ಚಿತ್ರರಂಗದಲ್ಲಿ 30 ವರ್ಷ, ಏಳು ಬೀಳಿನ ಪ್ರಯಾಣ ; ಅದೊಂದು ಪತ್ರ- ಕರಣ್ ಜೋಹರ್ ಎದುರು ಕಣ್ಣೀರಾದ ರಾಣಿ ಮುಖರ್ಜಿ
ಬಾಲಿವುಡ್ ಅಂಗಳದಲ್ಲಿ ಕೆಲವು ನಟಿಯರು ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ದಶಕಗಳ ಕಾಲ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ. ಅಂತಹ ಅಪರೂಪದ ಪ್ರತಿಭೆಗಳಲ್ಲಿ ಒಬ್ಬರು ರಾಣಿ ಮುಖರ್ಜಿ. ಅವರ ನಟನೆ, ಧ್ವನಿ ಮತ್ತು ಆಕರ್ಷಕ ಕಣ್ಣುಗಳಿಗೆ ಮರುಳಾಗದವರೇ ಇಲ್ಲ. ಅವರು ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರೆ ಸಾಕು, ಅಲ್ಲಿ ಒಂದು ರೀತಿಯ ಮ್ಯಾಜಿಕ್ ಸೃಷ್ಟಿಯಾಗುತ್ತದೆ.
ಸಿನಿಮಾ ರಂಗದಲ್ಲಿ ಅಧಿಪತ್ಯ ಸ್ಥಾಪಿಸುವುದು ಸುಲಭದ ಮಾತಲ್ಲ. ಇಲ್ಲಿ ಏಳುಬೀಳುಗಳು ಸಹಜ. ಆದರೆ ಸತತ ಮೂರು ದಶಕಗಳ ಕಾಲ ತನ್ನದೇ ಆದ ಛಾಪು ಮೂಡಿಸುವುದು ಒಂದು ದೊಡ್ಡ ಸಾಧನೆ. ರಾಣಿ ಈಗ ಇಂತಹದ್ದೇ ಒಂದು ಮೈಲಿಗಲ್ಲನ್ನು ತಲುಪಿದ್ದಾರೆ. ಇತ್ತೀಚೆಗೆ ನಡೆದ ಒಂದು ವಿಶೇಷ ಕಾರ್ಯಕ್ರಮದಲ್ಲಿ ಈ ಸಂಭ್ರಮವನ್ನು ಆಚರಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ತಮ್ಮ ಬದುಕಿನ ಪ್ರಯಾಣವನ್ನು ಹಿಂದೆ ತಿರುಗಿ ನೋಡುತ್ತಾ ರಾಣಿ ಭಾವುಕರಾದರು. ಕಣ್ಣೀರು ಹಾಕಿದರು.

ಹೌದು, ಅಸಲಿಗೆ ರಾಣಿ ಮುಖರ್ಜಿ ಆರಂಭ ಚಿತ್ರರಂಗದಲ್ಲಿ ಸುಲಭವಾಗಿ ಇರಲಿಲ್ಲ. ಕಾಜೋಲ್ ಅವರ ಸಂಬಂಧಿಯಾದರೂ, ಪ್ರಖ್ಯಾತ ನಿರ್ದೇಶಕ ರಾಮ್ ಮುಖರ್ಜಿಯ ಮಗಳಾಗಿದ್ದರೂ ಕೂಡ.. ಅಡಿಗಡಿಗೂ ರಾಣಿ ಅವರನ್ನು ಅವಮಾನ ಮಾಡಲಾಗಿತ್ತು. ವಿಶೇಷವಾಗಿ ಇವರ ಹಸ್ಕಿ ವಾಯ್ಸ್ ಕೇಳಿ ಬಾಲಿವುಡ್ ಅಪಹಾಸ್ಯ ಮಾಡಿತ್ತು.
ಆಮಿರ್ ಖಾನ್ ತಮ್ಮ ''ಗುಲಾಮ್'' ಚಿತ್ರಕ್ಕೆ ರಾಣಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು ಕೂಡ ಡಬ್ಬಿಂಗ್ ರಾಣಿ ಅವರಿಂದ ಮಾಡಿಸಿರಲಿಲ್ಲ. ಬದಲಿಗೆ ಶ್ರೀದೇವಿ ಅವರ ಉದಾಹರಣೆಯನ್ನು ನೀಡಿ ಬೇರೆಯವರಿಂದ ರಾಣಿ ಪಾತ್ರಕ್ಕೆ ಧ್ವನಿ ಕೊಡಿಸಿದ್ದರು. ಇದು ರಾಣಿ ಮುಖರ್ಜಿ ಮನಸಿಗೆ ತುಂಬಾನೇ ನೋವುಂಟು ಮಾಡಿತ್ತು. ಕರಣ್ ಜೋಹರ್ ಜೊತೆಯಲ್ಲಿ ಕಷ್ಟ ಸುಖ ಹಂಚಿಕೊಳ್ಳುವಾಗ ಈ ವಿಚಾರದ ಪ್ರಸ್ತಾಪವಾದಾಗ ರಾಣಿ ಕಣ್ಣೀರು ಹಾಕಿದರು. ಕರಣ್ ಜೋಹರ್ ಆ ನಂತರ ಸಮಾಧಾನ ಪಡಿಸಿದರು.

