ಸ್ಮೃತಿ ಮಂಧಾನ ಮಾತ್ರವಲ್ಲ: ಆರ್ಸಿಬಿ ಕ್ಯಾಪ್ಟನ್ನ ಸ್ನೇಹಿತನಿಗೂ ಪಲಾಶ್ ಮುಚ್ಚಲ್ನಿಂದ ಮೋಸ- 40 ಲಕ್ಷ ಉಂಡೆನಾಮ
ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೇಗಾದರೂ ಸರಿ....
ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತಕ್ಕೆ ಬೀಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುವ ಇವರು ಎದುರಗಡೆ ಇರುವ ವ್ಯಕ್ತಿ ಚೂರು ಯಾಮಾರಿದರೂ ಸಾಕು ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಈ ಸಾಲಿನಲ್ಲಿ ಸ್ಮೃತಿ ಮಂಧಾನ ಅವರ ಮಾಜಿ ಪ್ರಿಯಕರ ಮತ್ತು ಸಂಗೀತ ನಿರ್ದೇಶಕ ಕಂ ನಿರ್ದೇಶಕ ಪಲಾಶ್ ಮುಚ್ಚಲ್ ಕೂಡ ಇದ್ದಾರೆ ಎನ್ನುವುದೇ ಸದ್ಯದ ಶಾಕಿಂಗ್ ಸಮಾಚಾರ.

ಹೌದು, ಪಲಾಶ್ ಮುಚ್ಚಲ್.. ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸಹೋದರ. ಬಾಲಿವುಡ್ನಲ್ಲಿ ಈಗಾಗಲೇ ಸಂಗೀತ ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿರುವ ಪಲಾಶ್ ''ಡಿಶ್ಕ್ಯಾಂವ್''.. ''ಅರ್ಧ''.. ''ಭೂತನಾಥ್ ರಿಟರ್ನ್ಸ್''.. ''ಅಮಿತ್ ಸಹಾನಿ ಕಿ ಲಿಸ್ಟ್''.. ''ಮಿಸ್ ತನಕಪುರ ಹಾಜಿರ್ ಹೋ''.. ಅಂತಹ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.
ಬಾಲಿವುಡ್ನ ಅತೀ ಕಿರಿಯ ಸಂಗೀತ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಪಲಾಶ್ ''ಆರ್ಧ'' ಮತ್ತು ''ಕಾಮ್ ಚಾಲೂ ಹೈ'' ಚಿತ್ರಗಳ ನಿರ್ದೇಶಕ ಕೂಡ ಹೌದು. ಸದ್ಯ ''ರಾಜು ಬಾಜೇವಾಲಾ'' ಎಂಬ ಇವರ ನಿರ್ದೇಶನದ ಚಿತ್ರ ತೆರೆಗೆ ಬರಬೇಕಿದೆ.
ಇಂಥಾ ಪಲಾಶ್ ಮುಚ್ಚಲ್ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಜೊತೆ ಕಳೆದ ವರ್ಷದ ಅಂತ್ಯದಲ್ಲಿ ಮದುವೆಯಾಗಬೇಕಿತ್ತು. ಸಪ್ತಪದಿ ತುಳಿಯಬೇಕಿತ್ತು.
ಆದರೆ, ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇದ್ದಾಗ ಈ ಮದುವೆ ಮುರಿದು ಬಿತ್ತು. ಇದಕ್ಕೆ ಕಾರಣವೇನು ಎನ್ನುವುದು ಇವರಿಬ್ಬರಿಗೆ ಗೊತ್ತಾದರೂ ಹಲವರು ಸ್ಮೃತಿ ಮಂಧಾನ ಬೆನ್ನಿಗೆ ಪಲಾಶ್ ಚೂರಿ ಹಾಕಿದ್ದಾರೆ ಎಂದು ಮಾತನಾಡಿದರು. ಇದಕ್ಕೆ ಪೂರಕವಾಗಿ ಬೇರೆ ಯುವತಿಗೆ ಪಲಾಶ್ ಮಾಡಿದ್ದ ಮೆಸೇಜ್ಗಳು ಜಗಜ್ಜಾಹೀರಾಗಿದ್ದವು. ಸ್ಕ್ರೀನ್ ಶಾಟ್ ವೈರಲ್ ಆಗಿದ್ದವು.

