ಬಾಲಿವುಡ್ನಲ್ಲಿ ಕೊನೆಗೂ ಆಗಲಿದೆ ಮಹಾಸಂಗಮ, ಒಂದೇ ಚಿತ್ರದಲ್ಲಿ ಶಾರುಖ್, ಸಲ್ಮಾನ್ ಮತ್ತು ಅಮೀರ್ ಖಾನ್ ..!
ಬೆಳ್ಳಿತೆರೆಯ ಮೇಲೆ ಒಂದೇ ಚಿತ್ರದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರನ್ನು ನೋಡಬೇಕೆನ್ನುವ ಆಸೆ ಹಲವರದ್ದು. ಆದರೆ ಆ ಆಸೆ ಇಲ್ಲಿಯವರೆಗೆ ಆಸೆಯಾಗಿಯೆ ಉಳಿದಿದೆ. ನಿಜಾ.. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕಾಲ ಕಾಲಕ್ಕೆ ಜೊತೆಯಲ್ಲಿ ಚಿತ್ರವನ್ನು ಮಾಡಿದ್ದಾರೆ. ಜೊತೆಯಲ್ಲಿ ಗೆದ್ದಿದ್ದಾರೆ. ಜೊತೆಯಲ್ಲಿ ಸೋಲನ್ನು ಕಂಡಿದ್ದಾರೆ.
ಆದರೆ.. ಅಂದಾಜ್ ಅಪ್ನಾ ಅಪ್ನಾ ಹೊರತು ಪಡಿಸಿದರೆ ಸಲ್ಮಾನ್ ಖಾನ್ ಜೊತೆ ಅಮೀರ್ ಖಾನ್ ಕೆಲಸ ಮಾಡಿಲ್ಲ. ಶಾರುಖ್ ಖಾನ್ ಜೊತೆ ಒಂದೇ ಒಂದು ಚಿತ್ರಕ್ಕೆ ಬಣ್ಣ ಹಚ್ಚಿಲ್ಲ. ಆದರೆ ಈಗ ಈ ಖಾನ್ದಾನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ. ಖುದ್ದು ಅಮೀರ್ ಖಾನ್ ಈ ಮಾತನ್ನು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಹೌದು, ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಅಮೀರ್ ಖಾನ್ ಅವರನ್ನು ಸೌದಿ ಅರೇಬಿಯಾದಲ್ಲಿ ನಡೆದ ರೆಡ್ ಸೀ ಫಿಲ್ಮ್ ಫೆಸ್ಟಿವಲ್ನಲ್ಲಿ ಗೌರವಿಸಲಾಯಿತು. ಇದೇ ಸಮಯದಲ್ಲಿ ನಡೆದ ಸಂವಾದದಲ್ಲಿ ಅಮೀರ್ ಖಾನ್ಗೆ ನೀವು ಖಾನ್ತ್ರಯರು ಜೊತೆಯಲ್ಲಿ ಚಿತ್ರ ಮಾಡುವುದು ಯಾವಾಗ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರವನ್ನು ನೀಡಿದ ಅಮೀರ್ ಖಾನ್ ಆ ಕಾಲ ಸದ್ಯದಲ್ಲಿಯೇ ಕೂಡಿ ಬರಲಿದೆ ಎಂದಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ನಾವು ಮೂವರು ಜೊತೆಯಲ್ಲಿದ್ದಾಗ ನಾನೇ ಈ ವಿಚಾರವನ್ನು ಶಾರುಖ್ ಮತ್ತು ಸಲ್ಮಾನ್ ಬಳಿ ಪ್ರಸ್ತಾಪಿಸಿದ್ದೆ, ಮೂವರು ಜೊತೆಯಲ್ಲಿ ಒಂದು ಸಿನಿಮಾ ಮಾಡದಿದ್ದರೆ ನಿಜಕ್ಕೂ ನನಗೆ ಬೇಸರವಾಗುತ್ತೆ, ಅಭಿಮಾನಿಗಳಿಗೆ ಕೂಡ ಮೋಸ ಮಾಡಿದಂತೆ ಆಗುತ್ತೆ ಎಂದು ಹೇಳಿದ್ದೇ, ನನ್ನ ಈ ಮಾತುಗಳಿಗೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಕೂಡ ಸಮ್ಮತಿಯನ್ನು ಸೂಚಿಸಿದ್ದರು ಜೊತೆಯಾಗಿ ಕೆಲಸ ಮಾಡುವ ಆಸೆಯನ್ನು ಅವರು ಕೂಡ ವ್ಯಕ್ತಪಡಿಸಿದ್ದರು ಎಂದಿರುವ ಅಮೀರ್ ಖಾನ್ ಇಬ್ಬರು ಒಂದೊಳ್ಳೆಯ ಕಥೆಯನ್ನು ಹುಡುಕುವ ಜವಾಬ್ಧಾರಿಯನ್ನು ನನಗೆ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಎಲ್ಲವೂ ಅಂದುಕೊಂಡತೆ ಆದರೆ ಶೀಘ್ರದಲ್ಲಿ ಮೂವರನ್ನು ನೀವು ಬೆಳ್ಳಿತೆರೆಯ ಮೇಲೆ ನೋಡಬಹುದು ಎಂದು ಹೇಳಿದ್ದಾರೆ.
