ನೇತಾಜಿಗೆ ಅಪಮಾನ; ಅಮಿತಾಬ್ಗೆ ಕೋರ್ಟ್ ನೋಟೀಸ್
ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಮುಂಬೈ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಸೋನಿ ಟಿವಿಯಲ್ಲಿ ಪ್ರಸಾರವಾಗಲಿರುವ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದ ಪ್ರೊಮೋಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ ಬಿಗ್ ಬಿ ವಿರುದ್ಧ ನೋಟೀಸ್ ಜಾರಿ ಮಾಡಿದೆ. "ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ ಕೊಡುತ್ತೆನೆ" ಎಂಬ ನೇತಾಜಿ ಅವರ ಘೋಷವಾಕ್ಯಕ್ಕೆ ಅವಮಾನ ಮಾಡಲಾಗಿದೆ ಎಂದು ಪಿಐಎಲ್ನಲ್ಲಿ ಆರೋಪಿಸಲಾಗಿತ್ತು.
ಜುಲೈ 28ರೊಳಗೆ ವಿವರಣೆ ನೀಡುವಂತೆ ಬಿಗ್ ಬಿ, ಸೋನಿ ಟಿವಿಗೆ ಮುಖ್ಯ ನ್ಯಾಯಾಧೀಶರಾದ ಮೋಹಿತ್ ಶಾ ಹಾಗೂ ಜಿ ಎಸ್ ಗಾಡ್ಬೋಲೆ ನೋಟೀಸ್ ಜಾರಿ ಮಾಡಿದ್ದಾರೆ. "ಕೌನ್ ಬನೇಗಾ ಕರೋಡ್ಪತಿ 4" ಪ್ರಮೋಗಳಲ್ಲಿ ನೇತಾಜಿಗೆ ಅವಮಾನ ಮಾಡಲಾಗಿದೆ ಎಂದು ಮುಕೇಶ್ ಶರ್ಮ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರೋಮೋಗಳಲ್ಲಿ ಅಮಿತಾಬ್ ಹುಡುಗನೊಬ್ಬನನ್ನು ಹೀಗೆ ಕೇಳುತ್ತಾರೆ "ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತ್ರಂತ್ರ್ಯ ಕೊಡುತ್ತೇನೆ" ಇದನ್ನು ಯಾರು ಹೇಳಿದರು. ಹುಡುಗ "ಈಗ ತಾನೆ ನೀವೇ ಹೇಳಿದಿರಲ್ಲ" ಎನ್ನುತ್ತಾನೆ. ಮತ್ತೊಂದು ದೃಶ್ಯದಲ್ಲಿ ಇಬ್ಬರು ರಕ್ತದಾನಿಗಳು ವೈದ್ಯರನ್ನು ಹೀಗೆನ್ನುತ್ತಾರೆ, "ನೀವು ನಮ್ಮ ರಕ್ತ ತೆಗೆದುಕೊಂಡಿರಿ, ನಮಗೆ ಸ್ವಾತಂತ್ರ್ಯ ಯಾವಾಗ ಕೊಡ್ತೀರಿ" ಎಂದು.
ಮತ್ತೊಂದು ದೃಶ್ಯದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಸೊಳ್ಳೆ ಕಚ್ಚುತ್ತದೆ, "ನೀನು ನನ್ನ ರಕ್ತ ಕುಡಿದೆ, ನಿನಗೆ ನಾನು ಸ್ವಾತಂತ್ರ್ಯ ಕೊಡುತ್ತಿದ್ದೇನೆ" ಎನ್ನುತ್ತಾನೆ. ಹೀಗೆ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್)


Click it and Unblock the Notifications











