ಹತ್ತು ವರ್ಷದಲ್ಲಿ ಹನ್ನೊಂದು 'ಫ್ಲಾಪ್' ಚಿತ್ರಗಳನ್ನು ನೀಡಿದ ಮಹಾನಟಿ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿಕ್ಕ ಮಕ್ಕಳು ಕೂಡ ಕಂಗನಾ ರಣಾವತ್ ನಮ್ಮ ನೆಚ್ಚಿನ ನಾಯಕಿ ಎಂದು ಹೇಳುತ್ತಿದ್ದರು. ಕಂಗನಾ ಹವಾ ಕೂಡ ಹಾಗೇ ಇತ್ತು. ಮಾತಿಗಿಂತ ಕೃತಿ ಮುಖ್ಯ ಎಂಬಂತೆ ಕಂಗನಾ ಆಗ ತಮ್ಮ ಕೆಲಸದ ಕಡೆ ಮಾತ್ರ ಗಮನ ಕೊಡುತ್ತಿದ್ದರು. ಚಿತ್ರಕ್ಕೆ ಮತ್ತು ಪಾತ್ರಕ್ಕೆ ಜೀವ ತುಂಬಲು ಶ್ರಮ ಹಾಕುತ್ತಿದ್ದರು. ಮೂರು ಬಾರಿ ಇವರಿಗೆ ಸಿಕ್ಕ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಇದಕ್ಕೆ ಕೈಗನ್ನಡಿ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಕಂಗನಾ ವ್ಯಕ್ತಿತ್ವದಲ್ಲಿ ಕೂಡ ಬದಲಾವಣೆಗಳಾಗಿವೆ. ಚಿತ್ರಕ್ಕಿಂತ ವಿವಾದಗಳಿಂದ ಸುದ್ದಿಯಲ್ಲಿರುವುದು ಕಂಗನಾಗೆ ಈಗ ರೂಢಿಯಾಗಿದೆ. ಮೊದಲೆಲ್ಲ ಒಂದು ಸೋಲಿನಿಂದ ವಿಚಲಿತಗೊಳ್ಳುತ್ತಿದ್ದ ಕಂಗನಾಗೆ ಈಗ ಸೋಲುವ ಅಭ್ಯಾಸವಾಗಿದೆ. ಇದಕ್ಕೆ ಎಮರ್ಜೆನ್ಸಿ ಮತ್ತೊಂದು ಸಾಕ್ಷಿ. ಹೌದು, ಕಂಗನಾ ಅಭಿನಯಿಸಿ ನಿರ್ದೇಶಿಸಿದ ಎಮರ್ಜೆನ್ಸಿ ಚಿತ್ರ ಮಕಾಡೆ ಮಲಗಿದೆ. ₹ 20 ಕೋಟಿಯನ್ನು ಕೂಡ ಗಳಿಸುವಲ್ಲಿ ಚಿತ್ರ ವಿಫಲವಾಗಿದೆ.

ಸಹಜವಾಗಿ ಎಮರ್ಜೆನ್ಸಿ ಚಿತ್ರದ ಸೋಲಿನಿಂದ ಕಂಗನಾಗೆ ಭಾರೀ ಮುಖಭಂಗವೂ ಆಗಿದೆ. ಯಾಕೆಂದರೆ.. ಕಂಗನಾ ತಮ್ಮ ಚಿತ್ರವನ್ನು ಕ್ಲಾಸಿಕ್ ಚಿತ್ರಗಳ ಜೊತೆ ಹೋಲಿಸಿದ್ದರು. ಈ ಇಂದಿರಾನ ನೋಡಿ ಇಂಡಿಯಾ ಹುಚ್ಚೆದ್ದು ಕುಣಿಯುತ್ತೆ ಎಂದುಕೊಂಡಿದ್ದರು. ಆದರೆ. ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಮೊದಲನೇ ದಿನ ₹ 2.5 ಕೋಟಿಯನ್ನು ಗಳಿಸಿದ್ದ ಚಿತ್ರ, ಎರಡನೇ ದಿನ ₹ 3.6 ಕೋಟಿ ಗಳಿಸಿತ್ತು. ಮೂರನೇ ದಿನ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡಿತ್ತು. ₹ 4.25 ಕೋಟಿಯನ್ನು ಗಳಿಸಿತ್ತು. ಆದರೆ ಆ ನಂತರ ಶುರುವಾದ ಕುಸಿತದಲ್ಲಿ ಚೇತರಿಕೆ ಕಾಣಲೇ ಇಲ್ಲ. ಮೊದಲ ವಾರ ₹ 14.3 ಕೋಟಿಯನ್ನು ಗಳಿಸಿದ್ದ ಚಿತ್ರದ ಗಳಿಕೆ ಎರಡನೇ ವಾರಾಂತ್ಯಕ್ಕೆ ₹ 17.47 ಕೋಟಿಯಾಗಿದೆ. ವರ್ಲ್ಡ್ ವೈಡ್ ಗಳಿಕೆಯನ್ನು ಪರಿಗಣಿಸಿದರೆ ಚಿತ್ರದ ಗಳಿಕೆ 22 ಕೋಟಿಯಾಗಿದೆ. ಬಹುತೇಕ ಕಡೆ ಇಂದಿನಿಂದ ಚಿತ್ರ ಚಿತ್ರಮಂದಿರದಿಂದ ಎತ್ತಂಗಡಿಯಾಗಿದೆ. ಈ ಮೂಲಕ ಮತ್ತೊಂದು ಸೋಲಿನ ದರ್ಶನ ಕಂಗನಾಗೆ ಆಗಿದೆ.
