ಅರೆಸ್ಟ್ ಆಗ್ತಾರಾ ಕುಡ್ಲದ ಕಿನ್ನರಿ..? ಶಿಲ್ಪಾ ಶೆಟ್ಟಿಗೆ ಉರುಳಾಯಿತು 60 ಕೋಟಿ
ಈಗೀಗ ಸೆಲೆಬ್ರೆಟಿಗಳ ಮೇಲೆ ವಂಚನೆ, ದ್ರೋಹ, ಚೆಕ್ ಬೌನ್ಸ್ ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ 60 ಕೋಟಿ ರೂಪಾಯಿ ಹಣಕಾಸು ವಂಚನೆ ಆರೋಪ ಕೇಳಿ ಬಂದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಲುಕೌಟ್ ನೊಟೀಸ್ ಜಾರಿ ಮಾಡಲಾಗಿದೆ.
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಒಡೆತನದಲ್ಲಿದ್ದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ನ ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ದೀಪಕ್ ಕೊಠಾರಿ ಎಂಬ ಉದ್ಯಮಿಗೆ ₹60 ಕೋಟಿ ವಂಚಿಸಿದ ಆರೋಪ ಇವರ ಮೇಲಿದ್ದು, ಮುಂಬೈ ಪೊಲೀಸರು ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಲುಕ್ಔಟ್ ಸರ್ಕ್ಯುಲರ್ (LOC) ಹೊರಡಿಸಿದ್ದಾರೆ.

ಇನ್ನೂ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಆಗಾಗ ವಿದೇಶ ಪ್ರಯಾಣ ಬೆಳೆಸುತ್ತಿರುವುದನ್ನು ಗಮನಿಸಿ, ''ಇ.ಒ.ಡಬ್ಲ್ಯೂ'' (ಆರ್ಥಿಕ ಅಪರಾಧ ವಿಭಾಗ) ಈ ಲುಕ್ ಔಟ್ ನೊಟೀಸ್ ಹೊರಡಿಸಿದ್ದು ಜುಹು ಪೊಲೀಸ್ ಠಾಣೆಯಲ್ಲಿ ಆಗಸ್ಟ್ 14ರಂದು ಈ ಪ್ರಕರಣ ದಾಖಲಾಗಿದೆ ಎಂದು NDTV ಮತ್ತು ಇಂಡಿಯಾ ಟುಡೇ ವರದಿಯನ್ನು ಮಾಡಿವೆ.
ಲೋನ್-ಕಮ್-ಇನ್ವೆಸ್ಟ್ಮೆಂಟ್ ಒಪ್ಪಂದದಲ್ಲಿ ಉದ್ಯಮಿಯೊಬ್ಬರಿಗೆ ಸುಮಾರು ₹60 ಕೋಟಿ ವಂಚಿಸಿರುವ ಆರೋಪ ಇವರ ಮೇಲೆ ಹೊರಿಸಲಾಗಿದ್ದು, ಮುಂಬೈ ಮೂಲದ ದೀಪಕ್ ಕೊಠಾರಿ ಎಂಬ ಉದ್ಯಮಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ್ದಾರೆ. 2015 ಮತ್ತು 2023ರ ನಡುವೆ ವ್ಯವಹಾರ ವಿಸ್ತರಣೆಗಾಗಿ ಉದ್ದೇಶಿಸಿದ್ದ ಹಣವನ್ನು ವೈಯಕ್ತಿಕ ಬಳಕೆಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೊಠಾರಿ ತಿಳಿಸಿದ್ದಾರೆ.
ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವಿಸಸ್ನ ನಿರ್ದೇಶಕರಾಗಿರುವ ಕೊಠಾರಿ, ರಾಜೇಶ್ ಆರ್ಯ ಎಂಬುವರ ಮೂಲಕ ಇವರಿಬ್ಬರ ಪರಿಚಯವಾಯ್ತು ಎಂದು ಹೇಳಿದ್ದಾರೆ. ಆ ಸಮಯದಲ್ಲಿ, ಬೆಸ್ಟ್ ಡೀಲ್ ಟಿವಿ ಕಂಪನಿಯ ಶೇ. 87.6ರಷ್ಟು ಷೇರುಗಳು ಈ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಬಳಿ ಇದ್ದವು ಈ ಹಿನ್ನೆಲೆ ಪ್ರಾರಂಭದಲ್ಲಿ ₹75 ಕೋಟಿ ಸಾಲವನ್ನು ಶೇ. 12ರ ಬಡ್ಡಿದರದಲ್ಲಿ ಕೇಳಿದ ದಂಪತಿ, ನಂತರ ತೆರಿಗೆ ಕಡಿಮೆ ಮಾಡಲು ಹಣವನ್ನು 'ಹೂಡಿಕೆ'ಯ ರೂಪದಲ್ಲಿ ಹಾಕುವಂತೆ ಕೊಠಾರಿಗೆ ಮನವೊಲಿಸಿದರು. ಮಾಸಿಕ ಆದಾಯ ಮತ್ತು ಅಸಲು ಮರುಪಾವತಿ ಮಾಡುವ ಭರವಸೆಗಳನ್ನೂ ನೀಡಿದ್ದರು ಎಂದು ಕೊಠಾರಿ ವಿವರಿಸಿದ್ದಾರೆ.
ಈ ಭರವಸೆಗಳ ಆಧಾರದ ಮೇಲೆ, ಕೊಠಾರಿ ಅವರು 2015ರ ಏಪ್ರಿಲ್ನಲ್ಲಿ ಷೇರು ಚಂದಾ ಒಪ್ಪಂದದ ಅಡಿಯಲ್ಲಿ ₹31.95 ಕೋಟಿ ಮತ್ತು 2015ರ ಸೆಪ್ಟೆಂಬರ್ನಲ್ಲಿ ಪೂರಕ ಒಪ್ಪಂದದ ಮೂಲಕ ಹೆಚ್ಚುವರಿಯಾಗಿ ₹28.53 ಕೋಟಿ ವರ್ಗಾಯಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಣವನ್ನು ಕಂಪನಿಯ HDFC ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿತ್ತು.

