇ ಇದೆ. ಹೀಗಿರುವಾಗ ಇದೀಗ ತಾವು ಈಗಾಗಲೇ ಮತ್ತೊಬ್ಬರ ಜೊತೆ ಪ್ರೇಮಪಾಶದಲ್ಲಿ ಸಿಲುಕಿರುವುದಾಗಿ ಶಿವಾಂಗಿ ಜೋಶಿ ಹೇಳಿದ್ದಾರೆ. ಇಷ್ಟೇ ಅಲ್ಲ ಸದ್ದಿಲ್ಲದೇ ತಾವು ನಿಶ್ಚಿತಾರ್ಥ ಕೂಡ ಮಾಡಿಕೊಂಡಿರುವ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ಹೌದು, ಅಸಲಿಗೆ ಹಿಂದಿಯಲ್ಲಿ ಹೊಸ ರಿಯಾಲಿಟಿ ಶೋ ಶುರುವಾಗಿದೆ. ರಿತೇಶ್ ದೇಶಮುಖ್, ಫರ್ಹಾ ಖಾನ್ ನಡೆಸಿಕೊಡುವ ಈ ಕಾರ್ಯಕ್ರಮದ ಹೆಸರು ''ಲಾಕಪ್''. ಈ ಕಾರ್ಯಕ್ರಮದ ಎರಡನೇ ಸೀಸನ್ ಇದು. ಈ ಸೀಸನ್ನಲ್ಲಿ ಶಿವಾಂಗಿ ಜೋಶಿ ಕೂಡ ಭಾಗವಹಿಸಿದ್ದು ಶಿವಾಂಗಿ ತಮ್ಮ ಮದುವೆ ವಿಚಾರವನ್ನು ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮತ್ತೊಬ್ಬ ಸ್ಫರ್ಧಿ ಯೂಟ್ಯೂಬರ್ ಶ್ರೇಯಾ ಕರ್ಲಾ ಜೊತೆ ಶಿವಾಂಗಿ ಜೋಶಿ ಮಾತನಾಡುತ್ತಿದ್ದ ಸಮಯದಲ್ಲಿ ಮದುವೆ ವಿಚಾರ ಚರ್ಚೆಯಾಗಿದೆ. ಈ ಸಮಯದಲ್ಲಿ ಶ್ರೇಯಾ ನೀವು ಇನ್ನೂ ಸಿಂಗಲ್ಲಾ..? ಮದುವೆಯಾಗಲು ಹುಡುಗನನ್ನು ಹುಡುಕುತ್ತಿದ್ದೀರಾ..? ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹುಡುಗನನ್ನು ಹುಡುಕುವ ಅವಶ್ಯಕತೆ ಇಲ್ಲ, ಇನ್ನೇನೇ ಇದ್ದರೂ ಮದುವೆ ಮಾತ್ರ ಎಂದು ಹೇಳಿದ್ದಾರೆ. ಶಿವಾಂಗಿ ಜೋಶಿಯ ಈ ಮಾತು ಶ್ರೇಯಾ ಅವರ ಕುತೂಹಲ ಹೆಚ್ಚಿಸಿದೆ. ಈ ಹಿನ್ನೆಲೆ ವಿಚಾರವನ್ನು ಇನ್ನೂ ಕೆದಕಲು ಮುಂದಾದ ಶ್ರೇಯಾ ನಿಮ್ಮ ಕನಸಿನ ಹುಡುಗ ಹೇಗಿರಬೇಕು..? ನಿಮ್ಮ ಗಂಡನಲ್ಲಿ ಯಾವೆಲ್ಲಾ ವಿಶೇಷವಾದ ಅಂಶಗಳಿರಬೇಕು..? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಶಿವಾಂಗಿ ಜೋಶಿ ನನ್ನ ನಿಶ್ಚಿತಾರ್ಥ ಸಮಾರಂಭ ಈಗಾಗಲೇ ನೆರವೇರಿದೆ ಎಂದು ಹೇಳಿದ್ಧಾರೆ. ಈ ಮಾತು ಕೇಳಿ ಸದ್ಯ ಇವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಚಾರವನ್ನೇನೋ ಶಿವಾಂಗಿ ಹೇಳಿದ್ಧಾರೆ. ಆದರೆ ಆ ಹುಡುಗ ಯಾರು..? ಹಿನ್ನೆಲೆ ಏನು..? ಆತನ ಕುಲ-ಗೋತ್ರ ಏನು ಎನ್ನುವುದನ್ನು ಶಿವಾಂಗಿ ಅಪ್ಪಿ ತಪ್ಪಿಯೂ ಹೇಳಿಲ್ಲ. ಇದರಿಂದ ಆ ಅದೃಷ್ಟವಂತ ಯಾರು..? ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಶ್ರೇಯಾ ಮತ್ತು ಶಿವಾಂಗಿ ನಡುವೆ ನಡೆದ ಮಾತುಕಥೆಯ ವಿಡಿಯೋ ವೈರಲ್ ಆಗಿದೆ. ಕೆಲವರು ಶಿವಾಂಗಿ ಜೋಶಿ ಅವರ ಮಾತುಗಳನ್ನು ನಂಬಿ ಅವರು ನಿಜಕ್ಕೂ ಬೇರೆ ಹುಡುಗನನ್ನು ಮದುವೆಯಾಗುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನು ಕೆಲವರು ಇದೆಲ್ಲವೂ ಪ್ರಚಾರದ ಗಿಮಿಕ್ ಅಷ್ಟೇ, ಶೋನಲ್ಲಿ ಮುಂದುವರೆಯಲು ಶಿವಾಂಗಿ ಈ ತರಹದ ಮಾತುಗಳನ್ನಾಡುತ್ತಿದ್ದಾರೆ ಎಂದಿದ್ದಾರೆ. ಒಟ್ನಲ್ಲಿ ಕಿರುತೆರೆಯಲ್ಲಿ ಮುಗ್ಧ ಸೊಸೆಯಾಗಿ ಎಲ್ಲರ ಹೃದಯ ಗೆದ್ದಿರುವ ಶಿವಾಂಗಿ ಜೋಶಿ ಅವರ ವೈಯಕ್ತಿಕ ಜೀವನ ಈಗ ರಹಸ್ಯಗಳ ಗೂಡಾಗಿದೆ. ಶಿವಾಂಗಿ ಜೋಶಿ ಭವಿಷ್ಯದಲ್ಲಿ ತಾವೇ ಖುದ್ದಾಗಿ ತಾವು ಕೈ ಹಿಡಿಯುತ್ತಿರುವ ಹುಡುಗನನ್ನು ಪರಿಚಯಿಸುತ್ತಾರಾ.? ಅಥವಾ ಮದುವೆಯ ಮುಹೂರ್ತ ನಿಗದಿಯಾಗುವವರೆಗೂ ಈ ರಹಸ್ಯವನ್ನು ಹಾಗೇ ಕಾಪಾಡಿಕೊಳ್ಳುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.ಶಿವಾಂಗಿ ಮನ ಗೆದ್ದ ಹುಡುಗ ಯಾರು..?
More Articles