ಮುಂದುವರೆದು ಎರಡು ದಿನದ ಹಿಂದೆಯಷ್ಟೇ ಸಲ್ಮಾನ್ ಖಾನ್ ನನ್ನ ಮನೆಗೆ ಬಂದು ಅವನ ಬೀಯಿಂಗ್ ಹ್ಯೂಮನ್ನ ಹೊಸ ಜೀನ್ಸ್ ಪ್ಯಾಂಟ್ ಉಡುಗೊರೆಯನ್ನಾಗಿ ನೀಡಿ ಹೋದ ಆಗಲೂ ಚಿತ್ರದ ಬಗ್ಗೆಯೇ ನಾವು ಮಾತನಾಡಿದ್ದೇವು ಎಂದು ಹೇಳಿರುವ ಅಮೀರ್ ಖಾನ್ ಒಂದೊಳ್ಳೆ ಕಥೆ ಜೊತೆ ಯಾರಾದರೂ ನಮ್ಮನ್ನು ಸಂಪರ್ಕಿಸಬಹುದು ಎಂದು ನಾನು ಕೂಡ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಈ ಹಿಂದೆ ಮೂವರನ್ನು ಒಟ್ಟಿಗೆ ತೆರೆಯ ಮೇಲೆ ತರುವ ಪ್ರಯತ್ನವನ್ನು ಅನೇಕರು ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ಅನುಪಮ್ ಖೇರ್ ನಿರ್ದೇಶನದ ಓಂ ಜೈ ಜಗದೀಶ್ ಚಿತ್ರದಲ್ಲಿ ಈ ಮೂವರು ಒಟ್ಟಿಗೆ ಅಭಿನಯಿಸಬೇಕಿತ್ತು. ಯಶ್ ರಾಜ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಮುಂದಾಗಿತ್ತು. ರಾಣಿ ಮುಖರ್ಜಿ, ಕಾಜೋಲ್, ಪ್ರೀತಿ ಜಿಂಟಾ ನಾಯಕಿಯರಾಗಿ ಕೂಡ ಆಯ್ಕೆಯಾಗಿದ್ದರು. ಆದರೆ ಆ ನಂತರ ಈ ಪ್ರಯತ್ನ ಕೂಡ ಯಶಸ್ವಿಯಾಗಲಿಲ್ಲ. ಆ ನಂತರ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಬದಲು ಅನಿಲ್ ಕಪೂರ್, ಅಭಿಷೇಕ್ ಬಚ್ಚನ್ ಮತ್ತು ಫರ್ದಿನ್ ಖಾನ್ ಕಾಣಿಸಿಕೊಂಡಿದ್ದರು. ಯಶ್ ರಾಜ್ ಬದಲು ರಕುಲ್ ಪ್ರೀತ್ ಸಿಂಗ್ ಪತಿ ಜಾಕಿ ಭಗ್ನಾನಿ ಅವರ ತಂದೆ ವಾಸು ಭಗ್ನಾನಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು.


Click it and Unblock the Notifications











