'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
ಸದನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಅಶ್ಲೀಲ ಚಿತ್ರಗಳ ತುಣುಕುಗಳನ್ನು ವೀಕ್ಷಿಸುತ್ತಿದ್ದ ಮಂತ್ರಿಗಳಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಹಾಗೂ ಕೃಷ್ಣ ಪಾಲೇಮಾರ್ ಅವರ ವಿವಾದದ ವಿಷಯ ಕರ್ನಾಟಕ ದಾಟಿ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿದೆ. ಈ ವಿಷಯ ಬಾಲಿವುಡ್ ತಾರೆಗಳ ಕಿವಿಗೂ ಬಿದ್ದಿದ್ದು ಅವರು ಈ ವಿಷಯವಾಗಿ ತೀಕ್ಷ ಹಾಗೂ ವ್ಯಂಗ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸಂಗೀತ ಸಂಯೋಜಕ ಹಾಗೂ ಹಾಡುಗಾರ ವಿಶಾಲ್ ದಡ್ಲಾನಿ, ತಮ್ಮ ಟ್ವಿಟ್ಟರ್ ನಲ್ಲಿ "ರಾಜಕಾರಣಿಗಳು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ಏನಾಶ್ಚರ್ಯ! ಕೆಲವರು ಕುಡಿತ ಹಾಗೂ ಡ್ರಗ್ಸ್ ಚಟಕ್ಕೂ ಅಂಟಿಕೊಂಡಿದ್ದಾರೆ. ವರದಕ್ಷಿಣೆ ಕೂಡ ತೆಗೆದುಕೊಂಡು ಅಪರಾಧವೆಸಗುತ್ತಾರೆ. ನಾವು ಸಿನಿಮಾಗಳಲ್ಲಿ ಕೇವಲ ನಟಿಸುತ್ತೇವೆ. ಇವರು ನಿಜವಾಗಿಯೂ ಮಾಡುವುದು ಸೋಜಿಗವೇ ಸರಿ ಎಂದಿದ್ದಾರೆ."
ಟ್ವಿಟ್ಟರ್ ನಲ್ಲಿ ನಿರ್ಮಾಪಕ ಪ್ರೀತಿಶ್ ನಂದಿ "ನಮ್ಮದು ಜಗತ್ತಿನಲ್ಲೇ ಅತ್ಯಂತ ಬೂಟಾಟಿಕೆಯಿಂದ ಬದುಕುವ ದೇಶ. 'ತ್ರೀ ಈಡಿಯಟ್ಸ್' ಮಂತ್ರಿಗಳು ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವುದು ನಿಜವಾಗಿಯೂ ನಗೆಪಾಟಲಿನ ವಿಷಯ. ಇದು ರಾಜಕೀಯ ಸಂಗತಿ ಮಾತ್ರವಲ್ಲ, ಇದು ಎಲ್ಲಾ ರಾಜಕಾರಣಿಗಳ ಜೀವನದ ಭಾಗ ಕೂಡ. ಸಿಲ್ವಿಯೋ ಬರ್ಲಿಸ್ಕೋನಿ, ಎನ್ ಡಿ ತಿವಾರಿ, ಅಷ್ಟೇ ಅಲ್ಲ, ಜೆಎಫ್ ಕೆ ಅನುಮೋದಿಸುವವರದೆಲ್ಲಾ ಇದೇ ಗೋಳು" ಎಂದಿದ್ದಾರೆ.
ಇನ್ನು ಸುಪ್ರಸಿದ್ಧ ನಿರ್ದೇಶಕ ರಾಮಗೋಪಾಲ್ ವರ್ಮಾ ವ್ಯಂಗ್ಯವಾಗಿ ಪ್ರತಿಕ್ರಿಯೆ ಹೀಗಿದೆ. "ಮಂತ್ರಿಗಳು ಸದನದ ಕಲಾಪದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದರೆ ನಿಜವಾಗಿಯೂ ಇದು ಭಾರತ ಪ್ರಕಾಶಿಸುತ್ತಿರುವುದರ ಸಂಕೇತ" ಎಂದಿದ್ದಾರೆ. ತಮ್ಮ ಚಿತ್ರಗಳಲ್ಲಿ ವಿವಾದಗ್ರಸ್ಥ ವಿಷಯಗಳನ್ನು ಬಿಂಬಿಸಲು ಹೆದರದ ವರ್ಮಾ, ವ್ಯಂಗ್ಯ ಪ್ರತಿಕ್ರಿಯೆ ಮೂಲಕ ಕರ್ನಾಟಕದ ಮಂತ್ರಿಗಳಿಗೆ ಝಾಡಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











