ಮುಂಬೈ ದಾಳಿ ಹೇಳಿಕೆ, ಸಲ್ಲೂ ಕ್ಷಮೆಯಾಚನೆ
26/11 ಮುಂಬೈದಾಳಿ ಕುರಿತಾದ ಹೇಳಿಕೆಯನ್ನು ತಿರುಚಲಾಗಿದ್ದು, ಮಾಧ್ಯಮಗಳು ಹಾಗೂ ಸಾರ್ವಜನಿಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೂ ನನ್ನ ಮಾತಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಸಲ್ಮಾನ್ ಖಾನ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ನೂರಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಮುಂಬೈ ದಾಳಿ ಪ್ರಕರಣಕ್ಕೆ ಅಗತ್ಯ ಕ್ಕಿಂತ ಹೆಚ್ಚಿನ ಪ್ರಚಾರ ಮಹತ್ವ ನೀಡಲಾಗಿದೆ ಎಂಬ ಬಾಲಿ ವುಡ್ ನಟ ಸಲ್ಮಾನ್ ಖಾನ್ ಹೇಳಿಕೆಯಿಂದ ಕೆಂಡಾಮಂಡಲವಾಗಿರುವ ಶಿವಸೇನೆ ಕೂಡಲೇ ಈ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು. ನಿಜಕ್ಕೂ ಇದೊಂದು ದುರದೃಷ್ಟಕರ ಹೇಳಿಕೆಯಾಗಿದ್ದು, ಮುಂಬೈ ಮೇಲೆ ನಡೆದ ದಾಳಿ, ದೇಶದ ಮೇಲೆ ಸಾರಿದಯುದ್ಧ ಎಂಬುದನ್ನು ಅರಿತು ಸಲ್ಮಾನ್ ಖಾನ್ ಕೂಡಲೇ ಕ್ಷಮೆಯಾಚಿಸಬೇಕೆಂದು ಶಿವಸೇನೆ ನಾಯಕ ಸಂಜಯ್ ರಾವತ್ ಆಗ್ರಹಿಸಿದ್ದರು.
"Looks like I mite hv to get off twitter. Don't want to but wat to do? I think I messed up, so sorry guys, $sorry bolne mein koi sharam nahi."
ಕ್ಷಮೆಯಾಚನೆಗೂ ಮುನ್ನ ಇದ್ದ ಸಂದೇಶ ನೋಡಿ
"Hurt v hurt, yeh kya ? straight thru my heart. My mum n dad yaar my bro's my sisters. family had to go thru torture on eid n ganesh utsav."
ಪಾಕಿಸ್ತಾನ ಭಾರತದ ಎಲ್ಲ ಚಾನಲ್ಗಳನ್ನು ನಿಷೇಧಿಸಿದೆ. ಹೀಗಿರುವಾಗ ಸಲ್ಮಾನ್ ಪಾಕಿಸ್ತಾನದ ಚಾನೆಲ್ಗೆ ಸಂದರ್ಶನ ನೀಡಿದ್ದು ಏಕೆಂದು ಪ್ರಶ್ನಿಸಿದ್ದಾರೆ. ಏನಿದು ವಿವಾದ ದೇಶದಾದ್ಯಂತ ಶುಕ್ರವಾರ ತೆರೆಕಂಡ 'ದಬಾಂಗ್' ಚಿತ್ರದ ಕುರಿತಂತೆ ಪಾಕಿಸ್ತಾನದ ವಾಹಿನಿಯೊಂದು ಸಲ್ಮಾನ್ ಖಾನ್ ಸಂದರ್ಶನ ನಡೆಸಿತ್ತು.
ಈ ಸಂದರ್ಭದಲ್ಲಿ ಮುಂಬೈ ದಾಳಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದ ಸಲ್ಲು, ಅನಗತ್ಯವಾಗಿ ಮುಂಬೈ ದಾಳಿ ಪ್ರಕರಣಕ್ಕೆ ಪ್ರಚಾರ ನೀಡಲಾಗಿತ್ತೆಂದು ಆರೋಪಿಸಿದ್ದರು. ಕೆಲವೊಂದು ಗಣ್ಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದ್ದಿತ್ತಿಲ್ಲದೆ, ಈ ದುಷ್ಕೃತ್ಯದ ಹಿಂದೆ ಪಾಕ್ ಸರ್ಕಾರದ ಕೈವಾಡವಿಲ್ಲ. ಉಗ್ರರಿಗೆ ಯಾವುದೇ ದೇಶದ ಹಂಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
'ಇಂದಿಗೂ ರೈಲು, ಸಣ್ಣಪುಟ್ಟ ನಿಲ್ದಾಣಗಳ ಮೇಲೆ ದಾಳಿ ಮುಂದುವರೆದಿದೆ. ಆದರೆ ಯಾರೊಬ್ಬರೂ ಈ ವಿಚಾರವಾಗಿ ತುಟ್ಟಿ ಬಿಚ್ಚುತ್ತಿಲ್ಲ. ಆದರೆ ಮುಂಬೈ ದಾಳಿ ವೇಳೆ ತಾಜ್ ಹಾಗೂ ಒಬೆರಾಯ್ ಮೇಲೆ ದಾಳಿ ನಡೆದಿದ್ದರಿಂದಲೇ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರವನ್ನು ಈ ಪ್ರಕರಣಕ್ಕೆ ನೀಡಲಾಯಿತು.ಈ ದುರ್ಘಟನೆಗೆಲ್ಲ ಭದ್ರತಾ ವೈಫಲ್ಯವೇ ಮುಖ್ಯ ಕಾರಣ' ಎಂದು ಸಲ್ಲು ದೂರಿದ್ದರು.
ಬಿಜೆಪಿ ಕಿಡಿ: ಸಲ್ಮಾನ್ ಹೇಳಿಕೆಗೆ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡುವುದಕ್ಕೆ ಮುಂಬೈ ದಾಳಿ ಪ್ರಕರಣ ಒಂದು ಚಿಕ್ಕ ಘಟನೆ ಅಲ್ಲ. ಇದರಲ್ಲಿ ಮೃತಪಟ್ಟವರು ಭಾರತದವರೆಂಬುದು ಸಲ್ಮಾನ್ಗೆ ತಿಳಿದಿರಲಿ ಎಂದು ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರದ ಡಿಸಿಎಂ ಛಗನ್ ಭುಜ್ಬಲ್ ಸಲ್ಲು ವಿರುದ್ಧ ಕಿಡಿಕಾರಿದ್ದಾರೆ. ಸಲ್ಮಾನ್ ಓರ್ವ ನಟನಷ್ಟೇ. ದಾಳಿಯಲ್ಲಿ ಪಾಕ್ ಕೈವಾಡವಿದೆಯೇ ಇಲ್ಲವೇ ಎನ್ನುವ ಕುರಿತಂತೆ ಮಾಹಿತಿ ನೀಡಲು ಬರುವುದಿಲ್ಲ ಎಂದಿದ್ದಾರೆ.


Click it and Unblock the Notifications











