ತೆರೆಯ ಮೇಲೆ ಅಟಲ್ ಬಿಹಾರಿ ವಾಜಪೇಯಿ ಕಥೆ
ಬಾಲಿವುಡ್ ನಲ್ಲಿ ರಾಜಕೀಯ ಕಥಾವಸ್ತು ಆಧಾರಿಸಿದ ಚಿತ್ರಗಳು ಹೆಚ್ಚಾಗಿ ಕ್ಲಿಕ್ ಆಗಿದ್ದು ಕಮ್ಮಿ, ಇತ್ತೀಚಿನ ರಾಜ್ ನೀತಿ ಬಿಟ್ಟರೆ, ಮಿಕ್ಕ ಚಿತ್ರಗಳಲ್ಲಿ ಪಕ್ಕಾ ರಾಜಕಾರಣಿಗಳ ಜೀವನ ಕಥೆ ತೋರಿಸಿದ ಚಿತ್ರಗಳು ಬಂದಿಲ್ಲ. ಆದರೆ, ಈಗ ದೇಶದ 13 ನೇ ಪ್ರಧಾನಿ, ಸಭ್ಯ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತ ಚಿತ್ರವೊಂದು ತಯಾರಾಗುತ್ತಿದೆ. ಅಂದ ಹಾಗೆ ಇದು ಆರ್ಟ್ ಸಿನಿಮಾ ಅಥವಾ ಸಾಕ್ಷ್ಯಚಿತ್ರವಲ್ಲ.
ಬಾಲಿವುಡ್ ನಟ ಅರ್ಜುನ್ ಶ್ರೀವಾಸ್ತವ್ ಅವರು ವಾಜಪೇಯಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Democrazy ಎಂದು ನಾಮಕರಣಗೊಂಡಿದ್ದ ಚಿತ್ರ ಈಗ Wake Up India ಎಂದು ಮರು ನಾಮಕರಣಗೊಂಡಿದೆ. ಚಿತ್ರೀಕರಣ ಭರದಿಂದ ಸಾಗಿದೆ.
ಆದರೆ, ಇದು ಪ್ರಧಾನಿ ವಾಜಪೇಯಿ ಕಥೆಯಲ್ಲವಂತೆ. ವಾಜಪೇಯಿ ಅವರ ರಾಜಕೀಯ ಜೀವನದಿಂದ ಸ್ಪೂರ್ತಿ ಪಡೆದು ಹೆಣೆದ ಕಥೆಯಂತೆ. ಅಭೌ ಸಿಂಗ್ ತೋಮರ್ ಎಂಬ ಉತ್ತರ ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯಾಗಿರುತ್ತಾನೆ. ಪ್ರತಿ ಪಕ್ಷದಿಂದ 500 ಕೋಟಿ ರು ಲಂಚ ನೀಡಲು ಮುಂದಾದಾಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರುತ್ತಾನೆ ಎಂದು ಶ್ರೀವಾಸ್ತವ್ ಹೇಳುತ್ತಾರೆ.
ಸಾಮಾನ್ಯ ಜನರ ಕಣ್ಣುತೆರೆಸುವ ಅನೇಕ ದೃಶ್ಯಗಳು ಈ ಚಿತ್ರದಲ್ಲಿವೆ. ರಾಜಕಾರಣಿಗಳು ಜನಪಾಲಕರಷ್ಟೇ. ಜನತೆ ಕೇಳಿದ್ದನ್ನು ನೀಡಬೇಕಾದ್ದು ಅವರ ಕರ್ತವ್ಯ. ಬಾಬಾ ರಾಮದೇವ್ ಸರ್ಕಾರಕ್ಕೆ ಮೊರೆ ಇಟ್ಟ ಹಾಗೆ ನಮ್ಮ ಚಿತ್ರದಲ್ಲೂ ದೃಶ್ಯಗಳು ಸಿಗಲಿವೆ ಎನ್ನುತ್ತಾರೆ ನಿರ್ದೇಶಕ ಬಬ್ಲೂ ಶೇಷಾದ್ರಿ.
ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ವೇಕ್ ಅಪ್ ಇಂಡಿಯಾ ಕಡಿಮೆ ಬಜೆಟಿನ ಚಿತ್ರ. ಮೋಹನ್ ಜೋಶಿ, ಮಿಲಿಂದ್ ಗುಣಾಜಿ, ಅನಂದ್ ಜೋಗ್ ಅಲ್ಲದೆ ಅಸ್ರಾಣಿಯಂಥ ಉತ್ತಮ ನಟ ಸಮೂಹ ಈ ಚಿತ್ರದಲ್ಲಿದೆ. ಮಾಜಿ ಕ್ರಿಕೆಟರ್ ಸಂದೀಪ್ ಪಾಟೀಲ್ ಅವರ ಮಗ ಚಿರಾಗ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿರಿಸುತ್ತಿದ್ದಾನೆ. ವಾಜಪೇಯಿ ಅವರ ಪಾತ್ರದ ಸುತ್ತಾ ಸುತ್ತುವ ಕಥೆ ಇರುವುದರಿಂದ ಅಭಿಮಾನಿಗಳ ಆಸಕ್ತಿ ಕೆರಳಿಸಿದೆ.


Click it and Unblock the Notifications