ಆ ನಂತರ ಸ್ಮೃತಿ ಮರಳಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಮರಳಿದರು. ಪಲಾಶ್ ಕೂಡ ಹಳೆಯದನ್ನೆಲ್ಲ ಮರೆತು ಮತ್ತೆ ಹೊಸ ಆರಂಭ ಮಾಡಲು ಸಿದ್ಧರಾಗಿದ್ದಾರೆ. ನಿರ್ದೇಶಕನಾಗಿ ಹೊಸ ಚಿತ್ರವನ್ನು ಮೊನ್ನೆ ಮೊನ್ನೆಯಷ್ಟೇ ಶುರು ಮಾಡಿದ್ದಾರೆ. ಹೀಗಿರುವಾಗ ಇದೀಗ ಪಲಾಶ್ ಮುಚ್ಚಲ್ ಮೇಲೆ ವಂಚನೆಯ ಆರೋಪ ಕೇಳಿ ಬಂದಿದೆ. ಸಾಂಗ್ಲಿ ಜಿಲ್ಲಾ ಪೊಲೀಸರಿಗೆ ದೂರನ್ನು ಕೂಡ ದಾಖಲಿಸಲಾಗಿದೆ. ದೂರು ನೀಡಿದ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಸ್ಮೃತಿ ಮಂಧಾನ ಅವರ ಬಾಲ್ಯದ ಸ್ನೇಹಿತ ವೈಭವ್ ಮಾನೆ ಎನ್ನುವುದು ವಿಶೇಷ.
ವೃತ್ತಿಯಲ್ಲಿ ಫೈನಾನ್ಸಿಯರ್ ಆಗಿರುವ ವೈಭವ್ ಮಾನೆ ಸಲ್ಲಿಸಿರುವ ದೂರಿನ ಪ್ರಕಾರ ವೈಭವ್ ಮಾನೆ ಅವರಿಗೆ ''ನಜರಿಯಾ'' ಚಿತ್ರವನ್ನು ಮಾಡುತ್ತಿರುವುದಾಗಿ ಪಲಾಶ್ ಮುಚ್ಚಲ್ ಹೇಳಿದ್ದರು. ಇದೇ ನೆಪದಲ್ಲಿ ಪರಿಚಯವಾಗಿದ್ದರು. ಖುದ್ದು ಸ್ಮೃತಿ ಮಂಧಾನ ಅವರ ತಂದೆಯೇ ವೈಭವ್ ಅವರಿಗೆ ಪಲಾಶ್ ಅವರ ಪರಿಚಯ ಮಾಡಿಸಿದ್ದರು.
ಆ ನಂತರ ಸಿನಿಮಾದಲ್ಲಿ ಹಣ ಹೂಡುವಂತೆ ಪುಸಲಾಯಿಸಿರುವ ಪಲಾಶ್ ಮುಚ್ಚಲ್, ಓಟಿಟಿಯಲ್ಲಿ ಚಿತ್ರ ಬಹುಬೇಗ ಬರುತ್ತೆ, ಹಾಕಿದ ಬಂಡವಾಳದ ಮೇಲೆ ಲಾಭವೂ ಬರುತ್ತೆ ಹೇಳಿದ್ದರು. ಪಲಾಶ್ ಮಾತುಗಳನ್ನು ಕೇಳಿ ಮರುಳಾದ ವೈಭವ್ 40 ಲಕ್ಷ ಹಣದಲ್ಲಿ ಒಂದಿಷ್ಟು ಹಣ Google Pay ಮೂಲಕ ಮತ್ತಷ್ಟು ಹಣ ಕ್ಯಾಶ್ ರೂಪದಲ್ಲಿ ನೀಡಿದ್ದರು.
ಆದರೆ. ಆ ಸಿನಿಮಾ ಮುಗಿಯಲೇ ಇಲ್ಲ. ಹಣ ಕೂಡ ಮರಳಿ ಬರಲಿಲ್ಲ. ಈ ಹಿನ್ನೆಲೆ ಪಲಾಶ್ ಮುಚ್ಚಲ್ಗೆ ಹಣ ಮರಳಿ ನೀಡುವಂತೆ ವೈಭವ್ ಕೇಳಿದ್ದರು. ಆರಂಭದಲ್ಲಿ ಪಲಾಶ್ ಕೂಡ ಕೊಡುವುದಾಗಿ ಹೇಳಿದ್ದರು. ಆದರೆ, ಆ ನಂತರ ವೈಭವ್ ಕರೆಯನ್ನು ಸ್ವೀಕರಿಸದ ಪಲಾಶ್ ಕೊನೆ ಕೊನೆಗೆ ವೈಭವ್ ನಂಬರ್ನ್ನೇ ಬ್ಲಾಕ್ ಮಾಡಿದರು.
ಹೀಗಾಗಿ ಬೇರೆ ದಾರಿ ಇಲ್ಲದೇ ಸದ್ಯ ವೈಭವ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ದೂರು ಸಲ್ಲಿಸಿ ತಮ್ಮ ನಡುವೆ ನಡೆದ ವ್ಯವಹಾರದ ದಾಖಲಾತಿಗಳನ್ನು ಕೂಡ ಸಲ್ಲಿಸಿದ್ದಾರೆ. ಪೊಲೀಸರು ದೂರು ಹಾಗೂ ಒದಗಿಸಲಾದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ತಮ್ಮ ವಿರುದ್ಧದ ಈ ಆರೋಪಕ್ಕೆ ಪಲಾಶ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











