ರಾಮ ಮಂದಿರದ ವಾಚ್ ಧರಿಸಿದ್ದಕ್ಕಾಗಿ ಸಲ್ಮಾನ್ ಖಾನ್ ವಿರುದ್ಧ ಮುಸ್ಲಿಂ ಧರ್ಮಗುರುಗಳ ಆಕ್ರೋಶ...!
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಹುಟ್ಟುಕೊಂಡಿದೆ. ಇದಕ್ಕೆ ಸಲ್ಮಾನ್ ಖಾನ್ ಅವರ ಇತ್ತೀಚಿನ ಪ್ರಕರಣ ಮತ್ತೊಂದು ಉದಾಹರಣೆ.
ಹೌದು, ಅಸಲಿಗೆ ಚಿತ್ರರಂಗದಲ್ಲಿ ಇರುವವರಿಗೆ ಸಾಮಾನ್ಯವಾಗಿ ಮೂರು ಮತ್ತೊಂದು ಶೋಕಿಗಳಿರುತ್ತವೆ. ಕೆಲವರಿಗೆ ಡ್ರೈವಿಂಗ್ ಹುಚ್ಚು ತಲೆಗೇರಿದರೆ, ಇನ್ನೂ ಕೆಲವರಿಗೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವ ಹುಚ್ಚಿರುತ್ತೆ. ಮತ್ತೂ ಕೆಲವರಿಗೆ ದುಬಾರಿ ಬೆಲೆಯ ಪರಿಕರಗಳನ್ನು ಉಪಯೋಗಿಸಿ ಆ ನಂತರ ಎಸೆಯುವ ಹುಚ್ಚಿರುತ್ತದೆ. ಹೀಗೆ ನಾನಾ ಬಗೆಯ ಹುಚ್ಚು ಉರುಫ್ ಶೋಕಿಗೆ ಒಳಗಾಗಿರುವ ಸಿನಿಮಾ ತಾರೆಯರು ದಾರಿಗೊಬ್ಬರಾದರೂ ಸಿಗುತ್ತಲೇ ಇರುತ್ತಾರೆ. ಸಲ್ಮಾನ್ ಖಾನ್ ಕೂಡ ಇದರಿಂದ ಹೊರತಾಗಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಸಲ್ಮಾನ್ ಖಾನ್ ಗೆ ದುಬಾರಿ ಬೆಲೆಯ ವಾಚ್ಗಳನ್ನು ಖರೀದಿಸುವ ಹುಚ್ಚಿದೆ. ಹಿಂದೆ ಎಲ್ಲ ಸಲ್ಮಾನ್ ಖಾನ್ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಾಚ್ಗಳನ್ನು ಧರಿಸಿ ಫೋಸ್ ಕೊಟ್ಟಿದ್ದು ಇದೆ. ಮೊನ್ನೆ ಕೂಡ ಸಲ್ಮಾನ್ ಮಾಡಿದ್ದು ಇದನ್ನೇ. ಅಯೋಧ್ಯೆಯ ಶ್ರೀರಾಮ ಮಂದಿರದ ಸ್ಪೆಷಲ್ ಎಡಿಷನ್ ವಾಚ್ ಧರಿಸಿ ಸಲ್ಮಾನ್ ಖಾನ್ ಕ್ಯಾಮರಾಗೆ ಫೋಸ್ ನೀಡಿದ್ದರು. ಆದರೆ ಈಗ ಇದೇ ಸಮಸ್ಯೆಯಾಗಿದೆ. ಸಲ್ಮಾನ್ ಖಾನ್ ಅವರ ಈ ವಾಚ್ ಶೋಕಿ ಮುಸ್ಲಿಂ ಧರ್ಮಗುರುಗಳ ಕಣ್ಣಿಗೆ ಹರಾಮ್ನಂತೆ ಕಾಣುತ್ತಿದೆ.
