ಕಲ್ಲು ಮಣ್ಣುಗಳ ಗುಡಿಯೊಳಗೆ ದೇವರಿಲ್ಲ: ಶಾರುಖ್
"ಮಾನವ ನಿರ್ಮಿತ ಕಟ್ಟಡಗಳಲ್ಲಿ ದೇವರಿಲ್ಲ.ಅವನು ಇಲ್ಲೇ ನಮ್ಮ ಹೃದಯದಲ್ಲೆ ನೆಲೆಸಿದ್ದಾನೆ. ಅವನನ್ನು ಅಲ್ಲಾ ಎಂದು ಕರೆಯಿರಿ ಅಥವಾ ದೇವರೆನ್ನಿ, ಭಗವಂತಾ ಎಂದು ಕರೆಯಿರಿ ಅವನ ನೆಲೆ ಮನುಷ್ಯರು ಕಟ್ಟಿದ ಮನೆಗಳಲ್ಲಿಲ್ಲ; ನಮ್ಮ ಮನದೊಳಗಿದ್ದಾನೆ ಎಂದು ಟ್ವಿಟ್ಟರ್ನಲ್ಲಿ ಹಳೆ ಡೈಲಾಗ್ ಹೊಡೆದಿದ್ದಾರೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್.
ಡೈಲಾಗ್ ಹಳೆಯದಾದರೂ ಅವರು ಹೇಳಿರುವುದು ಮಾತ್ರ ಸಂದರ್ಭೋಚಿತವಾಗಿದೆ. ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂಒಡೆತನಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಮಂದೂಡಬೇಕೆಂದು ಆಗ್ರಹಿಸಿ ಹೂಡಲಾಗಿರುವ ಅರ್ಜಿ ಮಂಗಳವಾರ (ಸೆ.28) ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಸಂದರ್ಭದಲ್ಲಿ ಶಾರುಖ್ ಹೇಳಿಕೆ ಪ್ರಾಮುಖ್ಯ ಪಡೆದುಕೊಂಡಿದೆ.
"ಮೊದಲು ನಮ್ಮಲ್ಲಿ ನಂಬಿಕೆಗಳ ಬೀಜ ಬಿತ್ತಬೇಕು. ಅದು ಮೊಳಕೆಯೊಡೆದು ಹೃದಯಲ್ಲಿ ಗಿಡವಾಗಿ ಬೆಳೆಯಬೇಕು. ಆನಂತರವಷ್ಟೆ ನಾವು ಪ್ರಾರ್ಥನಾ ಸ್ಥಳಗಳನ್ನು ಮತ್ತು ದೇವರನ್ನು ಸ್ಪಷ್ಟವಾಗಿ ಕಾಣಲು ಸಾಧ್ಯ. ಕಟ್ಟಡಗಳನ್ನು ಕೆಡುವುದರ ಮೂಲಕ ಭಾರತೀಯರಾದ ನಾವು ಒಬ್ಬರ ಮೇಲೆ ಒಬ್ಬರ ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ" ಎಂದು ವಿಷಾದಿಸಿದ್ದಾರೆ.
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿರುವ ಸಂದರ್ಭದಲ್ಲಿ , ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ, ಅನಿಲ್ ಕಪೂರ್, ಮಧುರ್ ಭಂಡಾರ್ಕರ್ ಮತ್ತು ಸಜಿದ್ ಖಾನ್ ಅವರು ಶಾಂತಿ ಸಹನೆ ಕಾಪಾಡಬೇಕೆಂದು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.
"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ...ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ" ಎಂದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರು ಎಂದೋ ಹಾಡಿದರು. ಈಗ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಹ ಅದನ್ನೆ ಹೇಳಿದ್ದಾರೆ ಟ್ವಿಟ್ಟರ್ನಲ್ಲಿ.


Click it and Unblock the Notifications











