ಬಾಲಿವುಡ್ ನಟಿಯರಿಗೆ ಕನ್ನಡ ನಿರ್ಮಾಪಕರಗಾಳ

ನಿಶಾ ಕೊಠಾರಿಯನ್ನು ಬಾಲಿವುಡ್ ಚಿತ್ರರಸಿಕರು ಸಾರಾಸಗಟಾಗಿ ನಿರಾಕರಿಸಿದ ಮೇಲೆ ಆಕೆ ದಕ್ಷಿಣದ ಕಡೆ ಮುಖ ಮಾಡಿದರು. ಆಕೆಗೆ ದಕ್ಷಿಣದಲ್ಲಿ ಅವಕಾಶದ ಬಾಗಿಲು ತೆರೆದುಕೊಂಡಿತು. ಪುನೀತ್ ರಾಜ್ ಕುಮಾರ್ ಅವರ 'ರಾಜ್ 'ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು ಎನ್ನುತ್ತಾರೆ ನಿರ್ಮಾಪಕ,ವಿತರಕ ಕೆಸಿಎನ್ ಕುಮಾರ್. ನೇತಾನ್ಯ, ಸುಮನ್ ರಂಗನಾಥ್, ಸೊಲಾನಿ ರಂತಹ ಬಾಲಿವುಡ್ ನಟಿಯರು ಉಪೇಂದ್ರ ಜೊತೆಗೆ ನಟಿಸಿರುವುದು ಪ್ರೇಕ್ಷಕರಿಗೂ ಇಷ್ಟವಾಗಿದೆ ಎನ್ನುತ್ತಾರೆ ಅವರು.
ಕನ್ನಡದ ಬಹು ಬೇಡಿಕೆ ನಟರಾದ ಉಪೇಂದ್ರ, ದರ್ಶನ್, ಗಣೇಶ್, ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳನ್ನು ಹೆಚ್ಚೆಂದರೆ 5 ರಿಂದ 7 ಕೋಟಿ ರು.ಗಳಲ್ಲಿ ಮಾಡಿ ಮುಗಿಸಬಹುದು. ಆದರೆ ಕನ್ನಡದ ನಿರ್ಮಾಪಕರು ನಾಯಕಿಯರನ್ನು ಸಂಭಾಳಿಸುವುದು ಶಾನೆ ಕಷ್ಟವಾಗಿದೆ. ದಕ್ಷಿಣ ಭಾರತದ ನಟಿಯರು 1 ಕೋಟಿಯಿಂದ 2 ಕೋಟಿ ರು.ಗಳ ತನಕ ಡಿಮ್ಯಾಂಡ್ ಮಾಡುತ್ತಿದ್ದಾರೆ. ಹಾಗಾಗಿ ನಿರ್ಮಾಪಕರು ವಿಧಿ ಇಲ್ಲದೆ ಬೇಡಿಕೆ ಇಲ್ಲದ ಬಾಲಿವುಡ್ ತಾರೆಯರ ಹಿಂದೆ ಬಿದ್ದಿದ್ದಾರೆ.

ಆದರೆ ಈ ಮಾತನ್ನು 'ರಾಜ್' ಚಿತ್ರದ ನಿರ್ದೇಶಕ ಪ್ರೇಮ್ ಸುತಾರಾಂ ಒಪ್ಪುವುದಿಲ್ಲ. ರಾಜ್ ಚಿತ್ರದ ಪಾತ್ರಕ್ಕೆ ನಿಶಾ ಕೊಠಾರಿ ಒಗ್ಗುತ್ತಿದ್ದರು ಆ ಕಾರಣಕ್ಕಾಗಿ ಅವರನ್ನು ಆಯ್ಕೆ ಮಾಡಿದ್ದೇನೆ ಎನ್ನುತ್ತಾರೆ. ಆಕೆಯ ಶುಲ್ಕ, ಸಂಭಾವನೆ ಏನೇ ಇರಲಿ ನಮಗದು ದೊಡ್ಡ ಸಮಸ್ಯೆಯೇ ಅಲ್ಲ. ಕೊಠಾರಿಯ ಚಿತ್ರಗಳನ್ನು ನೋಡಿ ಆಕೆಯ ಅಭಿನಯವನ್ನು ಮೆಚ್ಚಿದ್ದೇನೆ. 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರ ಮಾಡಬೇಕಾದರೆ ಅವರನ್ನು ಭೇಟಿ ಮಾಡಿದ್ದೆ. ಪುನೀತ್ ಹಾಗೂ ನನಗೆ 'ರಾಜ್' ಅತಿ ದೊಡ್ಡ ಚಿತ್ರ. ಈ ಚಿತ್ರಕ್ಕಾಗಿ ಬಹಳಷ್ಟು ಬಾಲಿವುಡ್ ನಟಿಯರನ್ನು ಹುಡುಕಿದ್ದಾಯ್ತು. ಕೊನೆಗೆ ಕೊಠಾರಿಯೇ ಸೂಕ್ತ ಎಂದು ಆಕೆಯನ್ನು ಆಯ್ಕೆ ಮಾಡಿರುವುದಾಗಿ ಪ್ರೇಮ್ ವಿವರಿಸುತ್ತಾರೆ.
ಬಾಲಿವುಡ್ ನಟಿಯರಿಗೆ ಗಾಳ
ಐಶ್ವರ್ಯ ರೈ ಚಹರೆ ಉಳ್ಳ ಸ್ನೇಹಾ ಉಲ್ಲಾಳ್ ಬಾಲಿವುಡ್ ನ 'ಲಕ್ಕಿ' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ್ದರು. ಈಗ ಆಕೆ ಕನ್ನಡಕ್ಕೆ ಆಮದಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸುತ್ತಿದ್ದಾರೆ. ಅಮೀರ್ ಖಾನ್ ರ ಗೆಳತಿಯಾಗಿ 'ತಾರೆ ಜಮೀನ್ ಪರ್' ಚಿತ್ರದಲ್ಲಿ ನಟಿಸಿದ್ದ ಗಿರಿಜಾ ಓಕ್ ಕನ್ನಡದ 'ಹೌಸ್ ಫುಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹೇಮಂತ್ ಹೆಗಡೆ ನಿರ್ದೇಶಿಸುತ್ತಿದ್ದಾರೆ. ಇನ್ನು ದಕ್ಷಿಣ ಭಾರತದಲ್ಲಿ ಬ್ಯುಸಿಯಾಗಿರುವ ಆಸಿನ್,ತ್ರಿಶಾ,ನಯನತಾರಾ, ಶ್ರೇಯಾರಂತಹ ನಟಿಯರನ್ನು ನಿರ್ಮಾಪಕರು ಮಾತನಾಡುವಂತೆಯೇ ಇಲ್ಲ. ಒಬ್ಬೊಬ್ಬರ ಸಂಭಾವನೆ 1ರಿಂದ 2 ಕೋಟಿ ರು.ಗಳು. ಹಾಗಾಗಿ ಈ ನಟಿ ಮಣಿಯರನ್ನು ನಿರ್ಮಾಪಕರು ಮೂಲೆಗೆ ತಳ್ಳಿದ್ದಾರೆ.
ಗ್ಯಾಲರಿ: ಸ್ನೇಹಾ ಉಲ್ಲಾಳ || ನಿಶಾ ಕೋಠಾರಿ ||


Click it and Unblock the Notifications