ಆದರೆ, ಶಿಲ್ಪಾ ಶೆಟ್ಟಿ 2016ರ ಸೆಪ್ಟೆಂಬರ್ನಲ್ಲಿ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2017ರ ವೇಳೆಗೆ, ಬೆಸ್ಟ್ ಡೀಲ್ ಟಿವಿ ಮತ್ತೊಂದು ಒಪ್ಪಂದದಲ್ಲಿ ಡೀಫಾಲ್ಟ್ ಆದ ಕಾರಣ ಕಂಪನಿಯ ವಿರುದ್ಧ ದಿವಾಳಿತನದ ಪ್ರಕ್ರಿಯೆಗಳು ಆರಂಭಗೊಂಡವು. ಸತತ ಪ್ರಯತ್ನದ ನಂತರವೂ ಕೂಡ ಹಣವನ್ನು ಮರಳಿ ಪಡೆಯಲು ವಿಫಲವಾದ ಹಿನ್ನೆಲೆ ಕೊಠಾರಿ ಔಪಚಾರಿಕ ದೂರು ದಾಖಲಿಸಿದ್ದಾರೆ. ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ಗಳಾದ 403, 406 ಮತ್ತು 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನೂ ನೊಟೀಸ್ ಜಾರಿ ಆದ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಯಾವ ಕ್ಷಣದಲ್ಲಾದರೂ ಬಂಧನಕ್ಕೊಳಗಾಗಬಹುದು ಎಂಬ ಮಾತು ಕೂಡ ಸದ್ಯ ಕೇಳಿ ಬರುತ್ತಿದ್ದು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರನ್ನು ಸದ್ಯ ದೇಶದಿಂದ ಹೊರ ಹೋಗದಂತೆ ತಡೆಯಲಾಗಿದೆ. ಈ ಆರೋಪಗಳಿಗೆ ರಾಜ್ ಕುಂದ್ರಾ ಉತ್ತರ ನೀಡಿದ್ದು ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ತಾವು ನ್ಯಾಯಾಲಯದ ಮೂಲಕವೇ ಇದಕ್ಕೆ ಉತ್ತರ ನೀಡುವುದಾಗಿ ರಾಜ್ ಕುಂದ್ರಾ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.


Click it and Unblock the Notifications











