ಬಿಗ್ ಬಿ ಜಾರ್ಖಂಡ್ ಪೊಲೀಸರ ಮಾಹಿತಿದಾರನೆ?
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಏನಾದರೂ ಜಾರ್ಖಂಡ್ ಪೊಲೀಸರ ಮಾಹಿತಿದಾರನೆ? ಇದು ಎತ್ತಣಿಂದೆತ್ತ ಸಂಬಂಧವಯ್ಯಾ? ಎಂಬ ಪ್ರಶ್ನೆ ಈಗ ದೇಶದ್ಯಾಂತ ಚರ್ಚೆಗೆ ಗ್ರಾಸವಾಗಿದ್ದು ಹೊಸ ಸಮಸ್ಯೆಗೆ ನಾಂದಿ ಹಾಡಿದೆ. ಇದು ನಿಜವೆ? ಅಲ್ಲವೆ? ಎಂದು ತಿಳಿಯಬೇಕಾದರೆ ನೀವು ಈ ವಿವರಗಳನ್ನು ಓದಲೇಬೇಕು ಎನ್ನುತ್ತಿದ್ದಾರೆ ಜಾರ್ಖಂಡ್ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ವಿಷ್ಣು ದಯಾಳ್ ರಾಮ್.
ಈ ಸಂಬಂಧ ಅವರು ಮಾತನಾಡುತ್ತಾ, ಗುಪ್ತಚರ ಇಲಾಖೆಗೆ ಸಂಬಂಧಿಸಿದ ಮಾಹಿತಿದಾರ ಸಾನಿಚಾರ್ ಪಂಡಿತ್ ಅವರಿಗೆ ರು.21 ಲಕ್ಷದ ಎರಡು ಓಚರ್ ಗಳನ್ನು ನೀಡಲಾಗಿತ್ತು. ಈ ಎರಡು ಓಚರ್ ಗಳ ಮೇಲೆ ಅಮಿತಾಬ್ ಬಚ್ಚನ್ ಸಹಿ ಇದೆ. ಆದರೆ ಮಾಹಿತಿದಾರನಿಗೆ ಕೇವಲ ರು.10,000 ಮಾತ್ರ ಸಂದಾಯವಾಗಿದೆ. ಉಳಿದ ಹಣ ಏನಾಯಿತು ಎಂಬುದು ಗೊತ್ತಿಲ್ಲ. ಈ ಹಣವನ್ನು ರಾಜ್ಯ ಕಾರ್ಯಧ್ಯಕ್ಷರ ಮೂಲಕ ನೀಡಲಾಗಿದೆ ಎನ್ನಲಾಗಿದೆ.
ಆದರೆ, ಮಾಹಿತಿದಾರ ಸಾನಿಚಾರ್ ಮಾತ್ರ ನನಗೇನು ಗೊತ್ತಿಲ್ಲ. ಓಚರ್ ನಲ್ಲಿ ಅಮಿತಾಬ್ ಬಚ್ಚನ್ ಸಹಿ ಹೇಗೆ ಬಂತೋ ಒಂದೂ ಅರಿಯೆ ಎಂದು ಹೈಕೋರ್ಟ್ ಗೆ ತಿಳಿಸಿದ್ದಾನೆ. ತಾನು ಪೊಲೀಸರ ಕೈಕೆಳಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದೇನಷ್ಟೆ. ಇದೆಲ್ಲಾ ಹೇಗಾಯಿತೋ ಗೊತ್ತಿಲ್ಲ ಎಂದಿದ್ದಾನೆ. ಈ ಅವ್ಯವಹಾರದ ಬಗ್ಗೆ ಜಾರ್ಖಂಡ್ ಅಕೌಂಟ್ ಜನರಲ್ ಅವರಿಗೆ ತಿಳಿಸಿದ್ದೇವೆ ಎಂದಿದ್ದಾರೆ.
ಈ ಘಟನೆಗಳಿಗೆ ಸಂಬಂಧಿಸಿದ ವರದಿಯನ್ನು ಜಾರ್ಖಂಡ್ ರಾಜ್ಯ ಮುಖ್ಯ ಕಾರ್ಯದರ್ಶಿ ಎ ಕೆ ಸಿಂಗ್ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಈ ಸಮಯದಲ್ಲೇ ಜಾರ್ಖಂಡ್ ಹೆಚ್ಚುವರಿ ಡಿಜಿಪಿ ರಾಜೀವ್ ಕುಮಾರ್ ರು.8 ಕೋಟಿಯನ್ನು ಗುಪ್ತಚರ್ಯೆ ನಿಧಿಯಿಂದ ತೆಗೆದುಕೊಂಡಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಖರ್ಚು ವೆಚ್ಚಗಳ ವಿವರಗಳನ್ನು ಸಮರ್ಪಿಸಿಲ್ಲ. ಅಷ್ಟೆ ಅಲ್ಲದೆ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳಿಗೆ ಹಣವನ್ನು ನೀಡಿರುವ ಬಗ್ಗೆಯೂ ದಾಖಲೆಗಳಿಲ್ಲ. ಎಲ್ಲರನ್ನೂ ವಿಚಾರಣೆ ನಡೆಸಿದ್ದೇವೆ. ಆಗಸ್ಟ್ 28ರೊಳಗೆ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಡಿಜಿಪಿ ರಾಮ್ ತಿಳಿಸಿದ್ದಾರೆ.


Click it and Unblock the Notifications