ರಾಣಿ ಮುಖರ್ಜಿಯ 30 ವರ್ಷದ ಸಂಭ್ರಮಕ್ಕೆ ಗೆಳೆಯ ಕರಣ್ ಜೋಹರ್ ಸಾಥ್
ಬಾಲಿವುಡ್ಗೆ ರಾಣಿ ಮುಖರ್ಜಿ ಚಿತ್ರರಂಗಕ್ಕೆ ಕಾಲಿಟ್ಟು ಈಗ ಭರ್ತಿ 30 ವರ್ಷಗಳಾಗಿವೆ. ಈ ಸುದೀರ್ಘ ಪಯಣವನ್ನು ಸಂಭ್ರಮಿಸಲು ನಿರ್ದೇಶಕ ಕರಣ್ ಜೋಹರ್ ಕೂಡ ಜೊತೆಯಾಗಿದ್ದರು. ರಾಣಿ ಮತ್ತು ಕರಣ್ ನಡುವಿನ ಸ್ನೇಹ ಜಗತ್ತಿಗೇ ತಿಳಿದಿದೆ. ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಅವರು ರಾಣಿಯ ಬಗ್ಗೆ ಆಡಿದ ಮಾತುಗಳು ಎಲ್ಲರ ಗಮನ ಸೆಳೆದವು. "ರಾಣಿ ಮುಖರ್ಜಿ ಕೇವಲ ಒಬ್ಬ ನಟಿಯಲ್ಲ, ಅವರು ಒಂದು ಭದ್ರವಾದ ಅಡಿಪಾಯದ ಮೇಲೆ ನಿಂತಿರುವ 'ಸಾಲಿಡ್ ಫ್ರಾಂಚೈಸಿ' ಇದ್ದಂತೆ" ಎಂದು ಕರಣ್ ಹಾಡಿ ಹೊಗಳಿದರು.
ಮಗಳು ಅದಿರಾ ಬರೆದ ಪತ್ರಕ್ಕೆ ರಾಣಿ ಭಾವುಕ...
ಸಂಭ್ರಮದ ನಡುವೆಯೇ ಕರಣ್ ಜೋಹರ್ ಒಂದು ಸರ್ಪ್ರೈಸ್ ನೀಡಿದರು. ಅದು ರಾಣಿ ಮುಖರ್ಜಿ ಅವರ ಮುದ್ದಿನ ಮಗಳು ಅದಿರಾ ಬರೆದಿದ್ದ ಪತ್ರ. "ನೀನೇ ಜಗತ್ತಿನ ಬೆಸ್ಟ್ ತಾಯಿ" ಎಂದು ಮಗಳು ಆ ಪತ್ರದಲ್ಲಿ ಬರೆದಿದ್ದಳು. ಕರಣ್ ಆ ಪತ್ರವನ್ನು ಓದುತ್ತಿದ್ದಂತೆ ರಾಣಿ ಮುಖರ್ಜಿ ಅವರಿಗೆ ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ವೇದಿಕೆಯ ಮೇಲೆಯೇ ಅವರು ಕಣ್ಣೀರು ಹಾಕಿದರು. ಒಬ್ಬ ನಟಿಯಾಗಿ ಸಾವಿರಾರು ಪ್ರಶಸ್ತಿಗಳನ್ನು ಗೆದ್ದಿದ್ದರೂ, ಮಗಳಿಂದ ಸಿಕ್ಕ ಈ 'ಅತ್ಯುತ್ತಮ ತಾಯಿ' ಎಂಬ ಬಿರುದು ಅವರಿಗೆ ಎಲ್ಲಕ್ಕಿಂತ ದೊಡ್ಡದಾಗಿ ಕಂಡಿತು.
ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಅಭಿಮಾನಿಗಳು...
ಮಗಳ ಪತ್ರವನ್ನು ಕರಣ್ ಜೋಹರ್ ಓದಿದ ನಂತರ ರಾಣಿ ಭಾವುಕರಾದರು. ಕರಣ್ ಜೋಹರ್ ಅವರಿಂದ ತಮ್ಮ ಮಗಳು ಬರೆದ ಪತ್ರವನ್ನು ಕೇಳಿ ಪಡೆದರು. ಮಗಳು ಅದಿರಾ ತನ್ನ ತಾಯಿಯ ಸಾಧನೆಯನ್ನು ಎಷ್ಟು ಪ್ರೀತಿಸುತ್ತಾಳೆ ಎಂಬುದು ಆ ಪತ್ರದಲ್ಲಿ ಸ್ಪಷ್ಟವಾಗಿತ್ತು. ವೃತ್ತಿಜೀವನದ 30 ವರ್ಷಗಳ ಮೈಲಿಗಲ್ಲು ಒಂದು ಕಡೆಯಾದರೆ, ತಾಯಿಯಾಗಿ ಮಗಳ ಪ್ರೀತಿ ಪಡೆದ ಸಂಭ್ರಮ ಇನ್ನೊಂದು ಕಡೆ. ರಾಣಿ ಅವರ ಈ ಪ್ರೇಮ ಮತ್ತು ಕಣ್ಣೀರು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