ಈ ಕುರಿತು ಅಪಸ್ವರ ತೆಗೆದಿರುವ ಆಲ್ ಇಂಡಿಯಾ ಮುಸ್ಲಿಂ ಜಮಾತ್ನ ಮೌಲಾನಾ ಶಹಾಬುದ್ದೀನ್ ರಾಜ್ವಿ, ಮುಸ್ಲಿಂ ವ್ಯಕ್ತಿಯಾಗಿ ರಾಮ ಮಂದಿರದ ಪ್ರಚಾರಕ್ಕೆ ತಯಾರಿಸಿದ ರಾಮ ಮಂದಿರ ಆವೃತ್ತಿಯ ವಾಚ್ ಧರಿಸಿದ್ದು ತಪ್ಪು ಎಂದು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸಲ್ಮಾನ್ ಖಾನ್ ಭಾರತದ ಅತ್ಯಂತ ಜನಪ್ರಿಯ ವ್ಯಕ್ತಿಯಲ್ಲೊಬ್ಬರು. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ ಎಂದಿರುವ ಮೌಲಾನಾ ಶಹಾಬುದ್ದೀನ್ ರಾಜ್ವಿ ಇಸ್ಲಾಂ ವಿರೋಧಿ ಚಟುವಟಿಕೆಗಳಿಂದ ಸಲ್ಮಾನ್ ಖಾನ್ ದೂರ ಇರಬೇಕು ಎಂದು ಆಗ್ರಹಿಸಿದ್ದಾರೆ. ಸಲ್ಮಾನ್ ಖಾನ್ ಆಗಿರಲಿ ಅಥವಾ ಬೇರೆ ಯಾವುದೇ ಮುಸ್ಲಿಂ ವ್ಯಕ್ತಿಯಾಗಿರಲಿ ರಾಮಮಂದಿರ ಅಥವಾ ಬೇರೆ ಇತರೆ ಮುಸ್ಲಿಮೇತರ ವಿಚಾರ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದರೆ ಅದನ್ನು ಇಸ್ಲಾಂನಲ್ಲಿ ಕಾನೂನುಬಾಹಿರ ಮತ್ತು ಹರಾಮ್ ಎಂದು ಪರಿಗಣಿಸಲಾಗುತ್ತೆ ಎಂದು ಹೇಳಿದ್ದಾರೆ. ಶರಿಯತ್ ತತ್ವಗಳನ್ನು ಸಲ್ಮಾನ್ ಖಾನ್ ಚಾಚು ತಪ್ಪದೇ ಅನುಸರಿಸಬೇಕೆಂದು ಕಿಡಿ ಕಾರಿದ್ದಾರೆ.
ಮೌಲಾನಾ ಶಹಾಬುದ್ದೀನ್ ರಾಜ್ವಿ ಅವರಾಡಿದ ಈ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿಯನ್ನು ಹಾಡಿವೆ. ಕೆಲವರು ಮೌಲಾನಾ ಅವರ ಮಾತುಗಳನ್ನು ಸಮರ್ಥಿಸಿಕೊಂಡರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ವಿಚಾರದಲ್ಲಿಯೂ ಧರ್ಮವನ್ನು ಎಳೆದು ತರುವುದು ತಪ್ಪು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ಸಲ್ಮಾನ್ ಖಾನ್ ಧರಿಸಿದ್ದ ರಾಮ ಜನ್ಮಭೂಮಿಯ ವಾಚ್ನ ಬೆಲೆ 36 ಲಕ್ಷ. ರಾಮಮಂದಿರದ ವಿನ್ಯಾಸವನ್ನು ಒಳಗೊಂಡಿರುವ ಈ ವಾಚ್ನಲ್ಲಿ ಶ್ರೀರಾಮ ಮತ್ತು ಹನುಮಂತನ ಚಿತ್ರಣ ಕೂಡ ಇದೆ. ಇನ್ನುಳಿದಂತೆ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರ ಈದ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಈ ಭಾನುವಾರ { ಮಾರ್ಚ್ 30 } ತೆರೆಗೆ ಬರಲಿದೆ. ಬೆಳ್ಳಿತೆರೆಯಲ್ಲಿ ಸಿಕಂದರ್ ದರ್ಶನ ಮಾಡಲು ಸಲ್ಮಾನ್ ಖಾನ್ ಭಕ್ತಗಣ ಕಾತುರದಿಂದ ಕಾದು ಕುಂತಿದೆ.


Click it and Unblock the Notifications











