ಖ್ಯಾತ ನಟಿಯ 'ಖುಷಿ'ಗೆ ಕೊಳ್ಳಿ ಇಟ್ಟ ಮನೆ ಕೆಲಸದವಳು, 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಮನೆ ಕೆಲಸ ಮಾಡುವ ನೆಪದಲ್ಲಿ ಬಂದು ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ಇರೋ ಬರೋ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ವಿಪರ್ಯಾಸ ಅಂದರೆ ಈ ಕಳ್ಳರ ಸುಳಿವು ಕೂಡ ಪೊಲೀಸರಿಗೆ ಸಿಗುವುದಿಲ್ಲ.
ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸದ್ಯ ಖುಷಿ ಮುಖರ್ಜಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಹೌದು, ಖುಷಿ ಮುಖರ್ಜಿ .. ಅಂಗಾಗ ಪ್ರದರ್ಶನ ಮಾಡುವುದನ್ನೇ ಅಭಿನಯ ಎಂದುಕೊಂಡಿರುವ ಚೆಲುವೆ. ಉರ್ಫಿ ಜಾವೇದ್ಗೆ ಸೆಡ್ಡು ಹೊಡೆಯುವಂತೆ ಬಟ್ಟೆಗಳನ್ನು ಧರಿಸಿಕೊಂಡು ಮುಂಬೈನ ಬೀದಿ ಬೀದಿಗಳಲ್ಲಿ ಓಡಾಡುವ ಖುಷಿ ಮುಖರ್ಜಿ ಸದ್ಯ ಟ್ರೋಲಿಗರ ಪಾಲಿನ ತಾಂಬೂಲವು ಹೌದು.

ತಮ್ಮ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಚಿತ್ರವನ್ನು ಮಾಡದ ಖುಷಿ ಮುಖರ್ಜಿ ಬಿ ಗ್ರೇಡ್ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. 2013ರಲ್ಲಿ ಒಂದು ತಮಿಳು ಮತ್ತು 2014ರಲ್ಲೊಂದು ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ದಕ್ಷಿಣದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.
ಇಂಥಾ ಖುಷಿ ಮುಖರ್ಜಿ ತಮ್ಮ ಮನೆಯಲ್ಲಿ ₹25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಹೇಳಿದ್ದಾರೆ. ಈ ಕೃತ್ಯದ ಹಿಂದೆ ಮನೆ ಕೆಲಸದವಳದ್ದೇ ಕೈವಾಡ ಇರಬಹುದು ಎಂದು ಅನುಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬರೆದುಕೊಂಡಿರುವ ಖುಷಿ ಮುಖರ್ಜಿ, ನಿಮ್ಮ ಮನೆಯಲ್ಲಿ ನೀವು ತುಂಬಾ ನಂಬಿದ ವ್ಯಕ್ತಿಯೊಬ್ಬರು ಈ ರೀತಿ ದ್ರೋಹ ಮಾಡಿದಾಗ ತುಂಬಾ ಬೇಸರವಾಗುತ್ತೆ. ಆಭರಣಗಳಿಗಿಂತ ಹೆಚ್ಚಾಗಿ ಇದು ಸುರಕ್ಷತೆ ಮತ್ತು ವಿಶ್ವಾಸದ ವಿಷಯ ಎಂದು ಹೇಳಿದ್ದಾರೆ.
ಸದ್ಯ ಖುಷಿ ಮುಖರ್ಜಿ ಸಲ್ಲಿಸಿರುವ ದೂರಿನ ಅನ್ವಯ ಪೊಲೀಸರು ಖುಷಿ ಮುಖರ್ಜಿ ಅವರ ಮನೆ ಕೆಲಸದಾಕೆಯನ್ನು ಹುಡುಕುತ್ತಿದ್ದಾರೆ. ಇದೇ ಸಮಯದಲ್ಲಿ ಅಪರಾಧಿಗೆ ಕಠಿಣವಾದ ಶಿಕ್ಷೆಯಾಗಬೇಕೆಂದು ಕೂಡ ಖುಷಿ ಮುಖರ್ಜಿ ಪೊಲೀಸರಲ್ಲಿ ಆಗ್ರಹಿಸಿದ್ದಾರೆ ಎಂದು ಕೂಡ '' ಅಮರ್ ಉಜಾಲಾ'' ವರದಿಯನ್ನು ಮಾಡಿದೆ.

ಪೊಲೀಸರು ಸದ್ಯ ತನಿಖೆಯನ್ನು ಮಾಡುತ್ತಿದ್ದು, ಮನೆ ಕೆಲಸದವಳು ಸಿಕ್ಕ ನಂತರವಷ್ಟೇ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ನಿಜಕ್ಕೂ 25 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ್ದು ಮನೆ ಕೆಲಸದಾಕೆನಾ ಅಥವಾ ಬೇರೆ ಯಾರದ್ದಾದರೂ ಇದರಲ್ಲಿ ಕೈವಾಡ ಇದೆಯಾ ಎನ್ನುವ ಪ್ರಶ್ನೆಗಳಿಗೆ ಕೂಡ ಉತ್ತರ ಆಗಲೇ ಸಿಗಲಿದೆ.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ''ಜೀ ನ್ಯೂಸ್''ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಖುಷಿ ಮುಖರ್ಜಿ, ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದರು. ಅವಕಾಶಕ್ಕಾಗಿ ನಾನು ಅಲೆದಾಡುತ್ತಿದ್ದ ದಿನಗಳಲ್ಲಿ ನನ್ನನ್ನು ಹೈದರಾಬಾದ್ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಒಬ್ಬ ನಿರ್ಮಾಪಕರಿಗೆ ಮಾರಲು ಪ್ರಯತ್ನ ಮಾಡಿದ್ದ ಎಂದು ಹೇಳಿದ್ದರು.
ಖುಷಿ ಮುಖರ್ಜಿ ಅವರ ಈ ಹೇಳಿಕೆಯಿಂದ ಸಾಕಷ್ಟು ಚರ್ಚೆ ಕೂಡ ನಡೆದಿತ್ತು. ಆ ಕಾಸ್ಟಿಂಗ್ ಡೈರೆಕ್ಟರ್ ಯಾರು ? ಖುಷಿ ಮುಖರ್ಜಿ ಜೊತೆ ಹಾಸಿಗೆ ಹಂಚಿಕೊಳ್ಳಲು ಬಯಸಿದ್ದ ಆ ನಿರ್ಮಾಪಕ ಯಾರು ? ಎನ್ನುವುದರ ಕುರಿತು ಒಂದು ವರ್ಗ ಸೋಶಿಯಲ್ ಮೀಡಿಯಾದಲ್ಲಿ ತಲೆಯನ್ನು ಕೂಡ ಕೆಡಿಸಿಕೊಂಡಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ವಿರುದ್ದ ಸಮರ ಸಾರಿ ತನಿಖೆಯನ್ನು ಕೂಡ ಮಾಡಲು ಶುರು ಮಾಡಿತ್ತು. ಅದರ ಫಲಿತಾಂಶ ಏನಾಯ್ತು ಗೊತ್ತಿಲ್ಲ. ಅಷ್ಟರಲ್ಲಿ ಈಗ ಖುಷಿ ಮುಖರ್ಜಿ ಈ ಕಳ್ಳತನದ ಆರೋಪ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.


Click it and Unblock the Notifications











