ಬರ್ಥ್ ಡೇ ಬಾಯ್ ಬಿಗ್ ಬಿ ಭಾರತ ರತ್ನ ಬೇಡ್ವಂತೆ!
ಬಿಗ್ ಬಿ ಅಮಿತಾಬ್ ಗೆ ಇಂದು(ಅ.11) ಹುಟ್ಟುಹಬ್ಬದ ಸಂಭ್ರಮ. 1942ರಲ್ಲಿ ಕವಿ ಹರಿವಂಶ್ ರಾಯ್ ಬಚ್ಚನ್ ಹಾಗೂ ತೇಜಿ ಅವರ ಪುತ್ರನಾಗಿ ಹುಟ್ಟಿದ ಅಮಿತಾಬ್ ಎಲ್ಲರ ಪ್ರೀತಿ ಪಾತ್ರವಾದ ವ್ಯಕ್ತಿ.
ಇತ್ತೀಚೆಗೆ 'ಬುಡ್ಡಾ ಹೋಗಾ ತೇರಾ ಬಾಪ್' ನಲ್ಲಿ ಅವರು ಕಾಣಿಸಿಕೊಂಡ ರೀತಿ ನೋಡಿದರೆ 70ರ ದಶಕದಲ್ಲಿ ಪಡೆದ ಆಂಗ್ರಿ ಎಂಗ್ ಮ್ಯಾನ್ ಪಟ್ಟ ಇನ್ನೂ ಅವರಲ್ಲೇ ಜೀವಂತವಾಗಿದೆ ಎನ್ನಬಹುದು.
ಸುಂದರ ಸಂಸಾರ, ಅಪಾರ ಬಂಧು ಮಿತ್ರರು, ಅಭಿಮಾನಿ ವರ್ಗವನ್ನು ಹೊಂದಿರುವ ಬಿಗ್ ಬಿಗೆ ರಾಷ್ಟ್ರ ಪ್ರಶಸ್ತಿ, ಫಿಲ್ಮ್ ಫೇರ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.
ನಟ, ನಿರ್ಮಾಪಕ, ಗಾಯಕನಾಗಿ ಯಶಸ್ವಿಯಾದ ಮೇಲೆ ಟಿವಿ ರಿಯಾಲಿಟಿ ಶೋನಲ್ಲಿ ನಿರೂಪಕನಾಗಿ ಕೂಡಾ ಬಿಗ್ ಬಿ ಯಶ ಕಂಡಿದ್ದಾರೆ. ಈಗ ಅವರ ಅಭಿಮಾನಿಗಳ ಹಾರೈಕೆಯಂತೆ ಅಮಿತಾಬ್ ಗೆ ಎಲ್ಲ ಸಿಕ್ಕಿದೆ. 'ಭಾರತ ರತ್ನ' ಒಂದೇ ಬಾಕಿ ಎಂಬ ಚರ್ಚೆಗೆ ಬಿಗ್ ಬಿ ಮುಕ್ತಾಯ ಹಾಡಿದ್ದಾರೆ.
ಗಾನ ಕೋಗಿಲೆ ಶಿಫಾರಸು: 40ಕ್ಕೂ ಅಧಿಕ ವರ್ಷ ಹಿಂದಿ ಸಿನಿಮಾ ರಂಗದಲ್ಲಿ ಕಳೆದಿರುವ ಬಿಗ್ ಬಿ ಬಗ್ಗೆ ಎಲ್ಲರಲ್ಲೂ ಅಪಾರ ಗೌರವ ಪ್ರೀತಿ ಇದೆ. ಅಮಿತಾಬ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಗೌರವ ಸಿಗಬೇಕು ಎಂದು ಲತಾ ಮಂಗೇಶ್ಕರ್ ಅವರು ಹೇಳಿದ್ದರು.
ಆದರೆ, ಲತಾ ಅವರ ಶಿಫಾರಸ್ಸನ್ನು ಗೌರವಿಸಿದ ಅಮಿತಾಬ್, ಭಾರತರತ್ನ ಪಡೆಯಲು ನಾನು ಅರ್ಹನಲ್ಲ ಎಂದಿದ್ದಾರೆ.
ನಾನು ಸಾಧಿಸಿರುವುದು ಅತ್ಯಲ್ಪ. ಲತಾ ಅವರದ್ದು ತುಂಬಾ ದೊಡ್ಡ ಮಾತು. ನನಗೆ ಅರ್ಹತೆಯಾಗಲಿ, ಅಪೇಕ್ಷೆಯಾಗಲಿ ಇಲ್ಲ. ವೃತ್ತಿಯಿಂದ ಹೊರತಾಗಿ ಹೆಚ್ಚಿನ ಸಾಧನೆಗೈದವರಿಗೆ ಮಾತ್ರ ಸಲ್ಲುವ ಸೂಕ್ತ ಪ್ರಶಸ್ತಿಗೆ ನಾನು ಹಂಬಲಿಸುವುದಿಲ್ಲ ಎಂದು ಬಿಗ್ ಬಿ ಹೇಳಿದ್ದಾರೆ.


Click it and Unblock the Notifications











