ಗಜನಿ: ರಾಜ್ಯದ ವಿತರಕರಿಗೆ ಹತ್ತು ಕೋಟಿ!

ಎರಡೇ ವಾರದಲ್ಲಿ 'ಗಜನಿ" ಹಿಂದಿ ಸಿನಿಮಾ ಹಕ್ಕು ಪಡೆದವರೆಲ್ಲ ಕೇವಲ 10 ಕೋಟಿ ರೂಪಾಯಿ ಲಾಭ ಮಾಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಿಗೆ ಯಥಾಪ್ರಕಾರ ಈ ಸುದ್ದಿ ಕೇಳಿ ಅಚ್ಚರಿಯೇನೂ ಆಗಿಲ್ಲ.
'ಗಜನಿ" ತೆರೆಕಂಡಿದ್ದು ಕಳೆದ ವರ್ಷದ ಕೊನೆಯ ಗುರುವಾರ. ಹಳೆ ಮೈಸೂರಿನ ಪ್ರದೇಶದಲ್ಲೇ ಏನ್ಲಿಲವೆಂದರೂ ನಲವತ್ತು ಚಿತ್ರಮಂದಿರಗಳಿಗೆ ಸಿನಿಮಾ ಲಗ್ಗೆ ಇಟ್ಟಿತು. ಬೆಂಗಳೂರಿನಲ್ಲಿ ನಿಯಮಾನುಸಾರ ಹದಿಮೂರು ಚಿತ್ರಮಂದಿರ ಹಾಗೂ ನಾಲ್ಕು ಮಲ್ಟಿಪ್ಲೆಕ್ಸ್ಗಳಲ್ಲಿ ಮಾತ್ರ ಪ್ರದರ್ಶನಕ್ಕೆ ಅವಕಾಶ. ಗುರುವಾರ ವಿತರಕರೆಲ್ಲ ಈ ನಿಯಮವನ್ನು ಗಾಳಿಗೆ ತೂರಿದರು. ಶುಕ್ರವಾರ ವಾಣಿಜ್ಯ ಮಂಡಳಿಯಲ್ಲಿ ಅದೇ ಹಳೆ ಧಾಟಿಯ ಸಭೆ. ಶನಿವಾರ, ಭಾನುವಾರ ವರ್ಷಾಂತ್ಯದ ಮೂಡು. ಸಭೆಯಲ್ಲಿ ನಿಯಮ ಗಾಳಿಗೆ ತೂರಿದವರನ್ನು ದಂಡಿಸಬೇಕು ಎಂದು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ವಿತರಕರಿಗೆಲ್ಲ ಲಿಖಿತ ಎಚ್ಚರಿಕೆಯೂ ತಲುಪಿತೆನ್ನಿ. ಆದರೆ, ಅವನ್ನೆಲ್ಲ ಕೆಳಗೆ ಹಾಕಿಕೊಂಡು ಕೂತ ವಿತರಕರು ಈಗ ಹಣ ಎಣಿಸುವುದರಲ್ಲಿ ಬ್ಯುಸಿ.
ಪಿವಿಆರ್ ಹಾಗೂ ಬಾಷಾ ಹಳೆ ಮೈಸೂರಿನಲ್ಲಿ ಗಜನಿ ಹಕ್ಕು ಪಡೆದಿದ್ದು, ಮಾಡಿರುವ ಲಾಭ ಹತ್ತಿರ ಹತ್ತಿರ ನಾನ್ನೂರು ಪ್ರತಿಶತ ಎನ್ನುತ್ತದೆ ಒಂದು ಮೂಲ. ಉತ್ತರ ಕರ್ನಾಟಕದಲ್ಲೂ 'ಗಜನಿ" ಮೋಡಿ ಜೋರು. ಪ್ರಮುಖ ನಗರಗಳ ಹನ್ನೊಂದು ಚಿತ್ರಮಂದಿರಗಳಲ್ಲಿ ಈಗಲೂ ಸಿನಿಮಾ ಓಡುತ್ತಲೇ ಇದೆ.
ಅಂದಹಾಗೆ, ರಾಜ್ಯದಾದ್ಯಂತ ಗಜನಿ ವಿತರಣೆಯ ಹಕ್ಕಿಗೆ ತೊಡಗಿಸಿದ ಬಂಡವಾಳ ಐದು ಕೋಟಿ. ನಡೆದಿರುವ ವಹಿವಾಟು 14 ಕೋಟಿ. ಇದು ಎರಡು ವಾರದ ಲೆಕ್ಕವಷ್ಟೆ. ಕನ್ನಡ ಸಿನಿಮಾ ಕೊಳ್ಳುವ ವಿತರಕ ಇಡೀ ವರ್ಷ ಸಿನಿಮಾ ಕೊಂಡರೂ ಇಷ್ಟೊಂದು ಲಾಭ ಮಾಡಲು ಸಾಧ್ಯವಿಲ್ಲ.
'ಬೊಂಬಾಟ್", 'ವಂಶಿ" ಚಿತ್ರಗಳನ್ನು ಬಿಡುಗಡೆಗೆ ಮೊದಲೇ ಕೊಂಡುಕೊಂಡವರು ಹಾಕಿದ ಬಂಡವಾಳ ಇನ್ನೂ ಬರಲಿಲ್ಲವಲ್ಲ ಅಂತ ಪೇಚಾಡಿಕೊಳ್ಳುತ್ತಿದ್ದಾರೆ. 'ಗಜನಿ"ಯಷ್ಟೇ ಅಲ್ಲ, 'ರಬ್ನೆ ಬನಾ ದಿ ಜೋಡಿ" ಹಿಂದಿ ಸಿನಿಮಾ ಕೂಡ ವಿತರಕರ ಜೇಬಿಗೆ ಸಾಕಷ್ಟು ಹಣ ತಂದುಕೊಟ್ಟಿದೆ. ಹಾಗಿದ್ದರೆ, ಕನ್ನಡ ಚಿತ್ರಗಳೇಕೆ ಹಣ ಮಾಡುತ್ತಿಲ್ಲ? ಸ್ಟಾರ್ಗಳು ತಮ್ಮ ಎದೆ ಮುಟ್ಟಿಕೊಂಡು ಯೋಚಿಸಬೇಕಿದೆ. ನಿರ್ದೇಶಕರು ತಲೆ ಕೆರೆದುಕೊಂಡು ಚಿಂತಿಸಬೇಕಿದೆ!
ಇಲ್ಲಿಗೆ ಸಮಾಚಾರ ಮುಗಿಯಿತು.
ನಮಸ್ಕಾರ!


Click it and Unblock the Notifications











