ರಕ್ತ ಚರಿತ್ರೆ ತಂದ ಸಂಕಟ; ರಾಮುಗೆ ಕೊಲೆ ಬೆದರಿಕೆ
ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮಾಜಿ ನಕ್ಸಲ್ ನಾಯಕ ಹಾಗೂ ಪರಿಟಾಲ ರವಿಯ ಎದುರಾಳಿ ಊಬಲ ರೆಡ್ಡಿ ಬೆಂಬಲಿಗರು ರಾಮುಗೆ ಕೊಲೆ ಬೆದರಿಕೆ ಹಾಕಿದ್ದಾರೆ. 'ರಕ್ತ ಚರಿತ್ರ' ಎಂಬ ಚಿತ್ರ ಕೈಗೆತ್ತಿಕೊಂಡಾಗಿನಿಂದ ರಾಮುಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೆ ಇವೆ.
ಚಿತ್ರದ ಹೆಸರೇ ಹೇಳುವಂತೆ ರಕ್ತ ಚರಿತ್ರೆಯುಳ್ಳ ನಾಯಕನೊಬ್ಬನ ಸುತ್ತ ಕಥೆ ಸಾಗುತ್ತದೆ. ರಾಯಲಸೀಮೆಯ ಫ್ಯಾಕ್ಷನ್ ರಾಜಕೀಯದ ಸುತ್ತ ಹೆಣೆಯಲಾದ ಕತೆಯಿದು. ಈ ಚಿತ್ರದ ಮೂಲಕ ಮಾಜಿ ನಕ್ಸಲ್ ನಾಯಕ, ತೆಲುಗು ದೇಶಂ ಪಕ್ಷದ ಶಾಸಕ ರೂ ಆಗಿದ್ದ ಪರಿಟಾಲ ರವೀಂದ್ರಅವರ ಕಥೆಯನ್ನು ತೆರೆಗೆ ತರಲಾಗುತ್ತಿದೆ.
ಆಂಧ್ರ ರಾಜಕೀಯ ಚರಿತ್ರೆಯಲ್ಲಿ ಪೆರಿಟಾಲ ರವೀಂದ್ರ ಅವರ ಹತ್ಯೆ ಒಂದು ಮರೆಯಲಾಗದ ಘಟನೆ. ರವಿ ಹತ್ಯೆ, ಅದರಹಿಂದಿನ ರಾಜಕೀಯ ವೈಷಮ್ಯಗಳು, ರಾಯಲಸೀಮೆಯ ಜಾತಿ ಸಂಘರ್ಷಗಳು, ಕೌಟುಂಬಿಕ ಘರ್ಷಣೆಗಳನ್ನು 'ರಕ್ತ ಚರಿತ್ರ' ಮೂಲಕ ನೆರಳು ಬೆಳಕಿನ ಮೂಲಕ ರಾಮು ಸೆರೆಹಿಡಿದ್ದಾರೆ.
ಚಿತ್ರದಲ್ಲಿ ಊಬಲ ರೆಡ್ಡಿ ಪಾತ್ರವನ್ನು ನಕಾರಾತ್ಮಕವಾಗಿ ತೋರಿಸಲಾಗಿದೆ ಎಂಬ ಅಂಶ ವಿವಾದಕ್ಕೆ ಕಾರಣವಾಗಿದೆ. ಊಬಲ ರೆಡ್ಡಿ ಹಾಗೂ ಆತನ ಬೆಂಬಲಿಗರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ವಿಷಯವನ್ನು ಸ್ವತಃ ರಾಮು ಅವರೇ ಬಹಿರಂಗಪಡಿಸಿದ್ದಾರೆ. ಕೊಲೆ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ತಮ್ಮ ಮೊಬೈಲ್ ಗೆ ಬರುತ್ತಿರುವುದಾಗಿ ರಾಮು ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಊಬಲ ರೆಡ್ಡಿ ಸಹ 1999ರಲ್ಲಿ ಕೊಲೆಯಾಗಿ ಹೋಗಿದ್ದ. ಈಗ ಆತನ ಕುಟುಂಬಿಕರು ಹಾಗೂ ಬೆಂಬಲಿಗರು ತಮ್ಮ ನಾಯಕನಿಗೆ ಚಿತ್ರದಲ್ಲಿ ನ್ಯಾಯ ಸಲ್ಲಿಸಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ.ಚಿತ್ರದಲ್ಲಿ ಊಬಲರೆಡ್ಡಿ ಪಾತ್ರ ನಕಾರಾತ್ಮಕವಾಗಿದೆ ಎಂಬುದು ಅವರ ಪ್ರಮುಖ ಆರೋಪ. ಒಟ್ಟಿನಲ್ಲಿ ರಾಮುಗೆ ಉಭಯಸಂಕಟ ಎದುರಾಗಿದೆ.


Click it and Unblock the Notifications