ಅಂದ್ಹಾಗೇ ಕಂಗನಾ ರಣಾವತ್ ಕಳೆದ ಹತ್ತು ವರ್ಷಗಳಲ್ಲಿ ಹನ್ನೊಂದು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಪರ್ಯಾಸ ಅಂದರೆ ಹನ್ನೊಂದಕ್ಕೆ ಹನ್ನೊಂದು ಚಿತ್ರಗಳು ಕೂಡ ಸೋಲನ್ನು ಕಂಡಿವೆ. ಕಂಗನಾ ಕೊನೆಯ ಬಾರಿ ಗೆದ್ದು ಬೀಗಿದ್ದು ತನು ವೆಡ್ಸ್ ಮನು 2 ಚಿತ್ರದಲ್ಲಿ ಮಾತ್ರ. ಅದೆ ಕೊನೆ. ಆ ನಂತರ ಬಂದ ಐ ಲವ್ ನ್ಯೂ ಇಯರ್ ಮತ್ತು ಕಟ್ಟಿಬಟ್ಟಿ ಬಂದು ಹೋಗಿದ್ದು ಗೊತ್ತಾಗಲಿಲ್ಲ. ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ವಿಶಾಲ್ ಭಾರದ್ವಾಜ್ ನಿರ್ದೇಶನದ ರಂಗೂನ್ ಚಿತ್ರದಲ್ಲಿ ಬಣ್ಣ ಹಚ್ಚಿದರು ಕೂಡ ಗೆಲುವು ದಕ್ಕಲಿಲ್ಲ . ಸಿಮ್ರನ್, ಜಡ್ಜಮೆಂಟಲ್ ಹೈ ಕ್ಯಾ, ಪಂಗಾ, ಧಾಕಡ್, ತೇಜಸ್ ಚಿತ್ರಗಳು ಗೆಲ್ಲಲಿಲ್ಲ. ಇನ್ನು ಹಿಂದಿಯಲ್ಲಿ ಗೆಲುವು ಸಿಕ್ತಿಲ್ಲವೆಂದು ಕಂಗನಾ ದಕ್ಷಿಣಕ್ಕೆ ಬಂದರು. ತಲೈವಿ, ಚಂದ್ರಮುಖಿ 2 ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ. ಇಲ್ಲಿಯೂ ಕೂಡ ಕಂಗನಾಗೆ ದಕ್ಕಿದ್ದು ಕೇವಲ ಸೋಲು ಮಾತ್ರ.
ಇದೆಲ್ಲದರ ನಡುವೆ ಬಂದ ಮಣಿಕರ್ಣಿಕಾ ಚಿತ್ರ ಮಾತ್ರ ಕಂಗನಾಗೆ ಖುಷಿಯನ್ನು ನೀಡಿತ್ತು. ಬ್ಲಾಕ್ ಬಸ್ಟರ್ ಆಗದಿದ್ದರು ಕೂಡ ಬಾಕ್ಸಾಫೀಸ್ನಲ್ಲಿ ಸೋಲದ ಮಣಿಕರ್ಣಿಕಾ ಹಾಕಿದ ಬಂಡವಾಳದ ಮೇಲೆ ಚೂರು ಲಾಭವನ್ನು ಕಂಡಿತ್ತು. ಇಂಥಾ ಕಂಗನಾ ಈಗ ಭಾರತ ಭಾಗ್ಯ ವಿಧಾತಾ ಚಿತ್ರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











